ಚಾರ್ಮಾಡಿ ಘಾಟ್​​​ನಲ್ಲಿ KSRTC ಬಸ್​ಗೆ ಅಡ್ಡನಿಂತ ಒಂಟಿ ಸಲಗ, ಮುಂದೇನಾಯ್ತು?

| Updated By: ಆಯೇಷಾ ಬಾನು

Updated on: Jun 13, 2024 | 12:28 PM

ಚಾರ್ಮಾಡಿ ಘಾಟ್​ನಲ್ಲಿ ಪದೇಪದೇ ಒಂಟಿ ಸಲಗ ಕಾಣಿಸಿಕೊಳ್ಳುತ್ತಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್​​​ ಬಳಿ ಕೆಎಸ್​ಆರ್​​ಟಿಸಿ ಬಸ್​ಗೆ ಒಂಟಿ ಸಲಗ ಅಡ್ಡನಿಂತು ಭಯ ಹುಟ್ಟಿಸಿದೆ. ಮಧ್ಯರಾತ್ರಿ ಒಂಟಿ ಸಲಗದ ಉಪಟಳಕ್ಕೆ ಪ್ರಯಾಣಿಕರು ಕಂಗಾಲಾದರು.

ಚಿಕ್ಕಮಗಳೂರು, ಜೂನ್.13: ಚಾರ್ಮಾಡಿ ಘಾಟ್​ನಲ್ಲಿ(Charmadi Ghat) ಒಂಟಿ ಸಲಗದ ಆತಂಕ ಹೆಚ್ಚಾಗಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್​​​ ಬಳಿ ಕೆಎಸ್​ಆರ್​​ಟಿಸಿ ಬಸ್​ಗೆ (KSRTC Bus) ಒಂಟಿ ಸಲಗ (Elephant) ಅಡ್ಡನಿಂತು ಭಯ ಹುಟ್ಟಿಸಿದೆ. ಮಧ್ಯರಾತ್ರಿ ಒಂಟಿ ಸಲಗದ ಉಪಟಳಕ್ಕೆ ಪ್ರಯಾಣಿಕರು ಕಂಗಾಲಾದರು. ಶಿವಮೊಗ್ಗದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್​ಗೆ ಅಡ್ಡಲಾಗಿ ಆನೆಯೊಂದು ಬಂದು ನಿಂತಿದ್ದು ಸುಮಾರು ಅರ್ಧ ಗಂಟೆಗಳ ಕಾಲ ದಾರಿಯೇ ಬಿಟ್ಟಿಲ್ಲ. ಅರ್ಧ ಗಂಟೆ ಚೂರೂ ಅಲುಗಾಡದೆ ಭಯದಲ್ಲೇ ಪ್ರಯಾಣಿಕರು ಕೂರುವಂತಾಗಿತ್ತು.

ಚಾರ್ಮಾಡಿ ಘಾಟ್​ನಲ್ಲಿ ಪದೇಪದೇ ಒಂಟಿ ಸಲಗ ಕಾಣಿಸಿಕೊಳ್ಳುತ್ತಿದೆ. ಒಂಟಿ ಸಲಗದ ಸೆರೆಗೆ ಗ್ರಾಮಸ್ಥರು, ಪ್ರಯಾಣಿಕರು ಮನವಿ ಮಾಡಿದ್ದಾರೆ. ಈ ರೀತಿ ಆನೆಗಳು ಪ್ರಯಾಣಿಕರಿಗೆ ಕಾಟ ಕೊಡೋದು, ದಾಳಿ ಮಾಡೋದು ಹೊಸದೇನಲ್ಲ. ಆದರೆ ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು.

ಎರಡು ದಿನಗಳ ಹಿಂದಷ್ಟೇ ಪುತ್ತೂರಿನಲ್ಲೂ ಆನೆ ಕಾಟ ಶುರುವಾಗಿತ್ತು. ಗುಂಪಿನಿಂದ ತಪ್ಪಿಸಿಕೊಂಡು ಬಂದ ಕಾಡಾನೆಯೊಂದು ಕಳೆದ ಹತ್ತು ದಿನಗಳಿಂದ ಪುತ್ತೂರು ತಾಲೂಕಿನ ಹತ್ತಾರು ಹಳ್ಳಿಗಳಲ್ಲಿ ಓಡಾಡುತ್ತಿದೆ. ಇದರಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಹೋದ ಕಡೆಯಲ್ಲೆಲ್ಲ ಹಾನಿ ಮಾಡುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Follow us on