ಸಚಿವ ಶಿವರಾಜ್ ತಂಗಡಗಿ ಕ್ಷೇತ್ರದಲ್ಲೇ ರಸ್ತೆ ಕಳಪೆ ಕಾಮಗಾರಿ: ಉದ್ಘಾಟನೆಗೂ ಮುನ್ನವೇ ಕಿತ್ತು ಬಂದ ಡಾಂಬರ್!

Updated By: Ganapathi Sharma

Updated on: Sep 18, 2025 | 10:05 AM

ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಕ್ಷೇತ್ರದಲ್ಲೇ ರಸ್ತೆಯ ಕಳಪೆ ಕಾಮಗಾರಿ ನಡೆದಿದೆ. ಕನಕಗಿರಿ ತಾಲೂಕಿನ ಮಲ್ಲಿಗವಾಡ ಗ್ರಾಮದಲ್ಲಿ ರಸ್ತೆ ಕಾಮಗಾರಿಯಾದ ಆರೇ ತಿಂಗಳಿನಲ್ಲಿ ಡಾಂಬರ್ ಕಿತ್ತು ಬಂದಿದೆ. ರಸ್ತೆ ಉದ್ಘಾಟನೆಗೂ ಮುನ್ನವೇ ಡಾಂಬರ್ ಕಿತ್ತುಬಂದಿದ್ದು, ಕಳಪೆ ಕಾಮಗಾರಿ ಆಗಿರುವುದನ್ನು ಸಚಿವರೂ ಒಪ್ಪಿಕೊಂಡಿದ್ದಾರೆ. ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಡಾಂಬರ್ ರಸ್ತೆಗೆ ಕಳಪೆ ಕಾಮಗಾರಿ ಮಾಡಿರುವ ಹಿನ್ನೆಲೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ, ಸೆಪ್ಟೆಂಬರ್ 18: ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಕ್ಷೇತ್ರವಾದ ಕನಕಗಿರಿ ತಾಲೂಕಿನ ಮಲ್ಲಿಗವಾಡ ಗ್ರಾಮದಲ್ಲಿ ರಸ್ತೆಗೆ ಕಳಪೆ ಕಾಮಗಾರಿ ಮಾಡಲಾಗಿದೆ. ಈ ಬಗ್ಗೆ ಖುದ್ದು ಸಚಿವರೂ ಒಪ್ಪಿಕೊಂಡಿದ್ದು, ಹೌದು ಕಳಪೆ ಕಾಮಗಾರಿ ಆಗಿದೆ ಎಂದರು.

ಹಿಂದಿನ ನಾಲ್ಕು ವರ್ಷ ಒಂದೇ ಒಂದು ರಸ್ತೆ ಮಾಡಿರಲಿಲ್ಲ. ನಾವು ಇವಾಗ ರಸ್ತೆ ಮಾಡುತ್ತಿದ್ದೇವೆ. ಕಳಪೆಯಾಗಿವೆ, ಕಳಪೆಯಾಗಿಲ್ಲ ಎನ್ನುತ್ತಿಲ್ಲ. ‌ಯಾವ ರಸ್ತೆ ಕಳಪೆಯಾಗಿವೆ, ಅಂತಹ ರಸ್ತೆಗಳನ್ನ ಪುನಃ ಮಾಡಲು ಸೂಚನೆ ಕೊಟ್ಟಿದ್ದೇನೆ. ಗುತ್ತಿಗೆದಾರರಿಗೆ ಸೂಚನೆ ಕೊಟ್ಟಿದ್ದೇನೆ. ಹಿಂದೆ ಗುತ್ತಿಗೆ ಪಡೆದ ಟೆಂಡರ್​ದಾರರೇ ರಸ್ತೆ ನಿರ್ಮಾಣ ಮಾಡಬೇಕು. ಹಿಂದೆ ಬಿಡುಗಡೆಯಾಗಿರುವ ಅನುದಾನದಲ್ಲಿಯೇ ರಸ್ತೆ ಪುನರ್ ನಿರ್ಮಾಣ ಮಾಡಬೇಕು ಎಂದು ಸೂಚನೆ ನೀಡಿರುವುದಾಗಿ ತಂಗಡಗಿ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 18, 2025 09:20 AM