ಲಿಂಕ್ ಆಗದ ಪ್ಯಾನ್-ಆಧಾರ್; ಇಂಥ ತೆರಿಗೆ ಪಾವತಿದಾರರಿಗೆ ಹೆಚ್ಚುವರಿ ಟಿಡಿಎಸ್ ಅನ್ವಯ ಆಗದು; ಹೊಸ ನಿಯಮ ಗಮನಿಸಿ…

Non linking of PAN and Aadhaar: ಆಧಾರ್ ಜೊತೆ ಲಿಂಕ್ ಆಗದ ಪ್ಯಾನ್ ಅನ್ನು ಬಳಸಿದರೆ ಶೇ. 20ರಷ್ಟು ತೆರಿಗೆಯ ಹೊರೆ ಬೀಳುತ್ತದೆ. ಡಿಡಕ್ಟಿಯು ಮೇ 31ರೊಳಗೆ ಆಧಾರ್ ಪ್ಯಾನ್ ಲಿಂಕ್ ಮಾಡದೇ ಮೃತಪಟ್ಟರೆ ಡಿಡಕ್ಟರ್​ಗೆ ಆ ಹೆಚ್ಚುವರಿ ತೆರಿಗೆ ಬಾಧ್ಯತೆ ಇರುವುದಿಲ್ಲ ಎಂದು ಹೊಸ ನಿಯಮದಲ್ಲಿ ತಿಳಿಸಲಾಗಿದೆ. ಇಲ್ಲಿ ತೆರಿಗೆ ಕಡಿತಗೊಳಿಸಿ ಹಣ ಪಾವತಿಸುವ ವ್ಯಕ್ತಿ ಅಥವಾ ಸಂಸ್ಥೆ ಡಿಡಕ್ಟರ್ ಆಗಿರುತ್ತಾರೆ. ಹಣ ಸ್ವೀಕರಿಸುವ ವ್ಯಕ್ತಿ ಅಥವಾ ಸಂಸ್ಥೆ ಡಿಡಕ್ಟೀ ಎನಿಸುತ್ತಾರೆ.

ಲಿಂಕ್ ಆಗದ ಪ್ಯಾನ್-ಆಧಾರ್; ಇಂಥ ತೆರಿಗೆ ಪಾವತಿದಾರರಿಗೆ ಹೆಚ್ಚುವರಿ ಟಿಡಿಎಸ್ ಅನ್ವಯ ಆಗದು; ಹೊಸ ನಿಯಮ ಗಮನಿಸಿ...
ಆಧಾರ್ ಪ್ಯಾನ್ ಲಿಂಕ್

Updated on: Aug 07, 2024 | 7:24 PM

ಬೆಂಗಳೂರು, ಆಗಸ್ಟ್ 7: ಆಧಾರ್ ನಂಬರ್ ಜೊತೆ ಪ್ಯಾನ್ ಅನ್ನು ಲಿಂಕ್ ಮಾಡದೇ ಹೋದರೆ ಶೇ. 20ರಷ್ಟು ಟಿಡಿಎಸ್ ಪಾವತಿಸಬೇಕಾಗುತ್ತದೆ. ಅಂದರೆ ತೆರಿಗೆ ಹೊರೆ ಬಹುತೇಕ ದುಪ್ಪಟ್ಟಾಗುತ್ತದೆ. ಆದರೆ, ಟಿಡಿಎಸ್ ಕಡಿತಗೊಳಿಸಲಾದ ಹಣವನ್ನು ಸ್ವೀಕರಿಸುವ ವ್ಯಕ್ತಿಗಳು (ಡಿಡಕ್ಟೀ ಅಥವಾ ಕಲೆಕ್ಟೀ ಎನ್ನುತ್ತಾರೆ) ಮೃತಪಟ್ಟಿದ್ದು, ಅವರ ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿಲ್ಲದೇ ಹೋಗಿದ್ದರೆ ಆಗ ಟ್ಯಾಕ್ಸ್ ಕಡಿತಗೊಳಿಸಿ ಹಣ ಪಾವತಿಸಿದ ವ್ಯಕ್ತಿಗಳಿಗೆ (ಡಿಡಕ್ಟರ್ ಅಥವಾ ಕಲೆಕ್ಟರ್) ಟ್ಯಾಕ್ಸ್ ಡಿಮ್ಯಾಂಡ್ ಬರುವ ಅವಕಾಶ ಇದೆ. ಇಂಥ ಹಲವು ಪ್ರಕರಣಗಳು ತಲೆದೋರಿರುವ ಹಿನ್ನೆಲೆಯಲ್ಲಿ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಸುತ್ತೋಲೆ ಹೊರಡಿಸಿ, ಈ ವಿಚಾರದಲ್ಲಿ ಸ್ಪಷ್ಟನೆ ನೀಡಿದೆ.

ಮೊನ್ನೆ (ಆ. 5) ಹೊರಡಿಸಿದ ಈ ಸುತ್ತೋಲೆ ಪ್ರಕಾರ, ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡದ ಡಿಡಕ್ಟಿ ವ್ಯಕ್ತಿ ಮೇ 31ರೊಳಗೆ ಮೃತಪಟ್ಟಿದ್ದರೆ ಆಗ ಡಿಡಕ್ಟರ್ ಅಥವಾ ತೆರಿಗೆ ಕಡಿತಗೊಳಿಸಿದ ವ್ಯಕ್ತಿ ಹೆಚ್ಚಿನ ಟ್ಯಾಕ್ಸ್ ಕಟ್ಟಬೇಕಾಗುವುದಿಲ್ಲ.

ಆಧಾರ್​ಗೆ ಲಿಂಕ್ ಆಗದ ಪ್ಯಾನ್ ಸಂಖ್ಯೆ ಇನಾಪರೇಟಿವ್ ಆಗುತ್ತದೆ. ನೀವು ಹಣಕಾಸು ವಹಿವಾಟಿನಲ್ಲಿ ಈ ಪ್ಯಾನ್ ಅನ್ನು ನಮೂದಿಸಿದರೂ ಅದು ಚಾಲನೆಯಲ್ಲಿ ಇರುವುದಿಲ್ಲ. ಆದಾಯ ತೆರಿಗೆ ನಿಯಮ ಪ್ರಕಾರ ಪ್ಯಾನ್ ಇಲ್ಲದ ನಿರ್ದಿಷ್ಟ ಮಟ್ಟದ ಹಣ ವ್ಯವಹಾರದಲ್ಲಿ ಶೇ. 20ರಷ್ಟು ಟಿಡಿಎಸ್ ತೆರಬೇಕಾಗುತ್ತದೆ.

ಇದನ್ನೂ ಓದಿ: ಇನ್ಕಮ್ ಟ್ಯಾಕ್ಸ್ ನೋಟೀಸ್ ಬಂದಿದೆಯಾ? ಭಯ ಬೀಳದೆ ಹೀಗೆ ಮಾಡಿ…

ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಲು 2023ರ ಜೂನ್ 30ಕ್ಕೆ ಡೆಡ್​ಲೈನ್ ಇತ್ತು. ಆಗಲೂ ಲಿಂಕ್ ಮಾಡದವರು, 2024ರ ಮಾರ್ಚ್ 31ರವರೆಗೂ ಮಾಡಿರುವ ವಹಿವಾಟುಗಳಿಗೆ ಹೆಚ್ಚುವರಿ ತೆರಿಗೆ ಬೀಳುವುದನ್ನು ತಪ್ಪಿಸಲು ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವ ಕಾಲಾವಕಾಶವನ್ನು ಮೇ 31ರವರೆಗೂ ನೀಡಲಾಗಿತ್ತು. ಈ ದಿನದೊಳಗೆ ತೆರಿಗೆ ಕಡಿತ ಸ್ವೀಕರಿಸಿದ ವ್ಯಕ್ತಿ ಮೃತಪಟ್ಟಿದ್ದರೆ ಅದರ ಹೊಣೆಯನ್ನು ಡಿಡಕ್ಟರ್​ಗೆ ಹಾಕಲಾಗುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us