ಹತ್ತಿ ಬೆಳೆಗಾರರಿಗೆ ಡ್ರಿಪ್ ಇರಿಗೇಶನ್ ಸಿಸ್ಟಂ; ಬಜೆಟ್​ನಲ್ಲಿ 500 ಕೋಟಿ ರೂ ನೀಡಲು ಒತ್ತಾಯ

Cotton production in India: ಭಾರತದಲ್ಲಿ ಶೇ. 67ರಷ್ಟು ಹತ್ತಿಯನ್ನು ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ. ಇಲ್ಲಿ ಹನಿ ನೀರಾವರಿ ತಂತ್ರಜ್ಞಾನ ಅಳವಡಿಕೆ ಅವಶ್ಯಕವಿದೆ. ಹತ್ತಿ ಬೆಳೆಯುವ ರೈತರಿಗೆ ಡ್ರಿಪ್ ಇರಿಗೇಶನ್ ಅಳವಡಿಸಲು ಉತ್ತೇಜಿಸಲು ಬಜೆಟ್​ನಲ್ಲಿ ನೆರವು ನೀಡಬೇಕು ಎಂದು ಹತ್ತಿ ಸಂಸ್ಥೆ ಒತ್ತಾಯಿಸಿದೆ. ಅತಿವೃಷ್ಟಿ, ಅನಾವೃಷ್ಟಿ ಕಾರಣದಿಂದ ಭಾರತದಲ್ಲಿ ಈ ಬಾರಿ ಹತ್ತಿ ಫಸಲು ಕಡಿಮೆ ಆಗುವ ನಿರೀಕ್ಷೆ ಇದೆ.

ಹತ್ತಿ ಬೆಳೆಗಾರರಿಗೆ ಡ್ರಿಪ್ ಇರಿಗೇಶನ್ ಸಿಸ್ಟಂ; ಬಜೆಟ್​ನಲ್ಲಿ 500 ಕೋಟಿ ರೂ ನೀಡಲು ಒತ್ತಾಯ
ಹತ್ತಿ ಉತ್ಪಾದನೆ

Updated on: Jan 17, 2025 | 12:12 PM

ನವದೆಹಲಿ, ಜನವರಿ 17: ಹತ್ತಿ ಬೆಳೆಯುವ ರೈತರಿಗೆ ಡ್ರಿಪ್ ಇರಿಗೇಶನ್ ಅನ್ನು ಉತ್ತೇಜಿಸಲು ಬಜೆಟ್​ನಲ್ಲಿ 500 ರೂ ಒದಗಿಸಿ ಎಂದು ಭಾರತೀಯ ಹತ್ತಿ ಸಂಸ್ಥೆ ಸಿಎಐ ಮನವಿ ಮಾಡಿದೆ. ಭಾರತದಲ್ಲಿ ಶೇ. 67ರಷ್ಟು ಹತ್ತಿಯನ್ನು ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ. ಈ ಮಳೆಯಾಶ್ರಿತ ಪ್ರದೇಶಗಳಲ್ಲಿ ಹನಿ ನೀರಾವರಿ ವ್ಯವಸ್ಥೆ ಅಳವಡಿಸುವುದರಿಂದ ಹತ್ತಿ ಫಸಲು ಹೆಚ್ಚಲು ನೆರವಾಗುತ್ತದೆ ಎಂಬುದು ಈ ಸಂಸ್ಥೆಯ ವಾದ.

ಮಳೆಯಾಶ್ರೀತ ಪ್ರದೇಶಗಳಲ್ಲಿ ರೈತರು ನೀರಿಗಾಗಿ ಸಂಪೂರ್ಣವಾಗಿ ಮಳೆಯ ಮೇಲೆಯೇ ಅವಲಂಬಿತರಾಗಿರುತ್ತಾರೆ. ಹತ್ತಿ ಬೆಳವಣಿಗೆಯಲ್ಲಿ ಹೂ ಮತ್ತು ಹಣ್ಣು ಬಿಡುವುದು ಪ್ರಮುಖ ಹಂತವಾಗಿದ್ದು, ಈ ಸಂದರ್ಭದಲ್ಲಿ ನೀರಿನ ಅವಶ್ಯಕತೆ ಅತಿಹೆಚ್ಚು ಇರುತ್ತದೆ. ಹತ್ತಿ ಬೆಳೆಗೆ ಒಟ್ಟಾರೆ ಅಗತ್ಯ ಇರುವ ನೀರಿನಲ್ಲಿ ಶೇ. 80ರಷ್ಟು ಅಗತ್ಯಗಳು ಹೂ ಮತ್ತು ಹಣ್ಣು ಬಿಡುವ ಸಂದರ್ಭದಲ್ಲೇ ಇರುತ್ತವೆ ಎಂದು ಸಿಎಐನ ವಾರ್ಷಿಕ ಮಹಾಸಭೆಯಲ್ಲಿ ಅದರ ಅಧ್ಯಕ್ಷರಾದ ಅತುಲ್ ಗಣಾತ್ರ ಹೇಳಿದ್ದಾರೆ.

ಇದನ್ನೂ ಓದಿ: Income tax cut: ಕೇಂದ್ರ ಬಜೆಟ್ 2025: ಆದಾಯ ತೆರಿಗೆ ಪ್ರಮಾಣ ಇಳಿಕೆ ಸಾಧ್ಯತೆ

ನೀರಾವರಿ ಭೂಮಿಗಳಿಗೆ ಹೋಲಿಸಿದರೆ ಮಳೆಯಾಧರಿತ ಕೃಷಿ ಭೂಮಿಗಳಲ್ಲಿ ಹತ್ತಿ ಬೆಳೆಯ ಫಸಲು ಬಹಳ ಕಡಿಮೆ ಇರುತ್ತದೆ. ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು, ಗುಜರಾತ್ ರಾಜ್ಯಗಳಲ್ಲಿ ಮಳೆ ನೀರಿನ ಕೊರತೆಯಿಂದಾಗಿ ಹತ್ತಿ ಫಸಲು ಕಡಿಮೆ ಇದೆ ಎಂದು ಅತುಲ್ ಅವರು ವಿವರಿಸಿದ್ದಾರೆ.

ಮಳೆಯಾಶ್ರಿತ ಪ್ರದೇಶಗಳಲ್ಲಿನ ರೈತರು ಹನಿ ನೀರಾವತಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಉತ್ತೇಜಿಸಲು ಸರ್ಕಾರವು ಬಜೆಟ್​ನಲ್ಲಿ ನೆರವು ಒದಗಿಸಬೇಕು. ಡ್ರಿಪ್ ಇರಿಗೇಶನ್ ವಿಧಾನದಿಂದ ಶೇ. 50ರಷ್ಟು ನೀರನ್ನು ಉಳಿಸಲೂ ಸಾಧ್ಯವಾಗುತ್ತದೆ ಎಂದು ಸಿಎಐ ಅಧ್ಯಕ್ಷರು ತಿಳಿಸಿದ್ದಾರೆ.

‘ಭಾರತದಲ್ಲಿ ಹನಿ ನೀರಾವರಿ ವ್ಯವಸ್ಥೆಯನ್ನು ಸ್ಥಾಪಿಸಲು ಸಾಕಷ್ಟು ವೆಚ್ಚವಾಗುತ್ತದೆ. ಹೀಗಾಗಿ, ಬಜೆಟ್​ನಲ್ಲಿ ಕನಿಷ್ಠ 500 ಕೋಟಿ ರೂನಷ್ಟು ನೆರವನ್ನಾದರೂ ಒದಗಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಭಾರತದ ಆರ್ಥಿಕತೆ ಮುಂದಿನ ವರ್ಷದೊಳಗೆ 4ನೇ ಸ್ಥಾನಕ್ಕೇರಲಿದೆ: ಪಿಎಚ್​ಡಿಸಿಸಿಐ ನಿರೀಕ್ಷೆ

ಭಾರತದಲ್ಲಿ ಈ ಸೀಸನ್​ನಲ್ಲಿ ಹತ್ತಿ ಉತ್ಪಾದನೆ ಶೇ. 7.70ರಷ್ಟು ಕಡಿಮೆ ಆಗಬಹುದು ಎನ್ನುವ ಅಂದಾಜು ಇದೆ. ಕಳೆದ ವರ್ಷ 32.74 ಮಿಲಿಯನ್ ಬೇಲ್​ನಷ್ಟು ಹತ್ತಿ ಫಸಲು ಬಂದಿತ್ತು. ಈ ವರ್ಷದ ಸೀಸನ್​ನಲ್ಲಿ ಅದು 30.22 ಮಿಲಿಯನ್ ಬೇಲ್​ಗೆ ಇಳಿಕೆ ಆಗುವ ನಿರೀಕ್ಷೆ ಇದೆ. 2024-25ರಲ್ಲಿ ಭಾರತವು 2.5 ಮಿಲಿಯನ್ ಬೇಲ್​ನಷ್ಟು ಹತ್ತಿಯನ್ನು ಅಮದು ಮಾಡಿಕೊಳ್ಳಬೇಕಾಗಬಹುದು ಎಂದು ಸಿಎಐ ಅಂದಾಜು ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us