PM Kisan 16th Installment: ಇಂದು ಬಿಡುಗಡೆ ಆಗಲಿದೆ ಪಿಎಂ ಕಿಸಾನ್ 16ನೇ ಕಂತಿನ ಹಣ

Pradhan Mantri Kisan Samman Nidhi Yojana: 2019ರಲ್ಲಿ ಆರಂಭವಾದ ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ 16ನೇ ಕಂತಿನ ಹಣ ಇಂದು ಬಿಡುಗಡೆ ಆಗುತ್ತಿದೆ. ಈ ಯೋಜನೆಯಲ್ಲಿ ವರ್ಷಕ್ಕೆ ಮೂರು ಕಂತುಗಳಲ್ಲಿ ಸರ್ಕಾರ 6,000 ರೂಗಳನ್ನು ರೈತರಿಗೆ ಧನಸಹಾಯವಾಗಿ ಒದಗಿಸುತ್ತದೆ. ಪಿಎಂ ಕಿಸಾನ್ ಯೋಜನೆಯ ಅಧಿಕೃತ ಪೋರ್ಟಲ್​ಗೆ ಹೋಗಿ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಎಂದು ಪರಿಶೀಲಿಸಲು ಅವಕಾಶ ಇದೆ.

PM Kisan 16th Installment: ಇಂದು ಬಿಡುಗಡೆ ಆಗಲಿದೆ ಪಿಎಂ ಕಿಸಾನ್ 16ನೇ ಕಂತಿನ ಹಣ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ

Updated on: Feb 28, 2024 | 6:00 AM

ನವದೆಹಲಿ, ಫೆಬ್ರುವರಿ 28: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (Pradhan Mantri Kisan Samman Nidhi Yojana) 16ನೇ ಕಂತಿನ ಹಣ ಇಂದು ಬುಧವಾರ ಬಿಡುಗಡೆ ಆಗುತ್ತಿದೆ. ಒಂಬತ್ತು ಕೋಟಿಗೂ ಹೆಚ್ಚು ಫಲಾನುಭವಿ ರೈತರ ಖಾತೆಗಳಿಗೆ ತಲಾ 2,000 ರೂ ಹಣ ಇವತ್ತಿನಿಂದ ಜಮೆ ಆಗಲು ಶುರುವಾಗಲಿದೆ. ಡಿಸೆಂಬರ್​ನಿಂದ ಮಾರ್ಚ್​ವರೆಗಿನ ಅವಧಿಯ 2,000 ರೂ ಹಣ ರೈತರ ಖಾತೆಗೆ ನೇರವಾಗಿ ವರ್ಗಾವಣೆ ಆಗಲಿದೆ. 16ನೇ ಕಂತಿನ ಹಣದ ಬಿಡುಗಡೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಘೋಷಿಸಲಿದ್ದಾರೆ.

ಏನಿದು ಪಿಎಂ ಕಿಸಾನ್ ಯೋಜನೆ?

ರೈತರ ವ್ಯವಸಾಯ ಕಾರ್ಯಕ್ಕೆ ಅನುಕೂಲವಾಗಲೆಂದು ಸರ್ಕಾರ 2019ರಲ್ಲಿ ಆರಂಭಿಸಿದ ಯೋಜನೆ ಪಿಎಂ ಕಿಸಾನ್ ಸಮ್ಮಾನ್ ನಿಧಿ. ಇದರ ಅಡಿಯಲ್ಲಿ ರೈತರಿಗೆ 2,000 ರೂಗಳ 3 ಕಂತುಗಳಂತೆ ವರ್ಷಕ್ಕೆ 6,000 ರೂ ಹಣವನ್ನು ಸರ್ಕಾರ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತದೆ. ಏಪ್ರಿಲ್​ನಿಂದ ಜುಲೈ, ಆಗಸ್ಟ್​ನಿಂದ ನವೆಂಬರ್, ಮತ್ತು ಡಿಸೆಂಬರ್​ನಿಂದ ಮಾರ್ಚ್​ವರೆಗೆ ಈ ಮೂರು ಅವಧಿಯಲ್ಲಿ ರೈತರಿಗೆ 2,000 ರೂ ಹಣ ಸಿಗುತ್ತದೆ.

ಇದನ್ನೂ ಓದಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಛೇರ್ಮನ್ ಸ್ಥಾನದಿಂದ ವಿಜಯ್ ಶೇಖರ್ ಶರ್ಮಾ ಹೊರಕ್ಕೆ; ಬ್ಯಾಂಕ್ ಮಂಡಳಿ ಪುನಾರಚನೆ

16ನೇ ಕಂತಿನ ಹಣ ನಿಮಗೆ ಸಿಗುತ್ತಾ?

ನೀವು ಪಿಎಂ ಕಿಸಾನ್ ಯೊಜನೆಗೆ ಹೆಸರು ನೊಂದಾಯಿಸಿದ್ದರೆ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸಲಾಗಿರುತ್ತದೆ. ಈ ಪಟ್ಟಿಯನ್ನು ನೋಡುವ ಕ್ರಮ ಇಲ್ಲಿದೆ.

  • ಪಿಎಂ ಕಿಸಾನ್ ಅಧಿಕೃತ ಪೋರ್ಟಲ್​ಗೆ ಹೋಗಿ: pmkisan.gov.in/
  • ಕೆಳಗೆ ತುಸು ಸ್ಕ್ರೋಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ನೋಡಬಹುದು. ಅದರಲ್ಲಿ ಬೆನಿಫಿಶಿಯರಿ ಲಿಸ್ಟ್ ಕ್ಲಿಕ್ ಮಾಡಿ.
  • ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಮತ್ತು ಗ್ರಾಮವನ್ನು ಆಯ್ದುಕೊಳ್ಳಿ.
  • ಬಳಿಕ ಗೆಟ್ ರಿಪೋರ್ಟ್ ಕ್ಲಿಕ್ ಮಾಡಿ.
  • ಇದರಲ್ಲಿ ಗ್ರಾಮದಲ್ಲಿರುವ ಎಲ್ಲಾ ಪಿಎಂ ಕಿಸಾನ್ ಫಲಾನುಭವಿಗಳ ಹೆಸರುಗಳಿರುವ ಪಟ್ಟಿ ಪ್ರತ್ಯಕ್ಷವಾಗುತ್ತದೆ.
  • ಈ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಖಾತ್ರಿಪಡಿಸಿಕೊಳ್ಳಿ.

ಇದನ್ನೂ ಓದಿ: ಸರ್ಕಾರದಿಂದ ಸಿಎನ್​ಎಪಿ ಅಸ್ತ್ರ; ಟ್ರೂಕಾಲರ್​ಗೆ ಇದು ಮಾರಕಾಸ್ತ್ರವಾ? ಟೆಲಿಕಾಂ ಕಂಪನಿಗಳಿಗೂ ತಲೆನೋವು

ಬೆನಿಫಿಶಿಯರಿ ಲಿಸ್ಟ್​ನಲ್ಲಿ ಹೆಸರಿಲ್ಲದಿದ್ದರೆ ಏನು?

ಒಂದು ವೇಳೆ ನೀವು ಯೋಜನೆಗೆ ನೊಂದಾಯಿಸಿದ್ದೂ ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಅದಕ್ಕೆ ಬೇರೆ ಕಾರಣಗಳಿರಬಹುದು. ನೀವು ಇಕೆವೈಸಿ ಮಾಡಿಲ್ಲದೇ ಇರಬಹುದು. ಅಥವಾ ತಡವಾಗಿ ಯೋಜನೆಗೆ ನೊಂದಾಯಿಸಿರಬಹುದು.

ನೀವು ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಕೆವೈಸಿ ಅಪ್​ಡೇಟ್ ಮಾಡಬಹುದು. ಅಥವಾ ಆನ್​ಲೈನ್​ನಲ್ಲೇ ಇಕೆವೈಸಿ ನೀಡಬಹುದು. ಪಿಎಂ ಕಿಸಾನ್ ಪೋರ್ಟಲ್​ನ ಫಾರ್ಮರ್ಸ್ ಕಾರ್ನರ್​ನಲ್ಲಿ ಮೊದಲ ಟ್ಯಾಬ್​ನಲ್ಲೇ ಇಕೆವೈಸಿ ಲಿಂಕ್ ಕಾಣಬಹುದು. ಅದನ್ನು ಕ್ಲಿಕ್ ಮಾಡಿ ನಿಮ್ಮ ಆಧಾರ್ ದಾಖಲೆಯನ್ನು ಅಪ್​ಡೇಟ್ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ