ಲೆಬನಾನ್‌ನಲ್ಲಿ ಶಾಂತಿ ಸ್ಥಾಪನೆಯಾಗುವವರೆಗೆ ಚರ್ಚೆ ಇಲ್ಲ, ಅಮೆರಿಕದೊಂದಿಗೆ ಮಾತುಕತೆ ಸ್ಥಗಿತಗೊಳಿಸುವುದಾಗಿ ಇರಾನ್ ಎಚ್ಚರಿಕೆ

ಲೆಬನಾನ್‌ನಲ್ಲಿ ಇಸ್ರೇಲ್ ದಾಳಿ ನಿಲ್ಲಿಸದ ಹೊರತು ಅಮೆರಿಕದೊಂದಿಗೆ ಮಾತುಕತೆ ಇಲ್ಲ ಎಂದು ಇರಾನ್ ಘೋಷಿಸಿದೆ. ಇದು ಪಶ್ಚಿಮ ಏಷ್ಯಾದಲ್ಲಿನ ಶಾಂತಿ ಒಪ್ಪಂದದ ಕುಸಿತಕ್ಕೆ ಕಾರಣವಾಗಿದೆ. ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಮಾತುಕತೆಯಿಂದ ಇರಾನ್ ಹಿಂದೆ ಸರಿದಿದ್ದು, ಜಾಗತಿಕ ಆತಂಕಕ್ಕೆ ಕಾರಣವಾಗಿದೆ. ಲೆಬನಾನ್ ಹಿಂಸಾಚಾರಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಹಾರ್ಮುಜ್ ಜಲಸಂಧಿ ಮುಚ್ಚಿದ್ದು, ತೈಲ ಬಿಕ್ಕಟ್ಟಿನ ಭೀತಿ ಸೃಷ್ಟಿಸಿದೆ. ಈ ಬೆಳವಣಿಗೆಗಳು ಮಧ್ಯಪ್ರಾಚ್ಯದ ಸ್ಥಿರತೆಗೆ ಅಪಾಯ ತರಬಹುದು.

ಲೆಬನಾನ್‌ನಲ್ಲಿ ಶಾಂತಿ ಸ್ಥಾಪನೆಯಾಗುವವರೆಗೆ ಚರ್ಚೆ ಇಲ್ಲ, ಅಮೆರಿಕದೊಂದಿಗೆ ಮಾತುಕತೆ ಸ್ಥಗಿತಗೊಳಿಸುವುದಾಗಿ ಇರಾನ್ ಎಚ್ಚರಿಕೆ
ಇರಾನ್
Image Credit source: India TV

Updated on: Apr 10, 2026 | 12:39 PM

ಟೆಹ್ರಾನ್, ಏಪ್ರಿಲ್ 10: ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಆಶಾಕಿರಣವಾಗಿದ್ದ ಅಮೆರಿಕ-ಇರಾನ್(Iran) ಕದನ ವಿರಾಮ ಒಪ್ಪಂದವು ಈಗ ಸಂಪೂರ್ಣ ಕುಸಿತದ ಅಂಚಿಗೆ ಬಂದು ನಿಂತಿದೆ. ನಾಳೆ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ನಿರ್ಣಾಯಕ ಮಾತುಕತೆಯಿಂದ ಹಿಂದೆ ಸರಿಯುವುದಾಗಿ ಇರಾನ್ ಘೋಷಿಸಿದ್ದು, ಜಾಗತಿಕ ರಾಜಕೀಯದಲ್ಲಿ ಮತ್ತೆ ಆತಂಕದ ಕಾರ್ಮೋಡ ಕವಿಯುವಂತೆ ಮಾಡಿದೆ. ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿದ್ದ 14 ದಿನಗಳ ಕದನ ವಿರಾಮವು ಮುರಿದುಬೀಳುವ ಹಂತಕ್ಕೆ ತಲುಪಿದೆ. ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಭೀಕರ ದಾಳಿಗಳನ್ನು ನಿಲ್ಲಿಸದ ಹೊರತು ನಾವು ಯಾವುದೇ ಮಾತುಕತೆಗೆ ಬರುವುದಿಲ್ಲ ಎಂದು ಇರಾನ್ ಹೇಳಿದೆ.

ಇರಾನ್‌ನ ಉನ್ನತ ಮಟ್ಟದ ನಿಯೋಗವು ಈಗಾಗಲೇ ಪಾಕಿಸ್ತಾನಕ್ಕೆ ತಲುಪಿದೆ ಎಂದು ಹರಡಿದ್ದ ವರದಿಗಳನ್ನು ಇರಾನ್ ಸರ್ಕಾರಿ ಸಂಸ್ಥೆಗಳಾದ ‘ಫಾರ್ಸ್’ ಮತ್ತು ‘ತಸ್ನಿಮ್’ ಸಂಪೂರ್ಣವಾಗಿ ನಿರಾಕರಿಸಿವೆ. ಇರಾನ್ ನಿಯೋಗವು ಇಸ್ಲಾಮಾಬಾದ್‌ಗೆ ಹೋಗಿದೆ ಎಂಬ ಸುದ್ದಿ ಸಂಪೂರ್ಣವಾಗಿ ಸುಳ್ಳು. ಲೆಬನಾನ್‌ನಲ್ಲಿ ಕದನ ವಿರಾಮ ಜಾರಿಯಾಗುವವರೆಗೂ ನಾವು ಅಮೆರಿಕದೊಂದಿಗೆ ಮಾತುಕತೆ ನಡೆಸುವ ಯಾವುದೇ ಯೋಜನೆ ಹೊಂದಿಲ್ಲ,ಎಂದು ಅಧಿಕೃತ ಮೂಲಗಳು ಸ್ಪಷ್ಟಪಡಿಸಿವೆ.

ಲೆಬನಾನ್ ರಕ್ತಪಾತ: ಟೆಹ್ರಾನ್ ಕೆಂಗಣ್ಣು
ಬುಧವಾರ ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಲೆಬನಾನ್‌ನಲ್ಲಿ ಕನಿಷ್ಠ 182 ಜನರು ಮೃತಪಟ್ಟಿದ್ದಾರೆ. ಇಸ್ರೇಲ್‌ನ ಈ ಆಕ್ರಮಣಕಾರಿ ನಡೆಯಿಂದ ಕೆರಳಿರುವ ಇರಾನ್, ಪ್ರತೀಕಾರವಾಗಿ ಜಾಗತಿಕ ತೈಲ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮತ್ತೆ ಮುಚ್ಚಿದೆ. ಇದು ಈಗಾಗಲೇ ದುರ್ಬಲವಾಗಿದ್ದ ಶಾಂತಿ ಒಪ್ಪಂದವನ್ನು ಮರಣಶಯ್ಯೆಗೆ ತಳ್ಳಿದೆ.

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಪ್ರಕಾರ, ಲೆಬನಾನ್‌ನಲ್ಲಿ ಯುದ್ಧವನ್ನು ನಿಲ್ಲಿಸುವುದು ಅಮೆರಿಕಕ್ಕೆ ನೀಡಿದ 10 ಅಂಶಗಳ ಪ್ರಸ್ತಾವನೆಯ ಭಾಗವಾಗಿತ್ತು. ಆದರೆ ಡೊನಾಲ್ಡ್ ಟ್ರಂಪ್ ಮತ್ತು ಬೆಂಜಮಿನ್ ನೆತನ್ಯಾಹು ಇದನ್ನು ತಳ್ಳಿಹಾಕಿದ್ದಾರೆ. ಲೆಬನಾನ್ ವಿಷಯವು ಈ ಒಪ್ಪಂದದಲ್ಲಿ ಇರಲೇ ಇಲ್ಲ ಎಂಬುದು ಅವರ ವಾದ.

ಮತ್ತಷ್ಟು ಓದಿ: ಲೆಬನಾನ್ ಮೇಲಿನ ದಾಳಿಗೆ ಪ್ರತೀಕಾರ; ಮತ್ತೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ ಇರಾನ್

ಹೊಸ ಹತ್ಯೆ ಮತ್ತು ಇಸ್ರೇಲ್ ನಡೆ
ಒಂದೆಡೆ ಮಾತುಕತೆಯ ಗೊಂದಲವಿದ್ದರೆ, ಇನ್ನೊಂದೆಡೆ ಇಸ್ರೇಲ್ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಹಿಜ್ಬುಲ್ಲಾ ನಾಯಕ ನಯೀಮ್ ಖಾಸಿಮ್ ಅವರ ಆಪ್ತ ಸಹಾಯಕ ಅಲಿ ಯೂಸುಫ್ ಹರ್ಷಿಯನ್ನು ಕೊಂದಿರುವುದಾಗಿ ಇಸ್ರೇಲ್ ಗುರುವಾರ ಘೋಷಿಸಿದೆ. ಹಿಜ್ಬುಲ್ಲಾ ನಾಗರಿಕ ಪ್ರದೇಶಗಳನ್ನು ಬಳಸಿಕೊಂಡು ದಾಳಿ ಮಾಡುತ್ತಿದೆ ಎಂದು ಇಸ್ರೇಲ್ ಆರೋಪಿಸಿದ್ದರೆ, ಸ್ಥಳೀಯ ಅಧಿಕಾರಿಗಳು ಇದನ್ನು ನಿರಾಕರಿಸುತ್ತಿದ್ದಾರೆ.

ಇರಾನ್‌ನ ಈ ಕಠಿಣ ನಿಲುವು ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ರಾಜತಾಂತ್ರಿಕ ಪ್ರಯತ್ನಗಳಿಗೆ ದೊಡ್ಡ ಪೆಟ್ಟು ನೀಡಿದೆ. ನಮ್ಮ ಷರತ್ತುಗಳು ಈಡೇರದ ಹೊರತು ನಾವು ಹೆಜ್ಜೆ ಇಡುವುದಿಲ್ಲ ಎಂದು ಇರಾನ್ ಪಟ್ಟು ಹಿಡಿದಿದ್ದು, ಅಮೆರಿಕ ಮತ್ತು ಇಸ್ರೇಲ್ ಈ ಒತ್ತಡಕ್ಕೆ ಮಣಿಯುತ್ತದೆಯೇ ಅಥವಾ ಯುದ್ಧದ ಜ್ವಾಲೆ ಮತ್ತಷ್ಟು ವ್ಯಾಪಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಒಟ್ಟಾರೆಯಾಗಿ, ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಯು ಈಗ ಲೆಬನಾನ್‌ನ ರಣಾಂಗಣದಲ್ಲಿ ಸಿಲುಕಿಕೊಂಡಿದೆ. ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆಯು ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟನ್ನು ಸೃಷ್ಟಿಸುವ ಭೀತಿಯನ್ನು ಹುಟ್ಟುಹಾಕಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us