ಕಾಡಾನೆ ದಾಳಿ ಭೀತಿಯಲ್ಲಿರುವ ಚಿಕ್ಕಮಗಳೂರು ನಿವಾಸಿಗಳಿಗೆ ಮತ್ತೊಂದು ಶಾಕ್

Edited By:

Updated on: Feb 26, 2026 | 1:07 PM

ಬೀಟಮ್ಮ ಗ್ಯಾಂಗ್ ಹಾಗೂ ಕಾಡಾನೆಗಳ ಹಿಂಡು ಗ್ರಾಮಗಳಿಗೆ ಮುತ್ತಿಗೆ ಹಾಕಿರುವುದರಿಂದ ಆತಂಕದಲ್ಲಿರುವ ಚಿಕ್ಕಮಗಳೂರು ಜನತೆಗೆ ಈಗ ಹೊಸದೊಂದು ಸಮಸ್ಯೆ ತಲೆದೋರಿದೆ. ಕಾಡುಕೋಣಗಳ ಹಾವಳಿಯೂ ಅತಿಯಾಗಿದ್ದು, ಕಂಗೆಡುವಂತೆ ಮಾಡಿದೆ. ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಕಾಡುಕೋಣಗಳನ್ನು ಅರಣ್ಯ ಪ್ರದೇಶಕ್ಕೆ ಓಡಿಸಬೇಕು ಹಾಗೂ ಜನರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಜರುಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಚಿಕ್ಕಮಗಳೂರು, ಫೆಬ್ರವರಿ 26: ಈಗಾಗಲೇ ಕಾಡಾನೆಗಳ ದಾಳಿಯಿಂದ ಆತಂಕದಲ್ಲಿರುವ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಜನತೆಗೆ ಇದೀಗ ಕಾಡುಕೋಣಗಳ ಹಾವಳಿಯೂ ತಲೆನೋವಾಗಿ ಪರಿಣಮಿಸಿದೆ. ಕೊಪ್ಪ ತಾಲೂಕಿನ ಬಸ್ರೀಕಟ್ಟೆ ಗ್ರಾಮದ ಕಾಫಿತೋಟದಲ್ಲಿ 50ಕ್ಕೂ ಅಧಿಕ ಕಾಡುಕೋಣಗಳ ಹಿಂಡು ಬೀಡುಬಿಟ್ಟಿದ್ದು, ಸ್ಥಳೀಯರು ಕಂಗಾಲಾಗಿದ್ದಾರೆ. ಕಾಫಿತೋಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾಡುಕೋಣಗಳು ಸಂಚರಿಸುತ್ತಿರುವ ದೃಶ್ಯ ಕಂಡು ಕಾರ್ಮಿಕರು ಕೆಲಸಕ್ಕೆ ತೆರಳಲು ಭಯಪಡುತ್ತಿದ್ದಾರೆ. ಕಾಡಾನೆಗಳ ಹಾವಳಿ ಇನ್ನೂ ಕಡಿಮೆಯಾಗದಿರುವಾಗಲೇ ಕಾಡುಕೋಣಗಳ ದಾಳಿ ಭೀತಿ ಹೆಚ್ಚಾಗಿದೆ.

ಇತ್ತೀಚೆಗೆ ಕೊಪ್ಪ ತಾಲೂಕಿನ ಮುಂಡೋಳು ಗ್ರಾಮದಲ್ಲಿ 55 ವರ್ಷದ ರೈತ ಶಿವಪ್ಪ ಮೇಲೆ ಕಾಡುಕೋಣ ದಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡ ಶಿವಪ್ಪ ಅವರನ್ನು ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆ ಕೊಪ್ಪ ಅರಣ್ಯ ವಲಯದ ವ್ಯಾಪ್ತಿಯಲ್ಲಿ ನಡೆದಿದ್ದು, ಕಾಡುಕೋಣಗಳ ಹಿಂಡು ಗ್ರಾಮಾಂತರ ಪ್ರದೇಶಗಳಲ್ಲಿ ನಿರಂತರ ಸಂಚರಿಸುತ್ತಿದೆ. ಇದರಿಂದ ಕಾಫಿತೋಟ ಕಾರ್ಮಿಕರು ಹಾಗೂ ಗ್ರಾಮಸ್ಥರು ಆತಂಕದಲ್ಲಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us