Russia-Ukraine War Live: ರಷ್ಯಾ ನಡೆಸುತ್ತಿರುವ ಯುದ್ಧ ಖಂಡಿಸಿ ಸರ್ಬಿಯಾದಲ್ಲಿ ಪಾಸ್​ಪೋರ್ಟ್​ ಪ್ರತಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ

| Updated By: ಆಯೇಷಾ ಬಾನು

Updated on: Mar 07, 2022 | 10:53 PM

ಉಕ್ರೇನ್‌ನ ಅಣು ವಿದ್ಯುತ್ ಸ್ಥಾವರಗಳ ಮೇಲೆ ರಷ್ಯಾ ದಾಳಿ ಮಾಡಿದ್ದು, ಅಣು ವಿದ್ಯುತ್ ಸ್ಥಾವರಗಳ ಮೇಲೆ ದಾಳಿಯಿಂದ ದೊಡ್ಡ ಪ್ರಮಾದ ಉಂಟಾಗಿದೆ. ಚೆರ್ನೋಬಿಲ್, ಝಫೋರಿಝೀಯಾ ಎರಡು ಸ್ಥಾವರಗಳನ್ನು ರಷ್ಯಾ ಕೈವಶ ಮಾಡಿಕೊಂಡಿದೆ.

Russia-Ukraine War Live: ರಷ್ಯಾ ನಡೆಸುತ್ತಿರುವ ಯುದ್ಧ ಖಂಡಿಸಿ ಸರ್ಬಿಯಾದಲ್ಲಿ ಪಾಸ್​ಪೋರ್ಟ್​ ಪ್ರತಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ
ಕೀವ್​ನ ಬೀದಿಯೊಂದರಲ್ಲಿ ಧ್ವಂಸಗೊಂಡಿರುವ ಟ್ರಕ್ ಮುಂಭಾಗದಲ್ಲಿ ನಡೆದು ಹೋಗುತ್ತಿರುವ ಉಕ್ರೇನ್ ಸೈನಿಕ

ರಷ್ಯಾಗೆ ಉಕ್ರೇನ್ (Ukraine) ಅಧ್ಯಕ್ಷ ಝೆಲೆನ್‌ಸ್ಕಿ ಖಡಕ್ ವಾರ್ನ್ ಮಾಡಿದ್ದಾರೆ. ನಮ್ಮ ಮೇಲೆ ದೌರ್ಜನ್ಯವೆಸಗಿದವರನ್ನು ಸುಮ್ಮನೆ ಬಿಡಲ್ಲ. ಪ್ರತಿಯೊಬ್ಬರನ್ನೂ ನಾವು ಶಿಕ್ಷಿಸುತ್ತೇವೆ ಎಂದಿದ್ದಾರೆ. ನಮ್ಮ ನಗರ, ಜನರ ಮೇಲೆ ಶೆಲ್ ದಾಳಿ ನಡೆಯುತ್ತಿದೆ. ನಮ್ಮ ನೆಲದ ಮೇಲೆ ಕ್ಷಿಪಣಿಗಳ ದಾಳಿ ಮಾಡಲಾಗುತ್ತಿದೆ. ಈ ರೀತಿ ಮಾಡಿದ ನೀವು ಶಾಂತವಾಗಿ ಇರುವುದಕ್ಕೆ ಆಗಲ್ಲ. ನಮ್ಮ ಮೇಲೆ ದಾಳಿಗೆ ಆದೇಶ ಕೊಟ್ಟವರು ಶಾಂತವಾಗಿರಲ್ಲ. ಅವರಿಗೆ ಈ ನೆಲದ ಮೇಲೆ ಸಮಾಧಿಗಳು ಮಾತ್ರ ಸಿಗುತ್ತೆ. ಶಾಂತಿ, ನೆಮ್ಮದಿ ಸಿಗುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರಿದ ಹಿನ್ನೆಲೆ ರಷ್ಯಾದಲ್ಲಿ ನೆಟ್‌ಫ್ಲಿಕ್ಸ್ ಸೇವೆಗಳನ್ನ ರದ್ದು ಮಾಡಲಾಗಿದೆ ಎಂದು ನೆಟ್‌ಫ್ಲಿಕ್ಸ್ ಕಂಪನಿಯ ವಕ್ತಾರರಿಂದ ಮಾಹಿತಿ ನೀಡಲಾಗಿದೆ. ಜೊತೆಗೆ ರಷ್ಯಾದಲ್ಲಿ ಟಿಕ್‌ಟಾಕ್, ಲೈವ್ ಸ್ಟ್ರೀಮಿಂಗ್ ಕೂಡ ಬ್ಯಾನ್ ಮಾಡಲಾಗಿದೆ. ಉಕ್ರೇನ್‌ನ ಅಣು ವಿದ್ಯುತ್ ಸ್ಥಾವರಗಳ ಮೇಲೆ ರಷ್ಯಾ ದಾಳಿ ಮಾಡಿದ್ದು, ಅಣು ವಿದ್ಯುತ್ ಸ್ಥಾವರಗಳ ಮೇಲೆ ದಾಳಿಯಿಂದ ದೊಡ್ಡ ಪ್ರಮಾದ ಉಂಟಾಗಿದೆ. ಹೀಗಾಗಿ ಅಣು ವಿದ್ಯುತ್ ಸ್ಥಾವರಗಳನ್ನ ರಕ್ಷಿಸಲಾಗುವುದು ಎಂದು ಫ್ರೆಂಚ್ ಅಧ್ಯಕ್ಷ ಇಮ್ಯಾನ್ಯುಯಲ್‌ ಮ್ಯಾಕ್ರನ್‌ ಹೇಳಿಕೆ ನೀಡಿದ್ದಾರೆ. ರಷ್ಯಾ, ಉಕ್ರೇನ್ ಜತೆ ಮಾತುಕತೆ ಬಳಿಕ ಮ್ಯಾಕ್ರನ್ ಹೇಳಿಕೆ ನೀಡಿದ್ದು, ಈಗಾಗಲೇ ಚೆರ್ನೋಬಿಲ್, ಝಫೋರಿಝೀಯಾ ಎರಡು ಸ್ಥಾವರಗಳು ರಷ್ಯಾ ಕೈವಶ ಮಾಡಿಕೊಂಡಿದೆ ಎಂದಿದ್ದಾರೆ.

 

LIVE NEWS & UPDATES

The liveblog has ended.
  • 07 Mar 2022 09:55 PM (IST)

    ಕೆಂಪೇಗೌಡ ಏರ್​ಪೋರ್ಟ್​ಗೆ ಆಗಮಿಸಿದ 19 ವಿದ್ಯಾರ್ಥಿಗಳು

    ಉಕ್ರೇನ್​ನಿಂದ ದೆಹಲಿಗೆ ಬಂದು ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​ಗೆ 19 ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಪೋಷಕರು ಏರ್​ಪೋರ್ಟ್​ನಲ್ಲಿ ಮಕ್ಕಳನ್ನು ಬರಮಾಡಿಕೊಂಡಿದ್ದಾರೆ.

  • 07 Mar 2022 07:14 PM (IST)

    ನವೀನ್ ಉಕ್ರೇನ್ ನಲ್ಲಿ ಓದಿ ದೊಡ್ಡ ಡಾಕ್ಟರ್ ಆಗಬೇಕೆಂಬ ಆಸೆ ಇಟ್ಟುಕೊಂಡಿದ್ದ

    ನವೀನ್ ಉಕ್ರೇನ್ ನಲ್ಲಿ ಓದಿ ದೊಡ್ಡ ಡಾಕ್ಟರ್ ಆಗಬೇಕೆಂಬ ಆಸೆ ಇಟ್ಟುಕೊಂಡಿದ್ದ. ಅವನ ಊರಿನಲ್ಲೇ ಸ್ವಂತ ಕ್ಲಿನಿಕ್ ಓಪನ್ ಮಾಡಬೇಕು ಎಂಬ ಆಸೆ ಹೊಂದಿದ್ದ. ಆದ್ರೆ ಉಕ್ರೇನ್ ನಡುವಿನ ಯುದ್ಧದಿಂದ ಈ ರೀತಿ ಆಗೋಯ್ತು ಎಂದು ವಿದ್ಯಾರ್ಥಿ ನವೀನ್ ಮೃತಪಟ್ಟ ಬಗ್ಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಇಂಡಿಯನ್ ಗ್ಲೋಬಲ್ ಫೋರಮ್ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಮಾತನಾಡಿದ್ದಾರೆ.

    ಶೋಭಾ ಕರಂದ್ಲಾಜೆ ನವೀನ್ ಕುಟುಂಬಸ್ಥರನ್ನು ಭೇಟಿ ಮಾಡಿದ್ದಾರೆ. ಆಪರೇಷನ್ ಗಂಗಾ ಕೇಂದ್ರ ಸರ್ಕಾರದ ಲಾರ್ಜೆಸ್ಟ್ ಆಪರೇಷನ್. ಇಂತಹ ಪರಿಸ್ಥಿತಿಯಲ್ಲಿಯೂ ಸಹ ಕೇಂದ್ರ ಸರಕಾರ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ನಿಂತಿದೆ. ಸಾವಿರಾರು ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದರು. ಆಪರೇಷನ್ ಗಂಗ ಈಗಲೂ ಸಹ ನಡೆಯುತ್ತಾ ಇದೆ.
    ಸಾಕಷ್ಟು ಜನ ವಿದ್ಯಾರ್ಥಿಗಳನ್ನು ಈಗಾಗಲೇ ಸೇಫ್ ಆಗಿ ಕರೆ ತಂದಿದ್ದೇವೆ ಎಂದರು.


  • 07 Mar 2022 05:39 PM (IST)

    ರಷ್ಯಾ ನಡೆಸುತ್ತಿರುವ ಯುದ್ಧ ಖಂಡಿಸಿ ಸರ್ಬಿಯಾದಲ್ಲಿ ಪಾಸ್​ಪೋರ್ಟ್​ ಪ್ರತಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ

    ಉಕ್ರೇನ್​ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧ ಖಂಡಿಸಿ ಸರ್ಬಿಯಾದಲ್ಲಿ ಪಾಸ್​ಪೋರ್ಟ್​ ಪ್ರತಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಲಾಗುತ್ತಿದೆ. ಉಕ್ರೇನ್​ ಜತೆ ನಾವಿದ್ದೇವೆಂದು ಪ್ರತಿಭಟನಾನಿರತರ ಘೋಷಣೆ ಕೂಗುತ್ತಿರುವ ದೃಶ್ಯಗಳು ಕಂಡು ಬಂದಿವೆ.

  • 07 Mar 2022 04:25 PM (IST)

    ದೆಹಲಿಯಿಂದ ಬೆಂಗಳೂರಿಗೆ ತೆರಳಲಿರುವ 19 ವಿದ್ಯಾರ್ಥಿಗಳು

    ಯುದ್ಧಪೀಡಿತ ಉಕ್ರೇನ್​ನಿಂದ ದೆಹಲಿಗೆ ಬಂದ 19 ವಿದ್ಯಾರ್ಥಿಗಳು ಈಗ ದೆಹಲಿಯಿಂದ ಬೆಂಗಳೂರಿಗೆ ತೆರಳಲಿದ್ದಾರೆ. 2 ವಿಮಾನಗಳಲ್ಲಿ ಬೆಂಗಳೂರಿಗೆ 19 ವಿದ್ಯಾರ್ಥಿಗಳು ತೆರಳಲಿದ್ದಾರೆ.

  • 07 Mar 2022 04:22 PM (IST)

    ಬೆಲಾರಸ್‌ಗೆ ತೆರಳಿದ ರಷ್ಯಾ ನಿಯೋಗ

    ರಷ್ಯಾ-ಉಕ್ರೇನ್ ನಡುವೆ 3ನೇ ಸುತ್ತಿನ ಮಾತುಕತೆ ಹಿನ್ನೆಲೆ ಬೆಲಾರಸ್‌ಗೆ ತೆರಳಿದ ರಷ್ಯಾ ನಿಯೋಗ.

  • 07 Mar 2022 04:17 PM (IST)

    ಮಾನವೀಯ ಕಾರಿಡಾರ್‌ಗೆ ಉಕ್ರೇನ್‌ನ ಕೀವ್‌ ವಿರೋಧ

    ಉಕ್ರೇನ್ ಮೇಲೆ  ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ಮಾನವೀಯ ಕಾರಿಡಾರ್‌ಗೆ ಉಕ್ರೇನ್‌ನ ಕೀವ್‌ ವಿರೋಧ ವ್ಯಕ್ತಪಡಿಸಿದೆ.  ಕೀವ್‌ನಿಂದ ರಷ್ಯಾ, ಬೆಲಾರಸ್‌ ಮಾರ್ಗಕ್ಕೆ ಕೀವ್ ಒಪ್ಪುತ್ತಿಲ್ಲ.

  • 07 Mar 2022 03:24 PM (IST)

    Russia-Ukraine War Live: ರಷ್ಯಾ ಅಧ್ಯಕ್ಷ ಪುಟಿನ್ ಜತೆ ಮೋದಿ ಚರ್ಚೆ; ಕದನ ವಿರಾಮ ಘೋಷಿಸಿದಕ್ಕೆ ಪ್ರಶಂಸೆ

    ರಷ್ಯಾ ಅಧ್ಯಕ್ಷ ಪುಟಿನ್ ಜತೆ ಪ್ರಧಾನಿ ಮೋದಿ ಚರ್ಚೆ ಮಾಡಿದ್ದಾರೆ. ದೂರವಾಣಿ ಕರೆ ಮಾಡಿ ಚರ್ಚೆ ನಡೆಸಿದ ನರೇಂದ್ರ ಮೋದಿ, ರಷ್ಯಾ, ಉಕ್ರೇನ್​ ಯದ್ಧ ವಿಚಾರವಾಗಿ ಚರ್ಚೆ ಮಾಡಿದ್ದಾರೆ. ಸುಮಾರು 50 ನಿಮಿಷಗಳ ಕಾಲ ಮೋದಿ, ಪುಟಿನ್ ಚರ್ಚೆ ಮಾಡಿದ್ದು, ಉಕ್ರೇನ್​, ರಷ್ಯಾ ನಡುವೆ ಮಾತುಕತೆ ಬಗ್ಗೆ ಪುಟಿನ್ ಮಾಹಿತಿ ನೀಡಿದ್ದಾರೆ. ನೇರವಾಗಿ ಉಕ್ರೇನ್​ ಅಧ್ಯಕ್ಷರ ಜತೆ ಚರ್ಚಿಸಲು ರಷ್ಯಾ ಅಧ್ಯಕ್ಷ ಪುಟಿನ್​ಗೆ ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ. ಕದನ ವಿರಾಮ ಘೋಷಿಸಿದ ರಷ್ಯಾ ಕ್ರಮಕ್ಕೆ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  • 07 Mar 2022 02:52 PM (IST)

    Russia-Ukraine War Live: ರಷ್ಯಾ ಸೇನಾ ಕಾರ್ಯಾಚರಣೆ ನಿಲ್ಲಿಸಲು ಕೋರಿರುವ ಅರ್ಜಿ ವಿಚಾರಣೆ ಆರಂಭ

    ರಷ್ಯಾ-ಉಕ್ರೇನ್ ನಡುವೆ ಯುದ್ಧ ಹಿನ್ನೆಲೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿದೆ. ರಷ್ಯಾ ಸೇನಾ ಕಾರ್ಯಾಚರಣೆ ನಿಲ್ಲಿಸಲು ಕೋರಿರುವ ಅರ್ಜಿ ವಿಚಾರಣೆ ಆರಂಭವಾಗಿದ್ದು, ನೆದರ್‌ಲೆಂಡ್ಸ್‌ನ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ಕೋರ್ಟ್ ವಿಚಾರಣೆ ಆರಂಭವಾಗಿದೆ. ICJಯಲ್ಲಿ ಉಕ್ರೇನ್ ವಕೀಲರಿಂದ ವಾದಮಂಡನೆ ನಡೆಯುತ್ತಿದೆ. ನನ್ನ ದೇಶದ ಜನರನ್ನು ರಷ್ಯಾ ಸೇನೆ ಕೊಲ್ಲುತ್ತಿದೆ. ವೈದ್ಯಕೀಯ ಸೌಲಭ್ಯಗಳ ಮೇಲೂ ದಾಳಿ ಮಾಡುತ್ತಿದ್ದಾರೆ. ಗರ್ಭಿಣಿಯರಿಗೆ ಬಂಕರ್‌ಗಳಲ್ಲೇ ಹೆರಿಗೆ ಮಾಡಿಸಲಾಗುತ್ತಿದೆ. ಶಾಂತಿಗೆ ಉಕ್ರೇನ್ ಸಿದ್ಧವಿದೆ, ಆದ್ರೆ ರಷ್ಯಾ ಇದನ್ನ ನಿಲ್ಲಿಸಬೇಕು ಎಂದು ವಾದಮಂಡನೆ ಮಾಡಲಾಗುತ್ತಿದೆ.

  • 07 Mar 2022 01:27 PM (IST)

    Russia-Ukraine War Live: ಉಕ್ರೇನ್​ನಿಂದ ಮಂಗಳೂರಿಗೆ ಮತ್ತೆ 4 ವಿದ್ಯಾರ್ಥಿಗಳ ಆಗಮನ

    ಮಂಗಳೂರು: ಉಕ್ರೇನ್​ನಿಂದ ಮತ್ತೆ ಮಂಗಳೂರಿಗೆ ನಾಲ್ವರು ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಮಂಗಳೂರು ಏರ್ ಪೋರ್ಟ್ ಗೆ ನಾಲ್ವರು ವಿದ್ಯಾರ್ಥಿಗಳು ಆಗಮಿಸಿದ್ದು, ಏರ್ ಪೋರ್ಟ್​ನಲ್ಲಿ ವಿದ್ಯಾರ್ಥಿಗಳನ್ನ ಬರ ಮಾಡಿಕೊಳ್ಳಲು ಪೋಷಕರು ಆಗಮಿಸಿದ್ದಾರೆ. ಮಂಗಳೂರಿನ ದೇರೇಬೈಲ್ ನ ಅನೈನಾ ಅನ್ನ, ಮೂಡುಬಿದಿರೆಯ ಶಲ್ವಿನ್ ಪ್ರೀತಿ ಅರನಾ, ಪಡೀಲ್ ನ ಕ್ಲಾಟನ್ ಡಿಸೋಜಾ, ಸಾದ್ ಹರ್ಷದ್ ಆಗಮಿಸಿದ ವಿದ್ಯಾರ್ಥಿಗಳು.

  • 07 Mar 2022 01:22 PM (IST)

    Russia-Ukraine War Live: ಗಡಿಗೆ ಬರುವವರೆಗೂ ನಮಗೆ ರಾಷ್ಟ್ರಧ್ವಜವೇ ಆಸರೆ; ಬಾಗಲಕೋಟೆಗೆ ವಿದ್ಯಾರ್ಥಿನಿ ಹೇಳಿಕೆ

    ಯುದ್ಧ ಆರಂಭವಾದಾಗಿನಿಂದ 5 ದಿನ ಬಂಕರ್‌ನಲ್ಲಿದ್ದೆವು. 2-3 ದಿನದ ಬಳಿಕ ಆಹಾರ, ನೀರಿನ ಸಮಸ್ಯೆ ಎದುರಾಯಿತು ಎಂದು ಖಾರ್ಕಿವ್‌ನಿಂದ ಬಾಗಲಕೋಟೆಗೆ ಬಂದ ಸ್ಫೂರ್ತಿ ಹೇಳಿಕೆ ನೀಡಿದ್ದಾರೆ. ರಾಯಭಾರ ಕಚೇರಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸಲಿಲ್ಲ. ಅರಬ್ ದೇಶದವರಿಗೆ ಹಾಸ್ಟೆಲ್‌ನಿಂದ ಬಸ್ ವ್ಯವಸ್ಥೆ ಮಾಡಿದ್ರು. ಆದರೆ ನಮ್ಮ ಅಧಿಕಾರಿಗಳು ಗಡಿಗೆ ಬರುವಂತೆ ಸೂಚಿಸಿದ್ದರು. ಗಡಿಗೆ ಹೋಗುವುದಕ್ಕೆ ನಮಗೆ ತುಂಬಾ ಸಮಸ್ಯೆಯಾಗಿತ್ತು. ಊಟಕ್ಕಾಗಿ ನಾವು ಪರದಾಡುವ ಪರಿಸ್ಥಿತಿ ಎದುರಾಯಿತು. ಹೊರಗೆ ಹೋದ ಸಮಯದಲ್ಲಿಯೇ ದಾಳಿಗಳು ನಡೆದವು. ರಿಸ್ಕ್ ಮಾಡಿ ಉಕ್ರೇನ್ ಗಡಿಗೆ ನಾವು ಬಂದಿದ್ದೇವೆ. ಆದರೆ ಗಡಿಗೆ ಬರುವವರೆಗೆ ನಮಗೆ ರಾಷ್ಟ್ರಧ್ವಜವೇ ಆಸರೆಯಾಗಿತ್ತು. ಬಾರ್ಡರ್‌ಗೆ ಬಂದ ಬಳಿಕ ನಮಗೆ ಸರ್ಕಾರದಿಂದ ಸಹಾಯ ಮಾಡಲಾಯಿತು. ಸುರಕ್ಷಿತವಾಗಿ ನಮ್ಮನ್ನು ಮನೆಗೆ ಸೇರಿಸಿದ್ದಕ್ಕೆ ಖುಷಿಯಾಗಿದೆ. ನಮ್ಮ ಮುಂದಿನ ಶಿಕ್ಷಣಕ್ಕೆ ಸರ್ಕಾರ ಸಹಕಾರ ನೀಡಬೇಕು ಎಂದು ಹೇಳಿದ್ದಾರೆ.

  • 07 Mar 2022 12:36 PM (IST)

    Russia-Ukraine War Live: ತಾಯ್ನಾಡಿಗೆ ಹುಬ್ಬಳ್ಳಿಯ ಮತ್ತೋರ್ವ ವಿದ್ಯಾರ್ಥಿನಿ ವಾಪಸ್

    ಇಂದು ತಾಯ್ನಾಡಿಗೆ ಮತ್ತೋರ್ವ ವಿದ್ಯಾರ್ಥಿನಿ ಮರಳುತ್ತಿದ್ದಾರೆ. ಉಕ್ರೇನ್​ನಿಂದ ಮುಂಬೈ ತಲುಪಿದ ಹುಬ್ಬಳ್ಳಿಯ ನಾಝಿಲ್ಲಾ ಗಾಜಿಪುರ್, ಸಂಜೆ 4;30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಹುಬ್ಬಳ್ಳಿಯ ಶಾಂತಿನಗರದ ನಿವಾಸಿಯಾದ ನಾಝಿಲಾ ಗಾಜಿಪುರ್, ಎಂಬಿಬಿಎಸ್ ವ್ಯಾಸಂಗ ಮಾಡಲೆಂದು ಉಕ್ರೇನ್​ಗೆ ತೆರಳಿದ್ದರು. ನಾಝಿಲಾ ಕುಟುಂಬದ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ.

  • 07 Mar 2022 12:27 PM (IST)

    Russia-Ukraine War Live: ಭಾರತೀಯರ ಸ್ಥಳಾಂತರದ ಬಗ್ಗೆ ಉಕ್ರೇನ್ ಅಧ್ಯಕ್ಷರ ಜತೆ ಪ್ರಧಾನಿ ಮೋದಿ ಚರ್ಚೆ

    ಉಕ್ರೇನ್ ಅಧ್ಯಕ್ಷರ ಜತೆ ಪ್ರಧಾನಿ ಮೋದಿ ಚರ್ಚೆ ಮಾಡಿದ್ದಾರೆ. ಭಾರತೀಯರ ಸ್ಥಳಾಂತರದ ಬಗ್ಗೆ ಪ್ರಧಾನಿ ಮೋದಿ ದೂರವಾಣಿ ಕರೆ ಮಾಡಿ ಸುಮಾರು 35 ನಿಮಿಷ ಚರ್ಚೆ ಮಾಡಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ನಾಯಕರು ಸಮಾಲೋಚನೆ ನಡೆಸಿದ್ದಾರೆ. ಎರಡೂ ದೇಶಗಳ ನಡುವೆ ಮಾತುಕತೆಗೆ ಮೋದಿ ಪ್ರಶಂಸಿದ್ದು, ಭಾರತೀಯರ ರಕ್ಷಣೆಗೆ ಸಹಕರಿಸಿದ್ದಕ್ಕೆ ಮೋದಿ ಧನ್ಯವಾದ ಹೇಳಿದ್ದಾರೆ.

  • 07 Mar 2022 12:07 PM (IST)

    Russia-Ukraine War Live: ಬಾರ್ಡರ್ ದಾಟೋವರೆಗೋ ಯಾರೂ ನಮ್ಮ ಸಹಾಯಕ್ಕೆ ಬಂದಿಲ್ಲ; ವಿದ್ಯಾರ್ಥಿನಿ ಮೋನಿಕಾ ಹೇಳಿಕೆ

    ಮನೆಯಲ್ಲಿ ಬಂದು ಮಲಗಿದ್ರೂ ಬಾಂಬ್ ಸಿಡಿಯೋ ಶಬ್ದ ಕೇಳುತ್ತಿದೆ. ಬೇರೆ ಶಬ್ದ ಬಂದ್ರೂ ಬಾಂಬ್ ಬೀಳ್ತಿದಿಯೋನೊ‌ ಅನಸ್ತಿದೆ. ಬಂಕರ್​ನಿಂದ ಬಾರ್ಡರ್​ವರೆಗೂ ಜೀವ ಕೈಯ್ಯಲ್ಲಿಟ್ಟು ಬಂದಿದ್ದೇವೆ. ಈಗ್ಲೂ ನನಗೆ ಆ ಸನ್ನಿವೇಶದಿಂದ ಹೊರ ಬರೋಕೆ ಆಗ್ತಿಲ್ಲ. ಬಾರ್ಡರ್ ದಾಟೋವರೆಗೋ ಯಾರೂ ಸಹಾಯಕ್ಕೆ ಬಂದಿಲ್ಲ. ಪೊಲೆಂಡ್ ಬಾರ್ಡರ್​ವರೆಗೆ ನಮ್ ರಿಸ್ಕ್​ನಿಂದಲೇ ನಾವು ಬಂದಿರೋದು. ನನ್ನ ಸಹಾಯಕ್ಕೆ ನಿಂತ ಎಲ್ಲಾ ಫ್ರೆಂಡ್ಸ್ ಥ್ಯಾಂಕು ಹೇಳ್ತೀನಿ. ಬಾರ್ಡರ್​ ನಂತರದ ಸಹಾಯಕ್ಕೆ ಬಂದ ಅಧಿಕಾರಿಗಳಿಗೂ ಥ್ಯಾಂಕ್ಸ್ ಎಂದು ಉಕ್ರೇನ್​ನಿಂದ ವಾಪಾಸ್ ಆದ ವಿದ್ಯಾರ್ಥಿನಿ ಮೋನಿಕಾ ಹೇಳಿಕೆ ನೀಡಿದ್ದಾರೆ.

  • 07 Mar 2022 11:55 AM (IST)

    Russia-Ukraine War Live: ಆ್ಯಂಬುಲೆನ್ಸ್ ಮೂಲಕ ಪೋಲೆಂಡ್‌ಗೆ ಆಗಮಿಸಿದ್ದ ಹರ್ಜೋತ್

    ಉಕ್ರೇನ್​ನ ಕೀವ್ ಬಳಿ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ, ಹರ್ಜೋತ್ ಸಿಂಗ್ ಭಾರತದತ್ತ ಹರ್ಜೋತ್ ಸಿಂಗ್ ಹೊರಟಿದ್ದಾರೆ. ಅಂಬ್ಯುಲೆನ್ಸ್ ಮೂಲಕ ಪೋಲೆಂಡ್ ಗೆ ಸಾಗಿಸಿ, ಬಳಿಕ ವಿಮಾನದಲ್ಲಿ ಭಾರತದತ್ತ ಹೊರಟಿದ್ದು, ಇಂದು ಸಂಜೆ 6 ಗಂಟೆಗೆ ಭಾರತಕ್ಕೆ ಬರಲಿದ್ದಾರೆ. ಹರ್ಜೋತ್ ಸಿಂಗ್ ರನ್ನು ವಿಮಾನದಲ್ಲಿ ಭಾರತಕ್ಕೆ ಕಳಿಸುವ ವ್ಯವಸ್ಥೆವನ್ನ ಜನರಲ್ ವಿ.ಕೆ.ಸಿಂಗ್ ಮಾಡಿದ್ದಾರೆ.

  • 07 Mar 2022 11:50 AM (IST)

    Russia-Ukraine War Live: ಭಾರತೀಯರು ತೆರಳುವುದಕ್ಕೆ ಅವಕಾಶ ನೀಡಿರುವ ರಷ್ಯಾ

    ಸುಮಿ‌ ನಗರದಲ್ಲಿರುವ ಭಾರತದ ವಿದ್ಯಾರ್ಥಿಗಳು‌ ಸುರಕ್ಷಿತವಾಗಿ ತೆರಳಲು ರಷ್ಯಾ ಅವಕಾಶ ನೀಡಿದೆ. ನಾಲ್ಕು ನಗರದಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ, ಸುಮಿ ನಗರದಲ್ಲಿ 700ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳಿದ್ದಾರೆ. ಸುಮಿ ಗೊಲುಬೋವಕಾ- ರೂಮಿ- ಲೋಕವಿಸ್ಟಾ- ಲುಬನಿ- ಪೊಲಟವ ಮೂಲಕ ತೆರಳಲು ಅವಕಾಶ ನೀಡಲಾಗಿದೆ ಎಂದು ಈ ಬಗ್ಗೆ ಭಾರತ, ವಿಶ್ವಸಂಸ್ಥೆಗೆ ರಷ್ಯಾ ಮಾಹಿತಿ ನೀಡಿದೆ.

  • 07 Mar 2022 11:45 AM (IST)

    Russia-Ukraine War Live: ಉಕ್ರೇನ್‌ಗೆ 100 ಮಿಲಿಯನ್ ಡಾಲರ್ ನೆರವು; ಯುಕೆ ಪ್ರಧಾನಮಂತ್ರಿ ಕಚೇರಿ ಘೋಷಣೆ

    ಉಕ್ರೇನ್‌ಗೆ 100 ಮಿಲಿಯನ್ ಡಾಲರ್ ನೆರವು ನೀಡುವಿದಾಗಿ ಯುಕೆ ಪ್ರಧಾನಮಂತ್ರಿ ಕಚೇರಿಯಿಂದ ಘೋಷಣೆ ಮಾಡಿದೆ. ಉಕ್ರೇನ್‌ನ ಆರ್ಥಿಕ ಒತ್ತಡ ತಗ್ಗಿಸುವುದಕ್ಕೆ ಯುಕೆ ನೆರವು ನೀಡಲು ಮುಂದಾಗಿದೆ.

  • 07 Mar 2022 11:23 AM (IST)

    Russia-Ukraine War Live: ನವೀನ್ ಸಾವಿನ ಬಳಿಕ ತುಂಬಾ ನೋವಾಯ್ತು; ವಿದ್ಯಾರ್ಥಿನಿ ಅಂಕಿತ ಹೇಳಿಕೆ

    ಉಕ್ರೇನ್​ನಿಂದ ಸುರಕ್ಷಿತವಾಗಿ ವಿದ್ಯಾರ್ಥಿನಿ ಅಂಕಿತಾ ವರ್ಷಾ ವಾಪಸ್ಸಾಗಿದ್ದಾರೆ. ಮಗಳಿಗೆ ಸಿಹಿ ತಿನಿಸಿ ಪೋಷಕರು ಸಂಭ್ರಮಿಸಿದ್ದಾರೆ. ಉಕ್ರೇನ್ ನಲ್ಲಿ ನಾಲ್ಕನೇ ವರ್ಷದ MBBSನಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಅಂಕಿತ ಓದುತ್ತಿದ್ದರು. ನವೀನ್ ಸಾವಿನ ಬಳಿಕ ತುಂಬಾ ನೋವಾಯ್ತು. ನವೀನ್ ಸಾವಿನ ಬಳಿಕ ಭಯ ಹೆಚ್ಚಾಯ್ತು. ನವೀನ್ ಸಾವಿನ ಬಳಿಕ ರಿಸ್ಕ್ ತಗೆದುಕೊಂಡು ಸಿಟಿ ಬಿಡಲು ಮುಂದಾದೆವು. ಮಿಸೈಲ್ ದಾಳಿ, ಪೈಟರ್ ಜೆಟ್ ನೋಡಿದಾಗ ಭಯ ಆಗ್ತಾ ಇತ್ತು. ನಾವು ಇರುವ ಸ್ಥಳದ ಅಕ್ಕಪಕ್ಕದಲ್ಲಿಯೇ ಬಾಂಬ್ ದಾಳಿ ಆಗ್ತಾ ಇತ್ತು. ಕಂಟಿನ್ಯೂ ದಾಳಿಯಾದಗ ಮನೆ ಕಿಟಕಿ ಬಾಗಿಲು ಎಲ್ಲ ಬಡೆದುಕೊಳ್ತಾ ಇದ್ದವು. ಆದ್ರೆ ನಾವು ಧೈರ್ಯವಾಗಿ ಇರುತಾ ಇದ್ದೇವು. ಯುದ್ಧ ಆರಂಭದ ಬಳಿಕ ಊಟಾ ಸಿಗ್ತಾ ಇರಲಿಲ್ಲ. ಬ್ರೆಡ್ ಹಣ್ಣು ತಿಂದು ಇರ್ತಾ ಇದ್ದೇವು. ಕುಡಿಯೋದಕ್ಕೆ ನೀರು ಕೂಡಾ ಸಿಗ್ತಾ ಇರಲಿಲ್ಲ ಎಂದು ಅಂಕಿತ ಹೇಳಿದ್ದಾರೆ. ಜೊತೆಗೆ ಅಂಕಿತಾ ವರ್ಷಾ ತಾಯಿ ಟಿವಿ9ಗೆ ಕೈಮುಗಿದು ಧನ್ಯವಾದ ಹೇಳಿದ್ದು, ಮಗಳು ಮನೆಗೆ ಬರೊವರೆಗೂ ನನ್ನ ಹೃದಯ ಲಬ್ ಡಬ್ ಲಬ್ ಡಬ್ ಬದಲಾಗಿ ಟಿವಿ9.. ಟಿವಿ9.. ಅಂತಾ ಬಡೆದುಕೊಳ್ಳುತ್ತಿತ್ತು. ಟಿವಿ9 ತುಂಬಾ ಸಹಾಯ ಮಾಡಿದೆ ಎಂದು ಹೇಳಿದರು.

     

  • 07 Mar 2022 11:13 AM (IST)

    Russia-Ukraine War Live: ಎಲ್ಲಾ ವಿದ್ಯಾರ್ಥಿಗಳನ್ನೂ ಕರೆತರಲು ತಯಾರಿ ನಡೆದಿದೆ; ಮನೋಜ್ ರಾಜನ್ ಹೇಳಿಕೆ

    ಇಂದು ಬೆಳಗ್ಗೆಯಿಂದ ರಾಜ್ಯಕ್ಕೆ 65 ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಆಪರೇಷನ್ ಗಂಗಾದಲ್ಲಿ 51 ವಿಮಾನಗಳಲ್ಲಿ 476 ಕನ್ನಡಿಗರು ವಾಪಸ್ ದೇಶಕ್ಕೆ ಬಂದಿದ್ದಾರೆ. ಮುಂಬೈಗೆ ಎರಡು ಏರ್ ಲಿಪ್ಟ್ ವಿಮಾನಗಳು ಬರಲಿವೆ. ನಾಲ್ಕು ವಿಮಾನ ದೆಹಲಿಗೆ ಬರಲಿದ್ದು, ಅದರಲ್ಲಿ ಎಷ್ಟು ಕನ್ನಡಿಗರು‌ ಬರಲಿದ್ದಾರೆ ಎಂದು ಮಧ್ಯಾಹ್ನವರೆಗೆ ಗೊತ್ತಾಗಲಿದೆ. ಮಾಹಿತಿ ಪ್ರಕಾರ 163 ಮಂದಿ ಇನ್ನೂ ಕನ್ನಡಿಗರು ದೇಶಕ್ಕೆ ವಾಪಸ್ ಆಗಬೇಕಿದೆ. ರೂಮೇನಿಯಾ, ಪೊಲ್ಯಾಂಡ್ ಬಾರ್ಡರ್ ಗಳಲ್ಲಿ ವಿದ್ಯಾರ್ಥಿಗಳು ಇದ್ದಾರೆ ಅನ್ನೊದು ಗೊತ್ತಾಗ್ತಿದೆ. ಸುಮಿಯಲ್ಲಿ‌ 7 ಕನ್ನಡಿಗರು ಇರೋ ಮಾಹಿತಿ ಎಂಬಸ್ಸಿಯಿಂದ ತಿಳಿದಿದ್ದು, ಅವರನ್ನ ಕೂಡ ಕರೆದುಕೊಂಡು ಬರಲು ಎಲ್ಲಾ ತಯಾರಿ‌ ನಡೆದಿದೆ ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೋಡಲ್ ಅಧಿಕಾರಿ ಮನೋಜ್ ರಾಜನ್ ಹೇಳಿಕೆ ನೀಡಿದ್ದಾರೆ.

  • 07 Mar 2022 11:04 AM (IST)

    Russia-Ukraine War Live: ಉಕ್ರೇನ್‌ನ 4 ನಗರಗಳಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಿಸಿದ ರಷ್ಯಾ ಸೇನೆ

    ಉಕ್ರೇನ್‌ನ 4 ನಗರಗಳಲ್ಲಿ ತಾತ್ಕಾಲಿಕ ಕದನ ವಿರಾಮವನ್ನು ರಷ್ಯಾ ಸೇನೆ ಘೋಷಣೆ ಮಾಡಿದೆ. ಉಕ್ರೇನ್ ರಾಜಧಾನಿ ಕೀವ್, ಖಾರ್ಕಿವ್, ಸುಮಿ ನಗರ ಮರಿಯುಪೋಲ್‌ನಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಣೆ ಮಾಡಲಾಗಿದೆ. ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 12.30ರಿಂದ ತಾತ್ಕಾಲಿಕ ಕದನ ವಿರಾಮ ಘೋಷಿಸಲಾಗಿದೆ.

  • 07 Mar 2022 10:55 AM (IST)

    Russia-Ukraine War Live: ಇಂದು ಪುಟಿನ್ ಜತೆ ಪ್ರಧಾನಿ ಮೋದಿ ಚರ್ಚೆ

    ಇಂದು ರಷ್ಯಾ ಅಧ್ಯಕ್ಷ ಪುಟಿನ್ ಜತೆ ಪ್ರಧಾನಿ ಮೋದಿ ಚರ್ಚಿಸಲಿದ್ದಾರೆ. ರಷ್ಯಾ, ಉಕ್ರೇನ್​ ಯದ್ಧ ವಿಚಾರವಾಗಿ ಇಂದು ಮಧ್ಯಾಹ್ನ ದೂರವಾಣಿ ಕರೆ ಮಾಡಿ ಮೋದಿ ಚರ್ಚೆ ನಡೆಸಲಿದ್ದಾರೆ.

  • 07 Mar 2022 10:38 AM (IST)

    ಬೇರೆ ದೇಶದವರು ನಮ್ಮ ಧ್ವಜ ಹಿಡಿದಿದ್ರು

    ಪಾಕಿಸ್ತಾನದವರು ಭಾರತದ ಫ್ಲ್ಯಾಗ್ ಬಳಕೆ ಮಾಡಿದ್ದಾರೆ. ಕೀವ್ ನಲ್ಲಿ ನಮ್ಮ ದೇಶದ ಧ್ವಜ ನೋಡಿ ಒಳಗೆ ಬೀಡ್ತಾಯಿದ್ರು. ಮೊದಲು ಉಕ್ರೇನ್ ಗಳಿಗೆ ಆದ್ಯತೆ, ಆಮೇಲೆ ಮಹಿಳೆಯರಿಗೆ ಆಮೇಲೆ ಪುರುಷರಿಗೆ. ನಾವೆಲ್ಲ ಇಂಡಿಯನ್ ಫ್ಲ್ಯಾಗ್ ಹಿಡಿಕೊಂಡು ಬಂದ್ವಿ. ಬೇರೆ ದೇಶದವರು ನಮ್ಮ ಧ್ವಜ ಹಿಡಿದಿದ್ರು ಎಂದು ವಿದ್ಯಾರ್ಥಿ ಉದಿತ್ ಹೇಳಿಕೆ ನೀಡಿದ್ದಾರೆ.

  • 07 Mar 2022 10:35 AM (IST)

    ಉಕ್ರೇನ್​ನಿಂದ ನಾಯಿ ಕರೆದುಕೊಂಡು ಬಂದ ವಿದ್ಯಾರ್ಥಿ

    ಉಕ್ರೇನ್​ನ ಖಾರ್ಕೀವ್ ನಿಂದ ವಿದ್ಯಾರ್ಥಿ ಒಬ್ಬರು ಸಾಕು ನಾಯಿ ಜೊತೆ ಬಂದಿದ್ದಾರೆ. ಬೆಂಗಳೂರು ಮೂಲದ ರಂಜಿತ್ ರೆಡ್ಡಿ ನಾಯಿ ಜೊತೆ ಬಂದ ವಿದ್ಯಾರ್ಥಿ ಆಗಿದ್ದಾರೆ. ನಾಯಿ ಕರೆದುಕೊಂಡು ಬರುವುದು ಕಷ್ಟದ ಕೆಲಸವಾಗಿತ್ತು. ಸಾಮಾನ್ಯ ವಿಮಾನದಲ್ಲಿ ಕರೆದುಕೊಂಡು ಬರುವುದು ಕಷ್ಟವಾಗಿತ್ತು. ಸಚಿವರಿಂದ ವಿಶೇಷ ಅನುಮತಿ ಪಡೆದು ಕರೆದುಕೊಂಡು ಬಂದಿದ್ದೇನೆ. ಹೋದ್ರೆ ನಾಯಿ ಜೊತೆನೆ ಹೋಗಬೇಕು ಅಂದುಕೊಂಡಿದ್ದೆ. ನಾಯಿಗೆ ಬೆಂಗಳೂರು ಹವಾಮಾನಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತೆ. ಮನೆಯೊಳಗೆ ಎಸಿಯಲ್ಲಿಯೇ ನಾಯಿ ಸಾಕಬೇಕು. ಬೆಂಗಳೂರಿನಲ್ಲಿ ಸಾಕುವುದು ಕಷ್ಟವಾಗುತ್ತೆ. ಕಷ್ಟವಾದ್ರೆ ಬೇರೆ ದೇಶಕ್ಕೆ ಹೋಗಬೇಕಾಗುತ್ತೆ ಎಂದು ರಂಜಿತ್ ರೆಡ್ಡಿ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ.

  • 07 Mar 2022 10:22 AM (IST)

    ಉಕ್ರೇನ್‌ನಲ್ಲಿ ರಕ್ತ, ಕಣ್ಣೀರಿನ ನದಿ ಹರಿಯುತ್ತಿದೆ: ಪೋಪ್ ಫ್ರಾನ್ಸಿಸ್ ಹೇಳಿಕೆ

    ಉಕ್ರೇನ್‌ನಲ್ಲಿ ರಕ್ತ, ಕಣ್ಣೀರಿನ ನದಿ ಹರಿಯುತ್ತಿದೆ ಎಂದು ಉಕ್ರೇನ್, ರಷ್ಯಾ ಯುದ್ಧದ ಬಗ್ಗೆ ಪೋಪ್ ಫ್ರಾನ್ಸಿಸ್ ಹೇಳಿಕೆ ನೀಡಿದ್ದಾರೆ. ಇದು ಸೇನಾ ಕಾರ್ಯಾಚರಣೆಯಲ್ಲ, ಆದರೆ ಭೀಕರ ಯುದ್ಧ. ಸಾವುನೋವು ಸಂಭವಿಸುತ್ತಿವೆ, ಸಂತ್ರಸ್ತರ ಸಂಖ್ಯೆ ಹೆಚ್ಚುತ್ತಿದೆ. ಯುದ್ಧ ಎನ್ನುವುದು ಹುಚ್ಚುತನ, ಇದನ್ನು ನಿಲ್ಲಿಸಿ ಎಂದು ಉಕ್ರೇನ್, ರಷ್ಯಾ ಯುದ್ಧದ ಬಗ್ಗೆ ಪೋಪ್ ಫ್ರಾನ್ಸಿಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • 07 Mar 2022 10:22 AM (IST)

    ರಷ್ಯಾ ಸೈನಿಕರ ಹತ್ಯೆ ಬಗ್ಗೆ ಉಕ್ರೇನ್‌ನಿಂದ ಮಾಹಿತಿ

    ಉಕ್ರೇನ್‌ನ ಲುಹಾನ್ಸ್ಕ್ ಪ್ರದೇಶದಲ್ಲಿ ಸರಣಿ ಸ್ಫೋಟ ನಡೆಸಲಾಗಿದೆ. ಭಾರಿ ಸ್ಫೋಟದಿಂದ ತೈಲ ಡಿಪೋದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಲುಹಾನ್ಸ್ಕ್‌ನ ತೈಲ ಡಿಪೋದಲ್ಲಿ ಬೆಂಕಿ ಹೊತ್ತಿಕೊಂಡಿದೆ, ಲುಹಾನ್ಸ್ಕ್‌ನಲ್ಲಿ 40 ರಷ್ಯಾ ಸೈನಿಕರನ್ನು ಹತ್ಯೆಗೈದಿದ್ದೇವೆ ಎಂದು ರಷ್ಯಾ ಸೈನಿಕರ ಹತ್ಯೆ ಬಗ್ಗೆ ಉಕ್ರೇನ್‌ನಿಂದ ಮಾಹಿತಿ ಲಭ್ಯವಾಗಿದೆ.

  • 07 Mar 2022 10:21 AM (IST)

    ಯುದ್ದ ಭೂಮಿಯ ಅನುಭವ ಬಿಚ್ಚಿಟ್ಟ ವಿದ್ಯಾರ್ಥಿನಿ

    ವಿಜಯಪುರದ ಮತ್ತೋರ್ವ ವಿದ್ಯಾರ್ಥಿ ಉಕ್ರೇನ್​ನಿಂದ ವಾಪಸಾಗಿದ್ದಾರೆ. ತಾಳಿಕೋಟೆ ತಾಲೂಕಿನ ತಮದಡ್ಡಿ ಗ್ರಾಮದ ಸುಚಿತ್ರಾ ಮಲ್ಲನಗೌಡ ಕವಡಿಮಟ್ಟಿ ಇಂದು ಬೆಂಗಳೂರಿನಿಂದ ವಾಪಸ್ ವಿಜಯಪುರ ನಗರದ ಮನೆಗೆ ಆಗಮಿಸಿದ್ದಾರೆ. ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದ್ದು ಆರತಿ ಬೆಳಗಿ, ಸಿಹಿ ತಿನ್ನಿಸಿ ಮಗಳನ್ನು ಬರ ಮಾಡಿಕೊಂಡಿದ್ದಾರೆ. ಮೂರನೇ ಸೆಮಿಸ್ಟರ್ ಮೆಡಿಕಲ್ ಸ್ಟೂಡೆಂಟ್ ಆಗಿರೋ ಸುಚಿತ್ರಾ, ಖಾರ್ಕೀವ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿ ವಿದ್ಯಾರ್ಥಿನಿ ಆಗಿದ್ದಾರೆ.

    ಫೆಬ್ರವರಿ 24 ರಂದು ಯುದ್ದದ ಬಗ್ಗೆ ಮಾಹಿತಿ‌ ಲಭ್ಯವಾಗಿತ್ತು. ನಂತರ ಐದು ದಿನ ದಿನ ಬಂಕರ್ ನಲ್ಲಿಯೇ ಇತರ ವಿದ್ಯಾರ್ಥಿಗಳ ಜೊತೆ ಕಾಲ‌ ಕಳೆದಿದ್ದೇವೆ. ಊಟಕ್ಕೆ ತೊಂದರೆಯಾಗಿತ್ತು. ಬ್ರೆಡ್, ಬಾಳೆ ಹಣ್ಣು, ಸೇಬು ಹಣ್ಣು ಮಾತ್ರ ಲಬ್ಯವಾಗಿತ್ತು. ನೀರಿನ ಸಮಸ್ಯೆ ಉಂಟಾಗಿತ್ತು. ಮಾರ್ಚ್ 2 ರಂದು ಬಂಕರ್ ನಿಂದ 9 ಕಿಲೋ ಮೀಟರ್ ನಡೆದುಕೊಂಡು ರೇಲ್ವೇ ನಿಲ್ದಾಣಕ್ಕೆ ಬಂದಿದ್ದಾಗಿ ಹೇಳಿದ್ದಾರೆ. ಆ ವೇಳೆ ಇವರ ಸನೀಹದಲ್ಲೇ ಬಾಂಬ್ ದಾಳಿಯಾಗಿತ್ತು. ನಂತರ 23 ಗಂಟೆಗಳ ಕಾಲ ರೇಲು ಮೂಲಕ ಪೊಲೇಂಡ್ ತಲುಪಿದ ಸುಚಿತ್ರಾ ಹಾಗೂ ತಂಡ, ಪೊಲೇಂಡ್ ತಲುಪಿದ ಮಾರನೇ ದಿನ ಭಾರತೀಯ ರಾಯಭಾರ ಕಚೇರಿ ಸಹಾಯ ಮಾಡಿದರು ಎಂದು ತಿಳಿಸಿದ್ದಾರೆ. ಪೊಲೇಂಡ್ ಮೂಲಕ ವಿಮಾನದಲ್ಲಿ ದೆಹಲಿಗೆ ಬಂದ ವಿದ್ಯಾರ್ಥಿನಿ, ನಂತರ ಬೆಂಗಳೂರಿಗೆ ಬಂದು ಅಲ್ಲಿಂದ ತವರಿಗೆ ಬಂದಿದ್ದಾಗಿ ತಿಳಿಸಿದ್ದಾರೆ.

  • 07 Mar 2022 10:18 AM (IST)

    ಸೈರನ್ ಹೊಡೆದ ಕೂಡಲೇ ನಾವೇಲ್ಲ ಓಡಿ ಬಂಕರ್ ಒಳಗೆ ಹೋಗಬೇಕಿತ್ತು: ವಿದ್ಯಾರ್ಥಿಗಳ ಹೇಳಿಕೆ

    ಎಲ್ಲರೂ ಖಾರ್ಕಿವ್, ಕೀವ್ ಅಂತಾರೆ. ಆದರೆ ಉಕ್ರೇನ್ ಬೇರೆ ಸಿಟಿಯಲ್ಲೂ ವಿದ್ಯಾರ್ಥಿಗಳು ಸಿಲುಕಿದ್ದಾರೆ. ತುಂಬಾ ಕಷ್ಟ ಪಟ್ಟು ನಾವು ಭಾರತಕ್ಕೆ ಬಂದಿದ್ದೇವೆ. ವಾರ್ ಅಂದ್ರೆ ನಾವು ಏನೋ ಅಂದ್ಕೊಡಿದ್ದೀವಿ. ಅಲ್ಲಿ ಬಾಂಬ್ ಬೀಳ್ತಾಯಿದ್ವು. ಮೂರು ಸೈರನ್ ಹೊಡೆದ ಕೂಡಲೇ ನಾವೇಲ್ಲ ಓಡಿ ಬಂಕರ್ ಒಳಗೆ ಹೋಗಬೇಕಿತ್ತು ಎಂದು ಬೆಂಗಳೂರಿನ ವಿದ್ಯಾರ್ಥಿನಿ ಲಿಖೀತಾ ಹೇಳಿಕೆ ನೀಡಿದ್ದಾರೆ. ಖಾರ್ಕಿವ್ ನಿಂದ ನಾವು ಜೀವಂತವಾಗಿ ಬಂದಿದ್ದೇ ದೊಡ್ಡದು. ಕುಡಿಯೋ ನೀರಿಗೂ ಪರದಾಡಿದ್ದೇವೆ,‌ ಕುಡಿಯೋ ನೀರು ಇಲ್ಲ ಎಂದು ಯಶಸ್ವಿನಿ ಹೇಳಿದ್ದಾರೆ.

  • 07 Mar 2022 10:00 AM (IST)

    Russia-Ukraine War Live: ಉಕ್ರೇನ್‌ನ ಏರ್‌ಪೋರ್ಟ್‌ ಮೇಲೆ ರಷ್ಯಾ ಸೇನೆ ದಾಳಿ

    ಉಕ್ರೇನ್‌ನ ಏರ್‌ಪೋರ್ಟ್‌ ಮೇಲೆ ರಷ್ಯಾ ಸೇನೆ ದಾಳಿ ಮಾಡಿದೆ. ವಿನ್ನಿಟ್ಸಿಯಾ ವಿಮಾನ ನಿಲ್ದಾಣದ ಮೇಲೆ ರಷ್ಯಾ ಅಟ್ಯಾಕ್ ಮಾಡಿದ್ದು, ರಷ್ಯಾ ದಾಳಿಯಲ್ಲಿ ವಿನ್ನಿಟ್ಸಿಯಾ ವಿಮಾನ ನಿಲ್ದಾಣ ಧ್ವಂಸವಾಗಿದೆ.

  • 07 Mar 2022 09:58 AM (IST)

    Russia-Ukraine War Live: ಉಕ್ರೇನ್​ನಿಂದ ಬೆಂಗಳೂರಿಗೆ ಬಂದ ವಿದ್ಯಾರ್ಥಿಗಳ ಮತ್ತೋಂದು ತಂಡ

    ಉಕ್ರೇನ್​ನಿಂದ ಬೆಂಗಳೂರಿಗೆ ವಿದ್ಯಾರ್ಥಿಗಳ ಮತ್ತೋಂದು ತಂಡ ಆಗಮಿಸಿದೆ. ದೆಹಲಿಯಿಂದ ಕೆಐಎಬಿಗೆ 09:30ರ ವಿಮಾನದಲ್ಲಿ 14 ಜನ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ನೆನ್ನೆ ಉಕ್ರೇನ್​ನಿಂದ ಏರ್ ಲಿಪ್ಟ್ ಮೂಲಕ ದೆಹಲಿಗೆ ಬಂದಿದ್ದ ವಿದ್ಯಾರ್ಥಿಗಳು, ಮಕ್ಕಳನ್ನ ಬರಮಾಡಿಕೊಳ್ಳಲು ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೋಷಕರು ಆಗಮಿಸಿದ್ದಾರೆ.
    .

  • 07 Mar 2022 09:35 AM (IST)

    Russia-Ukraine War Live: ಒಡೆಶಾದಲ್ಲಿ ರಷ್ಯಾ ಸೇನೆಯಿಂದ ಕ್ಷಿಪಣಿ ದಾಳಿ

    ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ಒಡೆಶಾದಲ್ಲಿ ರಷ್ಯಾ ಸೇನೆಯಿಂದ ಕ್ಷಿಪಣಿ ದಾಳಿ ನಡೆಸಿದ್ದು, ಹಲವು ಕಟ್ಟಡಗಳು ಹಾನಿಯಾಗಿವೆ. ರಷ್ಯಾ ದಾಳಿಯಲ್ಲಿ ಈವರೆಗೆ 38 ಮಕ್ಕಳು ಮೃತಪಟ್ಟಿದ್ದು, 71 ಮಕ್ಕಳು ಗಾಯಗೊಂಡಿದ್ದಾರೆ.

  • 07 Mar 2022 09:26 AM (IST)

    Russia-Ukraine War Live: ಮೊಮ್ಮಗನನ್ನು ಕಂಡು ಅಜ್ಜ-ಅಜ್ಜಿ ಆನಂದ‌ಭಾಷ್ಪ

    ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದೆ. ಉಕ್ರೇನ್​ನಿಂದ ರಾಯಚೂರು ಜಿಲ್ಲೆ ಲಿಂಗಸುಗೂರು ಪಟ್ಟಣದ ತಾಯ್ನಾಡಿಗೆ ಪ್ರಜ್ವಲ್ ಹೂಗಾರ್ ಆಗಮಿಸಿದ್ದಾರೆ. ಪ್ರಜ್ವಲ್​ಗೆ ಹಾರ ಹಾಕಿ ಆರತಿ‌ ಮಾಡಿ ಕುಟುಂಬಸ್ಥರು ಸ್ವಾಗತಿಸಿದ್ದಾರೆ. ಮೊಮ್ಮಗನನ್ನು ಕಂಡು ಅಜ್ಜ-ಅಜ್ಜಿ ಆನಂದ‌ಭಾಷ್ಪ ಸುರಿಸಿದ್ದು, ಕುಟುಂಬಸ್ಥರನ್ನು ನೋಡಿ ಪ್ರಜ್ವಲ್ ಹೂಗಾರ್ ಭಾವುಕನಾಗಿದ. ಕಷ್ಟ ಕಾಲದಲ್ಲಿ ಸಹಕರಿಸಿದ ಮಾಧ್ಯಮಗಳಿಗೆ ಕುಟುಂಬಸ್ಥರು ಧನ್ಯವಾದ ತಿಳಿಸಿದರು.

  • 07 Mar 2022 09:20 AM (IST)

    Russia-Ukraine War Live: ಉಕ್ರೇನ್‌ನಿಂದ ಪೋಲೆಂಡ್‌ ತಲುಪಿದ ಹರ್ಜೋತ್ ಸಿಂಗ್

    ಉಕ್ರೇನ್‌ನಲ್ಲಿ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಹರ್ಜೋತ್ ಸಿಂಗ್ ಸದ್ಯ ಪೋಲೆಂಡ್‌ ತಲುಪಿದ್ದಾರೆ. ಅವರನ್ನು ವಿದೇಶಾಂಗ ಇಲಾಖೆ ಅಧಿಕಾರಿಗಳು ಭಾರತಕ್ಕೆ ಕರೆತರುತ್ತಿದ್ದಾರೆ.

  • 07 Mar 2022 09:18 AM (IST)

    Russia-Ukraine War Live: ರಷ್ಯಾ ವಿಮಾನ ಹೊಡೆದುರುಳಿಸಿದ ಉಕ್ರೇನ್ ಸೇನೆ

    ಉಕ್ರೇನ್‌ನ ಖಾರ್ಕಿವ್‌ನಲ್ಲಿ ರಷ್ಯಾ ವಿಮಾನ ಉಡೀಸ್ಸಾಗಿದೆ. ಉಕ್ರೇನ್ ಸೇನೆ ರಷ್ಯಾ ವಿಮಾನವನ್ನು ಹೊಡೆದುರುಳಿಸಿದ್ದು, ರಷ್ಯಾ ಯುದ್ಧ ವಿಮಾನದಲ್ಲಿದ್ದ ಪೈಲಟ್ ಸಾವನ್ನಪ್ಪಿದ್ದಾನೆ.

  • 07 Mar 2022 09:16 AM (IST)

    Russia-Ukraine War Live: ರಷ್ಯಾ ದಾಳಿಗೆ ಉಕ್ರೇನ್‌ನ 364 ನಾಗರಿಕರ ಸಾವು; ವಿಶ್ವಸಂಸ್ಥೆ ಮಾಹಿತಿ

    ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ರಷ್ಯಾ ದಾಳಿಯಲ್ಲಿ ಉಕ್ರೇನ್‌ನ 364 ನಾಗರಿಕರು ಮೃತಪಟ್ಟಿರುವ ಬಗ್ಗೆ ವಿಶ್ವಸಂಸ್ಥೆ ಮಾಹಿತಿ ನೀಡಿದೆ.

  • 07 Mar 2022 09:12 AM (IST)

    Russia-Ukraine War Live: ಉಕ್ರೇನ್​ನಿಂದ ತಾಯ್ನಾಡಿಗೆ ವಾಪಸ್ಸಾದ ವಿದ್ಯಾರ್ಥಿಗಳ ಪ್ರತಿಕ್ರಿಯೆ

    ಉಕ್ರೇನ್‌ನಲ್ಲಿ ಸಿಲುಕಿದ್ದ ಕನ್ನಡಿಗರು ತವರಿಗೆ ವಾಪಸ್ಸಾಗುತ್ತಿದ್ದಾರೆ. ಬೆಂಗಳೂರಿಗೆ ವಾಪಸಾದ ವಿದ್ಯಾರ್ಥಿನಿ ಪ್ರಿಯಾಂಕಾ ಹೇಳಿಕೆ ನೀಡಿದ್ದು, ಖಾರ್ಕಿವ್‌ನಲ್ಲಿ 5 ದಿನ ಮೆಟ್ರೋ ನಿಲ್ದಾಣದಲ್ಲೇ ಇದ್ದೆವು. ನಮ್ಮ ಬಳಿಯಿದ್ದ ಅಲ್ಪಸ್ವಲ್ಪ ಆಹಾರವೆಲ್ಲಾ ಖಾಲಿಯಾಗಿತ್ತು. ಕರ್ಫ್ಯೂ ಸಡಿಲಿಕೆಯಾದ ಬಳಿಕ ಆಹಾರ ಖರೀದಿಗೆ ಅವಕಾಶ ಸಿಕ್ಕಿತು. ರೈಲುಗಗಳಲ್ಲಿ ಖಾರ್ಕಿವ್‌ನಿಂದ ಉಕ್ರೇನ್ ಗಡಿಗೆ ಬಂದೆವು. ರೈಲುಗಳಲ್ಲಿ ಮೊದಲು ಸ್ಥಳೀಯ ನಿವಾಸಿಗಳಿಗೆ ಅವಕಾಶ ನೀಡಲಾಗಿತ್ತು. ಅದಾದ ನಂತರ ಹೊರದೇಶದ ಮಹಿಳೆಯರಿಗೆ ಅವಕಾಶ ನೀಡಲಾಯಿತು. ಬಳಿಕ ಪುರುಷರಿಗೆ ರೈಲಿನಲ್ಲಿ ಗಡಿಗೆ ಹೋಗಲು ಅವಕಾಶ ಮಾಡಲಾಯಿತು. ಕೊನೆಗೂ ಎಲ್ಲ ಕಷ್ಟಗಳನ್ನು ಎದುರಿಸಿ ಸುರಕ್ಷಿತವಾಗಿ ಭಾರತಕ್ಕೆ ವಾಪಸಾಗಿದ್ದಕ್ಕೆ ಖುಷಿಯಾಗುತ್ತಿದೆ ಎಂದು ಹೇಳಿದರು.

    ಅದೇ ರೀತಿಯಾಗಿ ಖಾರ್ಕಿವ್‌ನಿಂದ ಮಲ್ಲಿಕಾರ್ಜುನ ವಾಪಸ್ಸಾಗಿದ್ದಾರೆ. ಖಾರ್ಕಿವ್‌ನಿಂದ ವಾಪಸಾಗಲು ನವೀನ್‌ರಿಂದ ಮಾರ್ಗದರ್ಶನ ನೀಡಿದ್ದರು. ಅವರು ಮೃತಪಟ್ಟಿದ್ದಾರೆಂದು ನಂಬುವುದಕ್ಕೆ ಆಗುತ್ತಿಲ್ಲ. ತವರಿಗೆ ವಾಪಸ್ ಬರುವಂತೆ ನಮ್ಮ ಪೋಷಕರು ಹೇಳಿದ್ದರು. ನಮಗೆ ಆನ್‌ಲೈನ್ ಕ್ಲಾಸ್ ಇಲ್ಲದ ಹಿನ್ನೆಲೆ ಬರಲು ಆಗಿಲ್ಲ. ಪೋಷಕರು ಕರೆದಾಗ ವಾಪಸ್ ಬರದೆ ತಪ್ಪು ಮಾಡಿದೆ. ಆದರೆ ಕೊನೆಗೂ ಸುರಕ್ಷಿತವಾಗಿ ತವರಿಗೆ ವಾಪಸಾಗಿದ್ದೇನೆ
    KIABಯಲ್ಲಿ ವಿದ್ಯಾರ್ಥಿ ಮಲ್ಲಿಕಾರ್ಜುನ ಪ್ರತಿಕ್ರಿಯೆ ನೀಡಿದ್ದಾರೆ.

  • 07 Mar 2022 09:03 AM (IST)

    Russia-Ukraine War Live: ಇಂದು ಪ್ರಧಾನಿ ಮೋದಿ ಜತೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್‌ಕಿ ಚರ್ಚೆ

    ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ ಹಿನ್ನೆಲೆ, ಇಂದು ಪ್ರಧಾನಿ ಮೋದಿ ಜತೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್‌ಕಿ ಚರ್ಚೆ ನಡೆಸಲಿದ್ದಾರೆ.

  • 07 Mar 2022 08:49 AM (IST)

    Russia-Ukraine War Live: ರಷ್ಯಾ ವಾಹನ ಸೀಜ್ ಮಾಡಿದ್ದಾಗಿ ಉಕ್ರೇನ್ ಮಾಹಿತಿ

    ರಷ್ಯಾದ ಯುದ್ಧ ವಾಹನಗಳನ್ನು ಸೀಜ್ ಮಾಡಿದ್ದೇವೆ ಎಂದು ಉಕ್ರೇನ್ ಮಾಹಿತಿ ನೀಡಿದೆ. ಉಕ್ರೇನ್‌ನ ಮೈಕೊಲೈ ಪ್ರದೇಶದಲ್ಲಿ ವಾಹನಗಳನ್ನು ಸೀಜ್ ಮಾಡಲಾಗಿದೆ.

  • 07 Mar 2022 08:41 AM (IST)

    Russia-Ukraine War Live: ಬೆಂಗಳೂರು ಇಂಟರ್ನ್ಯಾಷನಲ್ ಏರ್ ಪೋರ್ಟ್​ಗೆ ಬಂದಿಳಿದ ವಿದ್ಯಾರ್ಥಿಗಳು

    ಉಕ್ರೇನ್​ನಿಂದ ತಾಯ್ನಾಡಿಗೆ ಸುರಕ್ಷಿತವಾಗಿ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಬೆಂಗಳೂರು ಇಂಟರ್ನ್ಯಾಷನಲ್ ಏರ್ ಪೋರ್ಟ್ ಗೆ ವಿದ್ಯಾರ್ಥಿಗಳು ಬಂದಿಳಿದಿದ್ದು, ಬೆ.9 ಗಂಟೆಗೆ ಮತ್ತೊಂದು ವಿಮಾನದಲ್ಲಿ ವಿದ್ಯಾರ್ಥಿಗಳು ಬರಲಿದ್ದಾರೆ.

  • 07 Mar 2022 08:37 AM (IST)

    Russia-Ukraine War Live: ಉಕ್ರೇನ್, ರಷ್ಯಾ ನಡುವೆ ಇಂದು 3ನೇ ಸುತ್ತಿನ ಮಾತುಕತೆ

    ಉಕ್ರೇನ್, ರಷ್ಯಾ ನಡುವೆ ಇಂದು 3ನೇ ಸುತ್ತಿನ ಮಾತುಕತೆ ನಡೆಯಲಿದೆ. ಈ ಹಿಂದೆ ಉಭಯ ರಾಷ್ಟ್ರಗಳ ನಡುವೆ 2 ಬಾರಿ ಮಾತುಕತೆ ನಡೆದಿತ್ತು. 2 ಶಾಂತಿ ಸಭೆಗಳಲ್ಲಿ ನಡೆದ ಚರ್ಚೆ ಫಲಪ್ರದವಾಗಿರಲಿಲ್ಲ. ಹಾಗಾಗಿ ಇಂದು 3ನೇ ಸುತ್ತಿನ ಮಾತುಕತೆ ನಡೆಯಲಿದೆ.

  • 07 Mar 2022 08:35 AM (IST)

    Russia-Ukraine War Live: ಉಕ್ರೇನ್‌ನಲ್ಲಿ ಕ್ಷಿಪಣಿ ದಾಳಿ ಮುಂದುವರಿಸಿದ ರಷ್ಯಾ ಸೇನೆ

    ಉಕ್ರೇನ್‌ನಲ್ಲಿ ರಷ್ಯಾ ಸೇನೆ ಕ್ಷಿಪಣಿ ದಾಳಿ ಮುಂದುವರಿಸಿದೆ. ಉಕ್ರೇನ್‌ನ ಒಡೆಸ್ಸಾದ ತುಝ್ಲಾ ಗ್ರಾಮದ ಮೇಲೆ ದಾಳಿ ಮಾಡಲಾಗುತ್ತಿದೆ.

  • 07 Mar 2022 08:33 AM (IST)

    Russia-Ukraine War Live: ಝಫೋರಿಝೀಯಾ ಅಣು ವಿದ್ಯುತ್ ಸ್ಥಾವರದಲ್ಲಿ ಬ್ಲಾಕ್

    ಉಕ್ರೇನ್‌ನ ಝಫೋರಿಝೀಯಾ ಅಣು ವಿದ್ಯುತ್ ಸ್ಥಾವರ ಬ್ಲಾಕ್ ಮಾಡಲಾಗಿದ್ದು, ಇಂಟರ್‌ನೆಟ್ ಹಾಗೂ ಮೊಬೈಲ್ ನೆಟ್‌ವರ್ಕ್ ಬ್ಲಾಕ್ ಮಾಡಲಾಗಿದೆ.

  • 07 Mar 2022 08:30 AM (IST)

    Russia-Ukraine War Live: ನಮ್ಮ ಕಣ್ಣೆದುರೇ ರಷ್ಯಾ ಸೇನೆ ಬಾಂಬ್ ದಾಳಿ ನಡೆಸುತ್ತಿತ್ತು; ಕೋಲಾರ ವಿದ್ಯಾರ್ಥಿನಿ ಹೇಳಿಕೆ

    ಒಂದು ವಾರ ನಾವು ಬಂಕರ್‌ನಲ್ಲೇ ವಾಸವಾಗಿದ್ದೆವು. ನಮ್ಮ ಕಣ್ಣೆದುರೇ ರಷ್ಯಾ ಸೇನೆ ಬಾಂಬ್ ದಾಳಿ ನಡೆಸುತ್ತಿತ್ತು ಎಂದು ಉಕ್ರೇನ್‌ನಿಂದ ವಾಪಸ್ಸಾದ ಕೋಲಾರದ ವರ್ಷಿತಾ ಟಿವಿ9ಗೆ ಹೇಳಿಕೆ ನೀಡಿದ್ದಾರೆ. ಉಕ್ರೇನ್‌ನಲ್ಲಿ ನಮಗೆ ಆಹಾರಕ್ಕೆ ತೊಂದರೆಯಾಗಿತ್ತು. ನವೀನ್ ಸಾವಿಗೂ ಮುನ್ನ ನಾನು ಮಾತನಾಡಿದ್ದೆ. ನವೀನ್, ನಾನು ಒಳ್ಳೆಯ ಸ್ನೇಹಿತರಾಗಿದ್ದೆವು ಎಂದು ಎಂಬಿಬಿಎಸ್ ವಿದ್ಯಾರ್ಥಿನಿ ವರ್ಷಿತಾ ಹೇಳಿದ್ದಾರೆ.

  • 07 Mar 2022 08:24 AM (IST)

    Russia-Ukraine War Live: ಮಗಳನ್ನ ಕಂಡು ಪೋಷಕರ ಕಣ್ಣೀರು

    ವಿಜಯಪುರದ ಮೂಲದ ವೇದಾ ವಿದ್ಯಾರ್ಥಿನಿ ಖಾರ್ಕಿವ್​ನಿಂದ ವಾಪಸ್ಸಾಗಿದ್ದು, ಮಗಳನ್ನ ನೋಡಿ ಪೊಷಕರು ಕಣ್ಣೀರು ಹಾಕಿದ್ದಾರೆ. ಬಳಿಕ ಟಿವಿ9ಗೆ ಎಂಬಿಬಿಎಸ್ ವಿದ್ಯಾರ್ಥಿನಿ ವೇದಾ ಹೇಳಿಕೆ ನೀಡಿದ್ದು, ಪ್ರತಿದಿನ ಭಯದಿಂದಲೇ ಜೀವನ ಕಳೆದಿದ್ದೇವೆ. ನನ್ನ ಕಣ್ಣು ಮುಂದೆಯೇ ಬಾಂಬ್ ದಾಳಿಯಾಗಿತ್ತಿತ್ತು. ನವೀನ್ ಕಳೆದುಕೊಂಡಿದ್ದು ನೋವಿನ ವಿಷಯ. ಅವರು ನಮ್ಮ ಸಿನಿಯರ್ ಆಗಿದ್ದರು. ಅವರ ತಂದೆ ತಾಯಿಗಳನ ರೋದನೆ ಕಂಡು ನವೀನ್ ನೆನದು ವಿದ್ಯಾರ್ಥಿನಿ ಕಣ್ಣೀರು ಹಾಕಿದರು. ಒಂದು ತಿಂಗಳಿದಲೇ ಬಂದು ಬಿಡು ಅಂತಿದ್ದರು. ಆದರೆ ನಮ್ಮ ವಿವಿಯಲ್ಲಿ ನಮಗೆ ಅನುಮತಿ ಕೊಟ್ಟಿರಲಿಲ್ಲ. ಭಾರತ ಸರ್ಕಾರ ನಮ್ಮನ್ನ ಸುರಕ್ಷಿತವಾಗಿ ಕರೆತಂದಿದ್ದಕೆ ವೇದಾ ಧನ್ಯವಾದ ತಿಳಿಸಿದರು.

     

  • 07 Mar 2022 08:17 AM (IST)

    Russia-Ukraine War Live: ಇದೊಂದು ಕೆಟ್ಟ ಅನುಭವ; ಚಿತ್ರದುರ್ಗ ವಿದ್ಯಾರ್ಥಿನಿ ಹೇಳಿಕೆ

    ಉಕ್ರೇನ್​ನಲ್ಲಿ ಸಿಲುಕಿದ್ದ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದ ವಿದ್ಯಾರ್ಥಿನಿ ತವರಿಗೆ ವಾಪಸ್ಸಾಗಿದ್ದಾರೆ. ಎಂಬಿಬಿಎಸ್ ವಿದ್ಯಾಭ್ಯಾಸಕ್ಕೆ ಉಕ್ರೇನ್​ಗೆ ಸೀಮಾ ತೆರಳಿದ್ದರು. ಸೀಮಾ ನಿವಾಸಕ್ಕೆ‌ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಭೇಟಿ ನೀಡಿದ್ದು, ಹೂಮಾಲೆ ಹಾಕಿ ಸ್ವಾಗತಿಸಿದ್ದಾರೆ. ತವರಿಗೆ ಮರಳಿದ ಚಳ್ಳಕೆರೆ ವಿದ್ಯಾರ್ಥಿನಿ ಸೀಮಾ ಪ್ರತಿಕ್ರಿಯೆ ನೀಡಿದ್ದು, ಇದೊಂದು ಉತ್ತಮ ಅನುಭವ ಅಲ್ಲ,‌ ಕೆಟ್ಟ ಅನುಭವ ಆಗಿತ್ತು. ಕಾಲೇಜು ಬಂಕರ್ಗ ಳಲ್ಲಿದ್ದವರನ್ನು ರೈಲು ಮೂಲಕ ಉಕ್ರೇನ್ ಗಡಿ ಪ್ರದೇಶಕ್ಕೆ ಶಿಫ್ಟ್ ಮಾಡಲಾಯಿತು. ಹಂಗೇರಿ ದೇಶದ ಮೂಲಕ ಭಾರತಕ್ಕೆ ಬಂದೆವು. ಇಂಡಿಯನ್ ಅಂಬಾಸಿಯಿಂದ ಭಾರತಕ್ಕೆ ಬರಲು ಫ್ಲೈಟ್ ವ್ಯವಸ್ಥೆ ಮಾಡಿದ್ದು, ದೆಹಲಿಯ ಕರ್ನಾಟಕ ಭವನದಲ್ಲಿ ಉಳಿಯಲು ಸರ್ಕಾರ ವ್ಯವಸ್ಥೆ ಮಾಡಿತ್ತು. ಕೊನೆಗೂ ತವರಿಗೆ ಮರಳಿದ್ದು ನಿರಾಳರಾಗಿದೆ ಎಂದು ಸೀಮಾ ಹೇಳಿದ್ದಾರೆ.

  • 07 Mar 2022 08:12 AM (IST)

    Russia-Ukraine War Live: ರಷ್ಯಾ-ಉಕ್ರೇನ್ ಯುದ್ಧ ನಡುವೆ ಕಚ್ಚಾ ತೈಲ ಬೆಲೆ ಏರಿಕೆ

    ರಷ್ಯಾ, ಉಕ್ರೇನ್ ನಡುವೆ ಯುದ್ಧ ಮುಂದುವರಿದ ಹಿನ್ನೆಲೆ ಆರಂಭಿಕ ವಹಿವಾಟಿನಲ್ಲಿ ಕಚ್ಚಾ ತೈಲ ಬೆಲೆ ಶೇ.9ರಷ್ಟು ಏರಿಕೆಯಾಗಿದೆ. ಬೆಲೆ ಏರಿಕೆ ಬಳಿಕ ಬ್ಯಾರಲ್ ಕಚ್ಚಾ ತೈಲ ಬೆಲೆ 130 ಡಾಲರ್ ಆಗಿದೆ. ಜನವರಿ 1ರಿಂದ ಈವರೆಗೆ ಕಚ್ಚಾ ತೈಲ ಬೆಲೆ ಶೇ.65ರಷ್ಟು ಏರಿಕೆಯಾಗಿದೆ.

  • 07 Mar 2022 07:58 AM (IST)

    Russia-Ukraine War Live: ಮೈಸೂರಿನ ಬಹುತೇಕ ವಿದ್ಯಾರ್ಥಿಗಳು ವಾಪಸ್ಸು; ಜಿಲ್ಲಾಡಳಿತದಿಂದ ಮಾಹಿತಿ

    ಉಕ್ರೇನ್‌ನಲ್ಲಿ ಸಿಲುಕಿದ್ದ ಮೈಸೂರಿನ ವಿದ್ಯಾರ್ಥಿಗಳು ವಾಪಸ್ಸಾಗಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿದ್ದ ಮೈಸೂರು ಜಿಲ್ಲೆಯ ಬಹುತೇಕ 31 ಸ್ಟೂಡೆಂಟ್ಸ್  ವಾಪಸ್ಸಾಗಿದ್ದಾರೆ. ಈವರೆಗೆ 25 ವಿದ್ಯಾರ್ಥಿಗಳು ಮೈಸೂರು ಜಿಲ್ಲೆಗೆ ವಾಪಸ್ಸಾಗಿದ್ದು, ಇನ್ನುಳಿದ 6 ಮೆಡಿಕಲ್ ವಿದ್ಯಾರ್ಥಿಗಳು ತವರಿನತ್ತ ಪ್ರಯಾಣ ಬೆಳೆಸಿರೋದಾಗಿ ಮೈಸೂರು ಜಿಲ್ಲಾಡಳಿತ ಮಾಹಿತಿ ನೀಡಿದೆ.

     

  • 07 Mar 2022 07:54 AM (IST)

    Russia-Ukraine War Live: ಉಕ್ರೇನ್‌ನಲ್ಲಿ ಈವರೆಗೆ 600 ಕ್ಷಿಪಣಿ ಹಾರಿಸಲಾಗಿದೆ; ಅಧಿಕಾರಿಯೊಬ್ಬರಿಂದ ಮಾಹಿತಿ

    ಉಕ್ರೇನ್‌ನಲ್ಲಿ ಶೇ.95ರಷ್ಟು ಸೇನೆಯನ್ನ ನಿಯೋಜಿಸಿದೆ. ರಷ್ಯಾ ಶೇಕಡಾ 95ರಷ್ಟು ಸೇನೆಯನ್ನು ನಿಯೋಜಿಸಿದೆ. ಉಕ್ರೇನ್‌ನಲ್ಲಿ ಈವರೆಗೆ 600 ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರಿಂದ ಮಾಹಿತಿ ನೀಡಲಾಗಿದೆ.

  • 07 Mar 2022 07:38 AM (IST)

    Russia-Ukraine War Live: ಉಕ್ರೇನ್ ಪರಿಸ್ಥಿತಿ ನೋಡಿ ಪೋಷಕರಲ್ಲಿ ಆತಂಕ ಶುರು; ದೇಶದಲ್ಲೇ ಶಿಕ್ಷಣ ಪಡೆಯುವಂತೆ ಆಗ್ರಹ

    ಉಕ್ರೇನ್-ರಷ್ಯಾ ನಡುವಣ ಭೀಕರ ಯುದ್ದ ಹಿನ್ನೆಲೆ ಯುದ್ಧಗ್ರಸ್ತ ಉಕ್ರೇನ್ ನೆಲದಲ್ಲಿ ಭಾರತೀಯ ವಿದ್ಯಾರ್ಥಿಗಳ ಪರದಾಟ ಎಫೆಕ್ಟ್ ಆಗಿದ್ದು, ಉಕ್ರೇನ್ ಪರಿಸ್ಥಿತಿ ನೋಡಿ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಉಕ್ರೇನ್-ರಷ್ಯಾ ಯುದ್ಧ ಹಿನ್ನೆಲೆ ಪೋಷಕರು ಯೂಟರ್ನ್ ಹೊಡೆದಿದ್ದು, ಪೋಷಕರ ಮನಸ್ಥಿತಿಯಲ್ಲಿ‌ ಬದಲಾವಣೆಯ ಟ್ರೆಂಡ್ ಶುರುವಾಗಿದೆ. ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸಿ ಶಿಕ್ಷಣ ಪಡೆಯುವಂತೆ ಒತ್ತಾಯಿಸುತ್ತಿದ್ದ ಪೋಷಕರು, ಇದೀಗ ಉಕ್ರೇನ್ ಹಾಗೂ ರಷ್ಯಾ ನಡುವಿನ ಸಂಘರ್ಷ ಪೋಷಕರಲ್ಲಿ ಆತಂಕ ಹೆಚ್ಚಿದೆ. ಇನ್ಮುಂದೆ ಉಕ್ರೇನ್ ಸೇರಿದಂತೆ ವಿದೇಶಗಳಿಗೆ ತೆರಳಿ ಶಿಕ್ಷಣಕ್ಕೆ ಪೋಷಕರು ಒಲ್ಲೆ ಎನ್ನುತ್ತಿದ್ದಾರೆ. ಉಕ್ರೇನ್, ಆಸ್ಟ್ರೇಲಿಯಾ, ಕೆನಡಾ, ಲಂಡನ್, ಯುಎಸ್ ಎ, ಇಟಲಿ, ಸ್ಪೇನ್, ಜರ್ಮನಿ, ಯುಕೆ, ಸೇರಿದಂತೆ ಹಲವು ದೇಶಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಇಲ್ಲಿನ ವಿದ್ಯಾರ್ಥಿಗಳು, ಇದೀಗ ವಿದೇಶಗಳಿಗೆ ಮಕ್ಕಳನ್ನು ಕಳುಹಿಸದೇ ಇರುವ ನಿರ್ಧಾರಕ್ಕೆ ಪೋಷಕರು ಬರುತ್ತಿದ್ದಾರೆ. ಕರ್ನಾಟಕದಿಂದಲೂ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ಅರಸಿ ವಿದೇಶದಲ್ಲಿದ್ದಾರೆ. ಇದೀಗ ಉಕ್ರೇನೇತರ ದೇಶಗಳಲ್ಲಿ ಇರುವ ಮಕ್ಕಳ ಪೋಷಕರಲ್ಲಿ ಆತಂಕ ಶುರುವಾಗಿದೆ. ಮುಂದೆ ಉಕ್ರೇನ್ ಪರಿಸ್ಥಿತಿ ಬೇರೆಡೆಯೂ ನಿರ್ಮಾಣವಾದರೆ ಮಕ್ಕಳನ್ನು ಕಳೆದುಕೊಳ್ಳುವ ಭೀತಿಯಲ್ಲಿ ಪೋಷಕರಿದ್ದು, ಹೀಗಾಗಿ ಪೋಷಕರಲ್ಲಿ‌ ದೇಶದಲ್ಲೇ ಶಿಕ್ಷಣ ಪಡೆಯುವಂತೆ ಆಗ್ರಹಿಸುವ ಟ್ರೆಂಡ್ ಶುರುವಾಗಿದೆ. ಸದ್ಯ ಯುದ್ಧಗ್ರಸ್ತ ಉಕ್ರೇನ್ ನಿಂದ‌ 458 ಕನ್ನಡಿಗ ವಿದ್ಯಾರ್ಥಿಗಳ ರಕ್ಷಣೆ ಮಾಡಲಾಗಿದ್ದು, ಆಪರೇಷನ್ ಗಂಗಾ ಮೂಲಕ 458 ವಿದ್ಯಾರ್ಥಿಗಳನ್ನು 47 ಬ್ಯಾಚ್ ಗಳ ಮೂಲಕ‌ ರಕ್ಷಣೆ ಮಾಡಲಾಗಿದೆ.

    ಉಕ್ರೇನ್ ನಿಂದ ರಕ್ಷಿಸಲಾದ ಕನ್ನಡಿಗ ವಿದ್ಯಾರ್ಥಿಗಳ ವಿವರ
    – ಫೆಬ್ರವರಿ 27 : 30 ವಿದ್ಯಾರ್ಥಿಗಳು
    – ಫೆಬ್ರವರಿ 28 : 7 ವಿದ್ಯಾರ್ಥಿಗಳು
    – ಮಾರ್ಚ್ 01 : 18 ವಿದ್ಯಾರ್ಥಿಗಳು
    – ಮಾರ್ಚ್ 02 : 31 ವಿದ್ಯಾರ್ಥಿಗಳು
    – ಮಾರ್ಚ್ 03 : 104 ವಿದ್ಯಾರ್ಥಿಗಳು
    – ಮಾರ್ಚ್ 04 : 92 ವಿದ್ಯಾರ್ಥಿಗಳು
    – ಮಾರ್ಚ್ 05 : 90 ವಿದ್ಯಾರ್ಥಿಗಳು
    – ಮಾರ್ಚ್ 06 : 86 ವಿದ್ಯಾರ್ಥಿಗಳು

  • 07 Mar 2022 07:29 AM (IST)

    Russia-Ukraine War Live: ಉಕ್ರೇನ್‌ನಲ್ಲಿ ಸಿಲುಕಿದ್ದ 458 ಕನ್ನಡಿಗರು ತವರಿಗೆ ವಾಪಸ್ಸ್; ಇನ್ನೂ 235 ಕನ್ನಡಿಗರು ಬಾಕಿ

    ಉಕ್ರೇನ್‌ನಲ್ಲಿ ಸಿಲುಕಿದ್ದ 458 ಕನ್ನಡಿಗರು ತವರಿಗೆ ವಾಪಸ್ಸಾಗಿದ್ದಾರೆ. ಉಕ್ರೇನ್‌ನಲ್ಲಿರುವ ಇನ್ನೂ 235 ಕನ್ನಡಿಗರ ಏರ್‌ಲಿಫ್ಟ್ ಬಾಕಿ ಇದ್ದು, ಉಕ್ರೇನ್‌ನ ಸುಮಿ ನಗರದಲ್ಲಿ 7 ಜನ ಕನ್ನಡಿಗರು ಸಿಲುಕಿದ್ದಾರೆ. ಸುಮಿಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ಹರಸಾಹಸ ಪಡುತಿದ್ದು, ಉಕ್ರೇನ್‌ನಿಂದ ವಾಪಸಾಗಲು ಒಟ್ಟು 691 ಕನ್ನಡಿಗರು ಸಹಾಯವಾಣಿಗೆ ನೋಂದಣಿ ಮಾಡಿಕೊಂಡಿದ್ದರು.

  • 07 Mar 2022 07:25 AM (IST)

    Russia-Ukraine War Live: ಇಂದು 7 ವಿಮಾನಗಳಲ್ಲಿ 1200 ಭಾರತೀಯರ ಏರ್‌ಲಿಫ್ಟ್; ವಿದೇಶಾಂಗ ಸಚಿವ ಟ್ವೀಟ್

    ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ಏರ್‌ಲಿಫ್ಟ್ ಮಾಡಲಾಗುತ್ತಿದ್ದು, ಇಂದು ಸುಮಾರು 1,200 ಭಾರತೀಯರ ಏರ್‌ಲಿಫ್ಟ್ ಮಾಡಲಾಗುತ್ತಿದೆ. 7 ವಿಮಾನಗಳಲ್ಲಿ 1,200 ಭಾರತೀಯರ ಏರ್‌ಲಿಫ್ಟ್ ಮಾಡಲಾಗುವುದು ಎಂದು ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಟ್ವೀಟ್ ಮಾಡಿದ್ದಾರೆ.

  • 07 Mar 2022 07:21 AM (IST)

    Russia-Ukraine War Live: ರಷ್ಯಾ ಸೇನೆಯಿಂದ ಉಕ್ರೇನ್‌ನ ನಗರಗಳಲ್ಲಿ ಶೆಲ್ ದಾಳಿ

    ಉಕ್ರೇನ್‌ನ ಮಧ್ಯ, ಉತ್ತರ, ದಕ್ಷಿಣದ ನಗರಗಳಲ್ಲಿ ರಷ್ಯಾ ಸೇನೆಯಿಂದ ಶೆಲ್ ದಾಳಿ ಮಾಡಿದೆ. ರಷ್ಯಾ ಶೆಲ್ ದಾಳಿ ನಡೆಸ್ತಿರುವ ಬಗ್ಗೆ ಉಕ್ರೇನ್ ಮಾಹಿತಿ ನೀಡಿದೆ. ಅಮೆರಿಕ ಎಕ್ಸ್‌ಪ್ರೆಸ್‌ ರಷ್ಯಾ, ಬೆಲಾರಸ್‌ನಲ್ಲಿ ಎಲ್ಲಾ ಸೇವೆಗಳು ಸ್ಥಗಿತಗೊಳಿಸಿದೆ.

     

  • 07 Mar 2022 07:16 AM (IST)

    Russia-Ukraine War Live: ರಷ್ಯಾ ವಿರುದ್ಧ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಆಕ್ರೋಶ

    ರಷ್ಯಾ ವಿರುದ್ಧ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಕಿಡಿಕಾರಿದ್ದಾರೆ. ರಷ್ಯಾ ಬಾಂಬ್ ದಾಳಿ ಮಾಡುವುದಾಗಿ ಘೋಷಿಸಿದೆ. ಉಕ್ರೇನ್‌ನಲ್ಲಿರುವ ರಕ್ಷಣಾ ಉದ್ಯಮಗಳ ಮೇಲೆ ದಾಳಿ ಮಾಡಲಾಗಿದ್ದು, ಈ ಉದ್ಯಮಗಳು ಉಕ್ರೇನ್‌ನ ನಗರ ಪ್ರದೇಶದಲ್ಲಿವೆ. ನಗರ ಪ್ರದೇಶದಲ್ಲಿ ಸಾಕಷ್ಟು ನಾಗರಿಕರು ಇರುತ್ತಾರೆ. ನಾಗರಿಕರ ಮೇಲೆ ದಾಳಿಯಾದ್ರೆ ಅದು ಕೊಲೆಯಾಗುತ್ತೆ ಎಂದು ರಷ್ಯಾ ವಿರುದ್ಧ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published On - 7:10 am, Mon, 7 March 22

Follow us on