ಸಂಘರ್ಷಕ್ಕೆ ಕಾರಣವಾಯ್ತು 1ನೇ ತರಗತಿಗೆ 6 ವರ್ಷ ಕಡ್ಡಾಯ: ಏನಿದು ರಗಳೆ?

ಕರ್ನಾಟಕ ಶಿಕ್ಷಣ ಇಲಾಖೆ 2025-26ನೇ ಸಾಲಿಗೆ ಸಿಮಿತಗೊಳಿಸಿ ಒಂದನೇ ತರಗತಿಗೆ ಮಕ್ಕಳ ಸೇರ್ಪಡೆಗೆ ಇದ್ದ ವಯೋಮಿತಿಯನ್ನು ಸಡಲಿಕೆ ಮಾಡಿತ್ತು. ಅದೇ ವಯೋಮಿತಿ ಸಡಲಿಕೆ ವಿಚಾರ ಇದೀಗ ಮತ್ತೊಂದು ಸಂಘರ್ಷಕ್ಕೆ ಕಾರಣವಾಗಿದೆ. 2026-27ನೇ ಸಾಲಿಗೂ ವಯೋಮಿತಿ ಸಡಲಿಕೆ ನೀಡುವಂತೆ ಪೋಷಕರು ಶಿಕ್ಷಣೆ ಇಲಾಖೆಗೆ ಒತ್ತಾಯಿಸಿದ್ದಾರೆ.

ಸಂಘರ್ಷಕ್ಕೆ ಕಾರಣವಾಯ್ತು 1ನೇ ತರಗತಿಗೆ 6 ವರ್ಷ ಕಡ್ಡಾಯ: ಏನಿದು ರಗಳೆ?
ಪ್ರಾತಿನಿಧಿಕ ಚಿತ್ರ
Edited By:

Updated on: Dec 08, 2025 | 7:38 PM

ಬೆಂಗಳೂರು, ಡಿಸೆಂಬರ್​​ 08: ಒಂದನೇ ತರಗತಿ (Class 1 admission) ದಾಖಲಾತಿಗೆ ಕಡ್ಡಾಯ 6 ವರ್ಷ ತುಂಬಿರಬೇಕು ಎಂಬ ಆದೇಶ ಕಳೆದ ವರ್ಷ ದೊಡ್ಡ ಸಂಘರ್ಷಕ್ಕೆ ಕಾರಣವಾಗಿತ್ತು. ಪೋಷಕರ ಒತ್ತಾಯಕ್ಕೆ ಶಿಕ್ಷಣ ಇಲಾಖೆ (Karnataka Education Department) ಈ ವರ್ಷಕ್ಕೆ ವಿನಾಯಿತಿಯನ್ನ ನೀಡಿತ್ತು, ಆದರೆ ಈ ವಿನಾಯತಿ ಇದೀಗ ಮತ್ತೊಂದು ಹೊಸ ಸಂಘರ್ಷಕ್ಕೆ ಕಾರಣವಾಗಿದೆ.

ಸಂಘರ್ಷಕ್ಕೆ ಕಾರಣವಾಯ್ತು ವಯೋಮಿತಿ ಸಡಲಿಕೆ

ಶಾಲಾ ಶಿಕ್ಷಣ ಇಲಾಖೆ 2025-26ನೇ ಸಾಲಿಗೆ ಸಿಮಿತಗೊಳಿಸಿ ಒಂದು ವರ್ಷ ವಯೋಮಿತಿ ಸಡಲಿಕೆ ಮಾಡಿತ್ತು. ಕಳೆದ ವರ್ಷ 1ನೇ ತರಗತಿ ದಾಖಲಾತಿಗೆ 5.5 ವರ್ಷ ತುಂಬಿರಬೇಕು. ಜೊತೆಗೆ ಯುಕೆಜಿ ಅಥವಾ ಅಂಗನವಾಡಿ ಗ್ರೇಡ್-2 ಸಂಪೂರ್ಣ ಆಗಿರಬೇಕು ಅಂತಾ ಕಂಡೀಷನ್ ಮೇಲೆ ಅವಕಾಶ ನೀಡಿತ್ತು. ಮುಂದಿನ ವರ್ಷ ಕಡ್ಡಾಯವಾಗಿ ಒಂದನೇ ತರಗತಿ ದಾಖಲಾತಿಗೆ 6ವರ್ಷ ತುಂಬಿರಬೇಕು ಅಂತಾ ಹೇಳಿದ್ದರು. ಆದರೆ ಈಗ ಮತ್ತೆ ಪೋಷಕರು ಪ್ರಸಕ್ತ ವರ್ಷ 2026-27ನೇ ಸಾಲಿಗೂ ವಯೋಮಿತಿ ಸಡಲಿಕೆ ನೀಡಿ ಎನ್ನುತ್ತಿದ್ದಾರೆ. ರಾಜ್ಯ ಶಿಕ್ಷಣ ನೀತಿಯಲ್ಲಿ 1ನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಲಿಕೆ ಮಾಡುವಂತೆ ಪೋಷಕರು ಸರ್ಕಾರಕ್ಕೆ ಹಾಗೂ ಡಿಸಿಎಂ ಶಿವಕುಮಾರ್​​ಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಟಿವಿ9 ಇಂಪ್ಯಾಕ್ಟ್: ಮೊದಲನೇ ತರಗತಿ ಪ್ರವೇಶಕ್ಕೆ ಮಗು 6 ವರ್ಷ ಪೂರ್ತಿಗೊಳಿಸಿರಬೇಕೆಂಬ ನಿಯಮ ಸಡಲಿಸಿದ ಸರ್ಕಾರ

1ನೇ ಜೂನ್​​ನಿಂದ 90 ದಿನಗಳ ವಯೋಮಿತಿ ವಿನಾಯಿತಿಗೆ ಪೋಷಕರು ಒತ್ತಾಯ ಕೇಳಿ ಬಂದಿದೆ. 2026–27 ಶೈಕ್ಷಣಿಕ ವರ್ಷದ 1ನೇ ತರಗತಿ ಪ್ರವೇಶಕ್ಕೆ 6ವರ್ಷ ವಯೋಮಿತಿ ಕಡ್ಡಾಯ ಬೇಡ. ಕನಿಷ್ಠ 90 ದಿನಗಳ ವಿನಾಯತಿ ನೀಡಿ, ಇಲ್ಲವಾದರೆ ತೊಂದರೆ ಆಗುತ್ತದೆ ಎಂದು ಪೋಷಕರಾದ ಧನುಷ್​​ ಎಂಬುವವರು ಹೇಳಿದ್ದಾರೆ.

90 ದಿನಗಳ ವಯೋಮಿತಿ ಸಡಲಿಕೆಗೆ ಪೋಷಕರು ಪಟ್ಟು

ಸರ್ಕಾರ ಕಳೆದ ವರ್ಷ ಮಾತ್ರ 5.5 ವಯೋಮಿತಿ ಸಡಲಿಕೆ ಮಾಡಿತ್ತು. ಜೊತೆಗೆ ಯುಕೆಜಿ ಸಂಪೂರ್ಣ ಮಾಡಿರಬೇಕು. ಆದರೆ ಈಗಾಗಲೇ ಸರ್ಕಾರದ ಆದೇಶ ಪಾಲನೇ ಮಾಡಿಕೊಂಡು ಎಲ್​ಕೆಜಿ ಶಾಲೆಗೆ ದಾಖಲಾದ ಮಕ್ಕಳಿಗೆ ದೊಡ್ಡ ಸಂಕಷ್ಟ ಶುರುವಾಗಿದೆ. ಸದ್ಯ ಯುಕೆಜಿ ಮುಗಿಸಿರುವ ಮಕ್ಕಳು, ಈ ವರ್ಷ ಒಂದನೇ ತರಗತಿಗೆ ಬರುತ್ತಾರೆ. ಆದರೆ ಈ ಮಕ್ಕಳಿಗೆ ಕಡ್ಡಾಯ 6 ವರ್ಷ ಕಂಪ್ಲೀಟ್ ಆಗಿಲ್ಲ. 6 ವರ್ಷಕ್ಕೆ ಒಂದು ದಿನ ಹಾಗೂ ಒಂದು ತಿಂಗಳ ಕಡಿಮೆ ಇರುವ ಸಾವಿರಾರು ಮಕ್ಕಳು ಇದ್ದಾರೆ. ಇವರೆಲ್ಲಾ ಮತ್ತೆ ಯುಕೆಜಿ ಮಾಡಬೇಕಾದ ಸ್ಥಿತಿ ಎದುರಾಗಿದೆ. ಲಕ್ಷಾಂತರ ರೂ ಶುಲ್ಕ ಕಟ್ಟಿ ಮರಳಿ ಯುಕೆಜಿಗೆ ಸೇರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪೋಷಕರು ಕನಿಷ್ಟ 90 ದಿನಗಳ ವಯೋಮಿತಿ ಸಡಲಿಕೆಗೆ ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಒಂದನೇ ತರಗತಿ ಸೇರ್ಪಡೆಗೆ ವಯೋಮಿತಿ ಸಡಿಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಹತ್ವದ ಘೋಷಣೆ

ಒಟ್ಟಿನಲ್ಲಿ ಸರ್ಕಾರ ಒಂದು ನಿರ್ಧಾರಕ್ಕೆ ಬರಬೇಕಿದೆ. ಪದೇ ಪದೇ ಮಕ್ಕಳ ವಿಚಾರದಲ್ಲಿ ತಪ್ಪು ನಿರ್ಧಾರಗಳಿಗೆ ಕೈಹಾಕಬಾರದಾಗಿದೆ. ಕಡ್ಡಾಯ ಒಂದು ನಿರ್ಧಾರಕ್ಕೆ ಇಲಾಖೆ ಬರಬೇಕಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.