ಮಂಡ್ಯ: ಮಗಳ ಮುಂದೆಯೇ ತಾಯಿಯ ಬರ್ಬರ ಹತ್ಯೆ; ಪೂಜೆ ಮುಗಿಸಿಕೊಂಡು ಬರುವಾಗ ನಡುರಾತ್ರಿ ಕೊಲೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 13, 2023 | 5:59 PM

ಆಕೆ ತನ್ನ ಮಗಳ ಜೊತೆ ಮನೆದೇವರ ಹಬ್ಬವೆಂದು ಗ್ರಾಮದಲ್ಲಿಯೇ ನಡೆಯುತ್ತಿದ್ದ ಪೂಜಾ ಕಾರ್ಯಕ್ಕೆಂದು ತೆರಳಿದ್ರು. ಪೂಜೆ ಮುಗಿಸಿಕೊಂಡು ನಡುರಾತ್ರಿ ತನ್ನ ಮಗಳ ಜೊತೆ ಮನೆಗೆ ವಾಪಾಸ್ ಹೋಗುತ್ತಿದ್ದರು. ಇನ್ನೇನೂ ಮನೆ ತಲುಪಬೇಕು. ಅಷ್ಟರಲ್ಲಿಯೇ ಹಿಂದಿನಿಂದ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿ, ಮಗಳ ಮುಂದೇಯೇ ತಾಯಿಯನ್ನ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ಮಂಡ್ಯ: ಮಗಳ ಮುಂದೆಯೇ ತಾಯಿಯ ಬರ್ಬರ ಹತ್ಯೆ; ಪೂಜೆ ಮುಗಿಸಿಕೊಂಡು ಬರುವಾಗ ನಡುರಾತ್ರಿ ಕೊಲೆ
ತಾಯಿಯನ್ನು ನೆನೆದು ಮಗಳ ಕಣ್ಣೀರು
Follow us on

ಮಂಡ್ಯ, ಡಿ.13: ಗ್ರಾಮದಲ್ಲಿ ನಡೆಯುತ್ತಿದ್ದ ಮನೆದೇವರ ಪೂಜೆ ಮುಗಿಸಿಕೊಂಡು ವಾಪಾಸ್ ತನ್ನ ಮನೆಗೆ ಮಗಳ ಜೊತೆ ಬರುತ್ತಿದ್ದ ತಾಯಿಯನ್ನ ದುಷ್ಕರ್ಮಿಯೊಬ್ಬ ಮಗಳ ಮುಂದೆಯೇ ಭೀಕರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ (Pandavapura) ತಾಲೂಕಿನ ಎಲೆಕೆರೆ ಗ್ರಾಮದಲ್ಲಿ ನಡೆದಿದೆ. ಪಾರ್ವತಮ್ಮ(50) ಕೊಲೆಯಾದ ದುರ್ದೈವಿ. ಮೊನ್ನೆ(ಡಿ.11) ರಾತ್ರಿ ಪಾರ್ವತಮ್ಮ, ತನ್ನ ಮಗಳಾದ ಅರ್ಪಿತಾ ಜೊತೆ ಗ್ರಾಮದಲ್ಲಿಯೇ ನಡೆಯುತ್ತಿದ್ದ ದೇವರ ಪೂಜೆಗೆಂದು ಹೋಗಿದ್ದರು. ಕೊನೆಯ ಕಾರ್ತಿಕದ ಸೋಮವಾರ ಆಗಿದ್ದರಿಂದ ಗ್ರಾಮದ ಸಂಬಂಧಕರೆಲ್ಲ ಸೇರಿದಂತೆ ಪೂಜೆ ಸಹಾ ಮಾಡಿದ್ರು. ಹೀಗಾಗಿ ಪೂಜೆಗೆಂದು ಹೋಗಿ ವಾಪಾಸ್ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ವಾಪಾಸ್
ಮನೆಗೆಂದು ಬರುತ್ತಿದ್ದರು. ಆದರೆ, ಇನ್ನೇನೂ ಮನೆ ಮುಟ್ಟಬೇಕು ಅನ್ನವಷ್ಟರಲ್ಲಿ ಹಿಂದಿನಿಂದ ಜರ್ಕಿನ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಅರ್ಧ ಕಿಲೋಮೀಟರ್ ಫಾಲೋ ಮಾಡಿಕೊಂಡು ಬಂದ ದುಷ್ಕರ್ಮಿ, ಪಾರ್ವತಮ್ಮಳನ್ನ ಆಕೆಯ ಮಗಳು ಅರ್ಪಿತಾ ಮುಂದೆಯೇ ಚಾಕುವಿನಿಂದ ಕತ್ತುಕೊಯ್ದು ಕೊಲೆಗೈದು ಪರಾರಿಯಾಗಿದ್ದಾನೆ.

ಮೃತ ಪಾರ್ವತಮ್ಮನ ಗಂಡ, ಮೂರು ವರ್ಷದ ಕೆಳಗೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇನ್ನು ಆಕೆಯ ಮಗಳು, ಗಂಡನ ಜೊತೆ ಜಗಳವಾಡಿಕೊಂಡು ತನ್ನ ತಾಯಿಯ ಜೊತೆಗೆ ಬಂದು ನೆಲೆಸಿದ್ದಳು. ಆದರೆ, ಯಾರ ಜೊತೆಗೂ ದ್ವೇಷ ಇಲ್ಲದ ಪಾರ್ವತಮ್ಮಳನ್ನ ಅಂದು ನಡುರಾತ್ರಿ ಕೊಲೆಗೈದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಇನ್ನು ಆಸ್ತಿ, ಚಿನ್ನಾಭರಣಕ್ಕಾಗಿ ಕೊಲೆ ಮಾಡುವುದಾದರೇ, ಪಾರ್ವತಮ್ಮಳ್ಳನ್ನ ಮಾತ್ರ ಟಾರ್ಗೆಟ್ ಮಾಡಿ, ಚಿನ್ನಾಭರಣಗಳನ್ನು ಕಿತ್ತುಕೊಳ್ಳದೇ ಹೋಗಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.

ಇದನ್ನೂ ಓದಿ:ಆಸ್ತಿಗಾಗಿ ಗಂಡನ ಭೀಕರ ಕೊಲೆ ಕೇಸ್​ಗೆ ಸಿಕ್ಕಿದೆ ಟ್ವಿಸ್ಟ್! ಕ್ರಿಕೆಟ್ ಬೆಟ್ಟಿಂಗ್ ಚಟ್ಟ?

ಇನ್ನು ಘಟನೆ ಕುರಿತು ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳವನ್ನ ಕರೆಯಿಸಿ ತನಿಖೆ ನಡೆಸಿದ್ದಾರೆ. ಅಲ್ಲದೆ ಅನುಮಾನ ಬಂದ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಒಟ್ಟಾರೆ ನಡುರಾತ್ರಿ ಗ್ರಾಮದಲ್ಲಿಯೇ ನಡೆದ ಮಹಿಳೆಯ ಕೊಲೆ, ಇಡೀ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ತಲಾಶ್ ಮುಂದುವರೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ