Kannada News World Ukraine Claims 9000 russian troops killed UN says 1000 Ukrainian people died Russia Ukraine Conflicts 10 points
Ukraine Crisis: 9,000 ರಷ್ಯನ್ ಸೈನಿಕರನ್ನು ಕೊಂದಿರುವುದಾಗಿ ಹೇಳಿಕೊಂಡ ಉಕ್ರೇನ್; ಬೆಳವಣಿಗೆಯ 10 ಮುಖ್ಯಾಂಶಗಳು ಇಲ್ಲಿವೆ
Russia Ukraine War: ರಷ್ಯಾ ಹಾಗೂ ಉಕ್ರೇನ್ ನಡುವಿನ ಕದನ ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಶುಕ್ರವಾರದಂದು ರಷ್ಯಾವು ಉಕ್ರೇನ್ನಲ್ಲಿರುವ ಯುರೋಪ್ನಲ್ಲೇ ಅತ್ಯಂತ ದೊಡ್ಡ ಪರಮಾಣು ಸ್ಥಾವರದ ಮೇಲೆ ದಾಳಿ ನಡೆಸಿ, ಅದನ್ನು ವಶಕ್ಕೆ ಪಡೆದಿದೆ. ಇದನ್ನು ಜಾಗತಿಕ ರಾಷ್ಟ್ರಗಳು ಖಂಡಿಸಿವೆ. ಶುಕ್ರವಾರದ ಬೆಳವಣಿಗೆಗಳ ಮುಖ್ಯಾಂಶಗಳು ಇಲ್ಲಿವೆ.
ಕೀವ್ನ ಬೀದಿಯೊಂದರಲ್ಲಿ ಧ್ವಂಸಗೊಂಡಿರುವ ಟ್ರಕ್ ಮುಂಭಾಗದಲ್ಲಿ ನಡೆದು ಹೋಗುತ್ತಿರುವ ಉಕ್ರೇನ್ ಸೈನಿಕ
ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧ (Russia Ukraine War) ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್ನಲ್ಲಿರುವ ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರ ಜಪೋರಿಝಿಯಾದ ಮೇಲೆ ರಷ್ಯಾವು ಶುಕ್ರವಾರ ದಾಳಿ ನಡೆಸಿತ್ತು. ಶುಕ್ರವಾರದಂದು ರಷ್ಯಾವು ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರವನ್ನು ವಶಪಡಿಸಿಕೊಳ್ಳುವ ಮುನ್ನ ಶೆಲ್ ದಾಳಿ ನಡೆಸಿತ್ತು. ಈ ವೇಳೆ ಅಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಒಂದು ವೇಳೆ ಸ್ಥಾವರ ಸ್ಫೋಟಗೊಂಡರೆ ಇಡೀ ಯುರೋಪ್ಗೆ ಹಾನಿಯಾಗಲಿದೆ ಎಂದು ಉಕ್ರೇನ್ ಎಚ್ಚರಿಸಿತ್ತು. ಅಲ್ಲದೇ ಪರಮಾಣ ಸ್ಥಾವರಗಳನ್ನು ಕೇಂದ್ರೀಕರಿಸಿ ದಾಳಿ ನಡೆಸುತ್ತಿರುವ ರಷ್ಯಾದ ನಿಲುವಿನ ವಿರುದ್ಧ ಅಮೇರಿಕಾ, ಇಂಗ್ಲೆಂಡ್ ಮೊದಲಾದ ರಾಷ್ಟ್ರಗಳು ತೀವ್ರ ಆತಂಕ ಹೊರಹಾಕಿದವು. ಇದನ್ನು ‘ಪರಮಾಣು ಭಯೋತ್ಪಾದನೆ’ (Nuclear Terrorism) ಎಂದು ಕರೆಯಲಾಯಿತು. ಅಂತಿಮವಾಗಿ ಯುರೋಪ್ನ ಅತ್ಯಂತ ದೊಡ್ಡ ಪರಮಾಣು ಸ್ಥಾವರ ಜಪೋರಿಝಿಯಾ ರಷ್ಯಾದ ವಶವಾಗಿದೆ. ಪ್ರಸ್ತುತ ರಷ್ಯಾವು ಉಕ್ರೇನ್ನ ಎರಡನೇ ದೊಡ್ಡ ಪರಮಾಣು ಸ್ಥಾವರವಾದ ಯುಜ್ನೌಕ್ರೇನ್ಸ್ಕ್ನಿಂದ ಕೇವಲ 20 ಮೈಲುಗಳಷ್ಟು ದೂರದಲ್ಲಿವೆ ಎಂದು ಅಮೇರಿಕಾ ರಾಯಭಾರಿಯೊಬ್ಬರು ಹೇಳಿದ್ದಾರೆ. ಶುಕ್ರವಾರದ ಬೆಳವಣಿಗೆಗಳ ಮುಖ್ಯಾಂಶಗಳು ಇಲ್ಲಿವೆ.
ದೂರದರ್ಶನ ಭಾಷಣದಲ್ಲಿ ಮಾತನಾಡುತ್ತಾ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ರಷ್ಯಾವನ್ನು ವಿರೋಧಿಸುವುದರಿಂದ ದೂರ ಉಳಿಯಬೇಡಿ ಎಂದು ಕರೆ ನೀಡಿರುವ ಅವರು, ಉಕ್ರೇನ್ ಉಳಿಯದಿದ್ದರೆ ಯುರೋಪ್ ಕೂಡ ಉಳಿಯುವುದಿಲ್ಲ ಎಂದಿದ್ದಾರೆ.
ನ್ಯಾಟೋ ಪಡೆಗಳ ನಿರ್ಧಾರವನ್ನು ಝೆಲೆನ್ಸ್ಕಿ ಟೀಕಿಸಿದ್ದಾರೆ. ಉಕ್ರೇನ್ ಮೇಲೆ ಹಾರಾಟ ನಿಷೇಧ ವಲಯವನ್ನು ಹೇರಲು ನ್ಯಾಟೋ ಪಡೆಗಳು ವಿಫಲವಾಗಿವೆ ಎಂದಿರುವ ಝೆಲೆನ್ಸ್ಕಿ, ನ್ಯಾಟೋ ಮೈತ್ರಿಯನ್ನು ದುರ್ಬಲ ಎಂದು ಕರೆದಿದ್ದಾರೆ. ಮೈತ್ರಿಯು ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದಿರುವ ಅವರು, ನಿಷೇಧ ಹೇರಿದ್ದರೆ ರಷ್ಯಾದ ವಾಯು ಪಡೆಗಳನ್ನು ಸಮರ್ಥವಾಗಿ ಎದುರಿಸಲು ಸಹಾಯವಾಗುತ್ತಿತ್ತು ಎಂದಿದ್ದಾರೆ. ಅಲ್ಲದೇ ಇದರ ಪರಿಣಾಮದ ಕುರಿತು ಮಾತನಾಡಿರುವ ಝೆಲೆನ್ಸ್ಕಿ, ‘‘ಈ ದಿನದ ನಂತರ ಯುದ್ಧದಿಂದ ನಿಧನಹೊಂದುವ ನಾಗರಿಕರ ಸಾವಿಗೆ ಇದೇ ನಿರ್ಧಾರ ಕಾರಣ’’ ಎಂದು ಹೇಳಿದ್ದಾರೆ. ಈ ನಡುವೆ ಝೆಲೆನ್ಸ್ಕಿ ಶನಿವಾರ ಬೆಳಿಗ್ಗೆ ಅಮೇರಿಕಾ ಸೆನೆಟರ್ಗಳೊಂದಿಗೆ ಕಾನ್ಫರೆನ್ಸ್ ಕರೆಯಲ್ಲಿ ಮಾತನಾಡಲಿದ್ದಾರೆ.
ಕಳೆದ ಗುರುವಾರ ದಾಳಿ ಪ್ರಾರಂಭವಾದಾಗಿನಿಂದ 9,000 ಕ್ಕೂ ಹೆಚ್ಚು ರಷ್ಯನ್ ಪಡೆಗಳು ಸಾವನ್ನಪ್ಪಿವೆ ಎಂದು ಕೀವ್ ಹೇಳಿಕೊಂಡಿದೆ. ವಿಶ್ವಸಂಸ್ಥೆ ತಿಳಿಸಿರುವಂತೆ ಉಕ್ರೇನ್ನ 1,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರದಂದು ಹೊಸ ಕಾನೂನು ತಂದಿದ್ದಾರೆ. ಇದರ ಅನ್ವಯ, ‘ದೇಶ ಹಾಗೂ ಸೇನೆಯ ವಿರುದ್ಧ ನಕಲಿ ಸುದ್ದಿ ಹಂಚಿದರೆ 15 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ನೀಡಬಹುದಾಗಿದೆ’. ಈ ಕಾನೂನನ್ನು ಜಾರಿಗೊಳಿಸಿದ ಕೂಡಲೇ, ಬಿಬಿಸಿ, ಸಿಎನ್ಎನ್, ಬ್ಲೂಮ್ಬರ್ಗ್ ಮತ್ತು ಇತರ ಸುದ್ದಿ ಸಂಸ್ಥೆಗಳು ರಷ್ಯಾದಲ್ಲಿ ತಮ್ಮ ಕಾರ್ಯಾಚರಣೆಯನ್ನು ಸೀಮಿತಗೊಳಿಸುವುದಾಗಿ ತಿಳಿಸಿವೆ.
ಉಕ್ರೇನ್ ಯುದ್ಧದ ವಿರುದ್ಧ ರಷ್ಯಾದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಸಂಬಂಧ ‘ರಷ್ಯಾ ಮೀಡಿಯಾ ವಾಚ್ಡಾಗ್’ ಫೇಸ್ಬುಕ್ ಮತ್ತು ಟ್ವಿಟರ್ಗೆ ಪ್ರವೇಶವನ್ನು ನಿರ್ಬಂಧಿಸಿದೆ. ಉಕ್ರೇನ್ ಸಂಘರ್ಷಕ್ಕೆ ‘ಯುದ್ಧ’ ಎಂಬ ಪದವನ್ನು ಬಳಸದೆ ‘ವಿಶೇಷ ಮಿಲಿಟರಿ ಕಾರ್ಯಾಚರಣೆ’ ಎಂದು ಮಾಸ್ಕೋ ಪದೇ ಪದೇ ಹೇಳುತ್ತಾ ಬಂದಿದೆ.
ಬ್ರಿಟನ್ನ ಗುಪ್ತಚರ ವರದಿಯೊಂದರ ಪ್ರಕಾರ, ‘ಉಕ್ರೇನ್ನ ವಾಯು ಪಡೆಗಳನ್ನು ಕುಗ್ಗಿಸಲು ರಷ್ಯಾ ಬಹಳ ಪ್ರಯತ್ನಪಡುತ್ತಿದೆ. ಇದರ ಪರಿಣಾಮವಾಗಿ ಉಕ್ರೇನ್ ಮೇಲಿನ ರಷ್ಯಾದ ದಾಳಿ ನಿಧಾನಗೊಂಡಿದೆ. ಜತೆಗೆ ಅವರ ಪಡೆಗಳಿಗೆ ವಾಯುಪಡೆಗಳಿಂದ ಸೂಕ್ತ ಬೆಂಬಲ ದೊರೆಯುತ್ತಿಲ್ಲ’ ಎಂದು ಹೇಳಲಾಗಿದೆ.
ರಷ್ಯಾ ಪ್ರಸ್ತುತ ಬಂದರು ನಗರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಖೇರ್ಸನ್ ನಂತರ ಇದೀಗ ಮರಿಯುಪೋಲ್ ನಗರವನ್ನು ರಷ್ಯಾ ಸುತ್ತುವರೆದಿದೆ. ಪ್ರಸ್ತುತ ಈ ನಗರ ರಷ್ಯಾ ವಶವಾಗಿದೆ.
ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಹಲವೆಡೆ ನಡೆಯುತ್ತಿರುವ ಬಾಂಬ್ ದಾಳಿಗಳನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿರಾಕರಿಸಿದ್ದಾರೆ. ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗಿನ ದೂರವಾಣಿ ಮಾತುಕತೆಯಲ್ಲಿ ಪುಟಿನ್ ಮಾತನಾಡುತ್ತಾ, ಇವೆಲ್ಲ ದಾಳಿಯ ಹೇಳಿಕೆಗಳನ್ನು ನಿರಾಕರಿಸಿ, ಅವುಗಳನ್ನು ಪ್ರಚಾರಕ್ಕಾಗಿ ಮಾಡುತ್ತಿರುವ ನಕಲಿ ಸುದ್ದಿಗಳು ಎಂದಿದ್ದಾರೆ.
ರಷ್ಯಾವು ಮಾತುಕತೆಯ ಕುರಿತೂ ಪ್ರಸ್ತಾಪಿಸಿದ್ದು, ಉಕ್ರೇನ್ನಲ್ಲಿ ಹಾಗೂ ಉಕ್ರೇನ್ನಲ್ಲಿ ಶಾಂತಿ ಬಯಸುವ ಜನರೊಂದಿಗೆ ರಷ್ಯಾ ಮಾತುಕತೆಗೆ ಮುಕ್ತವಾಗಿದೆ ಎಂದಿದೆ. ಆದರೆ ರಷ್ಯಾದ ಎಲ್ಲಾ ಬೇಡಿಕೆಗಳನ್ನು ಪೂರೈಸಬೇಕೆನ್ನುವ ಷರತ್ತನ್ನೂ ಹಾಕಲಾಗಿದೆ.
ಈಗಾಗಲೇ ರಷ್ಯಾ ಹಾಗೂ ಉಕ್ರೇನ್ ನಡುವೆ ಎರಡು ಸುತ್ತಿನ ಕದನ ವಿರಾಮದ ಮಾತುಕತೆಗಳು ನಡೆದಿವೆ. ಮೂರನೇ ಸುತ್ತಿನ ಮಾತುಕತೆ ಮುಂದಿನ ವಾರ ನಡೆಯುವ ನಿರೀಕ್ಷೆ ಇದೆ.