Unclaimed Deposits: ಬ್ಯಾಂಕುಗಳಲ್ಲಿ ಕ್ಲೈಮ್ ಆಗದ ಸಾವಿರಾರು ಕೋಟಿ ರೂ ಏನಾಗುತ್ತೆ? ಆ ಹಣ ಕ್ಲೈಮ್ ಮಾಡುವುದು ಹೇಗೆ? ಇಲ್ಲಿದೆ ವಿವರ

How To Get Unclaimed Deposit Amount: 10 ವರ್ಷಕ್ಕಿಂತ ಹೆಚ್ಚು ಕಾಲ ಬ್ಯಾಂಕ್ ಖಾತೆ ನಿರ್ವಹಣೆ ಆಗದೇ ನಿಷ್ಕ್ರಿಯವಾಗಿದ್ದರೆ, ಹಾಗು ನಿಶ್ಚಿತ ಠೇವಣಿಗಳ ಕಾಲಾವಧಿ ಮುಗಿದು 10 ವರ್ಷವಾದರೂ ಕ್ಲೈಮ್ ಆಗದೇ ಉಳಿದಿದ್ದರೆ ಅದರಲ್ಲಿರುವ ಠೇವಣಿಯನ್ನು ಅನ್​ಕ್ಲೈಮ್ಡ್ ಡೆಪಾಸಿಟ್ ಎಂದು ಪರಿಗಣಿಸಲಾಗುತ್ತದೆ.

Unclaimed Deposits: ಬ್ಯಾಂಕುಗಳಲ್ಲಿ ಕ್ಲೈಮ್ ಆಗದ ಸಾವಿರಾರು ಕೋಟಿ ರೂ ಏನಾಗುತ್ತೆ? ಆ ಹಣ ಕ್ಲೈಮ್ ಮಾಡುವುದು ಹೇಗೆ? ಇಲ್ಲಿದೆ ವಿವರ
ಹಣ

Updated on: May 22, 2023 | 1:10 PM

ನವದೆಹಲಿ: ವಿವಿಧ ಕಾರಣಗಳಿಗೆ ಬ್ಯಾಂಕುಗಳಲ್ಲಿ ಇಡಲಾಗುವ ಕೆಲ ಠೇವಣಿಗಳು ಕ್ಲೈಮ್ ಆಗದೇ ಉಳಿದುಬಿಡುತ್ತವೆ. ಇಂಥ ಹಣದ ಮೊತ್ತ ಆರ್​ಬಿಐ ಲೆಕ್ಕಾಚಾರ ಪ್ರಕಾರ ಬರೋಬ್ಬರಿ 48,262 ಕೋಟಿ ರೂನಷ್ಟು ಇದೆ. ಖಾತೆದಾರ ಅಸುನೀಗಿರುವುದು ಇತ್ಯಾದಿ ಕಾರಣಗಳಿಂದ ಇವು ಕ್ಲೈಮ್ ಆಗದೆ ಉಳಿದಿವೆ. ಈಗ ಈ ಅನ್​ಕ್ಲೈಮ್ಡ್ ಹಣವನ್ನು ಖಾತೆದಾರರಿಗೆ (Account Holders) ಅಥವಾ ಅವರ ವಾರಸುದಾರರಿಗೆ (Nominees or Heirs) ಮರಳಿಸಲು ಆರ್​ಬಿಐ ಯೋಜಿಸಿದ್ದು, ಅದರಂತೆ ‘100 ದಿನ 100 ಪಾವತಿ’ (100 Days 100 Pays) ಎಂಬ ಅಭಿಯಾನ ಹಮ್ಮಿಕೊಂಡಿದೆ. ಇದರಂತೆ ಪ್ರತಿಯೊಂದು ಬ್ಯಾಂಕು ಪ್ರತಿಯೊಂದು ಜಿಲ್ಲೆಯಲ್ಲೂ ಕ್ಲೈಮ್ ಆಗದೇ ಉಳಿದಿರುವ ಅತಿದೊಡ್ಡ 100 ಠೇವಣಿಗಳನ್ನು ಗುರುತಿಸಿ ಅದನ್ನು ಇತ್ಯರ್ಥಗೊಳಿಸುವುದು ಈ ಅಭಿಯಾನದ ಉದ್ದೇಶ. 100 ದಿನದೊಳಗೆ ಇದು ಆಗಬೇಕೆಂದಿದ್ದು ಅಭಿಯಾನ ಜೂನ್ 1ರಂದು ಆರಂಭವಾಗುತ್ತದೆ.

ಕ್ಲೈಮ್ ಆಗದ ಠೇವಣಿಗಳೆಂದರೇನು?

ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆ 10 ವರ್ಷಕ್ಕಿಂತ ಹೆಚ್ಚು ಕಾಲ ನಿರ್ವಹಣೆ ಆಗದೇ ನಿಷ್ಕ್ರಿಯವಾಗಿದ್ದರೆ ಅದರಲ್ಲಿರುವ ಠೇವಣಿಯನ್ನು ಅನ್​ಕ್ಲೈಮ್ಡ್ ಡೆಪಾಸಿಟ್ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ, ನಿಶ್ಚಿತ ಠೇವಣಿಗಳು ಕಾಲಾವಧಿ ಮುಗಿದು 10 ವರ್ಷವಾದರೂ ಕ್ಲೈಮ್ ಆಗದೇ ಉಳಿದಿದ್ದರೆ ಅದೂ ಕೂಡ ಅನ್​ಕ್ಲೈಮ್ಡ್ ಡೆಪಾಸಿಟ್ ಎನಿಸುತ್ತದೆ. ಈ ಹಣ ಬ್ಯಾಂಕ್​ನಲ್ಲೇ ಉಳಿದುಹೋಗುತ್ತವೆ. ಈಗ ಇವುಗಳನ್ನು ಕಟ್ಟುನಿಟ್ಟಾಗಿ ವಿಲೇವಾರಿ ಮಾಡಲು ರಿಸರ್ವ್ ಬ್ಯಾಂಕ್ ಮುಂದಾಗಿದೆ.

ಇದನ್ನೂ ಓದಿRBI: 2,000 ರೂ ನೋಟು ವಿನಿಮಯ: ಬ್ಯಾಂಕುಗಳಿಗೆ ಆರ್​ಬಿಐ ಮಾರ್ಗಸೂಚಿ ಬಿಡುಗಡೆ; ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಿದು

ಖಾತೆದಾರರ ಬದುಕಿದ್ದರೆ ಅನ್​ಕ್ಲೈಮ್ಡ್ ಹಣವನ್ನು ಹೇಗೆ ಪಡೆಯುವುದು?

ಕೆಲವೊಮ್ಮೆ ಕಾರಣಾಂತರಗಳಿಂದ ಖಾತೆದಾರರ ತನ್ನ ಎಸ್​ಬಿ ಖಾತೆಯನ್ನು ನಿರ್ವಹಿಸದೇ ಹಾಗೇ ಬಿಟ್ಟುಬಿಟ್ಟಿರುವುದುಂಟು. ಬಹುಖಾತೆಗಳಿದ್ದಾಗ ಇಂಥದ್ದು ಆಗುವ ಸಾಧ್ಯತೆ ಉಂಟು. ಈ ರೀತಿ 10 ವರ್ಷ ನಿಷ್ಕ್ರಿಯವಾಗಿರುವ ಖಾತೆದಾರರು ತಮ್ಮ ಠೇವಣಿ ಹಣವನ್ನು ವಾಪಸ್ ಪಡೆಯುವುದು ಸುಲಭ. ಅವರು ತಮ್ಮ ಖಾತೆ ಇರುವ ಬ್ಯಾಂಕಿನ ಶಾಖೆಗೆ ಹೋಗಿ ಕ್ಲೈಮ್ ಫಾರ್ಮ್ ಭರ್ತಿ ಮಾಡಿ ಸಲ್ಲಿಸಬೇಕು. ಜೊತೆಗೆ, ಕೆವೈಸಿ ದಾಖಲೆಗಳಾದ ಐಡಿ, ವಿಳಾಸ ಪ್ರೂಫ್​ಗಳನ್ನು ಒದಗಿಸಬೇಕು. ಪಾಸ್​ಬುಕ್, ಎಫ್​ಡಿ ರಸೀದಿ, ಇತ್ತೀಚಿನ ಫೋಟೋ ಇತ್ಯಾದಿಯನ್ನೂ ಒದಗಿಸಬೇಕಾಗುತ್ತದೆ. ಇವು ಸಮರ್ಪಕವಾಗಿದ್ದರೆ ಬ್ಯಾಂಕುಗಳು ನಿಮ್ಮ ಹಣವನ್ನು ಮರಳಿಸುತ್ತವೆ.

ಇದನ್ನೂ ಓದಿTravel Scams: ಆನ್​ಲೈನ್​ನಲ್ಲಿ ಟಿಕೆಟ್, ಹೋಟೆಲ್ ಬುಕ್ ಮಾಡುತ್ತೀರಾ? ಸ್ಕ್ಯಾಮ್​ಗಳಿಗೆ ಬಲಿಯಾಗದಿರಿ ಜೋಕೆ; ನೀವು ಎಚ್ಚರ ವಹಿಸಬೇಕಾದ ಸಂಗತಿಗಳನ್ನು ತಿಳಿದಿರಿ

ಕ್ಲೈಮ್ ಆಗದ ಹಣವನ್ನು ಖಾತೆದಾರರ ವಾರಸುದಾರರು ಪಡೆಯುವುದು ಹೇಗೆ?

ಒಂದು ವೇಳೆ ಖಾತೆದಾರರು ಮೃತಪಟ್ಟ ಕಾರಣಕ್ಕೆ ಠೇವಣಿ ಹಣ ಕ್ಲೈಮ್ ಆಗದೇ ಉಳಿದಿದ್ದರೆ, ಅದನ್ನು ಪಡೆಯುವ ಹಕ್ಕು ನಾಮಿನಿ ಅಥವಾ ವಾರಸುದಾರರಿಗೆ ಇರುತ್ತದೆ. ಈ ವಾರಸುದಾರರು ಬ್ಯಾಂಕಿನ ಶಾಖೆಗೆ ಹೋಗಿ ಅಲ್ಲಿ ಐಡಿ ಪ್ರೂಫ್, ಖಾತೆದಾರರ ಡೆತ್ ಸರ್ಟಿಫಿಕೇಟ್, ಎಫ್​ಡಿ ರಸೀದಿ, ಪಾಸ್​ಬುಕ್ ಇತ್ಯಾದಿ ದಾಖಲೆಗಳನ್ನು ಒದಗಿಸಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us