Crime News: ಹೇಟ್ ಸ್ಟೋರಿ; ಐಆರ್​ಎಸ್ ಅಧಿಕಾರಿ ಮನೆಯೊಳಗೆ ಯುವತಿಯ ಶವ ಪತ್ತೆ

|

Updated on: May 27, 2024 | 4:23 PM

ನೊಯ್ಡಾದ ತನ್ನ ಫ್ಲಾಟ್‌ನಲ್ಲಿ ಬಿಎಚ್‌ಇಎಲ್ ಉದ್ಯೋಗಿಯನ್ನು ಕೊಂದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಐಆರ್‌ಎಸ್ ಅಧಿಕಾರಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು 2016ರ ಬ್ಯಾಚ್‌ನ ಭಾರತೀಯ ಕಂದಾಯ ಸೇವಾ ಅಧಿಕಾರಿ ಸೌರಭ್ ಮೀನಾ ಎಂದು ಗುರುತಿಸಲಾಗಿದೆ. ಆತ ಪ್ರೀತಿಸುತ್ತಿದ್ದ ಯುವತಿ ಆತನದೇ ಫ್ಲಾಟ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಸೌರಭ್ ಮೀನಾ ಅವರನ್ನು ಬಂಧಿಸಲಾಗಿದೆ.

Crime News: ಹೇಟ್ ಸ್ಟೋರಿ; ಐಆರ್​ಎಸ್ ಅಧಿಕಾರಿ ಮನೆಯೊಳಗೆ ಯುವತಿಯ ಶವ ಪತ್ತೆ
ಐಆರ್‌ಎಸ್ ಅಧಿಕಾರಿ ಸೌರಭ್ ಮೀನಾ
Follow us on

ನೊಯ್ಡಾ: ನೊಯ್ಡಾದಲ್ಲಿ (Noida) ಐಆರ್​ಎಸ್ ಅಧಿಕಾರಿಯೊಬ್ಬರ ಮನೆಯಲ್ಲಿ ಅವರ ಪ್ರೇಯಸಿಯ ಶವ ಪತ್ತೆಯಾಗಿದೆ. ಬಿಎಚ್‌ಇಎಲ್ ಡೆಪ್ಯೂಟಿ ಮ್ಯಾನೇಜರ್ ಆಗಿದ್ದ ಶಿಲ್ಪಾ ಗೌತಮ್ ಅವರ ಮೃತದೇಹವು ನೊಯ್ಡಾದಲ್ಲಿ ಫ್ಲಾಟ್​ವೊಂದರಲ್ಲಿ ಪತ್ತೆಯಾಗಿದೆ. ಐಆರ್​ಎಸ್​ ಅಧಿಕಾರಿಯಾಗಿದ್ದ (IRS Officer) ಸೌರಭ್ ಮೀನಾ ಅವರೊಂದಿಗೆ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದ ಶಿಲ್ಪಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯ ಪೋಷಕರು ಸೌರಭ್ ಈ ಸಾವಿಗೆ ಕಾರಣ ಎಂದು ಆರೋಪಿಸಿದ್ದರಿಂದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಭಾನುವಾರ ಭಾರತೀಯ ಕಂದಾಯ ಸೇವೆಯ (ಐಆರ್‌ಎಸ್) ಅಧಿಕಾರಿ ಸೌರಭ್ ಮೀನಾ ಅವರನ್ನು ಬಂಧಿಸಲಾಗಿದೆ. ಶನಿವಾರ ಮಧ್ಯಾಹ್ನ, ನೊಯ್ಡಾದ ಸೆಕ್ಟರ್ 100 ರಲ್ಲಿರುವ ಐಷಾರಾಮಿ ಲೋಟಸ್ ಬೌಲೆವಾರ್ಡ್ ಅಪಾರ್ಟ್‌ಮೆಂಟ್ ಸಂಕೀರ್ಣದ ನಿವಾಸಿಗಳು ಪೊಲೀಸ್ ಸಿಬ್ಬಂದಿ ಸೊಸೈಟಿಯ ಟವರ್​ಗೆ ಧಾವಿಸಿದಾಗ ಆಘಾತಕ್ಕೊಳಗಾದರು. ಸೌರಭ್‌ನ ಫ್ಲಾಟ್‌ಗೆ ಆಗಮಿಸಿದಾಗ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ನ (ಬಿಎಚ್‌ಇಎಲ್) ಹೆಚ್​ಆರ್ ಅಧಿಕಾರಿ ಶಿಲ್ಪಾ ಗೌತಮ್ ಅವರ ಶವವು ಕೊಠಡಿಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಫ್ಯಾನ್​ಗೆ ನೇತಾಡುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ: ಕೆಎಎಸ್​ ಅಧಿಕಾರಿ ಪತ್ನಿ ಚೈತ್ರಾರದ್ದು ಕೊಲೆಯಲ್ಲ ಆತ್ಮಹತ್ಯೆ, ಪೊಲೀಸ್​ ತನಿಖೆಯಲ್ಲಿ ಬಯಲು

ಶಿಲ್ಪಾ ಮತ್ತು ಸೌರಭ್ ಕಳೆದ 3 ವರ್ಷಗಳಿಂದ ಸಂಬಂಧ ಹೊಂದಿದ್ದರು ಎಂದು ಶಿಲ್ಪಾ ಗೌತಮ್ ಕುಟುಂಬ ಆರೋಪಿಸಿದೆ. ಅವರು ಡೇಟಿಂಗ್ ಅಪ್ಲಿಕೇಶನ್ ಮೂಲಕ ಭೇಟಿಯಾಗಿದ್ದರು, ಇಬ್ಬರೂ ಬಹಳ ಬೇಗ ಕ್ಲೋಸ್ ಆಗಿದ್ದರು. ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದ ಅವರ ಮಧ್ಯೆ ಮದುವೆ ವಿಚಾರಕ್ಕೆ ಆಗಾಗ ಜಗಳ ನಡೆಯುತ್ತಿತ್ತು. ಅದೇ ಜಗಳದಿಂದ ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಶಿಲ್ಪಾಳ ತಂದೆ ಒ.ಪಿ ಗೌತಮ್ ಸೌರಭ್ ವಿರುದ್ಧ ವಂಚನೆ ಮತ್ತು ದೈಹಿಕ ಕಿರುಕುಳದ ಆರೋಪ ಮಾಡಿದ್ದಾರೆ. ಐಆರ್‌ಎಸ್ ಅಧಿಕಾರಿ ಸೌರಭ್ ನನ್ನ ಮಗಳು ಶಿಲ್ಪಾಳನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ಅದರಂತೆ ನಡೆದುಕೊಳ್ಳಲು ವಿಫಲರಾಗಿದ್ದಾರೆ. ಇದರಿಂದ ಅವರಿಬ್ಬರ ನಡುವೆ ಆಗಾಗ ವಾದಗಳು ಮತ್ತು ದೈಹಿಕ ಹಲ್ಲೆ ನಡೆಯುತ್ತಿತ್ತು ಎಂದು ಆರೋಪಿಸಿದ್ದಾರೆ. ಸೌರಭ್ ನನ್ನ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸೌರಭ್ ಅವರು ಶಿಲ್ಪಾಳನ್ನು ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಆಮಿಷ ಒಡ್ಡಿ ಪದೇ ಪದೇ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸೌರಭ್‌ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಬಾತ್​​ ರೂಮ್​ನ​ಲ್ಲಿ ಯುವತಿ ಶವ ಪತ್ತೆ ಕೇಸ್​: ಪ್ರಬುದ್ಧಳ ಕೈ ಕೋಯ್ದು ಕೊಲೆಗೈದ ಬಾಲಕ

ಡೇಟಿಂಗ್ ಆ್ಯಪ್ ಮೂಲಕ ಶಿಲ್ಪಾ ಅವರನ್ನು ಭೇಟಿಯಾಗಿದ್ದರೂ ಅದು 3 ತಿಂಗಳ ಹಿಂದೆಯೇ ಹೊರತು ಶಿಲ್ಪಾ ಕುಟುಂಬದವರು ಹೇಳಿಕೊಂಡಂತೆ 3 ವರ್ಷಗಳ ಹಿಂದೆ ಅಲ್ಲ ಎಂದು ಸೌರಭ್ ಪ್ರತಿಕ್ರಿಯಿಸಿದ್ದಾರೆ. ಶಿಲ್ಪಾ ಸಾಯುವುದಕ್ಕೂ ಮೊದಲು ನಮ್ಮಿಬ್ಬರ ಮಧ್ಯೆ ಮದುವೆ ವಿಷಯಕ್ಕೆ ವಾಗ್ವಾದ ನಡೆದಿತ್ತು. ನಂತರ ಆಕೆ ರೂಮಿನ ಬಾಗಿಲು ಹಾಕಿಕೊಂಡಿದ್ದಳು. ನಾನು ಕೂಡ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಬಹಳ ಹೊತ್ತಾದರೂ ರೂಂ ಬಾಗಿಲು ತೆರೆಯದಿದ್ದಾಗ ಸೆಕ್ಯುರಿಟಿಯನ್ನು ಕರೆಸಿ ರೂಂ ಬಾಗಿಲು ಒಡೆಸಿದೆ. ಆಗ ಆಕೆ ನೇಣು ಹಾಕಿಕೊಂಡಿದ್ದು ಗೊತ್ತಾಗಿ ಪೊಲೀಸರಿಗೆ ವಿಷಯ ತಿಳಿಸಿದೆ ಎಂದು ಸೌರಭ್ ಹೇಳಿದ್ದಾರೆ.

ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಪೊಲೀಸರು ಅವರಿಬ್ಬರ ಮೊಬೈಲ್ ಸಂಭಾಷಣೆಯ ಪರಿಶೀಲನೆ ಮಾಡುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ