ಐಟಿಆರ್ ಸಲ್ಲಿಸಿ ತಿಂಗಳುಗಳಾದರೂ ರೀಫಂಡ್ ಬಂದಿಲ್ಲವಾ? ಇಲ್ಲಿ ಪರಿಶೀಲಿಸಿ…

Income Tax Returns Refund Status: ಈ ಬಾರಿ ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಸಿದ ಹೆಚ್ಚಿನವರಿಗೆ ರೀಫಂಡ್ ವಿಳಂಬವಾಗಬಹುದು. ರೀಫಂಡ್​ಗಳಿಗೆ ಮಾಡಲಾದ ಕ್ಲೇಮ್​ಗಳನ್ನು ಆದಾಯ ತೆರಿಗೆ ಇಲಾಖೆ ಪರಿಶೀಲನೆ ಮಾಡುತ್ತಿದೆ. ಹೀಗಾಗಿ, ವಿಳಂಬವಾಗುತ್ತಿದೆ. ಆದಾಯ ತೆರಿಗೆ ಇಲಾಖೆ ಡಿಸೆಂಬರ್​ನೊಳಗೆ ರೀಫಂಡ್ ಕೊಡಲಾಗುವುದು ಎಂದು ಹೇಳಿದೆ.

ಐಟಿಆರ್ ಸಲ್ಲಿಸಿ ತಿಂಗಳುಗಳಾದರೂ ರೀಫಂಡ್ ಬಂದಿಲ್ಲವಾ? ಇಲ್ಲಿ ಪರಿಶೀಲಿಸಿ...
ಇನ್ಕಮ್ ಟ್ಯಾಕ್ಸ್

Updated on: Nov 27, 2025 | 7:19 PM

2024-25ರ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (Income Tax Returns) ಅನ್ನು ಸಲ್ಲಿಸಿರುವ ಹೆಚ್ಚಿನವರಿಗೆ ರೀಫಂಡ್ ಸಿಕ್ಕಿದೆ. ಹಲವರಿಗೆ ಇನ್ನೂ ರೀಫಂಡ್​ಗಳು ಬಂದಿಲ್ಲ. ಈ ಬಾರಿ ರೀಫಂಡ್​ಗಳು ನಿರೀಕ್ಷೆಗಿಂತ ಹೆಚ್ಚು ವಿಳಂಬಗೊಳ್ಳುತ್ತಿವೆ. ರೀಫಂಡ್ ಕ್ಲೇಮ್ ಮಾಡಿದ ಸಲ್ಲಿಸಿರುವ ಅರ್ಜಿಗಳನ್ನು ಆದಾಯ ತೆರಿಗೆ ಇಲಾಖೆ ಕೂಲಂಕಷವಾಗಿ ಪರಿಶೀಲಿಸುತ್ತಿದೆ. ಹೀಗಾಗಿ, ರೀಫಂಡ್​ಗಳು ಬಿಡುಗಡೆ ಆಗುವುದು ವಿಳಂಬವಾಗುತ್ತಿದೆ. ಸಿಬಿಡಿಟಿ ಪ್ರಕಾರ 2025ರೊಳಗೆ ಎಲ್ಲಾ ನ್ಯಾಯಸಮ್ಮತವಾದ ರೀಫಂಡ್​ಗಳನ್ನು ತೆರಿಗೆ ಪಾವತಿದಾರರಿಗೆ ಮರಳಿಸಲಾಗುವುದು ಎಂದಿದೆ.

ಹಿಂದಿನ ವರ್ಷಗಳಲ್ಲಿ ಬಹಳ ತೆರಿಗೆ ಪಾವತಿದಾರರು ನೂರಕ್ಕೆ ನೂರು ಟ್ಯಾಕ್ಸ್ ರೀಫಂಡ್ ಪಡೆದಿದ್ದಾರೆ. ಹಲವರು ಆದಾಯ ಮರೆಮಾಚುವುದು, ಡಿಡಕ್ಷನ್​ಗಳನ್ನು ಸುಮ್ಮನೆ ಕ್ಲೇಮ್ ಮಾಡಿರುವುದು ಇತ್ಯಾದಿ ತಂತ್ರದ ಮೂಲಕ ರೀಫಂಡ್ ಹೆಚ್ಚಿಸಿಕೊಳ್ಳುತ್ತಿದ್ದುದು ಇಲಾಖೆಯ ಗಮನಕ್ಕೆ ಬಂದಿದೆ. ಹೀಗಾಗಿ, ಈ ವರ್ಷ ಎಚ್ಚರಿಕೆಯಿಂದ ಕ್ಲೇಮ್​ಗಳನ್ನು ಪರಿಶೀಲಿಸುತ್ತಿದೆ.

ಇದನ್ನೂ ಓದಿ: ಇದೇ ಮೊದಲ ಬಾರಿಗೆ 86,000 ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್; ಷೇರು ಮಾರುಕಟ್ಟೆಯ ಪಾಸಿಟಿವ್ ಓಟಕ್ಕೆ ಕಾರಣಗಳಿವು

ರೀಫಂಡ್ ಬಂದಿದೆಯಾ ಇಲ್ಲವಾ ಪರಿಶೀಲಿಸಲು ಹೀಗೆ ಮಾಡಿ…

ನೀವು ಈಗಾಗಲೇ ಐಟಿಆರ್ ಸಲ್ಲಿಸಿದ್ದು ಇನ್ನೂ ರೀಫಂಡ್ ಬರದೇ ಇದ್ದಾಗ ಆನ್​ಲೈನ್​ನಲ್ಲಿ ಪರಿಶೀಲನೆಗೆ ಅವಕಾಶ ಇದೆ. ಆದಾಯ ತೆರಿಗೆ ಇಲಾಖೆಯ ಇಫೈಲಿಂಗ್ ಪೋರ್ಟಲ್ ಮತ್ತು ಎನ್​ಎಸ್​ಡಿಎಲ್ ಟಿಐಎನ್ ವೆಬ್​ಸೈಟ್​ಗಳ ಮೂಲಕ ಪರಿಶೀಲಿಸಬಹುದು.

ಪೋರ್ಟಲ್​ಗೆ ಹೋಗಿ ಪ್ಯಾನ್ ನಂಬರ್ ಮತ್ತು ಪಾಸ್ವರ್ಡ್ ಹಾಕಿ ಲಾಗಿನ್ ಆದರೆ, ನೀವು ವಿವಿಧ ವರ್ಷಗಳಲ್ಲಿ ಫೈಲ್ ಮಾಡಿದ ರಿಟರ್ನ್​ಗಳನ್ನು ಕಾಣಬಹುದು. ಬೇಕಾದ ಅಸೆಸ್ಮೆಂಟ್ ವರ್ಷಕ್ಕೆ ಹೋಗಿ ನೋಡಿದರೆ ರೀಫಂಡ್ ಸ್ಟೇಟಸ್ ತಿಳಿಯಬಹುದು. ರೀಫಂಡ್ ಹಣ ಬಿಡುಗಡೆಯಾಗಿದೆಯಾ, ಪ್ರೋಸಸ್ ಹಂತದಲ್ಲಿದೆಯಾ ಅಥವಾ ಪರಿಶೀಲನೆಯಾಗುತ್ತಿದೆಯಾ ಎಂಬುದು ಗೊತ್ತಾಗುತ್ತದೆ.

ಇದನ್ನೂ ಓದಿ: ಭಾರತದ ಜಿಡಿಪಿದರ ಈ ವರ್ಷದ ಮೊದಲಾರ್ಧದಲ್ಲಿ ಶೇ. 7.6; ಐಸಿಐಸಿಐ ವರದಿಯಲ್ಲಿ ನಿರೀಕ್ಷೆ

ರೀಫಂಡ್ ಪ್ರೋಸಸ್ ಆಗಿದ್ದರೆ, ಹಣವು ನಿಮ್ಮ ಬ್ಯಾಂಕ್ ಅಕೌಂಟ್​ನಲ್ಲಿ ಕ್ರೆಡಿಟ್ ಆಗುತ್ತದೆ. ನಿಮ್ಮ ಬ್ಯಾಂಕ್ ಅಕೌಂಟ್ ಪ್ರೀ ವ್ಯಾಲಿಡೇಟ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ಹಣ ಕ್ರೆಡಿಟ್ ಆಗದೇ ಹೋಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us