ಗಲಾಟೆ ಮಾಡುತ್ತಿದ್ದ ಬಿಜೆಪಿ ಶಾಸಕರನ್ನು ಸುಮ್ಮನಾಗಿಸಲು ಪ್ರಯತ್ನಿಸದ ಸತೀಶ್ ರೆಡ್ಡಿಯನ್ನು ಸ್ಪೀಕರ್ ಕಾಗೇರಿ ತರಾಟೆಗೆ ತೆಗೆದುಕೊಂಡರು

ಕೊನೆಗೆ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಮಾತಾಡಲು ಎದ್ದು ನಿಂತಾಗ ಕಾಗೇರಿ ಅವರು, ಕಾನೂನು ಸಚಿವರು ಮಾತಾಡುತ್ತಾರೆ, ಕೂತ್ಕೊಳ್ಳಿ ಅಂತ ಮತ್ತೊಮ್ಮೆ ರೇಣುಕಾಚಾರ್ಯರಿಗೆ ಹೇಳುತ್ತಾರೆ. ಅವರೊಂದಿಗೆ ಬೇರೆ ಬಿಜೆಪಿ ಶಾಸಕರು ಸಹ ಕೂಗಾಡಲಾರಂಭಿಸುತ್ತಾರೆ.

ಗಲಾಟೆ ಮಾಡುತ್ತಿದ್ದ ಬಿಜೆಪಿ ಶಾಸಕರನ್ನು ಸುಮ್ಮನಾಗಿಸಲು ಪ್ರಯತ್ನಿಸದ ಸತೀಶ್ ರೆಡ್ಡಿಯನ್ನು ಸ್ಪೀಕರ್ ಕಾಗೇರಿ ತರಾಟೆಗೆ ತೆಗೆದುಕೊಂಡರು
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 23, 2022 | 4:07 PM

ವಿಧಾನಸಭೆಯಲ್ಲಿ ಕಾರ್ಯಕಲಾಪ ನಡೆಯವಾಗ ನಮ್ಮ ಪ್ರತಿನಿಧಿಗಳು ಸಭ್ಯತೆ ಮರೆತು ಮಾತಾಡುವ ಪ್ರಸಂಗಗಳು ಹೆಚ್ಚಾಗುತ್ತಿವೆ. ಟೀಕೆ, ಖಂಡನೆ ಇದ್ದೇ ಸದಸನದಲ್ಲಿ ಇರುತ್ತದೆ, ಅದರೆ ಟೀಕಿಸುವ ಭರದಲ್ಲಿ ಶಾಸಕರು, ಅಸಂಸದೀಯ ಭಾಷೆ (unparliamentary) ಬಳಸುವುದು ಹೇವರಿಕೆ ಹುಟ್ಟಿಸುತ್ತದೆ ಮಾರಾಯ್ರೇ. ಬುಧವಾರದ ಕಲಾಪದಲ್ಲಿ ಏನು ನಡೆಯಿತು ನೀವೇ ನೋಡಿ. ವಿಧಾನ ಸಭೆಯಲ್ಲಿ ವಿರೋಧಪಕ್ಷದ ಉಪನಾಯಕರಾಗಿರುವ ಯುಟಿ ಖಾದರ್ (UT Khader) ಮತ್ತು ಬಿಜೆಪಿ ಶಾಸಕ ಎಮ್ ಪಿ ರೇಣುಕಾಚಾರ್ಯ (MP Renukacharya) ನಡುವೆ ವಿಷಯವೊಂದಕ್ಕೆ ಸಂಬಂಧಿಸಿದಂತೆ ನಡೆಯುವ ವಾಗ್ವಾದ ತಾರಕಕ್ಕೇರಿದಾಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರೇಣುಕಾಚಾರ್ಯ ಅವರಿಗೆ ಸುಮ್ಮನಿರುವಂತೆ ಹೇಳಿದರೂ ಬಿಜೆಪಿ ಶಾಸಕ ಜೋರಾಗಿ ಮಾತಾಡುವುದನ್ನು ಮುಂದುವರಿಸುತ್ತಾರೆ.

ಸ್ವಲ್ಪ ಹೇಳೋದನ್ನ ಕೇಳಿ ಅಂತ ರೇಣುಕಾರನ್ನು ತಡೆಯುವ ಖಾದರ್ ಪ್ರಯತ್ನ ವಿಫಲವಾಗುತ್ತದೆ. ಕೊನೆಗೆ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಮಾತಾಡಲು ಎದ್ದು ನಿಂತಾಗ ಕಾಗೇರಿ ಅವರು, ಕಾನೂನು ಸಚಿವರು ಮಾತಾಡುತ್ತಾರೆ, ಕೂತ್ಕೊಳ್ಳಿ ಅಂತ ಮತ್ತೊಮ್ಮೆ ರೇಣುಕಾಚಾರ್ಯರಿಗೆ ಹೇಳುತ್ತಾರೆ. ಅವರೊಂದಿಗೆ ಬೇರೆ ಬಿಜೆಪಿ ಶಾಸಕರು ಸಹ ಕೂಗಾಡಲಾರಂಭಿಸುತ್ತಾರೆ.

ಆಗ ಮಾಧುಸ್ವಾಮಿ ಅವರು ಖುದ್ದು ತಾವೇ ಮೊದಲು ರೇಣುಕಾಚಾರ್ಯ ನಂತರ ಉಳಿದ ಸದಸ್ಯರಲ್ಲಿಗೆ ಹೋಗಿ ಅವರನ್ನು ಸುಮ್ಮನಾಗಿಸುತ್ತಾರೆ.

ಏತನ್ಮಧ್ಯೆ, ಆಡಳಿತ ಪಕ್ಷದ ಮುಖ್ಯ ಸಚೇತಕ ಸತೀಶ್ ರೆಡ್ಡಿ ಅವರು ಏನನ್ನೋ ಹೇಳಲು ಪ್ರಯತ್ನಿಸಿದಾಗ ಅದಾಗಲೇ ತಾಳ್ಮೆ ಕಳೆದುಕೊಂಡಿದ್ದ ಸ್ಪೀಕರ್ ಕಾಗೇರಿ ಅವರಿಗೆ ರೇಗುತ್ತದೆ. ಅವರು ರೆಡ್ಡಿಗೆ, ‘ಅಲ್ಲೇ ಕೂತು ಮಾತಾಡ್ತಾ ಇದ್ದೀರಲ್ರೀ, ನೀವು ಆಡಳಿತ ಪಕ್ಷದ ಸಚೇತಕರು, ನಿಮ್ಮ ಪಕ್ಷದ ಸದಸ್ಯರನ್ನು ಸುಮ್ಮನಿರಿಸುವುದು ನಿಮ್ಮ ಕೆಲಸ, ನಿಮ್ಮ ಕೆಲಸವನ್ನು ಕಾನೂನು ಸಚಿವರು ಮಾಡುತ್ತಿದ್ದಾರೆ. ನೀವು ವಿಪ್ ಆಗಿ ಸುಮ್ನೆ ಕೂತರೆ ಹೇಗೆ? ಹೋಗಿ ನಿಮ್ಮ ಸದಸ್ಯರನ್ನು ಸುಮ್ಮನಿರಿಸಿ,’ ಅಂತ ತರಾಟೆಗೆ ತೆಗೆದುಕೊಳ್ಳುತ್ತಾರೆ.

ಇದನ್ನೂ ಓದಿ:  ಮೇಕೆದಾಟು ಯೋಜನೆ ಕುರಿತು ಸದನದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅರ್ಥಗರ್ಭಿತ ಮಾತು

Follow us