ರಾಜಕೀಯವಾಗಿ ನಾವು ಸಿದ್ಧರಿದ್ದೇವೆ: SIR ಮುಗಿದ ತಕ್ಷಣ ಜಿಬಿಎ ಎಲೆಕ್ಷನ್ ಎಂದ ಕೃಷ್ಣಬೈರೇಗೌಡ
ಡಿಸೆಂಬರ್ 31ರೊಳಗೆ ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ಗಡುವು ನೀಡಿದ್ದರೂ, ಸರ್ಕಾರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಿಂದಾಗಿ ವಿಳಂಬವನ್ನು ಎದುರಿಸುತ್ತಿದೆ. ಹೊಸ ಮತದಾರರ ಪಟ್ಟಿ ಸಿದ್ಧಗೊಳ್ಳುವವರೆಗೆ ಚುನಾವಣೆ ನಡೆಸುವುದು ಮತದಾರರಿಗೆ ಗೊಂದಲ ಸೃಷ್ಟಿಸಬಹುದು. ಇದೊಂದು ರಾಜಕೀಯ ಉದ್ದೇಶವಿಲ್ಲದ ಕಾನೂನಾತ್ಮಕ ಸಮಸ್ಯೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ದೆಹಲಿ, ಜುಲೈ 17: ‘‘ಸರ್ಕಾರಕ್ಕೆ ಸಮಯ ಕೇಳುವ ಉದ್ದೇಶವಿಲ್ಲ. ನಾವು ಜಿಬಿಎ ಚುನಾವಣೆ ಮಾಡಲಿಕೆ ರಾಜಕೀಯವಾಗಿ ಸಿದ್ಧವಾಗಿದ್ದೇವೆ. ಎಸ್ಐಆರ್ ನಡೆಯುವಾಗ ಚುನಾವಣೆ ಮಾಡಿದರೆ ಸರಿಯಾಗಿರಲ್ಲ, ಹೀಗಾಗಿ ಎಸ್ಐಆರ್ ಮುಗಿದ ಬಳಿಕ ಚುನಾವಣೆ ನಡೆಯಲಿದ್ದು, ಇದರಲ್ಲಿ ಯಾವ ರಾಜಕೀಯ ಉದ್ದೆಶ ಇಲ್ಲ’’ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ. ಡಿಸೆಂಬರೊಳಗೆ ಜಿಬಿಎ ಎಲೆಕ್ಷನ್ ವಿಚಾರವಾಗಿ ಮಾತನಾಡಿದ ಅವರು, ‘‘ಪ್ರಸ್ತುತ SIR ಪ್ರಕ್ರಿಯೆಯಲ್ಲಿ ಅಧಿಕಾರಿಗಳು ತೊಡಗಿಸಿಕೊಂಡಿದ್ದು, ಇದು ಸಂಪೂರ್ಣಗೊಳ್ಳಲು ಸಮಯ ತೆಗೆದುಕೊಳ್ಳುತ್ತಿದೆ. ಆಗಸ್ಟ್ 8ರ ನಂತರ ಆಕ್ಷೇಪಣೆಗಳನ್ನು ಆಹ್ವಾನಿಸಿ, ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಬೇಕಿದೆ. ಇನ್ನು, SIR ನಂತರ ಹೊಸ ಮತದಾರರ ಪಟ್ಟಿ ಬರುವುದರಿಂದ, ಹಳೆಯ ಪಟ್ಟಿಯ ಆಧಾರದ ಮೇಲೆ ಚುನಾವಣೆ ನಡೆಸಿದರೆ ಸುಮಾರು 2-3 ಲಕ್ಷ ಮತದಾರರ ವ್ಯತ್ಯಾಸ ಉಂಟಾಗುವ ಸಾಧ್ಯತೆಯಿದೆ. ಹೊಸ ಮತದಾರರ ಪಟ್ಟಿ ಆಧಾರದ ಮೇಲೆ ಚುನಾವಣೆ ನಡೆಸುವುದೇ ಸೂಕ್ತ ಎಂದು ಸರ್ಕಾರ ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡಿದೆ. ಸರ್ಕಾರ ಚುನಾವಣೆಗೆ ಸಿದ್ಧವಿದ್ದು, SIR ಪ್ರಕ್ರಿಯೆ ಮುಗಿದ ತಕ್ಷಣವೇ ಚುನಾವಣೆ ನಡೆಸಲಿದೆ’’ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
