Cyber Fraud: ಆಗಂತುಕನಿಗೆ ಮೊಬೈಲ್ ರಿಮೋಟ್ ಕೊಟ್ಟು ನಿದ್ದೆಗೆ ಜಾರಿದ ಮಹಿಳೆ; ಕಣ್ಮರೆಯಾಯಿತು ಲಕ್ಷಗಟ್ಟಲೆ ಹಣ

Woman Lost Rs 1 Lakh For Cyber Crime: ಬ್ಯಾಂಕ್ ಕೆವೈಸಿ ಅಪ್​ಡೇಟ್ ಮಾಡಲು ನೆರವಾಗುತ್ತೇನೆ ಎಂದು ಹೇಳಿ ಮಹಿಳೆಯನ್ನು ನಂಬಿಸಿದ ವಂಚಕನೊಬ್ಬ 1 ಲಕ್ಷ ರೂ ಎಗರಿಸಿದ ಘಟನೆ ಬೆಳಕಿಗೆ ಬಂದಿದೆ. ಆಗಂತುಕನಿಗೆ ರಿಮೋಟ್ ಆಗಿ ಮೊಬೈಲ್ ಕಂಟ್ರೋಲ್ ಕೊಟ್ಟು ಹಣ ಕಳೆದುಕೊಂಡಿದ್ದಾರೆ ಮಹಿಳೆ.

Cyber Fraud: ಆಗಂತುಕನಿಗೆ ಮೊಬೈಲ್ ರಿಮೋಟ್ ಕೊಟ್ಟು ನಿದ್ದೆಗೆ ಜಾರಿದ ಮಹಿಳೆ; ಕಣ್ಮರೆಯಾಯಿತು ಲಕ್ಷಗಟ್ಟಲೆ ಹಣ
ಸೈಬರ್ ಕ್ರೈಮ್

Updated on: Jun 05, 2023 | 5:02 PM

ನವದೆಹಲಿ: ಕಾಲಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಅಪ್​ಡೇಟ್ ಆದಂತೆಲ್ಲಾ ಸೈಬರ್ ವಂಚಕರೂ (Cyber Fraudsters) ಅಪ್​ಡೇಟ್ ಆಗುತ್ತಲೇ ಇರುತ್ತಾರೆ. ಹೊಸ ಹೊಸ ರೀತಿಯ ಸೈಬರ್ ಕ್ರೈಮ್​ಗಳು ಬೆಳಕಿಗೆ ಬರುತ್ತಲೇ ಇವೆ. ಪೊಲೀಸ್, ಐಟಿ, ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ ಕರೆ ಮಾಡುವ ದುರುಳರು ಹೇಳಿದಂತೆ ಕೆಲ ಜನರು ಕೇಳಿ ಸುಲಭವಾಗಿ ಮೋಸ ಹೋಗುವುದಿದೆ. ಇಂಥದ್ದೊಂದು ಪ್ರಕರಣ ದೆಹಲಿಯಲ್ಲಿ ವರದಿಯಾಗಿದ್ದು, ವೃದ್ಧ ಮಹಿಳೆಯೊಬ್ಬರು 1 ಲಕ್ಷ ರೂ ಕಳೆದುಕೊಂಡಿದ್ದಾರೆ.

ಕೆವೈಸಿ ಅಪ್​ಡೇಟ್ ಮಾಡುವ ನೆವದಲ್ಲಿ ಮಹಿಳೆಗೆ ವಂಚನೆ

ಬ್ಯಾಂಕ್​ನ ಕೆವೈಸಿ ಅಪ್​ಡೇಟ್ ಆಗಬೇಕಿದೆ. ಈ ಲಿಂಕ್ ಕ್ಲಿಕ್ ಮಾಡದಿದ್ದರೆ ಅಕೌಂಟ್ ಬ್ಲಾಕ್ ಆಗಬಹುದು ಎಂದು ಹೆದರಿಸುವ ಮೆಸೇಜ್​ವೊಂದು ಮಹಿಳೆಗೆ ಬರುತ್ತದೆ. ಕಾಕತಾಳೀಯವೋ ಅಥವಾ ದುರುಳರ ಅರಿವಿತ್ತೋ, ಈ ಮಹಿಳೆ ಇತ್ತೀಚೆಗೆ ಕೆಲ ಚೆಕ್ ನೀಡಿದ್ದರು. ಈ ಕಾರಣಕ್ಕೆ ಬ್ಯಾಂಕ್​ನಿಂದಲೇ ಈ ಮೆಸೇಜ್ ಬಂದಿರಬಹುದು ಎಂದು ಭಾವಿಸಿ ಆ ಲಿಂಕ್ ಅನ್ನು ಕ್ಲಿಕ್ ಮಾಡುತ್ತಾರೆ.

ಇದನ್ನೂ ಓದಿArjun Deshpande: 110 ರೂ ಬೆಲೆಯ ಔಷಧ ಕೇವಲ 5ಕ್ಕೆ; 21 ವರ್ಷದ ಯುವಕನ ಕಂಪನಿ ಇಷ್ಟು ಅಗ್ಗದಲ್ಲಿ ಮಾರಲು ಹೇಗೆ ಸಾಧ್ಯ?

ಇದಾದ ಸ್ವಲ್ಪ ಮೊತ್ತಲ್ಲೇ ವ್ಯಕ್ತಿಯೊಬ್ಬ ಕರೆ ಮಾಡಿ ತಾನು ಬ್ಯಾಂಕ್ ಪ್ರತಿನಿಧಿಯಾಗಿದ್ದು ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಸಹಾಯ ಮಾಡುವುದಾಗಿ ಹೇಳುತ್ತಾನೆ. ಬಳಿಕ ಮಹಿಳೆಯ ಫೋನ್​ನಲ್ಲಿದ್ದ ಎನಿಡೆಸ್ಕ್ ಅಪ್ಲಿಕೇಶನ್ ಮೂಲಕ ಮೊಬೈಲ್ ಅನ್ನು ರಿಮೋಟ್ ಆಗಿ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ.

ಬಹಳ ನಯವಾಗಿ ಮಾತನಾಡುತ್ತಾ ಆ ವ್ಯಕ್ತಿಯು ಮಹಿಳೆಯ ವಿಶ್ವಾಸ ಸಂಪಾದಿಸಿದ್ದ. ಆ ಮಹಿಳೆಯ ಮೊಬೈಲ್​ಗೆ ಬಂದಿದ್ದ ಒಟಿಪಿಯನ್ನೂ ಕದ್ದಿದ್ದ. ಹೆಚ್ಚು ಸಮಯ ಈ ಕೃತ್ಯ ನಡೆಯುತ್ತಿದ್ದರಿಂದ ಮತ್ತು ಆ ವ್ಯಕ್ತಿ ಮೇಲೆ ನಂಬಿಕೆ ಇರಿಸಿದ್ದರಿಂದ ಮಹಿಳೆಯು ಮೊಬೈಲ್ ಅನ್ನು ಗಮನಿಸದೇ ಹಾಗೇ ಮಲಗುತ್ತಾರೆ. ಈ ಹೊತ್ತಿನಲ್ಲಿ ವಂಚಕನು ತನ್ನ ಕಾರ್ಯ ಸಾಧಿಸಿಕೊಳ್ಳುತ್ತಾನೆ. ಬೆಳಗ್ಗೆ ಎದ್ದ ಬಳಿಕ ನೋಡಿದಾಗ ತನ್ನ ಬ್ಯಾಂಕ್ ಖಾತೆಯಿಂದ 1 ಲಕ್ಷ ರೂ ಹಣ ಕಡಿತವಾಗಿರುವುದನ್ನು ಆಕೆ ಗಮನಿಸುತ್ತಾರೆ. ಸದ್ಯ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿPakistan: ಏಷ್ಯಾದಲ್ಲೇ ಅತಿಹೀನ ಹಣದುಬ್ಬರ; ಐಎಂಎಫ್​ನಿಂದ ಸಾಲ ಮನವಿ ತಿರಸ್ಕಾರ; ಪಾಕಿಸ್ತಾನಕ್ಕೆ ಬಿಡದ ಗ್ರಹಚಾರ

ಇಂಥ ವಂಚನೆ ಪ್ರಕರಣಗಳಲ್ಲಿ ನೀವೇನು ಮಾಡಬೇಕು?

ಬ್ಯಾಂಕ್ ಸಿಬ್ಬಂದಿ ಸಾಮಾನ್ಯವಾಗಿ ಗ್ರಾಹಕರಿಗೆ ಕರೆ ಮಾಡಿ ಲಾಗಿನ್ ವಿವರ ಕೇಳುವುದಿಲ್ಲ. ಹಾಗೆ ಕೇಳುತ್ತಿದ್ದಾರೆಂದರೆ ಅವರು ವಂಚಕರೇ ಆಗಿರುತ್ತಾರೆ. ಯಾರೇ ಕರೆ ಮಾಡಿ ಲಾಗಿನ್ ಐಡಿ, ಪಾಸ್​ವರ್ಡ್, ಪಿನ್ ನಂಬರ್, ಒಟಿಪಿ ಇತ್ಯಾದಿ ಮಾಹಿತಿ ಕೇಳಿದರೆ ಖಂಡಿತವಾಗಿ ಕೊಡಬೇಡಿ. ಅಷ್ಟೇ ಅಲ್ಲ ಪೊಲೀಸರಿಗೆ ದೂರು ಕೊಡುವುದಾಗಿ ಹೆದರಿಸಿ.

ಇನ್ನು, ಕೆವೈಸಿ ಅಪ್​ಡೇಟ್ ಮಾಡಲು ನೆರವಾಗುತ್ತೇನೆ ಎಂದು ಯಾರಾದರೂ ಹೇಳಿದರೆ ನಿರ್ಲಕ್ಷಿಸಿ. ನಿಮ್ಮ ಖಾತೆಯಿಂದ ನಿಮಗೆ ಅರಿವಿಲ್ಲದೇ ಹಣ ಕಡಿತ ಆಗಿರುವ ಮೆಸೇಜ್ ಬಂದಿದ್ದರೆ ಕೂಡಲೇ ಅದನ್ನು ಸಂಬಂಧಿತ ಬ್ಯಾಂಕ್​ನ ಗಮನಕ್ಕೆ ತನ್ನಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us