ಭಾರತೀಯ ಕಂಪನಿಗಳ ಷೇರುಗಳು ಲಂಡನ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ನೇರವಾಗಿ ಲಿಸ್ಟ್ ಆಗುವ ದಿನಗಳು ಸಮೀಪ

London Stock Exchange: ಬ್ರಿಟನ್ ಹಣಕಾಸು ಸಚಿವೆ ಜೆರೆಮಿ ಹಂಟ್ ಅವರನ್ನು ನಿರ್ಮಲಾ ಸೀತಾರಾಮನ್ ನವದೆಹಲಿಯಲ್ಲಿ ಭೇಟಿಯಾಗಿ ಮಾತನಾಡಿದ್ದಾರೆ. ಈ ಭೇಟಿ ಬಳಿಕ ಇಬ್ಬರೂ ಕೂಡ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಲಂಡನ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಭಾರತೀಯ ಕಂಪನಿಗಳ ಷೇರುಗಳನ್ನು ನೇರವಾಗಿ ಲಿಸ್ಟ್ ಮಾಡುವ ಸಾಧ್ಯತೆ ಕುರಿತು ವಿವರ ನೀಡಿದ್ದಾರೆ. ಗುಜರಾತ್​ನ ಗಿಫ್ಟ್ ಸಿಟಿಯಲ್ಲಿ ಐಎಫ್​ಎಸ್​ಸಿ ಕೇಂದ್ರ ಸ್ಥಾಪನೆಯಾದ ಬಳಿಕ ಲಿಸ್ಟಿಂಗ್ ಕುರಿತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

ಭಾರತೀಯ ಕಂಪನಿಗಳ ಷೇರುಗಳು ಲಂಡನ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ನೇರವಾಗಿ ಲಿಸ್ಟ್ ಆಗುವ ದಿನಗಳು ಸಮೀಪ
ನಿರ್ಮಲಾ ಸೀತಾರಾಮನ್

Updated on: Sep 12, 2023 | 3:01 PM

ನವದೆಹಲಿ, ಸೆಪ್ಟೆಂಬರ್ 12: ಲಂಡನ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ (London Stock Exchange) ಭಾರತೀಯ ಕಂಪನಿಗಳ ಷೇರುಗಳು ನೇರವಾಗಿ ಲಿಸ್ಟ್ ಆಗುವ ಸಾಧ್ಯತೆಯನ್ನು ಅವಲೋಕಿಸಲು ಸರ್ಕಾರ ಸಮ್ಮತಿಸಿದೆ. ಜಿ20 ಸಭೆ ಬಳಿಕ ನಿನ್ನೆ ಭಾರತ ಮತ್ತು ಬ್ರಿಟನ್ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಜೆರೆಮಿ ಹಂಟ್ ಅವರು ಈ ಸಂಗತಿಯನ್ನು ಘೋಷಿಸಿದ್ದಾರೆ. ಸೆ. 11ರಂದು ಭಾರತ ಯುಕೆ ಆರ್ಥಿಕ ಮತ್ತು ಹಣಕಾಸು ಸಂವಾದ ಕಾರ್ಯಕ್ರಮದ ಬಳಿಕ ಇಬ್ಬರೂ ಕೂಡ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ ಈ ವಿಚಾರವನ್ನು ತಿಳಿಸಿದ್ದಾರೆ.

ಗಿಫ್ಟ್ ಸಿಟಿಯಲ್ಲಿ ಐಐಎಫ್​ಸಿ ಸ್ಥಾಪನೆ ಬಳಿಕ ಸಾಧ್ಯತೆ

ಗುಜರಾತ್​ನ ಗಿಫ್ಟ್ ಸಿಟಿಯಲ್ಲಿ (GIFT City) ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರದ (ಐಎಫ್​ಎಸ್​ಸಿ) ಸ್ಥಾಪನೆ ಆದ ಬಳಿಕ ಲಂಡನ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಭಾರತೀಯ ಕಂಪನಿಗಳಿಗೆ ಷೇರು ಲಿಸ್ಟ್ ಮಾಡಲು ಅವಕಾಶ ಕಲ್ಪಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇದನ್ನೂ ಓದಿ: ಷೇರುಮಾರುಕಟ್ಟೆಯಲ್ಲಿ ಮಿಂಚಿನ ಸಂಚಾರ; ನಿಫ್ಟಿ ದಾಖಲೆ ಓಟ ಮುಂದುವರಿಕೆ; ಸೆನ್ಸೆಕ್ಸ್ ಕೂಡ ಹೆಚ್ಚಳ

ಐಐಎಫ್​ಸಿಯಲ್ಲಿ ನೊಂದಾಯಿತವಾಗಿರುವ ಷೇರು ವಿನಿಮಯ ಕೇಂದ್ರಗಳಲ್ಲಿ ಲಿಸ್ಟ್ ಆಗಲು ಕಂಪನಿಗಳಿಗೆ ಅನುಮತಿಸುವ ಯೋಜನೆಗಳನ್ನು ಸರ್ಕಾರ ಪ್ರಸ್ತಾಪಿಸಿತ್ತು. ಗುಜರಾತ್​ನ ಅಹ್ಮದಾಬಾದ್ ಬಳಿ ನಿರ್ಮಾಣವಾಗುತ್ತಿರುವ ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್ ಸಿಟಿಯಲ್ಲಿ (ಗಿಫ್ಟ್ ಸಿಟಿ) ಐಐಎಫ್​ಸಿ ಸ್ಥಾಪನೆಯಾಗುತ್ತಿದೆ. ಇದಾದ ಬಳಿಕ ನೊಂದಾಯಿತ ಸ್ಟಾಕ್ ಎಕ್ಸ್​ಚೇಂಜ್​ಗಳಲ್ಲಿ ಭಾರತೀಯ ಷೇರುಗಳನ್ನು ಲಿಸ್ಟ್ ಮಾಡಬಹುದು.

ಸದ್ಯಕ್ಕೆ ಭಾರತೀಯ ಕಂಪನಿಗಳು ವಿದೇಶಗಳ ಸ್ಟಾಕ್ ಎಕ್ಸ್​ಚೇಂಜ್​ಗಳಲ್ಲಿ ನೇರವಾಗಿ ಷೇರು ಲಿಸ್ಟ್ ಮಾಡಲು ಆಗುವುದಿಲ್ಲ. ಡೆಪಾಸಿಟರಿ ರೆಸಿಪ್ಟ್​ನಂತಹ ಸಾಧನಗಳ ಮೂಲಕ ವಿದೇಶಿ ಎಕ್ಸ್​ಚೇಂಜ್​ಗಳಲ್ಲಿ ಲಭ್ಯ ಇರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:01 pm, Tue, 12 September 23

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us