Chamarajanagar: ಯಾರ ಮೀಸಲಾತಿ ಕಡಿಮೆ ಮಾಡುತ್ತೀರಿ; ಡಿಕೆ ಶಿವಕುಮಾರ್​ಗೆ ಅಮಿತ್ ಶಾ ಪ್ರಶ್ನೆ

ಗುಂಡ್ಲುಪೇಟೆಯಲ್ಲಿ ರೋಡ್​ ಶೋ ನಡೆಸಿದ ಅಮಿತ್ ಶಾ, ಕಾಂಗ್ರೆಸ್ ಪಕ್ಷ​ ಈಗಲೂ ತುಷ್ಟೀಕರಣದ ರಾಜನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.

Chamarajanagar: ಯಾರ ಮೀಸಲಾತಿ ಕಡಿಮೆ ಮಾಡುತ್ತೀರಿ; ಡಿಕೆ ಶಿವಕುಮಾರ್​ಗೆ ಅಮಿತ್ ಶಾ ಪ್ರಶ್ನೆ
ಅಮಿತ್ ಶಾ

Updated on: Apr 24, 2023 | 3:31 PM

ಚಾಮರಾಜನಗರ: ‘ಮುಸ್ಲಿಮರಿಗೆ ಮೀಸಲಾತಿ ವಾಪಸ್​ ಕೊಡುವ ಬಗ್ಗೆ ನೀವು ಮಾತನಾಡಿದ್ದೀರಿ. ಹಾಗಿದ್ದರೆ ಯಾರ ಮೀಸಲಾತಿ ಕಡಿಮೆ ಮಾಡಿ ಅವರಿಗೆ ಕೊಡುತ್ತೀರಿ? ಕರ್ನಾಟಕದ ಜನರಿಗೆ ಉತ್ತರ ಕೊಡಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರನ್ನು ಉದ್ದೇಶಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ. ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ರೋಡ್​ ಶೋ ನಡೆಸಿದ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾನಡಿದ ಅವರು, ಕಾಂಗ್ರೆಸ್ ಪಕ್ಷ​ ಈಗಲೂ ತುಷ್ಟೀಕರಣದ ರಾಜನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷ​ ಮುಸ್ಲಿಮರಿಗೆ ಶೇ 4ರ ಮೀಸಲಾತಿ ಕೊಟ್ಟಿತ್ತು. ಆದರೆ ಬಿಜೆಪಿ ಅದನ್ನೆಲ್ಲವನ್ನೂ ತೆಗೆದು ಹಾಕಿದೆ. ಅಧಿಕಾರಕ್ಕೆ ಬಂದೇ ಬರುತ್ತೇವೆ, ಅಧಿಕಾರಕ್ಕೆ ಬಂದ ಮೇಲೆ ಮುಸ್ಲಿಮರಿಗಿರುವ ಮೀಸಲಾತಿಯನ್ನು ಕೊಡುತ್ತೇವೆ ಎಂಬುದಾಗಿ ಕಾಂಗ್ರೆಸ್​ ಅಧ್ಯಕ್ಷರು ಹೇಳಿದ್ದಾರೆ. ನೀವೇ ಹೇಳಿ ಮುಸ್ಲಿಮರಿಗೆ ಮೀಸಲಾತಿ ಕೊಡಬೇಕಾ? ಜೋರಾಗಿ ಹೇಳಿ. ಅವರಿಗೆ ಮೀಸಲಾತಿ ಕೊಡಬೇಕಾ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದರು.

‘ನಾನು ಕಾಂಗ್ರೆಸ್​ನವರಿಗೆ ಪ್ರಶ್ನೆ ಮಾಡಲು ಬಯಸುತ್ತೇನೆ. ಡಿಕೆ ಶಿವಕುಮಾರ್​ ಅವರೇ, ಮುಸ್ಲಿಮರಿಗೆ ಮೀಸಲಾತಿ ವಾಪಸ್​ ಕೊಡುವ ಬಗ್ಗೆ ಮಾತನಾಡುತ್ತಿದ್ದೀರಿ. ಅದಕ್ಕಾಗಿ ಯಾರಿಗೆ ಮೀಸಲಾತಿ ಕಡಿಮೆ ಮಾಡುತ್ತೀರಿ? ಕರ್ನಾಟಕದ ಜನರಿಗೆ ಉತ್ತರ ಕೊಡಿ. ಒಕ್ಕಲಿಗರದ್ದು ಕಡಿಮೆ ಮಾಡುತ್ತೀರಾ? ಲಿಂಗಾಯತರದ್ದು ಕಡಿಮೆ ಮಾಡುತ್ತೀರಾ? ಎಸ್​ಎಟಿ ಮೀಸಲಾತಿ ಕಡಿಮೆ ಮಾಡುತ್ತೀರಾ? ಈ ತುಷ್ಟೀಕರಣ ರಾಜನೀತಿಯನ್ನ ಮೊದಲು ಕಿತ್ತು ಹಾಕಿ. ಮೋದಿಯವರ ಅಭಿವೃದ್ಧಿ ರಾಜನೀತಿಯನ್ನು ತನ್ನಿ ಎಂದು ಅಮಿತ್ ಶಾ ಹೇಳಿದ್ದಾರೆ.

ಇದನ್ನೂ ಓದಿ: ರಾಯಚೂರು: ಬಿಜೆಪಿ ಈವರೆಗೆ ಖಾತೆ ತೆರೆಯದ ಸಿಂಧನೂರಿನಲ್ಲಿ ಪ್ರಧಾನಿ ಮೋದಿ ಮೇ 2ರಂದು ಬೃಹತ್ ಸಮಾವೇಶ

ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದೆ. ರಾಜ್ಯದಲ್ಲಿ ಬಿಜೆಪಿ ಬಹುಮತ ಗಳಿಸಲಿದ್ದು, ಅಧಿಕಾರಕ್ಕೇರಲಿದೆ ಎಂದು ಅಮಿತ್ ಶಾ ಭರವಸೆ ವ್ಯಕ್ತಪಡಿಸಿದ್ದಾರೆ.

ನಂತರ ಹಾಸನ ಜಿಲ್ಲೆಯ ಆಲೂರಿಗೆ ತೆರಳಿರುವ ಅಮಿತ್ ಶಾ ಅಲ್ಲಿ ರೋಡ್​ಶೋದಲ್ಲಿ ಭಾಗಿಯಾಗಿದ್ದಾರೆ. ಸಕಲೇಶಪುರ ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ಪರ ರೋಡ್​ಶೋ ನಡೆಸಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us