ಬೆಂಗಳೂರು: ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿಯ (Srikanth Pujari) ಬಂಧನ ವಿರೋಧಿಸಿ ರಾಜ್ಯ ಬಿಜೆಪಿ ಘಟಕ ಇಂದು ಪ್ರತಿಭಟನೆ ನಡೆಸುತ್ತಿದ್ದರೆ ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಜಿ ಪರಮೇಶ್ವರ (G Parameshwara), ಪೂಜಾರಿ ರಾಮ ಕರಸೇವಕ (Ram Karsevak) ಅನ್ನೋ ಕಾರಣಕ್ಕೆ ಬಂಧಿಸಿಲ್ಲ, ಅವರ ವಿರುದ್ಧ 16 ಪ್ರಕರಣಗಳಿವೆ ಎಂದು ಹೇಳಿದರು. 31 ವರ್ಷಗಳ ಹಿಂದಿನ ಪ್ರಕರಣದ ಪ್ರಶ್ನೆ ಇಲ್ಲಿ ಉದ್ಭವಿಸಲ್ಲ, ಈ ಅವಧಿಯಲ್ಲಿ ಬಿಜೆಪಿ ಸರ್ಕಾರಗಳು ಅಧಿಕಾರ ನಡೆಸಿದವಲ್ಲ, ಯಾಕೆ ಪೂಜಾರಿಯನ್ನು ಪ್ರಕರಣಗಳಿಂದ ಖುಲಾಸೆ ಮಾಡಲಿಲ್ಲ ಎಂದು ಪರಮೇಶ್ವರ್ ಪ್ರಶ್ನಿಸಿದರು. ನಿನ್ನೆ ಬಿಜೆಪಿ ಶಾಸಕ ಸುನೀಲ ಕುಮಾರ್, ರಾಮ ಕರಸೇವಕರ ಪಟ್ಟಿ ಕೊಡ್ತೀನಿ ತಾಕತ್ತಿದ್ದರೆ ಬಂಧಿಸಲಿ ಅಂತ ಸವಾಲೆಸೆದಿರುವ ಬಗ್ಗೆ ಗೃಹ ಸಚಿವರಿಗೆ ಹೇಳಿದಾಗ, ತಾಕತ್ತನ್ನು ಜನ ತಮಗೆ ಕೊಟ್ಟಿದ್ದಾರೆ, ತಮ್ಮದು ಚುನಾಯಿತ ಸರ್ಕಾರ ಮತ್ತು ಯಾವುದೇ ಚುನಾಯಿತ ಸರ್ಕಾರ ಕಾನೂನಡಿಯಲ್ಲಿ ಕೆಲಸ ಮಾಡುತ್ತದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ