ವೇದಿಕೆ ಏರಲು ನಿರಾಕರಿಸಿದ್ದಕ್ಕೆ ಪೊಲೀಸ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ!
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದ ಎಸ್. ಜಾನಕಿ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ವೇದಿಕೆ ಏರಲು ನಿರಾಕರಿಸಿದ ಪೊಲೀಸ್ ಉಮೇಶ್ ಹಾಗೂ ಅವರ ಸೋದರನ ಪುತ್ರನ ಮೇಲೆ ಭೀಕರ ಹಲ್ಲೆ ನಡೆದಿದೆ. ಶಾಸಕರ ಮಗನ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಖ್ಯಾಂಶಗಳು
- ಭದ್ರಾವತಿಯಲ್ಲಿ ವೇದಿಕೆ ಏರಲು ನಿರಾಕರಿಸಿದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ.
- ಶಾಸಕರ ಮಗನ ಬೆಂಬಲಿಗರಿಂದ ಹಲ್ಲೆ ನಡೆದಿದೆಯೆಂದು ಪೊಲೀಸ್ ದೂರು ದಾಖಲು.
- ಎಸ್. ಜಾನಕಿ ಸ್ಮರಣಾರ್ಥ ನಡೆದಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.
ಶಿವಮೊಗ್ಗ, ಆಗಸ್ಟ್ 03: ಭದ್ರಾವತಿ ಪಟ್ಟಣದ ಜನ್ನಾಪುರದಲ್ಲಿರುವ ಮಲ್ಲೇಶ್ವರ ಸಭಾಭವನದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಆಘಾತಕಾರಿ ಘಟನೆ ಸಂಭವಿಸಿದೆ. ವೇದಿಕೆ ಹಂಚಿಕೊಳ್ಳಲು ನಿರಾಕರಿಸಿದ ಕಾರಣಕ್ಕೆ ಪೊಲೀಸ್ ಸಿಬ್ಬಂದಿ ಉಮೇಶ್ ಹಾಗೂ ಅವರ ಸಹೋದರನ ಪುತ್ರ ಸುಹಾಸ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ಘಟನೆಯ ಹಿನ್ನೆಲೆ
ಖ್ಯಾತ ಗಾಯಕಿ ಎಸ್. ಜಾನಕಿ ಅವರ ಸ್ಮರಣಾರ್ಥ ಮಲ್ಲೇಶ್ವರ ಸಭಾಭವನದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ ಉಮೇಶ್ ಅವರು ಸಾರ್ವಜನಿಕರಿಗೆ ಅನ್ನದಾನ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಇದೇ ವೇಳೆ ಭದ್ರಾವತಿ ಶಾಸಕರ ಮಗ ಗಣೇಶ್ ಅವರು ಕೂಡ ವೇದಿಕೆಯಲ್ಲಿದ್ದರು.
ಅನ್ನದಾನ ಮಾಡುತ್ತಿದ್ದ ಉಮೇಶ್ ಅವರನ್ನು ವೇದಿಕೆ ಮೇಲೆ ಬರುವಂತೆ ಆಯೋಜಕರು ಹಾಗೂ ಶಾಸಕರ ಮಗ ಗಣೇಶ್ ಆಹ್ವಾನ ನೀಡಿದ್ದರು. ಆದರೆ, ಈ ಆಹ್ವಾನವನ್ನು ಉಮೇಶ್ ಸಮ್ಮತಿಸಲಿಲ್ಲ. ಭ್ರಷ್ಟರ ಜೊತೆ ನಾನು ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಹೇಳಿ ಉಮೇಶ್ ವೇದಿಕೆ ಏರಲು ನೇರವಾಗಿ ನಿರಾಕರಿಸಿದರು ಎನ್ನಲಾಗಿದೆ.
ಶಾಸಕರ ಬೆಂಬಲಿಗರಿಂದ ಹಲ್ಲೆ
ಉಮೇಶ್ ಅವರ ಈ ಹೇಳಿಕೆಯಿಂದ ಆಕ್ರೋಶಗೊಂಡ ಶಾಸಕ ಗಣೇಶ್ ಅವರ ಬೆಂಬಲಿಗರು ಮತ್ತು ಉಮೇಶ್ ನಡುವೆ ತೀವ್ರ ಮಾತಿನ ಚಕಮಕಿ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಶಾಸಕರ ಬೆಂಬಲಿಗರು ಪೊಲೀಸ್ ಉಮೇಶ್ ಹಾಗೂ ಅವರ ಜೊತೆಯಲ್ಲಿದ್ದ ಸಹೋದರನ ಮಗ ಸುಹಾಸ್ ಮೇಲೆ ಕರುಣೆಯಿಲ್ಲದೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಭೀಕರ ಹಲ್ಲೆಯ ಕುರಿತಂತೆ ಸಂತ್ರಸ್ತರು ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದು, ಸಾರ್ವಜನಿಕ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆಯೇ ನಡೆದ ಈ ಪುಂಡಾಟಿಕೆಯನ್ನು ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



