ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನದಲ್ಲಿ ಹಳೆಯ ಮನೆ ಮತ್ತು ತೋಟದ ಮನೆಗಳ ಗೋಡೆಗಳಲ್ಲಿ ಚಾಲುಕ್ಯ ಹಾಗೂ ರಾಷ್ಟ್ರಕೂಟರ ಕಾಲದ ಅನೇಕ ಪ್ರಾಚೀನ ಶಿಲೆಗಳು ಪತ್ತೆಯಾಗಿವೆ. ಸರಸ್ವತಿ/ಲಕ್ಷ್ಮಿ ಮೂರ್ತಿ, ದ್ವಾರಪಾಲಕ, ದಾನ ಶಿಲೆ, ಗಣಪತಿ ಮೂರ್ತಿ ಮತ್ತು ದೇವಾಲಯಗಳ ಅಲಂಕಾರಿಕ ಶಿಲ್ಪಗಳು ಈ ಆಶ್ಚರ್ಯಕರ ಆವಿಷ್ಕಾರಗಳಲ್ಲಿ ಸೇರಿವೆ.
ಗದಗ, ಜನವರಿ 24: ಐತಿಹಾಸಿಕ ಹಿನ್ನೆಲೆ ಹೊಂದಿರುವ ಲಕ್ಕುಂಡಿ ಗ್ರಾಮದಲ್ಲಿ ಒಂದಡೆ ಉತ್ಖನನದ ನಡೆಯತ್ತಿದ್ದು, ಮತ್ತೊಂದೆಡೆ ಅಪರೂಪದ ಘಟಸರ್ಪ ನಾಗರಕಲ್ಲಿನ ಮೂರ್ತಿ ಪತ್ತೆಯಾಗಿರುವುದು ತೀವ್ರ ಕುತೂಹಲ ಮೂಡಿಸಿದೆ. ಲಕ್ಕುಂಡಿ ಗ್ರಾಮದ ಷಣ್ಮುಖ ರವದಿ ಎಂಬುವರ ಜಮೀನಿನಲ್ಲಿ ಈ ಅಪರೂಪದ ಶಿಲಾಮೂರ್ತಿ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆಶ್ಚರ್ಯ ಮತ್ತು ಆಸ್ಥೆಯ ಭಾವನೆ ಮೂಡಿಸಿದೆ. ಪತ್ತೆಯಾದ ಈ ಶಿಲೆ ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದೆ ಎನ್ನಲಾಗಿದ್ದು, ಅಲಂಕಾರಿಕ ವಿನ್ಯಾಸ ಹೊಂದಿರುವ ಘಟಸರ್ಪ ಮೂರ್ತಿ ಐತಿಹಾಸಿಕ ಮಹತ್ವ ಪಡೆದಿದೆ. ಇದಕ್ಕೂ ಮುನ್ನ ಲಕ್ಕುಂಡಿಯ ಐತಿಹಾಸಿಕ ಬಾವಿಯೊಳಗೆ ಚಾಲುಕ್ಯರ ಕಾಲದ ಸುಂದರ ಅಲಂಕಾರಿಕ ಶಿಲೆಗಳು ಪತ್ತೆಯಾಗಿದ್ದವು. ಜೊತೆಗೆ ಉತ್ಖನನ ನಡೆಯುತ್ತಿರುವ ಜಾಗದಲ್ಲಿಯೂ ಎರಡು ನಾಗರ ಚಿತ್ರಗಳಿರುವ ಕಲ್ಲುಗಳು ಪತ್ತೆಯಾಗಿದ್ದವು.
ಈಗ ಹೊಸದಾಗಿ ಘಟಸರ್ಪ ನಾಗರಕಲ್ಲು ಪತ್ತೆಯಾಗಿರುವುದರಿಂದ, ‘ಲಕ್ಕುಂಡಿಯ ಪುರಾತನ ಸಂಪತ್ತನ್ನು ಸರ್ಪಗಳು ಕಾಯುತ್ತಿವೆಯೇ’ ಎಂಬ ಪ್ರಶ್ನೆಗಳು ಸ್ತಳೀಯರಲ್ಲಿ ಉದ್ಭವವಾಗಿವೆ.
ಮತ್ತೊಂದೆಡೆ, ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನದ 9ನೇ ದಿನದಂದು ಹಲವಾರು ವಿಸ್ಮಯಕಾರಿ ಪುರಾತನ ಶಿಲ್ಪಗಳು ಪತ್ತೆಯಾಗಿವೆ. ವಿಶೇಷವಾಗಿ, ಉತ್ಖನನಕಾರರಿಗೆ ಹಳೆಯ ಮನೆಗಳು ಮತ್ತು ತೋಟದ ಮನೆಗಳ ಗೋಡೆಗಳಲ್ಲಿ ಚಾಲುಕ್ಯ ಮತ್ತು ರಾಷ್ಟ್ರಕೂಟರ ಕಾಲದ ಶಿಲೆಗಳು ಗೋಚರಿಸಿವೆ. ಇದು ಲಕ್ಕುಂಡಿಯ ಶ್ರೀಮಂತ ಐತಿಹಾಸಿಕ ಪರಂಪರೆಯನ್ನು ಮತ್ತಷ್ಟು ಎತ್ತಿ ಹಿಡಿದಿದೆ.
