ಹೊಳೆನರಸೀಪುರ: ಮಹಿಳೆಯನ್ನು ಬರ್ಬರ ಹತ್ಯೆಗೈದು ಪರಾರಿಯಾದ ದುಷ್ಕರ್ಮಿಗಳು

| Updated By: ಗಂಗಾಧರ​ ಬ. ಸಾಬೋಜಿ

Updated on: Dec 24, 2022 | 4:20 PM

ಮಹಿಳೆಯ ಬರ್ಬರ ಹತ್ಯೆ ಮಾಡಿ, ದುಷ್ಕರ್ಮಿಗಳು ಪರಾರಿಯಾಗಿರುವಂತಹ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗಂಗೂರು ಗ್ರಾಮದಲ್ಲಿ ನಡೆದಿದೆ.

ಹೊಳೆನರಸೀಪುರ: ಮಹಿಳೆಯನ್ನು ಬರ್ಬರ ಹತ್ಯೆಗೈದು ಪರಾರಿಯಾದ ದುಷ್ಕರ್ಮಿಗಳು
ಪ್ರಾತಿನಿಧಿಕ ಚಿತ್ರ
Follow us on

ಹಾಸನ: ಕತ್ತು ಸೀಳಿ ಮಹಿಳೆಯ ಬರ್ಬರ (brutally murdered) ಹತ್ಯೆ ಮಾಡಿ, ದುಷ್ಕರ್ಮಿಗಳು ಪರಾರಿಯಾಗಿರುವಂತಹ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗಂಗೂರು ಗ್ರಾಮದಲ್ಲಿ ನಡೆದಿದೆ. ಪಾರ್ವತಮ್ಮ(58) ಹತ್ಯೆಯಾದ ಮಹಿಳೆ. ಇಂದು(ಡಿ. 24) ಬೆಳಿಗ್ಗೆ ಹತ್ತು ಗಂಟೆ ಸಮಯದಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪಾರ್ವತಮ್ಮ ಪತಿ ರಾಜೇಗೌಡ ಹೊರಗೆ ಹೋಗಿದ್ದಾಗ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಮಾಸ್ಕ್ ಧರಿಸಿ ಇಬ್ಬರು ಬೈಕ್‌ನಲ್ಲಿ ಬಂದು ಕೊಲೆ ಮಾಡಿರುವ ಆರೋಪ ಮಾಡಿದ್ದು, ಗ್ರಾಮಸ್ಥರು ದುಷ್ಕರ್ಮಿಗಳು ಬೈಕ್​ನಲ್ಲಿ ಪರಾರಿಯಾಗುವುದನ್ನು ನೋಡಿದ್ದಾರೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಪ್ಪಳ್ಳ ಜಿಲ್ಲೆಯಲ್ಲಿ ಇನ್​​ಸ್ಟಾಗ್ರಾಂ ಮೂಲಕ ಲವ್ ಜಿಹಾದ್​?

ಕೊಪ್ಪಳ್ಳ: ಇನ್​​ಸ್ಟಾಗ್ರಾಂನಲ್ಲಿ ಹಿಂದೂ ಯುವತಿ, ಮುಸ್ಲಿಂ ಯುವಕನ ಮಧ್ಯೆ ಪ್ರೀತಿ ಉಂಟಾಗಿ ಮನೆಯಿಂದ ಓಡಿಹೋಗಿ ಮದುವೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನಡೆದಿದೆ. ಆದರೆ ಇದು ಇನ್​​ಸ್ಟಾಗ್ರಾಂ ಮೂಲಕ ಲವ್ ಜಿಹಾದ್​ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೈದರಾಬಾದ್​ ಮೂಲದ ಶೇಕ್ ವಹೀದ್​ ಎನ್ನುವವರ ಜೊತೆ ಮುಸ್ಲಿಂ ಸಂಪ್ರದಾಯದಂತೆ ಯುವತಿ ಮದುವೆಯಾಗಿದ್ದಾಳೆ.  4 ವರ್ಷದ ಹಿಂದೆ ಇನ್​​ಸ್ಟಾಗ್ರಾಂ ಮೂಲಕ ಪರಿಚಯ ಆಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿ ಇಬ್ಬರು ಮದುವೆ ಆಗಿದ್ದರು.

ಜೋಡಿ ಮದುವೆ ಬಗ್ಗೆ ಲವ್ ಜಿಹಾದ್ ಆರೋಪ ಹಿನ್ನೆಲೆ ಪ್ರೇಮಿಗಳಿಬ್ಬರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಲವಂತದ ಮತಾಂತರದ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ. ಮನಪೂರ್ವಕವಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ವಿವಾಹ ಆಗಿರುವುದಾಗಿ ಯುವತಿ ಖುದ್ದು ಪೊಲೀಸ್​​ ಎದುರು ಸ್ಪಷ್ಟಪಡಿಸಿದ್ದಾಳೆ.

ಇದನ್ನೂ ಓದಿ: ನಕಲಿ ಮರಣಪತ್ರ ಸೃಷ್ಟಿಸಿ ಆಸ್ತಿ ಕಬಳಿಕೆ; ಹಲಸೂರು ಗೇಟ್ ಠಾಣೆ ಪೊಲೀಸರಿಂದ ನಾಲ್ವರ ಬಂಧನ

ಹೊಸ ವರ್ಷ ಆಚರಣೆ; ಮಂಗಳೂರಿನ ಮೇಲೆ ಡ್ರಗ್​ ಪೆಡ್ಲರ್​ಗಳ ಕಣ್ಣು 

ಹೊಸ ವರ್ಷಾಚರಣೆ ಆಚರಿಸಲು ಮಂಗಳೂರಿಗೆ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸುವ ಸಾಧ್ಯತೆ ಹಿನ್ನೆಲೆ ಡ್ರಗ್ ಪೆಡ್ಲರ್​ಗಳ ಕಣ್ಣು ಮಂಗಳೂರಿನ ಮೇಲೆ ಬಿದ್ದಿದೆ. ಕೇರಳ ಸೇರಿದಂತೆ ವಿವಿಧ ಕಡೆಯಿಂದ ಗಾಂಜಾ, ಡ್ರಗ್ಸ್ ಅಪಾರ ಪ್ರಮಾಣದಲ್ಲಿ ಬರುವ ಸಾಧ್ಯತೆ ಇದ್ದು, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ.

ವಿಜಯಪುರದಲ್ಲಿ ಅಂಗನವಾಡಿ ಆಹಾರದಲ್ಲಿ ಹುಳುಗಳು

ವಿಜಯಪುರ: ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರದಲ್ಲಿ ಹುಳುಗಳು ಪತ್ತೆಯಾದ ಘಟನೆ ಜಿಲ್ಲೆಯ ಬಸವಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿ ನಡೆದಿದೆ. ಬಹುಧಾನ್ಯಳಿಂದ ತಯಾರಿಸಿದ ಪೌಡರ್ ಪುಷ್ಠಿ ಆಹಾರ ಕಳಪೆಯಾಗಿದೆ ಎಂದು ಆರೋಪಿಸಲಾಗಿದೆ. ಮನಗೂಳಿ ಪಟ್ಟಣದ ವಾರ್ಡ್ ನಂಬರ್ 15 ರ ಅಂಗನಾಡಿ ಕೇಂದ್ರಕ್ಕೆ ನೀಡಿರುವ ಪುಷ್ಠಿ ಪೌಡರ್​​ನಲ್ಲಿ ಹುಳುಗಳು ಪತ್ತೆಯಾಗಿದೆ.

ಇದನ್ನೂ ಓದಿ: Crime News: ಗೋವಾದಿಂದ ಬೆಂಗಳೂರಿಗೆ ಡ್ರಗ್ಸ್ ಸಾಗಾಟ, ಸಿಸಿಬಿ ಪೊಲೀಸರ ಬಲೆಗೆ ಬಿದ್ದ ವಿದೇಶಿ ಪ್ರಜೆ

ಅಪಘಾತದಲ್ಲಿ ಇಬ್ಬರು ಖೋ ಖೋ ಕ್ರೀಡಾಪಟುಗಳ ಸಾವು

ಯಾದಗಿರಿ: ಟಂಟಂ ವಾಹನಕ್ಕೆ ಟ್ರ್ಯಾಕ್ಟರ್​​​ ಡಿಕ್ಕಿ (Accident) ಹೊಡೆದು ಇಬ್ಬರು ದುರ್ಮರಣ ಹೊಂದಿದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಸಿದ್ದಾಪುರ ಬಳಿ ನಡೆದಿದೆ. ದೇವರಗೋನಾಲ್ ನಿವಾಸಿ ವೆಂಕಟೇಶ (21) ಮತ್ತು ನಾರಾಯಣ (20) ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ. ವೆಂಕಟೇಶ ಮತ್ತು ನಾರಾಯಣ ಅವರು ನಿನ್ನೆ ರಾತ್ರಿ ಸುರಪುರದಿಂದ ತಮ್ಮ ಗ್ರಾಮಕ್ಕೆ ತರಳುತ್ತಿದ್ದಾಗ ಈ ಅವಘಡ ಸಂಭವಿಸಿದ್ದು, ಗಾಯಗೊಂಡ ಐವರನ್ನು ಕಲಬುರಗಿ ಜಿಲ್ಲಾಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುರ್ಘಟನೆಯಲ್ಲಿ ಮೃತಮಟ್ಟ ಇಬ್ಬರು ಯುವಕರು ಖೋ ಖೋ ಕ್ರೀಡಾಪಟುಗಳಾಗಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.