ತಾಳ್ಮೆ ಕಳೆದುಕೊಂಡಿಲ್ಲ, ಮಾತು ತಪ್ಪಿದ್ದಕ್ಕೆ ಬೇಸರವಷ್ಟೇ: ರಾಜೀನಾಮೆ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಹೇಳಿಕೆ

Updated on: Jun 06, 2026 | 1:01 PM

ಖಾತೆ ಹಂಚಿಕೆ ಬಿಕ್ಕಟ್ಟಿನ ನಡುವೆ ಸುದ್ದಿಗೋಷ್ಠಿ ನಡೆಸಿದ ಸಚಿವ ರಾಮಲಿಂಗಾರೆಡ್ಡಿ, ಸಿಎಂ ಡಿಕೆ ಶಿವಕುಮಾರ್ ಮತ್ತು ಉಸ್ತುವಾರಿ ರಣದೀಪ್ ಸುರ್ಜೇವಾಲ ರಾಜೀನಾಮೆ ಹಿಂಪಡೆಯಲು ಸೂಚಿಸಿದ್ದಾರೆ ಎಂದಿದ್ದಾರೆ. ಮಾತು ಕೊಟ್ಟಂತೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡದಿದ್ದಕ್ಕೆ ಬೇಸರವಿದ್ದು, ಸದ್ಯ ಹೈಕಮಾಂಡ್ ನಾಯಕರು ಸಿಎಂ ಜತೆ ಮಾತುಕತೆ ನಡೆಸುತ್ತಿದ್ದಾರೆ. ಅವರ ತೀರ್ಮಾನಕ್ಕಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

ಬೆಂಗಳೂರು, ಜೂನ್ 6: ಖಾತೆ ಹಂಚಿಕೆ ಅಸಮಾಧಾನದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿ ಸಂಚಲನ ಮೂಡಿಸಿದ್ದ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಇಂದು (ಜೂನ್ 6) ಬೆಂಗಳೂರಿನ ಕೋರಮಂಗಲ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ಮುಂದಿನ ನಡೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ನನ್ನ ರಾಜೀನಾಮೆಯನ್ನು ಅಂಗೀಕಾರ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ. ನಾನು ನನ್ನ ಸ್ಪಷ್ಟ ಅಭಿಪ್ರಾಯವನ್ನು ನಾಯಕರ ಮುಂದೆ ಇಟ್ಟಿದ್ದೇನೆ’ ಎಂದು ಅವರು ತಿಳಿಸಿದರು.

ಇದೇ ವೇಳೆ ತಮಗೆ ನೀಡಿರುವ ಖಾತೆ ಬಗ್ಗೆ ಮಾತನಾಡಿದ ಅವರು, ‘ನನಗೆ ನೀರಾವರಿ ಇಲಾಖೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ, ನಾನು ಯಾವತ್ತೂ ಜಲಸಂಪನ್ಮೂಲ ಖಾತೆಯನ್ನು ಕೇಳಿರಲಿಲ್ಲ. ಸಚಿವ ಸ್ಥಾನ ಅಥವಾ ಇಂತಹದ್ದೇ ಖಾತೆ ಬೇಕು ಎಂದು ನಾನು ಎಂದೂ ಹಠ ಹಿಡಿದವನಲ್ಲ. ಆದರೆ 2023ರಲ್ಲಿ ಮನೆಗೆ ಬಂದು ಮಾತು ಕೊಟ್ಟಂತೆ ನಾಯಕರು ನಡೆದುಕೊಳ್ಳಲಿಲ್ಲ ಎಂಬ ಬೇಸರವಷ್ಟೇ ನನಗಿದೆ. ಸುರ್ಜೇವಾಲ ಅವರು ಸಿಎಂ ಜೊತೆ ಚರ್ಚೆ ನಡೆಸುತ್ತಿದ್ದಾರೆ, ನಾಯಕರು ಏನು ತೀರ್ಮಾನ ಮಾಡುತ್ತಾರೋ ನೋಡೋಣ. ನಾನು ಯಾರ ಮೇಲೂ ಆರೋಪ ಮಾಡುವುದಿಲ್ಲ ಮತ್ತು ತಾಳ್ಮೆಯನ್ನೂ ಕಳೆದುಕೊಂಡಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us