ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಸ್ಫೋಟ: ಇಬ್ಬರು ಸಾವು, ಉಗ್ರರ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಸ್ಥಳೀಯ ನಾಯಕ

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಬಜೌರ್ ಜಿಲ್ಲೆಯಲ್ಲಿ ಶನಿವಾರ ಪ್ರಬಲ ಸ್ಫೋಟ ಸಂಭವಿಸಿದ್ದು, ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ. ಸ್ಥಳೀಯ ನಾಯಕರೊಬ್ಬರು ಅಪಾಯದಿಂದ ಪಾರಾಗಿದ್ದಾರೆ. ನವೆಂಬರ್ 2022 ರ ಕದನ ವಿರಾಮ ರದ್ದತಿಯ ನಂತರ ನಿಷೇಧಿತ ಟಿಟಿಪಿ ಭದ್ರತಾ ಪಡೆಗಳು ಮತ್ತು ಸ್ಥಳೀಯ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸುತ್ತಿದೆ. ಅಫ್ಘಾನ್ ಮಣ್ಣನ್ನು ಟಿಟಿಪಿ ಬಳಸುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ.

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಸ್ಫೋಟ: ಇಬ್ಬರು ಸಾವು, ಉಗ್ರರ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಸ್ಥಳೀಯ ನಾಯಕ
ಸಾವು

Updated on: Jul 26, 2026 | 3:33 PM

ಇಸ್ಲಾಮಾಬಾದ್, ಜುಲೈ 26: ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬಜೌರ್ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದ ಪ್ರಬಲ ಸ್ಫೋಟ(Blast)ದಲ್ಲಿ ಕನಿಷ್ಠ ಇಬ್ಬರು ಸ್ಥಳೀಯರು ಮೃತಪಟ್ಟಿದ್ದಾರೆ. ಇನ್ನು ಈ ದಾಳಿಯ ವೇಳೆ ಸ್ಥಳೀಯ ನಾಯಕರೊಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಜೌರ್ ಜಿಲ್ಲೆಯ ಸಲರ್ಜೈ ತಹಸಿಲ್‌ನಲ್ಲಿರುವ ‘ತಾಲಿ ಬ್ಯಾಂಡ್’ ಪ್ರದೇಶದ ಬಳಿ ಈ ಸ್ಫೋಟ ಸಂಭವಿಸಿದೆ. ಮೃತರನ್ನು ಸುಲೇಮಾನ್ ಖಾರಿ ಹಾಗೂ ಗುಲಾಮ್ ಎಂದು ಗುರುತಿಸಲಾಗಿದ್ದು, ಅವರ ಮೃತದೇಹಗಳನ್ನು ಹತ್ತಿರದ ಖಾರ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸ್ಫೋಟದ ತೀವ್ರತೆಗೆ ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಭೀತಿ ಆವರಿಸಿದ್ದು, ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದು ತನಿಖೆ ಆರಂಭಿಸಿವೆ. ಇದುವರೆಗೆ ಯಾವುದೇ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

ಈ ಸ್ಫೋಟ ಸಂಭವಿಸುವ ಕೇವಲ ಎರಡು ದಿನಗಳಷ್ಟೇ ಮುಂಚಿತವಾಗಿ (ಜುಲೈ 24), ಇದೇ ಪ್ರಾಂತ್ಯದ ಬನ್ನು ಜಿಲ್ಲೆಯಲ್ಲಿ ಭೀಕರ ಆತ್ಮಾಹುತಿ ದಾಳಿ ನಡೆದಿತ್ತು. ಸ್ಫೋಟಕ ತುಂಬಿದ ವಾಹನವನ್ನು ಭದ್ರತಾ ತಪಾಸಣಾ ಕೇಂದ್ರಕ್ಕೆ ಡಿಕ್ಕಿ ಹೊಡೆಸಿದ್ದರಿಂದ 12 ಸೈನಿಕರು, ಇಬ್ಬರು ಪೊಲೀಸರು ಹಾಗೂ ಓರ್ವ ಅಧಿಕಾರಿ ಸೇರಿ ಒಟ್ಟು 15 ಭದ್ರತಾ ಸಿಬ್ಬಂದಿ ಬಲಿಯಾಗಿದ್ದರು. ಅಫ್ಘಾನಿಸ್ತಾನದ ಗಡಿಗೆ ಹೊಂದಿಕೊಂಡಿರುವ ಬಜೌರ್ ಜಿಲ್ಲೆಯು ದಶಕಗಳಿಂದ ತಾಲಿಬಾನ್ ಮತ್ತು ಇತರೆ ಉಗ್ರಗಾಮಿ ಗುಂಪುಗಳ ತಾಣವಾಗಿದೆ. ಜುಲೈ 2023 ರಲ್ಲಿ ಇದೇ ಬಜೌರ್‌ನಲ್ಲಿ ರಾಜಕೀಯ ಸಮಾವೇಶವೊಂದರ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ 60ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.

ನವೆಂಬರ್ 2022 ರಲ್ಲಿ ಪಾಕಿಸ್ತಾನ ಸರ್ಕಾರದೊಂದಿಗಿನ ಕದನ ವಿರಾಮ ಒಪ್ಪಂದವನ್ನು ರದ್ದುಗೊಳಿಸಿದ ನಂತರ, ನಿಷೇಧಿತ ‘ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್’ (TTP) ಸಂಘಟನೆಯು ಭದ್ರತಾ ಪಡೆಗಳು ಹಾಗೂ ಸ್ಥಳೀಯ ನಾಯಕರನ್ನು ಗುರಿಯಾಗಿಸಿಕೊಂಡು ಸರಣಿ ಭಯೋತ್ಪಾದಕ ದಾಳಿಗಳನ್ನು ನಡೆಸುತ್ತಿದೆ.

ಮತ್ತಷ್ಟು ಓದಿ: ಬೊಮ್ಮಸಂದ್ರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಸಿಲಿಂಡರ್ ಸ್ಫೋಟ!: 8ಕ್ಕೂ ಹೆಚ್ಚು ಕಾರ್ಮಿಕರಿಗೆ ಗಂಭೀರ ಗಾಯ

ಪಾಕಿಸ್ತಾನ ಸರ್ಕಾರವು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದ ಮೇಲೆ ವಾಗ್ದಾಳಿ ನಡೆಸುತ್ತಿದ್ದು, ಅಫ್ಘಾನ್ ಮಣ್ಣನ್ನು ಬಳಸಿಕೊಂಡು ಟಿಟಿಪಿ ಉಗ್ರರು ಪಾಕಿಸ್ತಾನದೊಳಗೆ ದಾಳಿಗಳನ್ನು ಸಂಘಟಿಸುತ್ತಿದ್ದಾರೆ ಎಂದು ಆರೋಪಿಸುತ್ತಿದೆ. ಆದರೆ ಈ ಆರೋಪಗಳನ್ನು ಕಾಬುಲ್ ಆಡಳಿತ ನಿರಾಕರಿಸುತ್ತಾ ಬಂದಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us