Layoff: ಶೇ. 15ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ಸ್ಪೈಸ್​ಜೆಟ್ ಮುಂದು

SpiceJet Updates: ಭಾರತದ ಅಗ್ಗದ ವಿಮಾನ ಸೇವೆ ನೀಡುವ ಸ್ಪೈಸ್​ಜೆಟ್ ತನ್ನ ಆಪರೇಟಿಂಗ್ ಕಾಸ್ಟ್ ಕಡಿಮೆ ಮಾಡಲು ಲೇ ಆಫ್​ಗೆ ಮುಂದಾಗಿದೆ. ವರದಿ ಪ್ರಕಾರ, 1,400 ಅಥವಾ ಶೇ 15ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ಸಂಸ್ಥೆ ಹೊರಟಿದೆ. ಸ್ಪೈಸ್​ಜೆಟ್​ನಲ್ಲಿ 9,000 ಮಂದಿ ಕೆಲಸ ಮಾಡುತ್ತಿದ್ದು ಅವರಿಗೆ ವೇತನ ವರ್ಷಕ್ಕೆ 700 ಕೋಟಿ ರೂಗೂ ಹೆಚ್ಚಿದೆ. ಈಗ ಲೇ ಆಫ್ ಕ್ರಮದಿಂದ 100 ಕೋಟಿ ರೂ ಉಳಿಯಲಿದೆ.

Layoff: ಶೇ. 15ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ಸ್ಪೈಸ್​ಜೆಟ್ ಮುಂದು
ಸ್ಪೈಸ್​ಜೆಟ್

Updated on: Feb 12, 2024 | 2:49 PM

ಬೆಂಗಳೂರು, ಫೆಬ್ರುವರಿ 12: ವೆಚ್ಚ ಕಡಿತದ ಉದ್ದೇಶದಿಂದ ಸ್ಪೈಸ್ ಜೆಟ್ ವಿಮಾನ ಸಂಸ್ಥೆ (SpiceJet) ಉದ್ಯೋಗಕಡಿತಕ್ಕೆ ಕೈಹಾಕುತ್ತಿದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಬಂದ ವರದಿ ಪ್ರಕಾರ ಸ್ಪೈಸ್​ಜೆಟ್​ನ 1,400 ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಶೇ. 15ರಷ್ಟು ಉದ್ಯೋಗಿಗಳ ಲೇ ಆಫ್ ಮಾಡಲು ಸಂಸ್ಥೆ ಯೋಜಿಸಿರುವುದು ತಿಳಿದುಬಂದಿದೆ. ಸ್ವತಃ ಸಂಸ್ಥೆಯ ಅಧಿಕಾರಿಗಳೇ ಈ ಲೇ ಆಫ್ ಯೋಜನೆಯನ್ನು ದೃಢಪಡಿಸಿದ್ದಾರೆ ಎಂದು ಈ ವರದಿ ಹೇಳಿದೆ. ಬಹಳ ಅಗ್ಗದ ದರದಲ್ಲಿ ವೈಮಾನಿಕ ಸೇವೆ ನೀಡುವ ಸ್ಪೈಸ್​ಜೆಟ್ ತನ್ನ ಸಿಬ್ಬಂದಿಗೆ ಒದಗಿಸುವ ಸಂಬಳವೇ ತಿಂಗಳಿಗೆ 60 ಕೋಟಿ ರೂ ಎನ್ನಲಾಗಿದೆ. ಒಟ್ಟಾರೆ ವೆಚ್ಚ ಕಡಿತಕ್ಕೆ ಯೋಜಿಸಿರುವ ಸಂಸ್ಥೆ ಈ ನಿಟ್ಟಿನಲ್ಲಿ ಸಂಬಳದ ವೆಚ್ಚ ತಗ್ಗಿಸಲು ಲೇ ಆಫ್ ಕ್ರಮಕ್ಕೆ ಕೈಹಾಕಿದೆ.

ಸ್ಪೈಸ್​ಜೆಟ್​ನ ಕೆಲ ಉದ್ಯೋಗಿಗಳಿಗೆ ಲೇ ಆಫ್ ನೋಟೀಸ್​ಗೆಂದು ಈಗಾಗಲೇ ಎಚ್​ಆರ್ ವಿಭಾಗದಿಂದ ಕರೆಗಳು ಬರತೊಡಗಿವೆ ಎನ್ನಲಾಗಿದೆ.

ಸ್ಪೈಸ್​ಜೆಟ್ ಸಂಸ್ಥೆ ಫಂಡಿಂಗ್ ಕೊರತೆ ಅನುಭವಿಸುತ್ತಿದೆ. 30 ವಿಮಾನಗಳನ್ನು ನಿರ್ವಹಿಸುತ್ತಿರುವ ಸಂಸ್ಥೆ ಕಳೆದ ಹಲವು ತಿಂಗಳುಗಳಿಂದ ಸಿಬ್ಬಂದಿಗೆ ಸರಿಯಾಗಿ ಸಂಬಳ ಪಾವತಿ ಮಾಡುತ್ತಿಲ್ಲ. ಇದೀಗ ಸುಮಾರು 2,200 ಕೋಟಿ ರೂ ಫಂಡಿಂಗ್ ಪಡೆಯುವ ಹಂತದಲ್ಲಿ ಸಂಸ್ಥೆ ಇದೆ. ಷೇರುಗಳು ಮತ್ತು ವಾರಂಟುಗಳ ಹಂಚಿಕೆ ಮೂಲಕ ಅದು ಬಂಡವಾಳ ಕಲೆಹಾಕುತ್ತಿದೆ.

ಇದನ್ನೂ ಓದಿ: ಜೊಮಾಟೋ ವಿರುದ್ಧ ಕೋರ್ಟ್ ಕೇಸ್; ಫೂಡ್ ಡೆಲಿವರಿಯಲ್ಲಿ ವಂಚನೆ ಮಾಡುತ್ತಿದೆ ಎಂದು ಆರೋಪಿಸಿದ ಗ್ರಾಹಕ

ಕಂಪನಿ ವಕ್ತಾರರ ಪ್ರಕಾರ ಈಗ ಫಂಡಿಂಗ್ ಕೊರತೆ ಇರುವುದಿಲ್ಲ. ಸಾಕಷ್ಟು ಹೂಡಿಕೆಗಳು ಬರುತ್ತಿವೆ ಎಂದಿದ್ದಾರೆ. ಸ್ಪೈಸ್​ಜೆಟ್​ನ 30 ವಿಮಾನಗಳು ಸದ್ಯ ಚಾಲನೆಯಲ್ಲಿವೆ. ಇನ್ನೂ ಕೆಲ ವಿಮಾನಗಳು ನಿಷ್ಕ್ರಿಯಗೊಂಡಿವೆ. ಹೊಸ ಫಂಡಿಂಗ್ ಹಣದ ಮೂಲಕ ಈ ನಿಷ್ಕ್ರಿಯ ವಿಮಾನಗಳಿಗೆ ಮತ್ತೆ ಚಾಲನೆ ಕೊಡುವುದು ಕಂಪನಿಯ ಯೋಜನೆ.

ಸ್ಪೈಸ್​ಜೆಟ್​ನಲ್ಲಿ ಬರೋಬ್ಬರಿ 9,000 ಮಂದಿ ಕೆಲಸ ಮಾಡುತ್ತಾರೆ. ಇವರಿಗೆ ವೇತನ ವೆಚ್ಚ ತಿಂಗಳಿಗೆ 60 ಕೋಟಿ ರೂ ಆಗುತ್ತದೆ. ವರ್ಷಕ್ಕೆ 700 ಕೋಟಿ ರೂಗೂ ಹೆಚ್ಚು ಹಣ ಸಂಬಳಕ್ಕೆ ಹೋಗುತ್ತದೆ. ಈಗ 1,400 ಮಂದಿಯನ್ನು ಲೇ ಆಫ್ ಮಾಡುವುದರಿಂದ ಸ್ಪೈಸ್​ಜೆಟ್​ಗೆ ವರ್ಷಕ್ಕೆ 100 ಕೋಟಿ ರೂ ಉಳಿಯುತ್ತದೆ ಎಂಬ ಲೆಕ್ಕಾಚಾರ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us