ಮೈಸೂರು: ಮೈಸೂರಿನಲ್ಲಿರುವ ನಟ ಶಿವರಾಜ್ಕುಮಾರ್ (Shiva Rajkumar) ಇಂದು ಸ್ನೇಹಿತರೊಂದಿಗೆ ‘ಜೇಮ್ಸ್’ ವೀಕ್ಷಿಸಲಿದ್ದಾರೆ. ಇಂದು ಮುಂಜಾನೆ ಶಕ್ತಿಧಾಮಕ್ಕೆ ಶಿವಣ್ಣ ದಂಪತಿ ಭೇಟಿ ನೀಡಿದ್ದರು. ನಂತರ ಅವರು ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ. ‘ಜೇಮ್ಸ್’ (James) ಬಗ್ಗೆ ಮಾತನಾಡಿದ ಶಿವಣ್ಣ, ‘‘ಡಬ್ಬಿಂಗ್ ಮಾಡುವ ವೇಳೆ ನನಗೆ ತುಂಬಾ ನೋವಾಗುತ್ತಿತ್ತು’’ ಎಂದಿದ್ದಾರೆ. ಅಪ್ಪು ಇಲ್ಲದ ಹುಟ್ಟು ಹಬ್ಬ ಆಚರಣೆ ತುಂಬಾ ದುಃಖದ ವಿಚಾರ ಎಂದಿರುವ ಅವರು, ಮುಂದೆ ಏನಿದೆ ಅದನ್ನ ನೋಡಿಕೊಂಡು ಹೋಗುತ್ತಿರಬೇಕು ಎಂದಿದ್ದಾರೆ. ಪುನೀತ್ ಜತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದುದನ್ನು ನೆನೆದ ಶಿವಣ್ಣ, ಹುಟ್ಟು ಹಬ್ಬಕ್ಕೆ ಇಬ್ಬರೂ ಗಿಫ್ಟ್ ಗಳನ್ನು ಶೇರ್ ಮಾಡುತ್ತಿದ್ದೆವು ಎಂದಿದ್ದಾರೆ. ಅಪ್ಪುಗೆ ಬ್ರಾಂಡ್ ವಾಚ್, ಬೆಲ್ಟ್, ಗಾಗಲ್ ಸಾಕಷ್ಟು ಕೊಟ್ಟಿದ್ದೇನೆ ಎಂದು ಅವರು ಸ್ಮರಿಸಿಕೊಂಡಿದ್ದಾರೆ. ಅಪ್ಪು ಎಲ್ಲರ ಹೃದಯದಲ್ಲಿ ಇದ್ದಾನೆ. ಅವನ ಸಿನಿಮಾ ಬಿಡುಗಡೆ ಆಗಿದೆ. ಅವನಿಲ್ಲದ ವೇಳೆ ಸಿನಿಮಾ ಬಿಡುಗಡೆ ಹೆಚ್ಚು ದುಃಖ ತರ್ತಾ ಇದೆ ಎಂದು ಶಿವಣ್ಣ ನುಡಿದಿದ್ದಾರೆ.
ಫಿಲ್ಮ್ ಸಿಟಿಗೆ ಪುನೀತ್ ರಾಜ್ ಕುಮಾರ್ (Puneeth Rajkumar) ಹೆಸರಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪುನೀತ್ ರಾಜ್ ಕುಮಾರ್ ಹೆಸರಿಟ್ಟರೆ ಸಂತೋಷ ಆಗುತ್ತದೆ. ಆದರೆ ಕುಟುಂಬ ಸದಸ್ಯನಾಗಿ ನಾನು ಆ ರೀತಿಯ ಒತ್ತಾಯ ಮಾಡುವುದಿಲ್ಲ. ಅಭಿಮಾನಿಗಳು ಅಭಿಮಾನದಿಂದ ಹೇಳುತ್ತಿದ್ದಾರೆ. ಅದರಂತೆ ಪುನೀತ್ ರಾಜ್ ಕುಮಾರ್ ಹೆಸರಿಟ್ಟರೆ ಸಂತೋಷ. ಚಿತ್ರರಂಗಕ್ಕೆ ದುಡಿದವರು ಸಾಕಷ್ಟು ಜನ ಇದ್ದಾರೆ, ಅವರ ಹೆಸರನ್ನು ಇಡಬಹುದು ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.
ಮೈಸೂರಿನ ಗಾಯತ್ರಿ ಚಿತ್ರಮಂದಿರಕ್ಕೆ ನಟ ಡಾ ಶಿವರಾಜ್ ಕುಮಾರ್ ಭೇಟಿ ನೀಡಿದ್ದು, ಶಿವಣ್ಣನನ್ನು ಕಂಡು ಅಭಿಮಾನಿಗಳ ಹರ್ಷೋದ್ಗಾರ ಮುಗಿಲುಮುಟ್ಟಿದೆ. ಅಭಿಮಾನಿ ನೀಡಿದ ಪುನೀತ್ ಭಾವಚಿತ್ರಕ್ಕೆ ಶಿವಣ್ಣ ಮುತ್ತಿಟ್ಟಿದ್ದಾರೆ. ಸಂಜೆ ಮಲ್ಟಿಪ್ಲೆಕ್ಸ್ ಒಂದರಲ್ಲಿ ಶಿವಣ್ಣ ‘ಜೇಮ್ಸ್’ ವೀಕ್ಷಿಸಲಿದ್ದಾರೆ.
ಇದನ್ನೂ ಓದಿ:
ರಾಜ್ಯದ ಹಲವು ಯೋಜನೆ, ಸಂಸ್ಥೆಗಳ ರಾಯಭಾರಿಯಾಗಿದ್ದರು ಪುನೀತ್ ರಾಜಕುಮಾರ್: ಇಲ್ಲಿದೆ ಮಾಹಿತಿ
‘ಜೇಮ್ಸ್’ ಚಿತ್ರದ ಆ ಒಂದು ಸೀನ್ ನೋಡಿ ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿ; ಪುನೀತ್ ಮೇಲಿನ ಅಭಿಮಾನ ಶಾಶ್ವತ