ಕೋಲಾರ: ವರ್ಷದ ಹಿಂದಿನ ಮಹಿಳೆಯ ಕೊಲೆ ಪ್ರಕರಣ ಸುಖಾಂತ್ಯ! ಹತ್ಯೆ ಮಾಡಿದ್ದ ಆರೋಪಿ ಅಂದರ್
ಅದು ಒಂದು ವರ್ಷದ ಹಿಂದೆ ಕೆರೆಯಲ್ಲಿ ಸಿಕ್ಕಿದ್ದ ಅಪರಿಚಿತ ಮಹಿಳೆಯ ಶವ, ಯಾರೋ ಕೊಲೆ ಮಾಡಿ ಮಹಿಳೆಯ ಶವಕ್ಕೆ ಶವಕ್ಕೆ ಕಲ್ಲು ಕಟ್ಟಿ ಕೆರೆಯಲ್ಲಿ ಬಿಸಾಡಿ ಹೋಗಿದ್ದರು. ಆದರೆ, ಮಹಿಳೆಯ ಗುರುತು ಮಾತ್ರ ಪತ್ತೆಯಾಗಿರಲಿಲ್ಲ. ಆದರೆ, ಕೊಲೆಯಾದ ಒಂದು ವರ್ಷದ ನಂತರ ಹತ್ಯೆಯ ಸುಳಿವು ಸಿಕ್ಕಿದ್ದು, ಆರೋಪಿ ಕೂಡ ಅಂದರ್ ಆಗಿದ್ದಾನೆ.
![ಕೋಲಾರ: ವರ್ಷದ ಹಿಂದಿನ ಮಹಿಳೆಯ ಕೊಲೆ ಪ್ರಕರಣ ಸುಖಾಂತ್ಯ! ಹತ್ಯೆ ಮಾಡಿದ್ದ ಆರೋಪಿ ಅಂದರ್](https://images.tv9kannada.com/wp-content/uploads/2024/03/kolar-the-murder-case-of-a-woman-a-year-ago-has-a-happy-ending-arrest-is-the-accused-who-killed.jpg?w=1280)
ಆರೋಪಿ, ಮೃತ ಮಹಿಳೆ
ಕೋಲಾರ, ಮಾ.28: ಕಳೆದ 2023 ಏಪ್ರಿಲ್ 19 ರಂದು ಕೋಲಾರ ತಾಲ್ಲೂಕಿನ ಅಮ್ಮೇರಹಳ್ಳಿ ಕೆರೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರ ಶವವೊಂದು ಕೋಲಾರ(Kolar) ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿ ನಂತರ ಶವಕ್ಕೆ ಕಲ್ಲು ಕಟ್ಟಿ ಕೆರೆಯಲ್ಲಿ ಬಿಸಾಡಿರುವುದು ತಿಳಿದು ಬಂದಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರಿಗೆ ಮೃತಳ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ಬೆನ್ನು ಬಿಡದೆ ನಿರಂತವಾಗಿ ಮೃತ ಮಹಿಳೆಯ ಸುಳಿವಿನ ಜಾಡು ಹಿಡಿದಿದ್ದ ಪೊಲೀಸರಿಗೆ ಬರೊಬ್ಬರಿ ಒಂದು ವರ್ಷದ ನಂತರ ಮೃತಳ ಗುರುತು ಪತ್ತೆಯಾಗಿದ್ದು, ಕೊಲೆ ಮಾಡಿ ಮಾಡಿದ ಆರೋಪಿಗಳನ್ನು ಕೂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಷ್ಟಕ್ಕೂ ಕೊಲೆಯಾದ ಮಹಿಳೆ ಬೆಂಗಳೂರಿನ ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಗರದ ರಾಮರೆಡ್ಡಿ ಕಾಲೋನಿಯ ಸುಲ್ತಾನಾ ತಾಜ್, ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಅಬ್ರಾರ್ ಅಹಮದ್ ಕೊಲೆ ಮಾಡಿದ ಆರೋಪಿ ಎನ್ನಲಾಗಿದ್ದು, ಆತನನ್ನು ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದು. ಅವರಿಂದ ಒಂದು ಕಾರ್, ಹಾಗೂ ಕೊಲೆಗೆ ಬಳಸಿದ್ದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆ ವಿವರ
ಕೋಲಾರದ ನೂರ್ ನಗರದ ನಿವಾಸಿ ಅಬ್ರಾರ್ ಅಹಮದ್, ಬೆಂಗಳೂರಿನ ರಾಮಯ್ಯರೆಡ್ಡಿ ಕಾಲೋನಿಯಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡು ಹಲವು ವರ್ಷಗಳಿಂದ ವಾಸವಾಗಿದ್ದ. ಅಬ್ರಾರ್ ಅಹಮದ್ಗೆ ಅದೇ ಏರಿಯಾದಲ್ಲಿ ವಾಸವಿದ್ದ ಸೌಂದರ್ಯ ವರ್ಧಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಸುಲ್ತಾನಾ ತಾಜ್ ಎಂಬಾಕೆ ಪರಿಚಯವಾಗಿತ್ತು. ಸುಲ್ತಾನಾಗೆ ಗಂಡ ಇರಲಿಲ್ಲ, ಮಕ್ಕಳಿದ್ದರು. ಇನ್ನು ಅಬ್ರಾರ್ಗೂ ಮದುವೆಯಾಗಿ ಮಕ್ಕಳಿದ್ದರೂ, ಆದರೂ ಇವರಿಬ್ಬರ ಪರಿಚಯ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಸುಲ್ತಾನಾ, ಅಬ್ರಾರ್ಗೆ ಆಗಾಗ ಪೋನ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದಳು. ಅಲ್ಲದೆ ಅವರಿಬ್ಬರ ಖಾಸಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು ನಿನ್ನ ಹೆಂಡತಿ ಮಕ್ಕಳಿಗೆ ತೋರಿಸುವುದಾಗಿ ಬೆದರಿಕೆ ಹಾಕುತ್ತಿದ್ದಳಂತೆ ಇದರಿಂದ ಬೇಸತ್ತಿದ್ದ ಅಬ್ರಾರ್ ಅಹಮದ್ ಕಳೆದ 17-ಮಾರ್ಚ್ 2023 ರಂದು ರಂಜಾಸ್ ತಿಂಗಳಲ್ಲಿ ಉಪವಾಸ ಮುಗಿದ ನಂತರ ಉಪವಾಸ ಬಿಡೋದಕ್ಕೆ ಹೊರಗೆ ಹೋಗಿ ಏನಾದರೂ ತಿಂದು ಬರೋಣ ಬಾ ಎಂದು ಹೆಚ್ಎಎಲ್ ಪೊಲೀಸ್ ಠಾಣಾ ಬಳಿಯ ಬಸ್ ನಿಲ್ಧಾಣದಲ್ಲಿ ಸುಲ್ತಾನಾ ಸ್ಕೂಟಿ ನಿಲ್ಲಿಸಿ ನಂತರ ಆಕೆಯನ್ನು ತನ್ನ ಸ್ಯಾಂಟ್ರೋ ಕಾರ್ನಲ್ಲಿ ಹತ್ತಿಸಿಕೊಂಡು ಸೀದಾ ಕೋಲಾರದತ್ತ ಬಂದಿದ್ದ.
![](https://images.tv9kannada.com/wp-content/uploads/2024/03/new-project-33-1.jpg)
ಅಬ್ರಾರ್ ಹಾಗೂ ಆತನ ಬಾಮೈದ ಸಾಧಿಕ್ ಪಾಷಾ ಕೋಲಾರದ ಅಮ್ಮೇರಹಳ್ಳಿ ಕೆರೆಯ ಬಳಿ ಆಕೆಗೆ ಚಾಕುವಿನಿಂದ ಇರಿದು, ಜಾಕ್ ರಾಡ್ನಿಂದ ಹೊಡೆದು ಕೊಲೆ ಮಾಡಿ ನಂತರ ಆಕೆಯ ಬುರ್ಖಾದೊಳಗೆ ಕಲ್ಲುಗಳನ್ನು ಹಾಕಿ ಶವವನ್ನು ಅಮ್ಮೇರಹಳ್ಳಿ ಕೆರೆಗೆ ಬಿಸಾಡಿ ಬಂದಿದ್ದರು. ಮಗಳು ಮನೆಗೆ ಬಾರದಕ್ಕೆ ಸುಲ್ತಾನಾ ತಾಜ್ ತಾಯಿ ಹಸೀನಾ ತಾಜ್ ಹೆಚ್ಎಎಲ್ ಪೊಲೀಸ್ ಠಾಣೆಗೆ ನಾಪತ್ತೆ ಪ್ರಕರಣ ದಾಖಲು ಮಾಡಿದ್ದರು. ಅಲ್ಲಿ ನಾಪತ್ತೆಯಾದವಳು, ಇಲ್ಲಿ ಕೊಲೆಯಾದವಳ ಗುರುತು ಮಾತ್ರ ಪತ್ತೆಯಾಗಿರಲಿಲ್ಲ. ಆದ್ರೆ, ಕೋಲಾರ ಗ್ರಾಮಾಂತರ ಠಾಣೆಯ ಪೊಲೀಸರ ನಿರಂತರ ತನಿಖೆಯಿಂದ ಕೊಲೆ ಪ್ರಕರಣ ಬಯಲಾಗಿದೆ.
ಸದ್ಯ ಈ ಪ್ರಕರಣದಲ್ಲಿ 6 ಲಕ್ಷ ಕಾಲ್ಗಳನ್ನು ಪರೀಕ್ಷಿಸಲಾಗಿದೆ, ಈ ವೇಳೆ ಆರೋಪಿ 60 ಮೊಬೈಲ್ ಪೋನ್ ಹಾಗೂ 35 ಸಿಮ್ ಕಾರ್ಡ್ಗಳನ್ನು ಬಳಸಿರುವುದು ಕೂಡ ತಿಳಿದು ಬಂದಿದೆ. ಒಟ್ಟಾರೆ ಒಂದು ವರ್ಷಗಳ ನಂತರ ಕೊಲೆ ಪ್ರಕರಣವನ್ನು ಪೊಲೀಸರ ತನಿಖೆಯಿಂದ ಹೊರಬಂದಿದೆ. ಆರೋಪಿಗಳು ತಾವೇ ಬುದ್ದಿವಂತರು, ನಾವು ಮಾಡಿದ ಕೊಲೆ ಯಾರಿಗೂ ತಿಳಿಯೋದಿಲ್ಲ ಎಂದು ಆರಾಮಾಗಿದ್ದರು. ಆದರೆ, ತಪ್ಪು ಮಾಡಿದವರು ಸಿಕ್ಕಿಹಾಕಿಕೊಳ್ಳಲೇ ಬೇಕು. ಕಾನೂನಿನಿಂದ ಯಾರೂ ತಪ್ಪಿಸಿ ಕೊಳ್ಳೋದಕ್ಕೆ ಸಾಧ್ಯವಿಲ್ಲ ಎನ್ನುವುದಕ್ಕೆ ಈ ಕೊಲೆ ಪ್ರಕರಣವೇ ಸಾಕ್ಷಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿ