ಸಂಡೂರಿನ ಅಂತಾಪುರದಲ್ಲಿ ವಿಜಯನಗರ ಕಾಲದ ಅಪರೂಪದ ಜೈನ ದಾನಶಾಸನ ಪತ್ತೆ!
ಜಿಲ್ಲೆಯ ಸಂಡೂರು ತಾಲ್ಲೂಕಿನ ಡಿ. ಅಂತಾಪುರ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯದ ಇತಿಹಾಸ ಹಾಗೂ ಜೈನ ಧರ್ಮದ ಬೆಳವಣಿಗೆಯ ಮೇಲೆ ಬೆಳಕು ಚೆಲ್ಲುವ ಅತ್ಯಂತ ಅಪರೂಪದ ಜೈನ ದಾನಶಾಸನವೊಂದು ಪತ್ತೆಯಾಗಿದೆ. 'ವಿಜಯನಗರ ತಿರುಗಾಟ' ಸಂಶೋಧನಾ ತಂಡವು ಈ ಮಹತ್ವದ ಐತಿಹಾಸಿಕ ಸಾಕ್ಷ್ಯವನ್ನು ಶೋಧಿಸಿದೆ.
ಬಳ್ಳಾರಿ, ಜುಲೈ 18: ಜಿಲ್ಲೆಯ ಸಂಡೂರು ತಾಲ್ಲೂಕಿನ ಡಿ. ಅಂತಾಪುರ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯದ ಇತಿಹಾಸ ಹಾಗೂ ಜೈನ ಧರ್ಮದ ಬೆಳವಣಿಗೆಯ ಮೇಲೆ ಬೆಳಕು ಚೆಲ್ಲುವ ಅತ್ಯಂತ ಅಪರೂಪದ ಜೈನ ದಾನಶಾಸನವೊಂದು ಪತ್ತೆಯಾಗಿದೆ. ‘ವಿಜಯನಗರ ತಿರುಗಾಟ’ ಸಂಶೋಧನಾ ತಂಡವು ಈ ಮಹತ್ವದ ಐತಿಹಾಸಿಕ ಸಾಕ್ಷ್ಯವನ್ನು ಶೋಧಿಸಿದೆ.
ಪ್ರೊ. ಎಚ್. ತಿಪ್ಪೇಸ್ವಾಮಿ ನೇತೃತ್ವದ ಸಂಶೋಧನಾ ತಂಡವು ಡಿ. ಅಂತಾಪುರ ಗ್ರಾಮದ ನಿವಾಸಿ ಗ್ಯಾನಪ್ಪ ಎಂಬುವವರ ಹೊಲದಲ್ಲಿ ಈ ಗ್ರಾನೈಟ್ (ಕಣಶಿಲೆ) ಶಾಸನವನ್ನು ಪತ್ತೆಹಚ್ಚಿದೆ. ಈ ಶಾಸನವು ಕ್ರಿ.ಶ. 1395ರ ವಿಜಯನಗರದ ಪ್ರಸಿದ್ಧ ದೊರೆ ಎರಡನೇ ಹರಿಹರರಾಯರ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ. ಜೈನ ಧರ್ಮದ 17ನೇ ತೀರ್ಥಂಕರರಾದ ಕುಂಥುನಾಥರಿಗೆ ಭೂಮಿಯನ್ನು ಸಂಪೂರ್ಣ ತೆರಿಗೆ ವಿನಾಯಿತಿಯೊಂದಿಗೆ (ಸರ್ವಮಾನ್ಯವಾಗಿ) ದಾನವಾಗಿ ನೀಡಿದ ಅಮೂಲ್ಯ ವಿಚಾರವನ್ನು ಈ ಶಾಸನದಲ್ಲಿ ದಾಖಲಿಸಲಾಗಿದೆ. ವಿಶೇಷವೆಂದರೆ, ಈ ಶಿಲೆಯಲ್ಲಿ ಸೂರ್ಯ, ಚಂದ್ರ ಹಾಗೂ ಜಿನಮೂರ್ತಿಯ ಸುಂದರ ಶಿಲ್ಪಗಳನ್ನು ಕೆತ್ತಲಾಗಿದೆ.
ಇದೇ ಜಾಗದಲ್ಲಿ ಕುಂಥುನಾಥರಿಗೆ ಸಂಬಂಧಿಸಿದ ಇನ್ನೂ ಎರಡು ಶಾಸನಗಳನ್ನು ಸಂಶೋಧಕರು ಗುರುತಿಸಿದ್ದಾರೆ. ವಾತಾವರಣದ ಏರುಪೇರುಗಳಿಂದ ಹಾಳಾಗುತ್ತಿರುವ ಈ ಐತಿಹಾಸಿಕ ಸ್ಮಾರಕಗಳನ್ನು ಮುಂದಿನ ಪೀಳಿಗೆಗಾಗಿ ತಕ್ಷಣವೇ ಸಂರಕ್ಷಿಸಬೇಕು ಎಂದು ಸಂಶೋಧನಾ ತಂಡವು ಸಂಬಂಧಪಟ್ಟ ಪುರಾತತ್ವ ಇಲಾಖೆಗೆ ಮನವಿ ಮಾಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

