ಕೇಂದ್ರದ ಸ್ಪಂದನೆ ಸಿಗುವ ಖಾತ್ರಿಯಿಲ್ಲ, ಆದರೆ ರಾಜ್ಯಕ್ಕಾಗುತ್ತಿರುವ ಅನ್ಯಾಯ ಮುಂದುವರಿಯಬಾರದು: ಸಿದ್ದರಾಮಯ್ಯ

|

Updated on: Feb 07, 2024 | 1:18 PM

ಹಣಕಾಸು ಆಯೋಗವು ಅನುದಾನ ಹಂಚಿಕೆಗೆ ಸಂಬಂಧಿಸಿದಂತೆ ರಾಜ್ಯದ ವಿಸ್ತೀರ್ಣ, ಅಲ್ಲಿನ ಜನಸಂಖ್ಯೆ, ತಲಾ ಆದಾಯ, ರಾಜ್ಯದ ಒಟ್ಟು ಕಾಡು ಪ್ರದೇಶ ಮತ್ತು ಸಮುದಾಯಗಳ ಅಭಿವೃದ್ಧಿ ಮೊದಲಾದ ಮಾನದಂಡಗಳನ್ನು ಬಳಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹಾಗೆಯೇ, 1971 ಜನಗಣತಿ ವರದಿಯನ್ನು ಗಣನೆಗೆ ತೆಗೆದುಕೊಳ್ಳುವ ಬದಲು, 2011 ರ ಜನಗಣತಿ ವರದಿ ಪರಿಗಣಿಸಲಾಗುತ್ತಿದೆ ಎಂದು ಅವರು ಹೇಳಿದರು.

ದೆಹಲಿ: ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದ ತಾರತಮ್ಯ ನೀತಿ ತಾಳಿದೆ ಅಂತ ಅದರ ವಿರುದ್ಧ ನಗರದ ಜಂತರ್ ಮಂತರ್ ನಲ್ಲಿ ರಾಜ್ಯ ಸರ್ಕಾರ (Karnataka Government) ನಡೆಸುತ್ತಿರುವ ಬೃಹತ್ ಪ್ರತಿಭಟನೆಗೆ ಹೋಗುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಮತ್ತೊಮ್ಮೆ ಅಂಕಿ-ಅಂಶಗಳನ್ನು ಉಲ್ಲೇಖ ಮಾಡುತ್ತಾ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು. ಕೇಂದ್ರದಿಂದ (Central Government) ರಾಜ್ಯಕ್ಕೆ 50,257 ಕೋಟಿ ರೂ. ಅನುದಾನ ಸಿಕ್ಕರೆ ಉತ್ತರ ಪ್ರದೇಶಕ್ಕೆ ರೂ. 2,80,000 ಕೋಟಿ ಅನುದಾನ ಸಿಗುತ್ತಿದೆ. ಬಿಹಾರ, ಮಧ್ಯಪ್ರದೇಶ ಮತ್ತು ರಾಜಸ್ತಾನ ಮೊದಲಾದ ರಾಜ್ಯಗಳಿಗೆ 1ಲಕ್ಷ ಕೋಟಿ ರೂ. ಗಿಂತ ಹೆಚ್ಚು ಅನುದಾನ ಹೋಗುತ್ತಿದೆ ಎಂದು ಹೇಳಿದರು. ತಮ್ಮ ಸರ್ಕಾರ ನಡೆಸುತ್ತಿರುವ ಪ್ರತಿಭಟನೆಗೆ ಕೇಂದ್ರದಿಂದ ಸಕರಾತ್ಮಕ ಸ್ಪಂದನೆ ಸಿಗುತ್ತೋ ಇಲ್ಲವೋ ಅದು ಬೇರೆ ವಿಚಾರ; ಆದರೆ, ವಾಸ್ತವವನ್ನು ಜನನ ಗಮನಕ್ಕೆ ತರಬೇಕಾಗಿದೆ, ಅನ್ಯಾಯ ಆಗುತ್ತಿರುವುದು ಮುಂದುವರಿಯಬಾರದು, ತಮಗೆ ರಾಜ್ಯದ ಹಿತದೃಷ್ಟಿ ಮುಖ್ಯ ಎಂದು ಹೇಳಿದರು. 16ನೇ ಹಣಕಾಸು ಆಯೋಗ ಈಗಾಗಲೇ ರಚನೆಯಾಗಿರುವುದರಿಂದ ರಾಜ್ಯಕ್ಕೆ ಆಗತ್ತಿರುವ ಅನ್ಯಾಯವನ್ನು ಅದರ ಗಮನಕ್ಕೆ ತರಬೇಕಿದೆ ಎಂದು ಸಿದ್ದರಾಮಯ್ಯ ಹೇಳಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on