ಕರ್ನಾಟಕ ವಿಧಾನಸಭೆ ಚಳಿಗಾಲದ ಅಧಿವೇಶನ (Karnataka Assembly Winter Session) ಬೆಳಗಾವಿಯಲ್ಲಿ ಆರಂಭ ಆಗಿದೆ. ಮೊದಲ ದಿನವಾದ ಇಂದು (ಡಿ.13) ಸದನದಲ್ಲಿ ಪುನೀತ್ ರಾಜ್ಕುಮಾರ್ (Puneeth Rajkumar) ಬಗ್ಗೆ ಪ್ರಸ್ತಾಪ ಆಯಿತು. ಸಿನಿಮಾ ಮಾತ್ರವಲ್ಲದೇ ಅನೇಕ ಕ್ಷೇತ್ರಗಳಿಗೆ ಪುನೀತ್ ಕೊಡುಗೆ ನೀಡಿದ್ದಾರೆ. ಅದರ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರು ವಿವರಗಳನ್ನು ಹಂಚಿಕೊಂಡರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಪುನೀತ್ ಬಗ್ಗೆ ಭಾವುಕ ಮಾತುಗಳನ್ನು ಆಡಿದರು. ಅಪ್ಪು ಮಾಡಿದ ಸಾಧನೆಗಳನ್ನು ಎಲ್ಲರೂ ಕೊಂಡಾಡಿದರು. ಪುನೀತ್ಗೆ ಈಗಾಗಲೇ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ ಆಗಿದೆ. ಅದನ್ನು ಪ್ರದಾನ ಮಾಡಲಾಗುವ ದಿನಾಂಕದ ಬಗ್ಗೆ ಶೀಘ್ರವೇ ಮಾಹಿತಿ ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ. ಇತ್ತೀಚೆಗೆ ನಿಧನರಾದ ಹಿರಿಯ ನಟ ಶಿವರಾಂ ಅವರಿಗೂ ಸದನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.