ವರ್ಗಾವಣೆ ಧಂದೆಯನ್ನು ಸರ್ಕಾರ ಎಗ್ಗಿಲ್ಲದೆ ನಡೆಸುತ್ತಿದೆ ಎಂದ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ

Updated on: Jun 30, 2025 | 6:53 PM

ವರ್ಗಾವಣೆ ಧಂದೆಯನ್ನು ಕಾಂಗ್ರೆಸ್ ಸರ್ಕಾರ ಎಗ್ಗಿಲ್ಲದ ನಡೆಸುತ್ತಿದೆ, ತಮಗೆ ಬೇಕಾದ ಆಫೀಸರ್​ಗಳನ್ನು ಹಾಕಿಸಿಕೊಳ್ಳಬೇಕಾದರೆ ₹ 5-10 ಲಕ್ಷ ಖರ್ಚು ಮಾಡಬೇಕು, ತನ್ನ ಕ್ಷೇತ್ರದ ಒಬ್ಬ ಸರ್ಕಾರಿ ನೌಕರನನ್ನು ಉಡುಪಿ ಜಿಲ್ಲೆಯ ಬೆಳ್ತಂಗಡಿಗೆ ಟ್ರಾನ್ಸ್​ಫರ್ ಮಾಡಲಾಗಿದೆ ಎಂದು ಹೇಳಿದ ರೇವಣ್ಣ ಅವರು, ಇದೆಲ್ಲ ಬಹಳ ದಿನ ನಡೆಯಲ್ಲ, ದೇವರೇ ನಿಮಗೆ ಶಿಕ್ಷೆ ನೀಡುತ್ತಾನೆ ಎಂದು ಸಚಿವ ಸುಧಾಕರ್​ರನ್ನು ಎಚ್ಚರಿಸಿದರು.

ಹಾಸನ, ಜೂನ್ 30: ಬಹಳ ದಿನಗಳ ನಂತರ ಮಾಧ್ಯಮ ಗೋಷ್ಠಿ ನಡೆಸಿ ಮಾತಾಡಿದ ಶಾಸಕ ಹೆಚ್ ಡಿ ರೇವಣ್ಣ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಕೃಷಿ ಇಲಾಖೆಯಲ್ಲಿ (agriculture department) ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಸಿಬ್ಬಂದಿಯೇ ಇಲ್ಲ, ಒಂದು ಕಚೇರಿಯನ್ನು ಇಬ್ಬಿಬ್ಬರೇ ನಡೆಸುತ್ತಿದ್ದಾರೆ, ಸಹಾಯಕ ನಿರ್ದೇಶಕನಾಗಿರುವವನೇ ಕಸ ಕೂಡ ಗುಡಿಸುತ್ತಾನೆ ಎಂದು ರೇವಣ್ಣ ಹೇಳಿದರು. ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ, ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಕೊಟ್ಟರೆ ಸಾಕು ಎಂದು ಸರ್ಕಾರ ಭಾವಿಸುವಂತಿದೆ, ವಸತಿ ಯೋಜನೆ ಅಡಿ ಯಾರಿಗೆ ಮನೆ ಸಿಗುತ್ತಿದೆಯೋ ಎಂದು ರೇವಣ್ಣ ಕುಹುಕವಾಡಿದರು.

ಇದನ್ನೂ ಓದಿ:   ಸಂಕಷ್ಟಗಳನ್ನು ಎದುರಿಸುವ ಶಕ್ತಿಯನ್ನು ದೇವರು ನನ್ನ ಕುಟುಂಬಕ್ಕೆ ಕೊಟ್ಟಿದ್ದಾನೆ: ಹೆಚ್ ಡಿ ರೇವಣ್ಣ, ಶಾಸಕ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us