AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

9 ವರ್ಷಗಳ ಬಳಿಕ ಗಿಳಿ ನೀಡಿದ ಸಾಕ್ಷಿಯಿಂದ 2014ರ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ!

ಹತ್ಯೆ ನಡೆದು ಒಂಬತ್ತು ವರ್ಷಗಳ ಬಳಿಕ ವಿಶೇಷ ನ್ಯಾಯಾಧೀಶ ಮೊಹಮ್ಮದ್ ರಶೀದ್ ಅವರು ಆರೋಪಿಗಳಿಬ್ಬರಿಗೂ ಜೀವಾವಧಿ ಶಿಕ್ಷೆ ಹಾಗೂ 72 ಸಾವಿರ ರೂ. ದಂಡವನ್ನು ವಿಧಿಸಿದ್ದಾರೆ.

9 ವರ್ಷಗಳ ಬಳಿಕ ಗಿಳಿ ನೀಡಿದ ಸಾಕ್ಷಿಯಿಂದ 2014ರ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ!
9 years old Murder suspect gets lifetime imprisonment after parrot's testimony
ನಯನಾ ಎಸ್​ಪಿ
|

Updated on:Mar 25, 2023 | 1:05 PM

Share

Agra: ಆಗ್ರಾದ ಪ್ರಮುಖ ಪತ್ರಿಕೆಯ ಮುಖ್ಯ ಸಂಪಾದಕ ವಿಜಯ್ ಶರ್ಮಾ (Vijay Sharma) ಅವರ ಪತ್ನಿ ನೀಲಂ ಶರ್ಮಾ (Neelam Sharma) ಅವರನ್ನು ಫೆಬ್ರವರಿ 20, 2014 ರಂದು ಅವರ ಸ್ವಂತ ಮನೆಯಲ್ಲಿ ಹತ್ಯೆ ಮಾಡಲಾಯಿತು. ಕೊಲೆಯ ನಂತರ, ಅವರ ಮನೆಯನ್ನು ದರೋಡೆ ಮಾಡಲಾಯಿತು ಆದರೆ ವಿಜಯ್ ಶರ್ಮಾ ಅಥವಾ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ. ಆದರೆ ನಂತರ ಸಾಕು ಗಿಳಿ (Parrot) ಶರ್ಮಾ ಅವರ ಸೋದರಳಿಯ ಹೆಸರನ್ನು ಕಿರುಚಲು ಪ್ರಾರಂಭಿಸಿತು. ಗಿಳಿಯ ಕೂಗು ಕೇಳಿ ವಿಜಯ್ ಶರ್ಮಾ ಅನುಮಾನಗೊಂಡು ಸೋದರಳಿಯನನ್ನು ವಿಚಾರಿಸುವಂತೆ ಪೊಲೀಸರಿಗೆ ಮನವಿ ಮಾಡಿದರು. ಸೋದರಳಿಯ ಆಶು, ತನ್ನ ಸ್ನೇಹಿತ ರೋನಿ ಮಾಸ್ಸಿ ಸಹಾಯದಿಂದ ನೀಲಂ ಅವರನ್ನು ಕೊಲೆ ಮಾಡಿರುವುದು ಬೆಳಕಿದೆ ಬಂದಿದೆ.

ಇಂದು, ಕೊಲೆ ನಡೆದು ಒಂಬತ್ತು ವರ್ಷಗಳ ನಂತರ, ವಿಶೇಷ ನ್ಯಾಯಾಧೀಶ ಮೊಹಮ್ಮದ್ ರಶೀದ್ ಅವರು ಆರೋಪಿಗಳಾದ ಆಶು ಮತ್ತು ರೋನಿ ಇಬ್ಬರಿಗೂ ಜೀವಾವಧಿ ಶಿಕ್ಷೆ ಮತ್ತು ಆಶು ಅವರ ತಪ್ಪೊಪ್ಪಿಗೆ ಮತ್ತು ಸಾಕ್ಷಾಧಾರದ ಮೇಲೆ 72,000 ರೂ. ದಂಡವನ್ನೂ ವಿಧಿಸಿದ್ದಾರೆ.

ಇಂಡಿಯಾ ಟುಡೇ ಪಡೆದ ಮಾಹಿತಿಯ ಪ್ರಕಾರ, ವಿಜಯ್ ಶರ್ಮಾ ಫೆಬ್ರವರಿ 20, 2014 ರಂದು ತಮ್ಮ ಮಗ ರಾಜೇಶ್ ಮತ್ತು ಮಗಳು ನಿವೇದಿತಾ ಅವರೊಂದಿಗೆ ಫಿರೋಜಾಬಾದ್‌ನಲ್ಲಿ ಮದುವೆಗೆ ಹಾಜರಾಗಲು ತಮ್ಮ ಮನೆಯಿಂದ ಹೊರಟರು. ನೀಲಂ ಮನೆಯಲ್ಲಿಯೇ ಉಳಿದುಕೊಂಡರು. ತಡರಾತ್ರಿ ವಿಜಯ್ ವಾಪಸಾದಾಗ ಪತ್ನಿ ಹಾಗೂ ಸಾಕು ನಾಯಿಯ ಶವ ಕಂಡು ಗದ್ಗದಿತರಾದರು. ಹರಿತವಾದ ವಸ್ತುವಿನಿಂದ ಇಬ್ಬರನ್ನು ಹತ್ಯೆ ಮಾಡಲಾಗಿತ್ತು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು, ಇದೀಗ ಈ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಮತ್ತೊಂದೆಡೆ ವಿಜಯ್ ಶರ್ಮಾ ಅವರ ಮುದ್ದಿನ ಗಿಳಿ ಊಟ, ನೀರು ಬಿಡಲು ಪ್ರಾರಂಭಿಸಿತು. ಕೊಲೆಗೆ ಗಿಳಿಯೇ ಸಾಕ್ಷಿಯಾಗಿರಬಹುದು ಎಂದು ಶರ್ಮಾ ಶಂಕಿಸಿದರು. ಶರ್ಮಾ ಅವರು ಗಿಳಿಯ ಮುಂದೆ ಶಂಕಿತರನ್ನು ಒಂದೊಂದಾಗಿ ಹೆಸರಿಸಲು ಪ್ರಾರಂಭಿಸಿದಾಗ, ಪಕ್ಷಿಯು ಆಶು ಹೆಸರಿನಿಂದ ಗಾಬರಿಗೊಂಡಿತು ಮತ್ತು “ಅಶು-ಅಶು” ಎಂದು ಕಿರುಚಲು ಪ್ರಾರಂಭಿಸಿತು. ಪೊಲೀಸರ ಮುಂದೆಯೂ ಗಿಳಿ ಆಶು ಹೆಸರಿಗೆ ಅದೇ ಪ್ರತಿಕ್ರಿಯೆ ನೀಡಿದಾಗ, ಅವನನ್ನು ಬಂಧಿಸಲಾಯಿತು. ಇದನ್ನು ಪೊಲೀಸರು ತನಿಖೆಯ ವೇಳೆಯೂ ತಿಳಿಸಿದ್ದಾರೆ.

ನೀಲಂ ಶರ್ಮಾ ಅವರ ಪುತ್ರಿ ನಿವೇದಿತಾ ಶರ್ಮಾ ಇಂಡಿಯಾ ಟುಡೇಗೆ ನೀಡಿದ ಪ್ರತಿಕ್ರಿಯೆಯಲ್ಲಿ, ಆಶು ಮನೆಗೆ ಬಂದು ಹೋಗುತ್ತಿದ್ದರು ಮತ್ತು ಹಲವು ವರ್ಷಗಳ ಕಾಲ ಮನೆಯಲ್ಲಿ ಅವರ ಜೊತೆಗೆ ಇದ್ದರು ಎಂದು ತಿಳಿಸಿದ್ದಾರೆ.

ಎಂಬಿಎ ಪದವಿ ಪಡೆಯಲು ಆಕೆಯ ತಂದೆ 80,000 ರೂ. ನೀಡಿದ್ದರಂತೆ. ಮನೆಯಲ್ಲಿ ಚಿನ್ನಾಭರಣ ಮತ್ತು ನಗದನ್ನು ಎಲ್ಲೆಲ್ಲಿ ಇಡಲಾಗಿದೆ ಎಂಬುದು ಆಶುಗೆ ತಿಳಿದಿದ್ದು, ದರೋಡೆಗೆ ಯೋಜನೆ ರೂಪಿಸಿದ್ದ ಎಂದು ನಿವೇದಿತಾ ಹೇಳಿದ್ದಾರೆ. ಅವನು ಸಾಕು ನಾಯಿಯನ್ನು ಚಾಕುವಿನಿಂದ ಒಂಬತ್ತು ಬಾರಿ ಮತ್ತು ನೀಲಮ್‌ಗೆ 14 ಬಾರಿ ಇರಿದಿದ್ದಾನೆ, ಅವನ ಏಕೈಕ ಉದ್ದೇಶ ಕೊಲ್ಲುವುದು ಮತ್ತು ಲೂಟಿ ಮಾಡುವುದಾಗಿತ್ತು ಎಂದು ನಿವೇದಿತಾ ಹೇಳಿದರು.

ಇದನ್ನೂ ಓದಿ: ನವಜಾತ ಶಿಶುವನ್ನು ರೂ. 4.5 ಲಕ್ಷಕ್ಕೆ ಮಾರಾಟ ಮಾಡಿದ ತಾಯಿ!

ಪ್ರಕರಣದ ಉದ್ದಕ್ಕೂ ಗಿಳಿಯನ್ನು ಉಲ್ಲೇಖಿಸಲಾಗಿದೆ, ಆದರೆ ಸಾಕ್ಷ್ಯಾಧಾರವಾಗಿ ನೀಡಲಾಗಿಲ್ಲ ಏಕೆಂದರೆ ಪುರಾವೆ ಕಾಯ್ದೆಯು ಅಂತಹ ಯಾವುದೇ ನಿಬಂಧನೆಯನ್ನು ನೀಡುವುದಿಲ್ಲ.

ಘಟನೆ ನಡೆದ ಆರು ತಿಂಗಳ ನಂತರ ಈ ಗಿಳಿ ಸಾವನ್ನಪ್ಪಿದೆ ಎಂದು ನಿವೇದಿತಾ ಹೇಳಿದ್ದಾರೆ. ವಿಜಯ್ ಶರ್ಮಾ ನವೆಂಬರ್ 14, 2020 ರಂದು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ನಿಧನರಾದರು. “ನನ್ನ ಪೋಷಕರು ಆಶುವನ್ನು ಗಲ್ಲಿಗೇರಿಸಬೇಕೆಂದು ಬಯಸಿದ್ದರು ಮತ್ತು ಇಡೀ ಕುಟುಂಬವು ಅವನನ್ನು ಶಿಕ್ಷಿಸಬೇಕೆಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತದೆ” ಎಂದು ನಿವೇದಿತಾ ಹೇಳಿದರು.

Published On - 1:04 pm, Sat, 25 March 23