ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ಸೆಲೆಬ್ರಿಟಿಗಳನ್ನು ರಾಜಕಾರಣಿಗಳು ಭೇಟಿ ಮಾಡುವುದು ಹೆಚ್ಚುತ್ತಿದೆ. ಕೆಲವೇ ದಿನಗಳ ಹಿಂದೆ ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini Puneeth Rajkumar) ಅವರ ಮನೆಗೆ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಭೇಟಿ ನೀಡಿದ್ದರು. ಈ ಭೇಟಿಯ ಬಗ್ಗೆ ಶಿವರಾಜ್ಕುಮಾರ್ ಅವರು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಗೀತಾ ಶಿವರಾಜ್ಕುಮಾರ್ (Geetha Shivarajkumar) ಪರ ಚುನಾವಣಾ ಪ್ರಚಾರ ಮಾಡುವಾಗ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಎಲ್ಲರೂ ಭೇಟಿ ಮಾಡುತ್ತಾರೆ. ಮಾಡಲಿ ಬಿಡಿ, ಅದರಲ್ಲಿ ತಪ್ಪೇನು ಇದೆ?’ ಎಂದು ಶಿವಣ್ಣ ಮರುಪ್ರಶ್ನೆ ಹಾಕಿದ್ದಾರೆ. ಇನ್ನು, ಶಿವರಾಜ್ಕುಮಾರ್ (Shivarajkumar) ಅವರ ಸಿನಿಮಾ, ಜಾಹೀರಾತು, ಬಿಲ್ಬೋರ್ಡ್ಗಳ ಪ್ರದರ್ಶನಕ್ಕೆ ನಿಷೇಧ ಹೇರಬೇಕು ಎಂದು ಬಿಜೆಪಿ ಒಬಿಸಿ ಮೋರ್ಚಾ ದೂರು ನೀಡಿತ್ತು. ಆ ಬಗ್ಗೆ ಉತ್ತರಿಸಿದ ಶಿವಣ್ಣ, ‘ನನ್ನ ತಾಯಾಣೆಗೂ ಗೊತ್ತಿಲ್ಲ. ಅದನ್ನು ನಮ್ಮ ಲೀಗಲ್ ಟೀಮ್ ನೋಡಿಕೊಳ್ಳುತ್ತಾರೆ’ ಎಂದು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.