ಒಂದು ದೇಶ ಸೂಪರ್​ಪವರ್ ಆಗಲು ಹೇಗಿರಬೇಕು? ಭಾರತದ ಬಗ್ಗೆ ಪುಟಿನ್ ನಿರೀಕ್ಷೆಗಳೇನು?

Vladimir Putin praises India: ಸೂಪರ್​ಪವರ್ ದೇಶಗಳವಾಗಿ ಭಾರತವನ್ನು ಪರಿಗಣಿಸಬೇಕು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ. ಬೃಹತ್ ಜನಸಂಖ್ಯೆ, ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ, ಪ್ರಾಚೀನ ಸಂಸ್ಕೃತಿ ಇವುಗಳಿಂದ ಭಾರತ ಸೂಪರ್ ಎನಿಸುತ್ತದೆ ಎಂದಿದ್ದಾರೆ. ಭಾರತ ಮತ್ತು ರಷ್ಯಾ ಸಂಬಂಧದ ತಳಹದಿ ನಂಬಿಕೆಯ ಮೇಲಿದೆ ಎನ್ನುವ ಸಂಗತಿಯನ್ನೂ ಅವರು ಹೇಳಿದ್ದಾರೆ.

ಒಂದು ದೇಶ ಸೂಪರ್​ಪವರ್ ಆಗಲು ಹೇಗಿರಬೇಕು? ಭಾರತದ ಬಗ್ಗೆ ಪುಟಿನ್ ನಿರೀಕ್ಷೆಗಳೇನು?
ವ್ಲಾದಿಮಿರ್ ಪುಟಿನ್

Updated on: Nov 10, 2024 | 6:40 PM

ಮಾಸ್ಕೋ, ನವೆಂಬರ್ 10: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತದ ಬಗ್ಗೆ ಯಾವತ್ತಿಗೂ ಸಕಾರಾತ್ಮಕವಾಗಿ ಮಾತನಾಡುವ ವ್ಯಕ್ತಿ. ಭಾರತ ಮತ್ತು ರಷ್ಯಾ ಸಂಬಂಧ ಗಟ್ಟಿಗೊಳಿಸುವುದು ಅವರ ಆದ್ಯತೆಗಳಲ್ಲಿ ಒಂದು. ಭಾರತ ಸೂಪರ್​ಪವರ್ ದೇಶಗಳ ಪಟ್ಟಿಗೆ ಸೇರಬೇಕು ಎಂದು ಇತ್ತೀಚೆಗೆ ಅವರು ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ. ರಷ್ಯಾದ ಸೋಚಿ ನಗರದಲ್ಲಿ ನಡೆದ ಚರ್ಚಾ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ವ್ಲಾದಿಮಿರ್ ಪುಟಿನ್, ಭಾರತ ಯಾಕೆ ಸೂಪರ್​ಪವರ್ ದೇಶವಾಗಿ ಪರಿಗಣಿತವಾಗಬೇಕು ಎಂಬುದಕ್ಕೆ ಕಾರಣಗಳನ್ನೂ ನೀಡಿದ್ದಾರೆ.

‘ಭಾರತ ನೂರೈವತ್ತು ಕೋಟಿ ಜನಸಂಖ್ಯೆ ಹೊಂದಿದೆ. ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಇದೆ. ಇನ್ನೂ ಹೆಚ್ಚು ಬೆಳವಣಿಗೆ ಕಾಣುವ ಒಳ್ಳೆಯ ಲಕ್ಷಣಗಳನ್ನು ಹೊಂದಿದೆ. ಆ ದೇಶಕ್ಕೆ ಪ್ರಾಚೀನ ಸಂಸ್ಕೃತಿ ಇದೆ. ಹೀಗಾಗಿ, ಸೂಪರ್​ಪವರ್​ಗಳ ಪಟ್ಟಿಗೆ ನಿಸ್ಸಂದೇಹವಾಗಿ ಭಾರತವೂ ಸೇರ್ಪಡೆಯಾಗಬೇಕು’ ಎಂದು ರಷ್ಯಾ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ.

ಭಾರತ ರಷ್ಯಾ ಸಂಬಂಧಕ್ಕೆ ನಂಬುಗೆಯ ತಳಹದಿ

ಭಾರತ ಮತ್ತು ರಷ್ಯಾ ಸಂಬಂಧಕ್ಕೆ ರಕ್ಷಣಾ ಮತ್ತು ಭದ್ರತಾ ಸಹಕಾರವು ಪ್ರಮುಖ ತಳಹದಿ ಒದಗಿಸಿದೆ. ರಷ್ಯಾದ ಹಲವು ರೀತಿಯ ಮಿಲಿಟರಿ ಉಪಕರಣಗಳು ಭಾರತೀಯ ಸೇನೆಯಲ್ಲಿ ಬಳಕೆ ಆಗುತ್ತಿವೆ. ಈ ಸಂಬಂಧದಲ್ಲಿ ವಿಶ್ವಾಸ ಇದೆ. ನಾವು ಭಾರತಕ್ಕೆ ಶಸ್ತ್ರಾಸ್ತ್ರ ಮಾತ್ರ ಮಾರುತ್ತಿಲ್ಲ, ಅವುಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಹೇಳಿದ ಪುಟಿನ್, ಭಾರತ ಮತ್ತು ರಷ್ಯಾ ಜಂಟಿ ಯೋಜನೆಗೆ ಬ್ರಹ್ಮೋಸ್ ಕ್ಷಿಪಣಿ ಅಭಿವೃದ್ಧಿಯನ್ನು ನಿದರ್ಶನವಾಗಿ ನೀಡಿದ್ದಾರೆ.

ಇದನ್ನೂ ಓದಿ: ಒಳ್ಳೆಯ ಲಾಭದಲ್ಲಿದ್ದರೂ ಲೇ ಆಫ್ ಮಾಡ್ತಾರೆ… ಇದು ಅಪ್ಪಟ ದುರಾಸೆ… ಫ್ರೆಷ್​ವರ್ಕ್ಸ್​ಗೆ ತಿವಿದ ಜೋಹೋ ಸಿಇಒ ಶ್ರೀಧರ್ ವೆಂಬು

ಭಾರತ ಚೀನಾ ಸಂಬಂಧ ಸುಧಾರಿಸುವ ವಿಶ್ವಾಸ

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇದೇ ವೇಳೆ ಭಾರತ ಮತ್ತು ಚೀನಾ ಮಧ್ಯೆ ಇರುವ ಬಿಗುವಿನ ವಾತಾರಣ ಶಮನವಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಬುದ್ಧಿವಂತ ವ್ಯಕ್ತಿಗಳು ತಮ್ಮ ದೇಶಗಳ ಭವಿಷ್ಯಕ್ಕೆ ಆದ್ಯತೆ ಇಟ್ಟುಕೊಂಡು ಹೊಂದಾಣಿಕೆಗೆ ಪ್ರಯತ್ನಿಸುತ್ತಾರೆ. ಈ ಧೋರಣೆ ಹೀಗೆ ಮುಂದುವರಿದರೆ ಹೊಂದಾಣಿಕೆ ಕಂಡುಕೊಳ್ಳುವುದು ಸಾಧ್ಯವಾಗುತ್ತದೆ,’ ಎಂದು ಪುಟಿನ್ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:40 pm, Sun, 10 November 24

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us