AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ವಿನ್ 35 ನಿಮಿಷಗಳ ಕಾಲ ಸಾವಿನೊಂದಿಗೆ ಸೆಣಸುತ್ತಿದ್ದರೂ ಅಂಬ್ಯುಲೆನ್ಸ್ ಮತ್ತು ಪೊಲೀಸ್ ಸ್ಥಳಕ್ಕೆ ಬರಲಿಲ್ಲ: ಪ್ರತ್ಯಕ್ಷದರ್ಶಿ

ಅಶ್ವಿನ್ 35 ನಿಮಿಷಗಳ ಕಾಲ ಸಾವಿನೊಂದಿಗೆ ಸೆಣಸುತ್ತಿದ್ದರೂ ಅಂಬ್ಯುಲೆನ್ಸ್ ಮತ್ತು ಪೊಲೀಸ್ ಸ್ಥಳಕ್ಕೆ ಬರಲಿಲ್ಲ: ಪ್ರತ್ಯಕ್ಷದರ್ಶಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Mar 14, 2022 | 10:14 PM

Share

‘ಗೋಲ್ಡನ್ ಅವರ್’ ಮಿಂಚಿ ಹೋಗುತ್ತಿದ್ದರೂ ಸಹಾಯಕ್ಕೆ ಬರಬೇಕಾದ ಅಂಬ್ಯುಲೆನ್ಸ್ ಮತ್ತು ಪೊಲೀಸ್ ಬಂದಿಲ್ಲ. 35 ನಿಮಿಷಗಳವರೆಗೆ ಕಾದರೂ ಅವರು ಬರದೇ ಹೋದಾಗ ತಾವೇ ವ್ಯವಸ್ಥೆ ಮಾಡುವ ನಿರ್ಧಾರಕ್ಕೆ ಸ್ಥಳೀಯರು ಬಂದಿದ್ದಾರೆ.

ಬೆಂಗಳೂರು: ರಸ್ತೆಗುಂಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಅಶ್ವಿನ್ (Ashwin) ದುರಂತ ಸಾವಿನಲ್ಲಿ ಕೇವಲ ಸಿವಿಕ್ ಏಜೆನ್ಸಿಗಳ ಪಾತ್ರ ಮಾತ್ರ ಇದೆ ಅಂದ್ಕೋಬೇಡಿ. ಅಶ್ವಿನ್ ಅವರ ಸ್ನೇಹಿತರು ಮತ್ತು ಎಮ್ ಎಸ್ ಪಾಳ್ಯ ಮುನೇಶ್ವರ ಬ್ಲಾಕ್ (Muneshwara Block) ನಿವಾಸಿಗಳು ಹೇಳುವ ಹಾಗೆ, ಅಂಬ್ಯುಲೆನ್ಸ್ ಮತ್ತು ಪೊಲೀಸ್ ಕರೆ ಮಾಡಿದ ಕೂಡಲೇ ಸ್ಥಳಕ್ಕೆ ಧಾವಿಸದೆ ದೊಡ್ಡ ಪ್ರಮಾದವೆಸಗಿದ್ದಾರೆ. ಟಿವಿ9 ಬೆಂಗಳೂರು ವರದಿಗಾರ ಘಟನಾ ಸ್ಥಳಕ್ಕೆ ತೆರಳಿ, ಪ್ರತ್ಯಕ್ಷದರ್ಶಿಗಳನ್ನು (eyewitness) ಕಂಡು ಮಾತಾಡಿಸಿದಾಗ ಈ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಬೈಕನ್ನು ವೇಗವಾಗೇ ಓಡಿಸಿಕೊಂಡು ಬರುತ್ತಿದ್ದ ಅಶ್ವಿನ್ ಅಲ್ಲಿನ ರಸ್ತೆಗುಂಡಿ ಮತ್ತು ಸ್ಪೀಡ್ ಬ್ರೇಕರ್ ಮೇಲಿಂದ ಹಾರಿ ತಾವೊಂದು ಕಡೆ ಮತ್ತು ಬೈಕ್ ಒಂದು ಕಡೆ ಬಿದ್ದಾಗ ಅವರ ತಲೆಗೆ ಜೋರಾದ ಪೆಟ್ಟಾಗಿ ಒಂದು ಭಾಗ ಬಿಚ್ಟಿಕೊಂಡಿದೆ. ಟಿವಿ9 ವರದಿಗಾರರೊಂದಿಗೆ ಮಾತಾಡುತ್ತಿರುವ ಅಲ್ಲಿನ ಒಂದು ಕ್ರೀಡಾ ಅಕಾಡೆಮಿಯ ಸದಸ್ಯರು ಮತ್ತು ಅವರ ಗೆಳೆಯರು ಅಶ್ವಿನ್ ಬಿದ್ದಾಗ ಅಲ್ಲೇ ಇದ್ದರಂತೆ.

ಕೂಡಲೇ ಆವರು ಅಂಬ್ಯುಲೆನ್ಸ್ ಹೆ ಫೋನ್ ಮಾಡಿದ್ದಾರೆ. ಆ ಕಡೆಯಿಂದ ಪ್ರತಿಕ್ರಿಯೆ ಬಂದಿಲ್ಲ. ಅದಾದ ಮೇಲೆ ಪೊಲೀಸ್ ಠಾಣೆಗೂ ಅವರ ಫೋನ್ ಮಾಡಿದ್ದಾರೆ. ಅವರಿಂದಲೂ ಪ್ರತಿಕ್ರಿಯೆ ಇಲ್ಲ. ವಿಪರೀತ ರಕ್ತಸ್ರಾವವಾಗಿ ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದ ಅಶ್ವಿನ್ ಗೆ ಕೂಡಲೇ ಅಸ್ಪತ್ರೆಗೆ ಸಾಗಿಸುವುದು ಅತ್ಯವಶ್ಯಕವಾಗಿತ್ತು.

‘ಗೋಲ್ಡನ್ ಅವರ್’ ಮಿಂಚಿ ಹೋಗುತ್ತಿದ್ದರೂ ಸಹಾಯಕ್ಕೆ ಬರಬೇಕಾದ ಅಂಬ್ಯುಲೆನ್ಸ್ ಮತ್ತು ಪೊಲೀಸ್ ಬಂದಿಲ್ಲ. 35 ನಿಮಿಷಗಳವರೆಗೆ ಕಾದರೂ ಅವರು ಬರದೇ ಹೋದಾಗ ತಾವೇ ವ್ಯವಸ್ಥೆ ಮಾಡುವ ನಿರ್ಧಾರಕ್ಕೆ ಸ್ಥಳೀಯರು ಬಂದಿದ್ದಾರೆ.

ಅಕಾಡೆಮಿಗೆ ಹೋಗುವ ಒಬ್ಬ ಸದಸ್ಯನ ಕಾರಲ್ಲಿ ಅಶ್ವಿನ್ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. ತಲೆ ಒಡೆದು ಬಹಳಷ್ಟು ರಕ್ತ ಹರಿದು ಹೋಗಿದ್ದರಿಂದ ಅವರು ಬದುಕುಳಿಯುವುದು ಸಾಧ್ಯವಿರಲಿಲ್ಲ.

ಆದರೆ ಅವರನ್ನು ಕೂಡಲೇ ಅಸ್ಪತ್ರೆಗೆ ಸಾಗಿಸಿದ್ದರೆ ಉಳಿದು ಬಿಡುತ್ತಿದ್ದರೇನೋ…

ಇದನ್ನೂ ಓದಿ:   ಶಾಸಕನಾಗಿ 20X30 ಅಳತೆಯ ಸೈಟ್‌ ಉಚಿತವಾಗಿ ಮೃತ ಅಶ್ವಿನ್​ ಕುಟುಂಬಸ್ಥರಿಗೆ ನೀಡುತ್ತೇನೆ: ಎಸ್​ಆರ್​ವಿಶ್ವನಾಥ್​