ಪಿಎಂ ಕಿಸಾನ್ ಯೋಜನೆ: ನೊಂದಾಯಿಸಿಯೂ ಹಣ ಸಿಗದಿದ್ದರೆ ನಿರಾಸೆ ಬೇಡ; ಹಣ ತಲುಪಿಸಲು ನಡೆದಿದೆ ಅಭಿಯಾನ

PM Kisan Samman Nidhi Scheme: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ನೊಂದಾಯಿಸಿಯೂ ಹಣ ಸಿಗದೇ ಇದ್ದ ರೈತನ್ನು ತಲುಪಲು ಸರ್ಕಾರ ಅಭಿಯಾನ ಆರಂಭಿಸಿದೆ. ದೇಶಾದ್ಯಂತ ಸಾವಿರಾರು ಕಡೆ ಕಾಮನ್ ಸರ್ವಿಸ್ ಸೆಂಟರ್ ಶಿಬಿರಗಳನ್ನು ತೆರೆದು ಸಂತ್ರಸ್ತರಿಗೆ ಪರಿಹಾರ ಕೊಡುವ ಪ್ರಯತ್ನವಾಗಲಿದೆ. ಇ-ಕೆವೈಸಿ ಆಗದಿದ್ದರೆ ಅಥವಾ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲದಿದ್ದರೆ ಪಿಎಂ ಕಿಸಾನ್ ಹಣ ಬರದೇ ಹೋಗಿರುವ ಸಾಧ್ಯತೆ ಇದೆ.

ಪಿಎಂ ಕಿಸಾನ್ ಯೋಜನೆ: ನೊಂದಾಯಿಸಿಯೂ ಹಣ ಸಿಗದಿದ್ದರೆ ನಿರಾಸೆ ಬೇಡ; ಹಣ ತಲುಪಿಸಲು ನಡೆದಿದೆ ಅಭಿಯಾನ
ಪಿಎಂ ಕಿಸಾನ್ ಯೋಜನೆ

Updated on: Feb 12, 2024 | 6:21 PM

ನವದೆಹಲಿ, ಫೆಬ್ರುವರಿ 12: ಕೇಂದ್ರ ಸರ್ಕಾರ ರೈತರ ವ್ಯವಸಾಯ ಕಾರ್ಯಕ್ಕೆಂದು ನೆರವಾಲು ನಡೆಸುತ್ತಿರುವ ಪಿಎಂ ಕಿಸಾನ್ ಯೋಜನೆಯಲ್ಲಿ (PM Kisan Samman Nidhi Yojana) ಫಲಾನುಭವಿ ರೈತರಿಗೆ ವರ್ಷಕ್ಕೆ 6,000 ರೂ ಧನಸಹಾಯ ಸಿಗುತ್ತದೆ. 9 ಕೋಟಿಗೂ ಹೆಚ್ಚು ಮಂದಿ ರೈತರು ಈ ಸ್ಕೀಮ್​ಗೆ ನೊಂದಾಯಿತರಾಗಿದ್ದು ಪ್ರತೀ ನಾಲ್ಕು ತಿಂಗಳಿಗೆ 2,000 ರೂ ಹಣವನ್ನು ತಮ್ಮ ಅಕೌಂಟ್​ಗಳಲ್ಲಿ ಪಡೆಯುತ್ತಾರೆ. 2019ರಲ್ಲಿ ಆರಂಭಗೊಂಡ ಈ ಯೋಜನೆಯಲ್ಲಿ ಈವರೆಗೆ 15 ಕಂತುಗಳ ಹಣವು ರೈತರ ಖಾತೆಗಳಿಗೆ ವರ್ಗಾವಣೆ ಆಗಿದೆ. 16ನೇ ಕಂತಿನ ಹಣ ಈ ತಿಂಗಳು ಅಥವಾ ಮಾರ್ಚ್ ತಿಂಗಳಲ್ಲಿ ಬರುವ ಸಾಧ್ಯತೆ ಇದೆ. ಆದರೆ, ಯೋಜನೆಯಲ್ಲಿ ತಮ್ಮ ಹೆಸರು ನೊಂದಾಯಿಸಲಾಗಿದ್ದರೂ ಖಾತೆಗೆ ಹಣ ಬಂದಿಲ್ಲ ಎಂದು ಹಲವಾರು ರೈತರು ದೂರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರ ಈ ಸಮಸ್ಯೆಗೆ ಪರಿಹಾರ ಒದಗಿಸಲು ಸರ್ಕಾರ ಇಂದು ಅಭಿಯಾನ ಆರಂಭಿಸಿದೆ.

ಇಂದಿನಿಂದ (ಫೆ. 12) ಹತ್ತು ದಿನಗಳ (ಫೆ. 21) ಕಾಲ ಕೃಷಿ ಸಚಿವಾಲಯವು ಈ ಅಭಿಯಾನ ಕೈಗೊಂಡಿದೆ. ದೇಶಾದ್ಯಂತ ವಿವಿಧ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಗಳು ಈ ಕಾರ್ಯದಲ್ಲಿ ಸಹಕಾರ ತೋರಲಿದ್ದು, ನಾಲ್ಕು ಲಕ್ಷ ಸಿಎಸ್​ಸಿ ಕೇಂದ್ರಗಳ ಮೂಲಕ ಅರ್ಹ ರೈತರಿಗೆ ಅವರ ಹಣ ಸಿಗದೇ ಹೋಗಲು ಕಾರಣವೇನೆಂದು ಪತ್ತೆ ಹಚ್ಚಿ ಪರಿಹಾರ ಒದಗಿಸುವ ಕಾರ್ಯ ಮಾಡಲಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಹಣದುಬ್ಬರ ಇಳಿಕೆ; ಜನವರಿ ತಿಂಗಳ ಇನ್​ಫ್ಲೇಶನ್ ಶೇ. 5.1; ಸರ್ಕಾರದಿಂದ ದತ್ತಾಂಶ ಬಿಡುಗಡೆ

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ನೊಂದಾವಣಿ ಮಾಡಿದ ಅರ್ಹ ರೈತರ ಖಾತೆಗಳಿಗೆ ಹಣ ವರ್ಗಾವಣೆ ಆಗುತ್ತಿಲ್ಲ ಎಂದರೆ ಅದಕ್ಕೆ ಎರಡು ಸಂಭಾವ್ಯ ಕಾರಣ ಇರಬಹುದು ಎಂದು ಸರ್ಕಾರಿ ಅಧಿಕಾರಿಗಳು ಭಾವಿಸಿದ್ದಾರೆ. ಒಂದನೆಯ ಕಾರಣವೆಂದರೆ ಇ-ಕೆವೈಸಿ ಅಪ್​ಡೇಟ್ ಆಗಿಲ್ಲದೇ ಇರಬಹುದು. ಇನ್ನೊಂದು ಸಂಭಾವ್ಯ ಕಾರಣವೆಂದರೆ ಯೋಜನೆಗೆ ನೀಡಲಾದ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗಿಲ್ಲದೇ ಇರಬಹುದು.

ಯಾವ್ಯಾವ ರೈತರಿಗೆ ಪಿಎಂ ಕಿಸಾನ್ ಯೋಜನೆಯ ಹಣ ಬಂದಿಲ್ಲ ಎಂಬುದನ್ನು ಮೊದಲು ಗುರುತಿಸಲಾಗುತ್ತದೆ. ವಿವಿಧೆಡೆ ಕಾಮನ್ ಸರ್ವಿಸ್ ಸೆಂಟರ್ ಕ್ಯಾಂಪ್​ಗಳನ್ನು ಜಿಲ್ಲಾಡಳಿತ ಸ್ಥಾಪಿಸಲಿದೆ. ಈ ಕ್ಯಾಂಪ್​ನಲ್ಲಿರುವ ಎಕ್ಸಿಕ್ಯೂಟಿವ್​ಗಳು ಸಂತ್ರಸ್ತರ ರೈತರ ಸಮಸ್ಯೆಯನ್ನು ಗುರುತಿಸಿ ಅದನ್ನು ಸ್ಥಳದಲ್ಲೇ ಸರಿಪಡಿಸಲು ಯತ್ನಿಸಲಿದ್ದಾರೆ. ಪಿಎಂ ಕಿಸಾನ್ ಯೋಜನೆಯ ಹಣ ಬರುತ್ತಿಲ್ಲದವರು ತಮ್ಮ ಸಮೀಪದ ಇಂಥ ಒಂದು ಕ್ಯಾಂಪ್​ಗೆ ಭೇಟಿ ನೀಡಿ ತಮ್ಮ ಸಮಸ್ಯೆ ತಿಳಿಸಬಹುದು.

ಇದನ್ನೂ ಓದಿ: ಪಿಎಂ ಜೀವನಜ್ಯೋತಿ ವಿಮಾ ಯೋಜನೆ, ವರ್ಷಕ್ಕೆ ಕೇವಲ 436 ರೂ ಪ್ರೀಮಿಯಮ್; 2 ಲಕ್ಷ ರೂ ಕವರೇಜ್

ಫೆಬ್ರುವರಿ 21ರವರೆಗೆ ಕಾಲಾವಕಾಶ ಇದೆ. ಸಿಎಸ್​ಸಿ ಸೆಂಟರ್​ಗೆ ಹೋಗುವಾಗ ಆಧಾರ್, ಇತ್ಯಾದಿ ದಾಖಲೆಗಳ್ನು ತೆಗೆದುಕೊಂಡು ಹೋಗಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ