ಬಾಗಲಕೋಟೆ: ಕಾಣೆಯಾದ ಬಾಲಕಿ ಶವವಾಗಿ ಪತ್ತೆ, ಮುಗಿಲು ಮುಟ್ಟಿದ ಪೋಷಕರ ಆಕ್ರಂಧನ

|

Updated on: Mar 18, 2023 | 7:24 AM

ಆ ಬಾಲಕಿ ಶಾಲೆಗೆ ಎಂದು ಮನೆಯಿಂದ ಬೆಳಿಗ್ಗೆ ಹೊರಟು ಹೋಗಿದ್ದಳು. ಆದರೆ ಸಂಜೆಯಾದರೂ ಮನೆ ಕಡೆ ಬಂದಿರಲಿಲ್ಲ. ಮಗಳು ಎಲ್ಲಿ ಹೋದಳು ಎಂದು ಗಾಬರಿಗೊಂಡವರಿಗೆ ಸಿಕ್ಕಿದ್ದು ಮಗಳು ಶವವಾಗಿ, ಅದು ಕೊಲೆಯಾದ ಸ್ಥಿತಿಯಲ್ಲಿ. ಬಾಲಕಿ ಚಿಕ್ಕಮ್ಮ ಹಾಗೂ ಆಕೆಯ ಪ್ರಿಯಕರ ಅನೈತಿಕ ಸಂಬಂಧಕ್ಕೆ ಅಡ್ಡಿ ಎಂದು ಕೊಲೆ ಮಾಡಿದ ಶಂಕೆ ವ್ಯಕ್ತವಾಗಿದೆ.

ಬಾಗಲಕೋಟೆ: ಕಾಣೆಯಾದ ಬಾಲಕಿ ಶವವಾಗಿ ಪತ್ತೆ, ಮುಗಿಲು ಮುಟ್ಟಿದ ಪೋಷಕರ ಆಕ್ರಂಧನ
ಮುಗಿಲು ಮುಟ್ಟಿದ ಮೃತ ಬಾಲಕಿಯ ಪೋಷಕರ ಆಕ್ರಂಧನ
Follow us on

ಬಾಗಲಕೋಟೆ: ಕೊಲೆಯಾಗಿ ಬಿದ್ದಿರುವ ಹನ್ನೊಂದು ವರ್ಷದ ಬಾಲಕಿ. ಮಗಳ ಕಳೆದುಕೊಂಡು ಕಣ್ಣೀರು ಹಾಕಿ ಗೋಳಾಡುತ್ತಿರುವ ತಂದೆ ತಾಯಿ. ಪಾಪಿಗಳ ಕೃತ್ಯಕ್ಕೆ ಶಾಪ ಹಾಕಿ ಆಕ್ರೋಶದ ಕಣ್ಣೀರು ಹಾಕುತ್ತಿರುವ ಸಂಬಂಧಿಕರು. ಅಂದ ಹಾಗೆ ಈ ದೃಶ್ಯ ಕಂಡುಬಂದಿದ್ದು ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ. ಹೌದು ಗಿರಿಸಾಗರ ಗ್ರಾಮದಲ್ಲಿ ಮನ ಮಿಡಿಯುವ ಘಟನೆ ನಡೆದು ಹೋಗಿದೆ. ಕೇವಲ ಹನ್ನೊಂದು ವರ್ಷದ ರೇಖಾ ಯಂಕಂಚಿ ಎಂಬ ಬಾಲಕಿಯನ್ನು ದುರುಳರು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಶವವನ್ನು ಚೀಲದಲ್ಲಿ ಹಾಕಿ ಬಾವಿಗೆ ಎಸೆದಿದ್ದಾರೆ‌. ಇಲ್ಲಿ ಕೊಲೆ ಮಾಡಿದ್ದು ಬೇರೆ ಯಾರು ಅಲ್ಲ ಬಾಲಕಿಯ ಚಿಕ್ಕಮ್ಮ ಶಂಕ್ರವ್ವ ಹಾಗೂ ಆಕೆಯ ಪ್ರಿಯಕರ ಎಂದು ಆರೋಪ ಕೇಳಿ ಬಂದಿದೆ. ಶಂಕ್ರವ್ವ ಹಾಗೂ ಆಕೆಯ ಪ್ರಿಯಕರ ಷಣ್ಮುಖ ಭಜಂತ್ರಿ ಅನೈತಿಕ ಸಂಬಂಧಕ್ಕೆ ಬಾಲಕಿ ಅಡ್ಡಿ ಎಂದು ಕಥೆಯನ್ನೆ ಮುಗಿಸಿದ್ದಾರಂತೆ ಪಾಪಿಗಳು. ಇದರಿಂದ ಮಗಳನ್ನು ಕಳೆದುಕೊಂಡ ಪೋಷಕರು ಆ ರಾಕ್ಷಸರಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಆಗ್ರಹ ಮಾಡುತ್ತಿದ್ದಾರೆ.

ಗಿರಿಸಾಗರ ಗ್ರಾಮದಲ್ಲಿ ನಡೆದ ಈ ಘಟನೆ ಎಲ್ಲರನ್ನ ಮಿಡಿಯುವಂತೆ ಮಾಡಿದೆ. ಮಾರ್ಚ್ 15 ರಂದು ಇಂತಹ ಘಟನೆ ನಡೆದಿದೆ. ಅಂದು ಬೆಳಿಗ್ಗೆ ಮಗಳು ಶಾಲೆಗೆ ಅಂತ ಹೋಗಿದ್ದವಳು ವಾಪಸ್ ಬಾರದಿದ್ದಾಗ ಎಲ್ಲ ಕಡೆ ಹುಡುಕಾಡಿದ ಪೋಷಕರು ಮಗಳು ಕಾಣೆ ಎಂದು ಮಾರ್ಚ್ 16 ರಂದು ಬೀಳಗಿ ಠಾಣೆಯಲ್ಲಿ ದೂರನ್ನು ನೀಡಿದ್ದರು. ಜೊತೆಗೆ ಶಂಕ್ರವ್ವಳ ಮೇಲೆ ಸಂಶಯ ವ್ಯಕ್ತಪಡಿಸಿದ್ದರು. ಸಂಶಯದ ಆಧಾರದ ಮೇರೆಗೆ ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಎಳೆ‌ಮಗಳನ್ನು ರಾಕ್ಷಸರು ಉಸಿರುಗಟ್ಟಿಸಿ ಜೀವ ಬಲಿ ಪಡೆದಿದ್ದಕ್ಕೆ ಕುಟುಂಬಸ್ಥರು ಶಾಪ ಹಾಕುತ್ತಿದ್ದಾರೆ.

ಇದನ್ನೂ ಓದಿ:Mangaluru: ಕೋಟೆಪುರದಲ್ಲಿ ಬಾಡಿಗೆ ಮನೆಯಲ್ಲಿದ್ದ ದೆಹಲಿ ಮಹಿಳೆಯ ಕೊಲೆ; ಜತೆಗಿದ್ದ ವ್ಯಕ್ತಿ ನಾಪತ್ತೆ

ಶಂಕ್ರವ್ವ ಯಂಕಂಚಿ ಏಳು ವರ್ಷದ ಹಿಂದೆ ರಮೇಶ್ ಎಂಬುವನನ್ನು ಮದುವೆಯಾಗಿ ಗಿರಿಸಾಗರ ಗ್ರಾಮಕ್ಕೆ ಬಂದಿದ್ದಾಳೆ. ಆದರೆ ಮುಗ್ದ ಗಂಡನನ್ನು ಹುಚ್ಚನಂತೆ ಮಾಡಿ ಗ್ರಾಮದ ಷಣ್ಮುಖ ಭಜಂತ್ರಿ ಎಂಬುವನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳಂತೆ. ಷಣ್ಮುಖ ಪದೆ ಪದೆ ಶಂಕ್ರವ್ವಳ‌ ಮನೆಗೆ ಬರೋದು ಹೋಗೋದು ಮಾಡುತ್ತಿದ್ದ. ಇದು ಅಕ್ಕಪಕ್ಕದಲ್ಲೆ ಮನೆ ಹೊಂದಿದ್ದ ಶಂಕ್ರವ್ವಳ ಬಾವಂದಿರು ಪತ್ನಿಯರು ಎಲ್ಲರಿಗೂ ಅಸಹ್ಯ ಹುಟ್ಟಿಸುತ್ತಿತ್ತು. ಈ ಬಗ್ಗೆ ಶಂಕ್ರವ್ವಳ ಜೊತೆ ಬಾವಂದಿರು ನಾದನಿಯರ ಜಗಳ ನಡೆಯುತ್ತಿತ್ತು. ಇನ್ನು ಇವರಿಬ್ಬರ ಕಳ್ಳ ಸಂಬಂಧವನ್ನು ನೋಡಿದ್ದ ಬಾಲಕಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಕುಟುಂಬಸ್ಥರು ಇದು ಕೇವಲ ಕೊಲೆಯಲ್ಲ. ಅತ್ಯಾಚಾರ ಮಾಡಿ ಕೊಲೆಗೈದಿದ್ದಾರೆ ಪಾಪಿಗಳು ಎಂದು ಆರೋಪ ಮಾಡಿದ್ದಾರೆ.

ಸದ್ಯ ಸುದ್ದಿ ತಿಳಿದ ಪೊಲೀಸರು ಶಂಕ್ರವ್ವ ಹಾಗೂ ಷಣ್ಮುಖನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು ಸಂಪೂರ್ಣ ತನಿಖೆ ನಂತರ ಹೆಚ್ಚಿನ ಸತ್ಯಾಸತ್ಯತೆ ಹೊರಬರಲಿದೆ. ಆದರೂ ಬಾಳಿ ಬದುಕಬೇಕಿದ್ದ ಮುಗ್ದ ಬಾಲಕಿ ಸಾವನ್ನಪ್ಪಿದ್ದು ವಿಷಾದ.

ವರದಿ: ರವಿಮೂಕಿ ಟಿವಿ9 ಬಾಗಲಕೋಟೆ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:23 am, Sat, 18 March 23