ಸುಡುವ ಬಿಸಿಲಲ್ಲಿ ಹೈ ಟೆನ್ಷನ್ ಕಂಬ ಏರಿ ಕುಳಿತ ರೈತ! ವಿಂಡ್ ಪವರ್ ಕಂಪನಿ ವಿರುದ್ಧ ಭಾರಿ ಆಕ್ರೋಶ
ಯಲಬುರ್ಗಾ ತಾಲೂಕಿನ ಹುಣಸಿಹಾಳ ಗ್ರಾಮದಲ್ಲಿ ರೈತ ನಾಗರಾಜ್ ಗೊಂದಿ ವಿಂಡ್ ಪವರ್ ಕಂಪನಿಯ ದೌರ್ಜನ್ಯ ಖಂಡಿಸಿ 400 ಮೀಟರ್ ಎತ್ತರದ ಕಂಬ ಏರಿ ಪ್ರತಿಭಟಿಸುತ್ತಿದ್ದಾರೆ. ಕಂಪನಿಯ ಸಿಬ್ಬಂದಿ ರೈತನ ಅನುಮತಿಯಿಲ್ಲದೆ ಶೇಂಗಾ ಬೆಳೆ ನಾಶಪಡಿಸಿ, ಪರಿಹಾರ ಕೇಳಿದಾಗ ದೌರ್ಜನ್ಯ ಎಸಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆ ಇರುವ ರೈತನ ಜೀವಕ್ಕೆ ಅಪಾಯವಿದ್ದರೂ ಅಧಿಕಾರಿಗಳು ಸ್ಪಂದಿಸದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಕೊಪ್ಪಳ, ಏ.18: ಜಿಲ್ಲೆಯ ಯಲಬುರ್ಗಾ ತಾಲೂಕಿನ ಹುಣಸಿಹಾಳ ಗ್ರಾಮದಲ್ಲಿ ವಿಂಡ್ ಪವರ್ ಕಂಪನಿಯ ದೌರ್ಜನ್ಯದ ವಿರುದ್ಧ ರೈತನೊಬ್ಬ ಆಕ್ರೋಶ ವ್ಯಕ್ತಪಡಿಸಿ, ಸುಮಾರು 400 ಮೀಟರ್ ಎತ್ತರದ ಹೈ ಟೆನ್ಷನ್ ವಿದ್ಯುತ್ ಕಂಬ ಏರಿ ಕುಳಿತಿದ್ದಾನೆ. ಮಧ್ಯಾಹ್ನದ ಸುಡುವ ಬಿಸಿಲನ್ನೂ ಲೆಕ್ಕಿಸದೆ ರೈತ ನಡೆಸುತ್ತಿರುವ ಈ ಪ್ರತಿಭಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಹುಣಸಿಹಾಳ ಗ್ರಾಮದ ರೈತ ನಾಗರಾಜ್ ಗೊಂದಿ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ ಶೇಂಗಾ ಬೆಳೆಯನ್ನು ಪವರ್ ಗ್ರೀಡ್ ವಿಂಡ್ ಪವರ್ ಸಿಬ್ಬಂದಿಗಳು ಹಾಳು ಮಾಡಿದ್ದಾರೆ. ಹೈ ಟೆನ್ಷನ್ ವಿದ್ಯುತ್ ವೈರ್ ಕನೆಕ್ಷನ್ ನೀಡುವ ಉದ್ದೇಶದಿಂದ ರೈತನ ಅನುಮತಿ ಇಲ್ಲದೆ ಜಮೀನಿನೊಳಗೆ ಟ್ರ್ಯಾಕ್ಟರ್ ಓಡಿಸಿ ಬೆಳೆಯನ್ನು ನಾಶಪಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಪರಿಹಾರ ನೀಡುವಂತೆ ಕೇಳಿದ ರೈತನ ಮೇಲೆ ವಿಂಡ್ ಪವರ್ ಸಿಬ್ಬಂದಿಗಳು ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದ ರೈತ ಇಂದು ಬೆಳಿಗ್ಗೆ 9 ಗಂಟೆಯಿಂದಲೇ ವಿದ್ಯುತ್ ಕಂಬ ಏರಿ ಕುಳಿತಿದ್ದಾರೆ.ಪ್ರತಿಭಟನೆ ನಡೆಸುತ್ತಿರುವ ರೈತ ನಾಗರಾಜ್ ಅವರು ಈಗಾಗಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. 38 ಡಿಗ್ರಿ ಸೆಲ್ಸಿಯಸ್ ಇರುವ ಸುಡುವ ಬಿಸಿಲಿನಲ್ಲಿ ಅವರು ಎತ್ತರದ ಕಂಬದ ಮೇಲೆ ಕುಳಿತಿರುವುದು ಅವರ ಪ್ರಾಣಕ್ಕೆ ಅಪಾಯ ತಂದೊಡ್ಡಬಹುದು ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.ರೈತ ಕಂಬ ಏರಿ ಹಲವು ಗಂಟೆಗಳಾದರೂ ಇದುವರೆಗೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಾಧಾನಪಡಿಸುವ ಅಥವಾ ಮಾತುಕತೆ ನಡೆಸುವ ಪ್ರಯತ್ನ ಮಾಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ