ಪ್ರಿಯಾಂಕ್ ಖರ್ಗೆ ಕೆಟ್ಟಹುಳು ಎಂದ ಈಶ್ವರಪ್ಪ; ಸಹ್ಯವಲ್ಲದ ಪದ ಬಳಸುವುದು ಅವರ ಹಿರಿತನಕ್ಕೆ ಶೋಭೆ ನೀಡಲ್ಲ

Updated on: Feb 10, 2024 | 1:33 PM

ಸಂಸದ ಡಿಕೆ ಸುರೇಶ್ ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರದ ಬಗ್ಗೆ ಆಡಿರುವ ಮಾತನ್ನು ಪ್ರಿಯಾಂಕ್ ಖರ್ಗೆ ಅವರ ತಂದೆ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಬೆಯಲ್ಲಿ ಖಂಡಿಸಿದ್ದನ್ನು ತಾನು ಅಭಿನಂದಿಸುವುದಾಗಿ ಹೇಳಿದ ಈಶ್ವರಪ್ಪ, ಅಂಥವರ ಹೊಟ್ಟೆಯಲ್ಲಿ ಇಂಥ ಕೆಟ್ಟಹುಳು ಹೇಗೆ ಹುಟ್ಟಿತೋ ಅನ್ನುತ್ತಾರೆ.

ಶಿವಮೊಗ್ಗ: ನಿನ್ನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಕಲಬುರಗಿಯಲ್ಲಿ ಪತ್ರಿಕಾ ಗೋಷ್ಟಿ ನಡೆಸುವಾಗ ಕೆಎಸ್ ಈಶ್ವರಪ್ಪನವರನ್ನು (KS Eshwarappa) ಟೀಕಿಸಿದ ಬಳಿಕ ಹಿರಿಯ ಬಿಜೆಪಿ ನಾಯಕ ಅದಕ್ಕೆ ಉತ್ತರ ನೀಡುವುದನ್ನು ನಿರೀಕ್ಷಿಸಲಾಗಿತ್ತು. ಆದರೆ, ಖರ್ಗೆಯನ್ನು ಜರಿಯುವ ಭರದಲ್ಲಿ ಈಶ್ವರಪ್ಪ ಎಲ್ಲೆ ಮೀರಿದ್ದು ಸರಿಯೆನಿಸಲಿಲ್ಲ. ಸಂಸದ ಡಿಕೆ ಸುರೇಶ್ ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರದ ಬಗ್ಗೆ ಆಡಿರುವ ಮಾತನ್ನು ಪ್ರಿಯಾಂಕ್ ಖರ್ಗೆ ಅವರ ತಂದೆ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಬೆಯಲ್ಲಿ ಖಂಡಿಸಿದ್ದನ್ನು ತಾನು ಅಭಿನಂದಿಸುವುದಾಗಿ ಹೇಳಿದ ಈಶ್ವರಪ್ಪ, ಅಂಥವರ ಹೊಟ್ಟೆಯಲ್ಲಿ ಇಂಥ ಕೆಟ್ಟಹುಳು ಹೇಗೆ ಹುಟ್ಟಿತೋ ಅನ್ನುತ್ತಾರೆ. ಕೆಟ್ಟಹುಳು ಅನ್ನೋದು ಅಸಂಸದೀಯ ಪದ ಮತ್ತು ಈಶ್ವರಪ್ಪರಂಥ ಹಿರಿಯ ನಾಯಕರು ಆ ಬಗೆಯ ಪದಗಳನ್ನು ಬಳಸುವುದು ಶೋಭೆ ನೀಡಲ್ಲ. ನಿನ್ನೆ ಪ್ರಿಯಾಂಕ್ ಖರ್ಗೆಯವರು ಈಶ್ವರಪ್ಪರನ್ನು ಖಂಡಿಸಿದರು ನಿಜ, ಆದರೆ ಅವರ ಹಿರಿತನವನ್ನು ಗಮನದಲ್ಲಿಟ್ಟುಕೊಂಡೇ ಅಸಹ್ಯವಲ್ಲದ ಪದಗಳನ್ನು ಬಳಸಿ ಟೀಕಿಸಿದರು.

ನಿಮಗೆ ನೆನಪಿರಬಹುದು, ಕೇವಲ ಎರಡು ದಿನಗಳ ಹಿಂದೆ ಈಶ್ವರಪ್ಪನವರು ಸುರೇಶ್ ಹೇಳಿಕೆಗೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಉಗ್ರವಾಗಿ ಟೀಕಿಸಿದ್ದರು. ಅವರು ರಾಜ್ಯಸಭೆಯಲ್ಲಿ ಆಡಿದ ಮಾತನ್ನು ಉಲ್ಲೇಖಿಸಿ ನಾಟಕ ಮಾಡಬೇಡಿ, ಸುರೇಶ್ ಮತ್ತು ವಿನಯ್ ಕುಲಕರ್ಣಿಯನ್ನು ಪಕ್ಷದಿಂದ ಕಿತ್ತುಹಾಕಿ ಇಲ್ಲವೇ ಇಳಿಪ್ರಾಯದಲ್ಲಿ ಸಿಕ್ಕಿರುವ ಎಐಸಿಸಿ ಅಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ಎಂದಿದ್ದರು. ಈಗ ಮಗನನ್ನು ನಿಂದಿಸಲು ತಂದೆಯನ್ನು ಎತ್ತಿ ಹಿಡಿಯುತ್ತಿದ್ದಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More