ಚುನಾವಣೆ ಗೆಲುವು, ಸೋಲಿನ ಬೆಟ್ಟಿಂಗ್‌: ಏಳು ಮಂದಿ ವಿರುದ್ಧ ಎಫ್​ಐಆರ್

ಕರ್ನಾಟಕ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದ್ದು, ನಾಳೆ (ಮೇ 13) ಫಲಿತಾಂಶ ಹೊರಬೀಳಲಿದೆ. ಈ ನಡುವೆ ಅಭ್ಯರ್ಥಿಗಳ ಸೋಲು ಗೆಲುವಿನ ಮೇಲೆ ಬೆಟ್ಟಿಂಗ್ ಕಟ್ಟುವ ಭರಾಟೆ ಜೋರಾಗಿದ್ದು, ಕೆಲವೆಡೆ ಬಹಿರಂಗವಾಗಿ ಬೆಟ್ಟಿಂಗ್ ಕಟ್ಟಲಾಗುತ್ತಿದೆ.

ಚುನಾವಣೆ ಗೆಲುವು, ಸೋಲಿನ ಬೆಟ್ಟಿಂಗ್‌: ಏಳು ಮಂದಿ ವಿರುದ್ಧ ಎಫ್​ಐಆರ್
ಮೈಸೂರಿನಲ್ಲಿ ಚುನಾವಣೆ ಗೆಲುವು, ಸೋಲಿನ ಮೇಲೆ ಬೆಟ್ಟಿಂಗ್‌ (ಸಾಂದರ್ಭಿಕ ಚಿತ್ರ)
Image Credit source: Sanjay Rawat
Rakesh Nayak Manchi

Updated on: May 12, 2023 | 9:02 PM

ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಮುಕ್ತಾಯಗೊಂಡಿದ್ದು, ನಾಳೆ (ಮೇ 13) ಫಲಿತಾಂಶ ಹೊರಬೀಳಲಿದೆ. ಈ ನಡುವೆ ಅಭ್ಯರ್ಥಿಗಳ ಸೋಲು ಗೆಲುವಿನ ಮೇಲೆ ಬೆಟ್ಟಿಂಗ್ (Betting) ಕಟ್ಟುವ ಭರಾಟೆ ಜೋರಾಗಿದ್ದು, ಕೆಲವೆಡೆ ಕುರಿ ಮೇಕೆಗಳನ್ನು ಬೆಟ್ಟಿಂಗ್ ಆಗಿ ಇಡಲಾಗುತ್ತಿದೆ. ಇನ್ನೂ ಕೆಲವೆಡೆ ಬಹಿರಂಗವಾಗಿ ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಇದೀಗ ಮೈಸೂರಿನಲ್ಲಿ ಚುನಾವಣೆ ಗೆಲುವು, ಸೋಲಿನ ಬೆಟ್ಟಿಂಗ್‌ ಅಗ್ರಿಮೆಂಟ್ ವಿಚಾರವಾಗಿ ಒಟ್ಟು ಏಳು ಮಂದಿ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ.

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ಠಾಣಾ ವ್ಯಾಪ್ತಿಯಲ್ಲಿ ದಂಧೆಕೋರರು ಛಾಪಾಕಾಗದದಲ್ಲಿ 5 ಲಕ್ಷದ ಬೆಟ್ಟಿಂಗ್ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಇದರ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ಪೊಲೀಸರು, 7 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಮತದಾನದ ಬೆನ್ನೆಲೆ ರಾಜ್ಯದಲ್ಲಿ ಹೆಚ್ಚಾದ ರಾಜಕೀಯ ಬೆಟ್ಟಿಂಗ್​: ಅಭ್ಯರ್ಥಿಗಳ ಪರ ಬಾಜಿಗಿಳಿದ ಅಭಿಮಾನಿಗಳು

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಅಗ್ರಿಮೆಂಟ್ ಪೇಪರ್​ನಲ್ಲಿ ಇರುವಂತೆ, ಜಯರಾಮ, ಪ್ರಕಾಶ್, ಶಿವರಾಜ್ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ. ಜೆಡಿಎಸ್​ ಅಭ್ಯರ್ಥಿ ಜಯಪ್ರಕಾಶ್ ಚಿಕ್ಕಣ್ಣ ಪರ ಪ್ರಕಾಶ್, ಶಿವರಾಜ್‌ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಚಿಕ್ಕಮಾದು ಪರ ಜಯರಾಮ್‌ ಬೆಟ್ಟಿಂಗ್‌ ಅಗ್ರಿಮೆಂಟ್ ಮಾಡಿದ್ದಾರೆ. ಅಲ್ಲದೆ, ತಲಾ 5 ಲಕ್ಷದಂತೆ ಒಟ್ಟು 10 ಲಕ್ಷ ನಗದು ನೇಮಿಚಂದ್ ಬಳಿ ನೀಡಲಾಗಿರುವ ಬಗ್ಗೆ ಉಲ್ಲೇಖಿಸಲಾಗಿದೆ.

ಪೂಜಾ ಎಲೆಕ್ಟ್ರಾನಿಕ್ಸ್‌ ಅಂಗಡಿಯ ಮಾಲೀಕ‌ ನೇಮಿಚಂದ್ ಬಳಿ ಬೆಟ್ಟಿಂಗ್ ಹಣವನ್ನು ನೀಡಲಾಗಿದ್ದು, ಒಂದು ವೇಳೆ ಬಿಜೆಪಿ ಗೆದ್ದರೆ ಹಣ ವಾಪಸ್ ಪಡೆಯುವ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಸದ್ಯ ಅಗ್ರಿಮೆಂಟ್‌ಗೆ ಸಹಾಯ ಮಾಡಿದ್ದ ಮೂವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ಮೈಸೂರಿನ ಪಿರಿಯಾಪಟ್ಟಣದಲ್ಲಿ ಕೂಡ ಬೆಟ್ಟಿಂಗ್ ಭರಾಟೆ ಹೆಚ್ಚಾಗಿದೆ. ನಿವೇಶನ, ಹೊಲ, ಗದ್ದೆ, ನಗದು ವಿಡಿಯೋ ಮಾಡಿ ಬೆಟ್ಟಿಂಗ್ ಕಟ್ಟಲು ಸವಾಲು ಹಾಕಲಾಗಿದೆ. ಯುವಕರು, ವೃದ್ದರು ಯಾರೂ ಬೇಕಾದರೂ ತಾಕತ್ತಿದ್ದರೆ ಇದ್ದರೆ ಬೆಟ್ಟಿಂಗ್ ಕಟ್ಟಿ ಬನ್ನಿ ಅಂತಾ​ ಕಾಂಗ್ರೆಸ್ ಅಭ್ಯರ್ಥಿ ಕೆ. ವೆಂಕಟೇಶ್ ಪರ ಚಾಲೆಂಜ್​ ಮಾಡಲಾಗಿದೆ. ಇದೇ ರೀತಿ ಸಿದ್ದರಾಮಯ್ಯ ಮತ್ತು ಸೋಮಣ್ಣ ಅಖಾಡದಲ್ಲಿರುವ ವರುಣಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲೂ ಬೆಟ್ಟಿಂಗ್ ಕಟ್ಟಲಾಗುತ್ತಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us