ವರುಣಾ ಅಖಾಡಕ್ಕಿಳಿದ ಬಿಜೆಪಿ ಘಟಾನುಘಟಿಗಳು, ಠಕ್ಕರ್ ನೀಡಲು ಇಂದು ತವರಿನತ್ತ ಹೊರಟ ಸಿದ್ದರಾಮಯ್ಯ

|

Updated on: Apr 22, 2023 | 8:38 AM

ವರುಣಾದಲ್ಲಿ ಪ್ರಚಾರ ಮಾಡಲ್ಲ ಎಂದಿದ್ದ ಸಿದ್ದರಾಮಯ್ಯ ಅವರಿಗೆ ಈಗ ಬಿಜೆಪಿ ರಣತಂತ್ರದಿಂದ ಟೆನ್ಷನ್​ ಶುರುವಾಗಿದ್ದು ಇಂದು (ಏ.22) ತವರು ಕ್ಷೇತ್ರ ವರುಣಾಗೆ ಭೇಟಿ ನೀಡಲಿದ್ದಾರೆ.

ವರುಣಾ ಅಖಾಡಕ್ಕಿಳಿದ ಬಿಜೆಪಿ ಘಟಾನುಘಟಿಗಳು, ಠಕ್ಕರ್ ನೀಡಲು ಇಂದು ತವರಿನತ್ತ ಹೊರಟ ಸಿದ್ದರಾಮಯ್ಯ
ಸಿದ್ದರಾಮಯ್ಯ
Follow us on

ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Assembly Election 2023) ವೇಗೋತ್ಕರ್ಷ ದೊರೆಯುತ್ತಿದ್ದಂತೆ ಕ್ಷೇತ್ರಗಳ ಆಯ್ಕೆ ಜೋರಾಗಿ ಸದ್ದು ಮಾಡಿತ್ತು. ಈ ವೇಳೆ ಅತಿ ಹೆಚ್ಚು ಚರ್ಚೆಯಾಗಿದ್ದು, ವಿಪಕ್ಷನಾಯಕ ಸಿದ್ದರಾಮಯ್ಯ (Siddramaiah) ಅವರ ಕ್ಷೇತ್ರ. ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿತ್ತು. ಮೊದಲು ಕೋಲಾರದತ್ತ (Kolar) ಮುಖ ಮಾಡಿದ್ದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್​ (Congress) ಹೈಕಮಾಂಡ್​​ ಕೆಂಪು ಬಾವುಟ ತೋರಿಸಿತ್ತು. ನಂತರ ವರುಣಾದಲ್ಲಿ (Varuna) ಸ್ಪರ್ಧಿಸುವುದು ಫಿಕ್ಸ್​ ಆಯಿತು. ಇನ್ನು ಸಿದ್ದರಾಮಯ್ಯ ಅವರು ವರುಣಾದಲ್ಲಿ ಸ್ಪರ್ಧಿಸುವುದು ಪಕ್ಕಾ ಆದಮೇಲೆ ವಿರೋಧಿಗಳು ವರುಣಾದಲ್ಲಿ ಅವರನ್ನು ಈ ಬಾರಿ ಸೋಲಿಸಲು ತಂತ್ರ-ಪ್ರತಿತಂತ್ರವನ್ನು ಹೆಣೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ವರುಣಾದಲ್ಲೇ ಕಟ್ಟಿ ಹಾಕಲು ಬಿಜೆಪಿ (BJP) ಮಾಸ್ಟರ್​ ಪ್ಲಾನ್​ ಮಾಡುತ್ತಿದ್ದು, ವಿ.ಸೋಮಣ್ಣ ಅವರನ್ನು ಪ್ರತಿಸ್ಪರ್ಧಿಯಾಗಿಸಿದೆ. ಅಲ್ಲದೇ ರಾಜ್ಯ ಬಿಜೆಪಿ ಘಟಕ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ (BY Vijayendra) ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್​​ ಸಂತೋಷ್​​ (BL Santosh) ಅವರನ್ನು ಕಣಕ್ಕೆ ಇಳಿಸಿದೆ. ಬಿವೈ ವಿಜಯೇಂದ್ರ ವರುಣಾ ಕಣದೊಳಗೆ ಧುಮುಕಿ ಆರ್ಭಟಿಸುತ್ತಿದ್ದರೇ, ಕಣದಿಂದ ಹೊರನಿಂತು ಬಿಎಲ್​ ಸಂತೋಷ್​ ಯೋಜನೆ ರೂಪಿಸುತ್ತಿದ್ದಾರೆ. ವರುಣಾದಲ್ಲಿ ಪ್ರಚಾರ ಮಾಡಲ್ಲ ಎಂದಿದ್ದ ಸಿದ್ದರಾಮಯ್ಯ ಅವರಿಗೆ ಈಗ ಟೆನ್ಷನ್​ ಶುರುವಾಗಿದ್ದು ಇಂದು (ಏ.22) ತವರು ಕ್ಷೇತ್ರ ವರುಣಾಗೆ ಭೇಟಿ ನೀಡಲಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣಾದಲ್ಲಿ ಪ್ರಚಾರ ಮಾಡಲ್ಲ ಎಂದಿದ್ದರು. ನಂತರ ಒಂದು ದಿನ ಪ್ರವಾಸ ಮಾಡುವುದಾಗಿ ಹೇಳಿದ್ದರು. ತದನಂತರ ಎರಡು ದಿನ ಪ್ರವಾಸ ಮಾಡುವ ಹೇಳಿದ್ದರು. ಈ ವೇಳೆ ಕೇವಲ ನಾಲ್ಕು ಗ್ರಾಮದಲ್ಲಿ ಮಾತ್ರ ಪ್ರಚಾರ ಸಭೆ ನಡೆಸುವುದಾಗಿ ತಿಳಿಸಿದ್ದರು. ಇದೀಗ ನಾಮಪತ್ರ ಸಲ್ಲಿಸಿದ ಮೂರೇ ದಿನಕ್ಕೆ ವರುಣದತ್ತ ದೌಡಾಯಿಸುತ್ತಿರುವ ಅವರು ಬರೊಬ್ಬರಿ 18 ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ.

ಇದನ್ನೂ ಓದಿ: ವರುಣಾ ಕ್ಷೇತ್ರ ಚಿತ್ರಣ; ಸಿದ್ದರಾಮಯ್ಯ ಅದೃಷ್ಟದ ಕ್ಷೇತ್ರ, ಸೋಮಣ್ಣಗೆ ಲಿಂಗಾಯತರ ಬಲ

ಬೆಳಗ್ಗೆ 10.30ಕ್ಕೆ ಹೆಲಿಕಾಪ್ಟರ್​ನಲ್ಲಿ ಸಿದ್ದರಾಮಯ್ಯ ಮೈಸೂರಿಗೆ ಆಗಮಿಸುತ್ತಾರೆ. 11 ಗಂಟೆಯಿಂದ ವರುಣಾ ಕ್ಷೇತ್ರದಲ್ಲಿ ಮತಯಾಚನೆ ಆರಂಭಿಸುತ್ತಾರೆ. 11:00 ಗಂಟೆಗೆ ಕಾರ್ಯ ಗ್ರಾಮ, 12:00 ಗಂಟೆಗೆ ಕಾರೇಪುರ ಗ್ರಾಮ, 12:30ಕ್ಕೆ ಹಾಡ್ಯ, 1:00 ಗಂಟೆಗೆ ಬಾಣೂರು, 1:30ಕ್ಕೆ ಚಿನ್ನಂಬಳ್ಳಿ, 2:00 ಗಂಟೆಗೆ ತಗಡೂರು, 2:30ಕ್ಕೆ ವರಹಳ್ಳಿ, 3:00 ಗಂಟೆಗೆ ಚುಂಚನಹಳ್ಳಿ, 3:30ಕ್ಕೆ ಹನುಮನಪುರ, 4:00ಗಂಟೆಗೆ ದಾಸನೂರು, 4:30ಕ್ಕೆ ಕಾರೆಮೋಳೆ, 5:00ಗಂಟೆಗೆ ತೊರವಳ್ಳಿ, 5:30ಕ್ಕೆ ತೊರವಳ್ಳಿ ಮೋಳೆ ಮತ್ತು ಚಿಕ್ಕಹೊಮ್ಮಾದ ಮೋಳೆ, 6:00ಗಂಟೆಗೆ ಅಂಕುಶರಾಯನ ಪುರ, 6:30ಕ್ಕೆ ಚಿಕ್ಕಹೊಮ್ಮ ಮತ್ತು ದೊಡ್ಡಹೊಮ್ಮ, 7:00ಗಂಟೆಗೆ ಅವತಾಳಪುರ ಗ್ರಾಮಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಬಳಿಕ ಪ್ರಚಾರ ಮುಗಿಸಿ ಬೆಂಗಳೂರಿಗೆ ವಾಪಸ್​ ಆಗಲಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವರುಣಾ ಕ್ಷೇತ್ರದ ಪ್ರಚಾರದ ನಿರ್ವಹಣೆ ಮತ್ತು ಕಾರ್ಯಕರ್ತರೊಂದಿಗೆ ನಿಕಟವಾಗಿ ಕೆಲಸ ಮಾಡಲು ಕೇಂದ್ರ ವೀಕ್ಷಕರಾಗಿ ತಮ್ಮ ಆಪ್ತ ದಿಲೀಪ್ ಕುಮಾರ್ ಜೈಸ್ವಾಲ್ ಅವರನ್ನು ನಿಯೋಜಿಸಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯದ ಬೇರೆ ಸ್ಥಳಗಳಲ್ಲಿ ಪ್ರಚಾರ ಮಾಡದಂತೆ ವರುಣಾ ಕ್ಷೇತ್ರದಲ್ಲಿ ಮಾತ್ರವೇ ಪ್ರಚಾರದಲ್ಲಿ ತೊಡಗಿಕೊಳ್ಳುವಂತೆ ಸಿದ್ದರಾಮಯ್ಯ ಅವರನ್ನು ಬ್ಯುಸಿಯಾಗಿರುವಂತೆ ಮಾಡಲು ಸೋಮಣ್ಣ ಮತ್ತು ಅವರ ತಂಡಕ್ಕೆ ಅಮಿತ್ ಶಾ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ