ನವದೆಹಲಿ: ಅಮೃತ ಕಾಲದ ಮೊದಲ ಬಜೆಟ್ (Budget 2023) ಇದಾಗಿದ್ದು, 7 ಅಂಶಗಳಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದರು. ತಮ್ಮ ಐದನೇ ಬಜೆಟ್ ಮಂಡನೆ ಮಾಡುತ್ತಿರುವ ಅವರು, ಭಾರತದ ಆರ್ಥಿಕತೆಯು ಸರಿಯಾದ ಹಾದಿಯಲ್ಲಿದ್ದು, ಭವ್ಯವಾದ ಭವಿಷ್ಯವನ್ನು ಹೊಂದಿದೆ ಎಂದು ಹೇಳಿದರು. ಇದು ಅಮೃತ ಕಾಲದ ಮೊದಲ ಬಜೆಟ್. ಮೋದಿ ಸರ್ಕಾರದ ನವ ಭಾರತ ಪರಿಕಲ್ಪನೆ ಅಡಿಯಲ್ಲಿ ಈ ಬಜೆಟ್ ಮಂಡನೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಈ ಬಜೆಟ್ನಲ್ಲಿ ಏಳು ಅಂಶಗಳ ಬಗ್ಗೆ ಆದ್ಯತೆ ನೀಡಲಾಗಿದೆ ಅವುಗಳೆಂದರೆ, ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ, ಅಂಚಿನಲ್ಲಿರುವವರಿಗೆ ಸವಲತ್ತು, ಮೂಲಸೌಕರ್ಯ, ಸಾಮರ್ಥ್ಯದ ಸದ್ಬಳಕೆ, ಪರಿಸರ ಸ್ನೇಹಿ ಅಭಿವೃದ್ಧಿ, ಯುವಶಕ್ತಿಗೆ ಉತ್ತೇಜನ ಹಾಗೂ ಆರ್ಥಿಕ ಸುಧಾರಣೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು. ನಿರ್ಮಲಾ ಸೀತಾರಾಮನ್ ಅವರು ಮಂಡನೆ ಮಾಡುತ್ತಿರುವ ಐದನೇ ಬಜೆಟ್ ಇದಾಗಿದ್ದು, ಕೇಂದ್ರ ಎನ್ಡಿಎ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಆಗಿದೆ.
ಯುವ ಉದ್ಯಮಿಗಳನ್ನು ಉತ್ತೇಜಿಸಲು ಮತ್ತು ಕೃಷಿ ಸ್ಟಾರ್ಟಪ್ಗಳ ಉತ್ತೇಜನಕ್ಕಾಗಿ ‘ಅಗ್ರಿಕಲ್ಚರ್ ಏಕ್ಸಲರೇಟರ್ ಫಂಡ್ (ಕೃಷಿ ವೇಗವರ್ಧಕ ಫಂಡ್) ಸ್ಥಾಪಿಸುವುದಾಗಿಯೂ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಕೃಷಿ ಕ್ಷೇತ್ರದ ಸಾಲ ನೀಡಿಕೆಗೆ ಉತ್ತೇಜನ ನೀಡಲು ಮತ್ತು ಕೃಷಿ ಕ್ಷೇತ್ರದ ಉದ್ಯಮ ಚಟುವಟಿಕೆಗಳ ಪ್ರೋತ್ಸಾಹಕ್ಕೆ ಸರ್ಕಾರ ಕ್ರಮ ಕೂಗೊಳ್ಳುತ್ತಿದೆ ಎಂದೂ ಅವರು ಹೇಳಿದರು.
ಬಜೆಟ್ ಲೈವ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ