ಸಿದ್ದರಾಮಯ್ಯ ಆಡಳಿತ ಕರ್ನಾಟಕಕ್ಕೆ ಹಿಡಿದ ಗ್ರಹಣ: ಬಿಜೆಪಿ  ಸಂಸದ ತೇಜಸ್ವಿ ಸೂರ್ಯ

Updated on: Oct 23, 2025 | 2:07 PM

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತವನ್ನು ಸಂಸದ ತೇಜಸ್ವಿ ಸೂರ್ಯ ತೀವ್ರವಾಗಿ ಟೀಕಿಸಿದ್ದಾರೆ. ರಾಜ್ಯದ ಬಂಡವಾಳ ವೆಚ್ಚದ ಕುಸಿತ, ಅಭಿವೃದ್ಧಿ ಕಾಮಗಾರಿಗಳ ಕೊರತೆ, ಮತ್ತು ರೈತರ ಆತ್ಮಹತ್ಯೆ, ಮಹಿಳೆಯರ ಮೇಲಿನ ದೌರ್ಜನ್ಯ, ಬೆಂಗಳೂರಿನಲ್ಲಿ ರಸ್ತೆ ಗುಂಡಿ ಹಾಗೂ ಕಸದ ಸಮಸ್ಯೆಗಳ ಕುರಿತು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಶ್ವೇತಪತ್ರ ಹೊರಡಿಸುವಂತೆ ತೇಜಸ್ವಿ ಆಗ್ರಹಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್​ 23: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತವನ್ನು ಸಂಸದ ತೇಜಸ್ವಿ ಸೂರ್ಯ (Tejasvi Surya) ತೀವ್ರವಾಗಿ ಟೀಕಿಸಿದ್ದಾರೆ. ಕರ್ನಾಟಕದಲ್ಲಿ ಕಳೆದ ಎರಡುವರೆ-ಮೂರು ವರ್ಷಗಳಲ್ಲಿ ಸಿದ್ದರಾಮಯ್ಯ ಸರ್ಕಾರ ಮಾಡಿರುವ ಸಾಲ ಎಲ್ಲಿ ಉಪಯೋಗವಾಯಿತು?. ಹೊಸ ಮೆಟ್ರೋ, ಫ್ಲೈ ಓವರ್ ಅಥವಾ ಕಟ್ಟಡಗಳನ್ನು ನಿರ್ಮಿಸಲಾಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.  ರಾಜ್ಯದ ಬಂಡವಾಳ ವೆಚ್ಚ 57-58 ಸಾವಿರ ಕೋಟಿ ರೂಪಾಯಿಗಳಿಂದ 49-50 ಸಾವಿರ ಕೋಟಿ ರೂಪಾಯಿಗಳಿಗೆ ಇಳಿದಿದೆ. ಬಂಡವಾಳ ವೆಚ್ಚ ಕಡಿಮೆ ಮಾಡಿ, ಆದಾಯ ವೆಚ್ಚ ಮತ್ತು ಸಬ್ಸಿಡಿಗಳನ್ನು ಹೆಚ್ಚಿಸುವ ಮೂಲಕ ಪ್ರಪಂಚದ ಯಾವುದೇ ಸರ್ಕಾರ ಯಶಸ್ವಿಯಾಗಿಲ್ಲ. ಮುಖ್ಯಮಂತ್ರಿಗಳು ರಾಜ್ಯದ ಆರ್ಥಿಕ ಸ್ಥಿತಿಯ ಕುರಿತು ಶ್ವೇತಪತ್ರ ಹೊರಡಿಸಬೇಕು. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಿನಿಂದ ಕಾಂಗ್ರೆಸ್‌ನಲ್ಲಿ ಮ್ಯೂಸಿಕಲ್ ಚೇರ್ ಸ್ಪರ್ಧೆ ನಡೆಯುತ್ತಿದೆ. ಅವರ ಆಡಳಿತ ಕರ್ನಾಟಕಕ್ಕೆ ಹಿಡಿದಿರುವ ಗ್ರಹಣ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.