ಮಹಾರಾಷ್ಟ್ರದಲ್ಲಿ ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗದಲ್ಲಿನ ರಸ್ತೆಗಳು ಜಲಾವೃತ, ವಾಹನ ಸಂಚಾರಕ್ಕೆ ತೊಂದರೆ

|

Updated on: Jul 08, 2024 | 6:54 PM

ಮಹಾರಾಷ್ಟ್ರದ ರಾಜಧಾನಿ ಮುಬೈಯಲ್ಲಿ ಇಂದು ಸಹ ಧಾರಾಕಾರವಾಗಿ ಮಳೆ ಸರಿಯುತ್ತಿದ್ದು ಸೇನೆ, ವಾಯಸೇನೆ ಮತ್ತು ನೌಕಾದಳವನ್ನು ಸನ್ನದ್ಧ ಸ್ಥಿತಿಯಲ್ಲಿರುವಂತೆ ಅಲ್ಲಿನ ಸರ್ಕಾರ ಸೂಚಿಸಿದೆ. ನಗರದ ರಸ್ತೆ ಮತ್ತು ರೇಲ್ವೇ ಟ್ರ್ಯಾಕ್​ಗಳು ಜಲಾವೃತಗೊಂಡಿರುವ ಕಾರಣ ವಾಹನ ಸಂಚಾರ ತೀವ್ರ ಪ್ರಭಾವಕ್ಕೊಳಗಾಗಿದೆ. ರಾಜ್ಯ ಸರ್ಕಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ.

ಬೆಳಗಾವಿ: ಈ ಸಲದ ಮಳೆಗಾಲವನ್ನು ಅರ್ಥಮಾಡಿಕೊಳ್ಳುವುದೇ ಕಷ್ಟವಾಗಿದೆ. ಭಾರತದ ಹೆಚ್ಚು ಕಡಿಮೆ ಎಲ್ಲ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಕರ್ನಾಟಕ ಮತ್ತು ನೆರೆರಾಜ್ಯ ಮಹಾರಾಷ್ಟ್ರದಲ್ಲಂತೂ ಒಂದೇ ಸಮ ಮಳೆ ಸುರಿಯುತ್ತಿದೆ. ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿರುವ ಮಹಾರಾಷ್ಟ್ರದ ಚಂದಗಡ ತಾಲ್ಲೂಕಿನ ತಿಲಾರಿ ಮತ್ತು ಪಾಟ್ನೆಪಾಟಾ ಹೆಸರಿನ ಏರಿಯಾಗಳಲ್ಲಿ ಮಳೆ ನೀರು ರಸ್ತೆಗೆ ಬಂದ ಕಾರಣ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಬೆಳಗಾವಿ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಹಿರಣ್ಯಕೇಶಿ ನದಿ ಉಕ್ಕಿರುವುದರಿಂದ ನೀರು ರಸ್ತೆಯ ಮೇಲೆ ನುಗ್ಗಿದೆ. ತಿಲಾರಿ ಗ್ರಾಮದ ಸೇತುವೆ ಮೇಲೆ ಮೂರು ಅಡಿಯಷ್ಟು ನೀರು ಹರಿದು ಬಂದಿದೆ. ಅದರ ಪರಿಣಾಮವಾಗೇ ತಿಲಾರಿ-ಬೆಳಗಾವಿ ಸಂಪರ್ಕ ರಸ್ತೆ ಜಲಾವೃತಗೊಂಡಿದೆ ಮತ್ತು ದ್ವಿಚಕ್ರ ವಾಹನ ಸವಾರರು ತಮ್ಮ ವಾಹನಗನ್ನು ತಳ್ಳಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ನಾವು ಈಗಾಗಲೇ ವರದಿ ಮಾಡಿರುವ ಹಾಗೆ ಮಹಾರಾಷ್ಟ್ರದ ಬಹಳಷ್ಟು ಪ್ರಾಂತ್ಯಗಳಲ್ಲಿ ಸತತವಾಗಿ ಮಳೆಯಾಗುತ್ತಿದೆ ಮತ್ತು ನದಿ ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಬಂದರುನಗರ ರತ್ನಗಿರಿ ಸಂಪೂರ್ಣವಾಗಿ ಜಲಾವೃತಗೊಂಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ವಿಜಯಪುರ: ಕೃಷ್ಣಾ ನದಿ ಪಾತ್ರದಲ್ಲಿ ಭಾರಿ ಮಳೆ, ಭರ್ತಿಯಾಗುತ್ತಿದೆ ಆಲಮಟ್ಟಿ ಜಲಾಶಯ

Follow us on