
ಕಷ್ಟಪಟ್ಟು ದುಡಿಯುವ ಪೋಷಕರ ತ್ಯಾಗ, ಮಕ್ಕಳ ಪರಿಶ್ರಮ ಮತ್ತು ಸರಿಯಾದ ಮಾರ್ಗದರ್ಶನ ಒಂದಾದರೆ ಯಾವುದೇ ಕನಸನ್ನೂ ನನಸಾಗಿಸಬಹುದು ಎಂಬುದಕ್ಕೆ ಆಂಧ್ರ ಪ್ರದೇಶದ ಕಾಕಿನಾಡ ಮೂಲದ ಅಖಿಲೇಶ್ ಉತ್ತಮ ಉದಾಹರಣೆಯಾಗಿದ್ದಾರೆ. ಕಿವುಡ ಮತ್ತು ಮೂಕ ತಂದೆಯ ಮಗನಾದ ಅಖಿಲೇಶ್ ಇದೀಗ ಕೆನಡಾ ಮೂಲದ AI ಕಂಪನಿಯಲ್ಲಿ ವರ್ಷಕ್ಕೆ 1.06 ಕೋಟಿ ರೂ. (CTC) ವೇತನದೊಂದಿಗೆ AI ಎಂಜಿನಿಯರ್ ಆಗಿ ಆಯ್ಕೆಯಾಗಿದ್ದು, ಅವರ ಸಾಧನೆ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.
ಕಾಕಿನಾಡ ಜಿಲ್ಲೆಯ ಕುತುಕುಡುಮಿಲ್ಲಿ ಎಂಬ ಸಣ್ಣ ಗ್ರಾಮದ ಗಂಗಾಧರ ರಾವ್ ಮತ್ತು ಮಾಲತಿ ದಂಪತಿ ಅತ್ಯಂತ ಸರಳ ಜೀವನ ನಡೆಸುತ್ತಿದ್ದರು. ಕಿವುಡ ಮತ್ತು ಮೂಕರಾಗಿರುವ ಗಂಗಾಧರ ರಾವ್ ಟೈಲರಿಂಗ್ ವೃತ್ತಿಯ ಮೂಲಕ ಕುಟುಂಬವನ್ನು ಪೋಷಿಸುತ್ತಿದ್ದರು. ಅವರ ಪತ್ನಿ ಮಾಲತಿ ಕೂಡ ಬಟ್ಟೆಗಳಿಗೆ ಕರಕುಶಲ ಕೆಲಸ ಮಾಡಿ ಕುಟುಂಬದ ಆದಾಯಕ್ಕೆ ಕೈಜೋಡಿಸುತ್ತಿದ್ದರು. ಆರ್ಥಿಕ ಸವಾಲುಗಳ ನಡುವೆಯೂ ತಮ್ಮ ಇಬ್ಬರು ಮಕ್ಕಳ ಶಿಕ್ಷಣಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡ ಈ ದಂಪತಿಯ ಪರಿಶ್ರಮಕ್ಕೆ ಇಂದು ಅದ್ಭುತ ಪ್ರತಿಫಲ ದೊರೆತಿದೆ.
ಅಖಿಲೇಶ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೊತಪಲ್ಲಿಯಲ್ಲಿ ಪೂರ್ಣಗೊಳಿಸಿ, ನಂತರ ಖಾಸಗಿ ಕಾಲೇಜಿನಲ್ಲಿ ಪ್ರೌಡ ಶಿಕ್ಷಣ ಮುಗಿಸಿದರು. ಬಳಿಕ ಸುರಂಪಲೆಮ್ನ ಆದಿತ್ಯ ವಿಶ್ವವಿದ್ಯಾಲಯದಲ್ಲಿ ಡೇಟಾ ಸೈನ್ಸ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು. ವಿದ್ಯಾರ್ಥಿ ಜೀವನದಿಂದಲೇ ತಾಂತ್ರಿಕ ಕೌಶಲ್ಯಗಳನ್ನು ಬೆಳೆಸಿಕೊಂಡಿದ್ದ ಅವರು ಕ್ಯಾಂಪಸ್ ಪ್ಲೇಸ್ಮೆಂಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಕೆನಡಾ ಮೂಲದ QuantRise Tech AI ಕಂಪನಿಯಿಂದ ವರ್ಷಕ್ಕೆ 1.06 ಕೋಟಿ ರೂ. (CTC) ವೇತನದ ಆಫರ್ ಲೆಟರ್ ಪಡೆದರು.
ವಿಶೇಷವೆಂದರೆ, ಅಖಿಲೇಶ್ ಈಗಾಗಲೇ ಕಂಪನಿಗೆ ಸೇರಿದ್ದು, ಸಂಪೂರ್ಣವಾಗಿ Work From Home (WFH) ಮಾದರಿಯಲ್ಲಿ AI ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಮಾನ್ಯ ಕುಟುಂಬದಿಂದ ಬಂದ ಯುವಕ ವಿಶ್ವದರ್ಜೆಯ ತಂತ್ರಜ್ಞಾನ ಕಂಪನಿಯಲ್ಲಿ ಸ್ಥಾನ ಪಡೆದಿರುವುದು ಅನೇಕ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ.
ಅಖಿಲೇಶ್ ಮಾತ್ರವಲ್ಲ, ಆದಿತ್ಯ ವಿಶ್ವವಿದ್ಯಾಲಯದ ಮತ್ತೊಬ್ಬ ವಿದ್ಯಾರ್ಥಿ ರಾಜೇಶ್ ಕೂಡ ಅದೇ ಕಂಪನಿಯಲ್ಲಿ ವರ್ಷಕ್ಕೆ 1.06 ಕೋಟಿ ರೂ. ವಾರ್ಷಿಕ ವೇತನದೊಂದಿಗೆ ಉದ್ಯೋಗ ಪಡೆದಿದ್ದಾರೆ. ವಿಶ್ವವಿದ್ಯಾಲಯದ ಆಡಳಿತದ ಪ್ರಕಾರ, ಮೊದಲ ವರ್ಷದಂದೇ ವಿದ್ಯಾರ್ಥಿಗಳಿಗೆ ವಿಶೇಷ ಪ್ಲೇಸ್ಮೆಂಟ್ ತರಬೇತಿ, ಸಂವಹನ ಕೌಶಲ್ಯ ಅಭಿವೃದ್ಧಿ ಹಾಗೂ ತಾಂತ್ರಿಕ ತರಬೇತಿ ನೀಡಲಾಗುತ್ತಿದ್ದು, ಅಂತರರಾಷ್ಟ್ರೀಯ ಮಟ್ಟದ ಉದ್ಯೋಗಗಳಿಗೆ ಅವರನ್ನು ಸಿದ್ಧಗೊಳಿಸಲಾಗುತ್ತಿದೆ.
ಅಖಿಲೇಶ್ ಅವರ ಯಶಸ್ಸು ಮತ್ತೊಮ್ಮೆ ಒಂದು ಸತ್ಯವನ್ನು ಸಾಬೀತುಪಡಿಸಿದೆ. ಕುಟುಂಬದ ಆರ್ಥಿಕ ಪರಿಸ್ಥಿತಿ ಅಥವಾ ಹಿನ್ನೆಲೆ ಯಶಸ್ಸಿಗೆ ಅಡ್ಡಿಯಾಗುವುದಿಲ್ಲ. ಪೋಷಕರ ತ್ಯಾಗ, ನಿರಂತರ ಪರಿಶ್ರಮ, ಉತ್ತಮ ಶಿಕ್ಷಣ ಮತ್ತು ಸರಿಯಾದ ಮಾರ್ಗದರ್ಶನ ಇದ್ದರೆ ಜಾಗತಿಕ ಮಟ್ಟದ ಅವಕಾಶಗಳನ್ನು ಸಾಧಿಸಬಹುದು. ಪ್ರಸ್ತುತ ಅಖಿಲೇಶ್ ಅವರ ಈ ಸಾಧನೆಗೆ ಕುಟುಂಬ ಸದಸ್ಯರು, ಗ್ರಾಮಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸುತ್ತಿದ್ದು, ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ