ಪಕ್ಷ ಸೋತಾಗ ಸಿಟ್ಟು ಹೊರಹಾಕುವ ಹಕ್ಕು ಕಾರ್ಯಕರ್ತರಿಗಿದೆ; ಯಾರನ್ನು ಉದ್ದೇಶಿಸಿ ಟ್ವೀಟ್ ಮಾಡಿದರು ಪ್ರತಾಪ್ ಸಿಂಹ?

ಪಕ್ಷವು ಗೆದ್ದಾಗ ನಮ್ಮನ್ನು ಎತ್ತಿ ಸಂಭ್ರಮಿಸುವ ಕಾರ್ಯಕರ್ತರಿಗೆ ಸೋತಾಗ ಪ್ರಶ್ನಿಸುವ ಹಕ್ಕೂ ಕೂಡ ಇದೆ ಎಂದು ಹೇಳಿರುವ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ, ಸೋಲಿಗಾಗಿ ಕಾರ್ಯಕರ್ತರ ಕ್ಷಮೆಯಾಚಿಸಿ ಟ್ವೀಟ್ ಮಾಡಿದ್ದಾರೆ.

ಪಕ್ಷ ಸೋತಾಗ ಸಿಟ್ಟು ಹೊರಹಾಕುವ ಹಕ್ಕು ಕಾರ್ಯಕರ್ತರಿಗಿದೆ; ಯಾರನ್ನು ಉದ್ದೇಶಿಸಿ ಟ್ವೀಟ್ ಮಾಡಿದರು ಪ್ರತಾಪ್ ಸಿಂಹ?
ಪ್ರತಾಪ್ ಸಿಂಹ

Updated on: May 18, 2023 | 3:14 PM

ಬೆಂಗಳೂರು: ಪಕ್ಷವು ಗೆದ್ದಾಗ ನಮ್ಮನ್ನು ಎತ್ತಿ ಸಂಭ್ರಮಿಸುವ ಕಾರ್ಯಕರ್ತರಿಗೆ ಸೋತಾಗ ಪ್ರಶ್ನಿಸುವ ಹಕ್ಕೂ ಕೂಡ ಇದೆ ಎಂದು ಹೇಳಿರುವ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ, ಸೋಲಿಗಾಗಿ ಕಾರ್ಯಕರ್ತರ ಕ್ಷಮೆಯಾಚಿಸಿ ಟ್ವೀಟ್ ಮಾಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿನ ಬಳಿಕ ಪಕ್ಷದ ಕಾರ್ಯಕರ್ತರು ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಇತರ ಉನ್ನತ ನಾಯಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಕಾರ್ಯಕರ್ತರ ಆಕ್ರೋಶ ಸ್ಫೋಟಗೊಂಡಿದೆ.

‘ನಮ್ಮ ಪರವಾಗಿ ಮತ ಕೇಳುವ, ಮನೆ ಮಠ ಬಿಟ್ಟು ಪಕ್ಷಕ್ಕಾಗಿ ದುಡಿಯುವ ಹಾಗೂ ಗೆದ್ದಾಗ ಹೊತ್ತು ಮೆರೆಯುವ ಕಾರ್ಯಕರ್ತನಿಗೆ ಪಕ್ಷ ಸೋತಾಗ ನಮ್ಮ ಮೇಲೆ ಸಿಟ್ಟನ್ನು ತೀಕ್ಷ್ಣವಾಗಿ ಹೊರಹಾಕುವ ಹಕ್ಕೂ ಇರುತ್ತದೆ. ಪಕ್ಷ ಸೋತು ಅನಾಥವಾಗಿರುವುದರಿಂದ ಅಪಾಯಕ್ಕೆ ಸಿಲುಕಿರುವುದು ಕಾರ್ಯಕರ್ತನೇ ಹೊರತು ಯಾವ ನಾಯಕನೂ ಅಲ್ಲ. ದಯವಿಟ್ಟು ನಮ್ಮನ್ನು ಕ್ಷಮಿಸಿ’ ಎಂದು ಪ್ರತಾಪ್ ಸಿಂಹ ಟ್ವೀಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಮುಂದುವರಿದು, ಯಾರದ್ದೋ ವೈಯಕ್ತಿಕ ಮಹತ್ವಾಕಾಂಕ್ಷೆಯಿಂದ ಸೃಷ್ಟಿಯಾಗುವ ಷಡ್ಯಂತ್ರಕ್ಕೆ ಬಲಿಯಾಗುವುದು, ಯಾರ್ಯಾರನ್ನೋ ತೆಗಳುವುದು ಬೇಡ ಎಂದು ಕಾರ್ಯಕರ್ತರಿಗೂ ಮನವಿ ಮಾಡಿದ್ದಾರೆ.


ಇದನ್ನೂ ಓದಿ: ನಳಿನ್, ಡಿವಿ ಚಿತ್ರಕ್ಕೆ ಚಪ್ಪಲಿ ಹಾರ ಪ್ರಕರಣ; ಆರೋಪಿಗಳ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿದ ನಳಿನ್ ಕುಮಾರ್ ಕಟೀಲ್

ಬಿಜೆಪಿ ಸೋಲಿನ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಸ್​ ನಿಲ್ದಾಣದ ಬಳಿಯಲ್ಲಿ ರಾತ್ರೋರಾತ್ರಿ ನಳಿನ್ ಕುಮಾರ್ ಕಟೀಲ್ ಹಾಗೂ ಸಂಸದ ಡಿವಿ ಸದಾನಂದ ಗೌಡ ಅವರ ಭಾವಚಿತ್ರ ಇರುವ ಶ್ರದ್ಧಾಂಜಲಿ ಬ್ಯಾನರ್ ಹಾಕಲಾಗಿದ್ದು, ಪ್ರಕರಣದ ಆರೋಪಿಗಳಿಗೆ ಪೊಲೀಸರು ಚಿತ್ರ ಹಿಂಸೆ ನೀಡಿದ್ದರು. ಈ ವಿಚಾರ ರಾಜ್ಯದಾದ್ಯಂತ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರೇ ಪೊಲೀಸರ ಮೇಲೆ ಒತ್ತಡ ಹೇರಿ ಹಿಂಸೆ ನೀಡುವಂತೆ ಮಾಡಿದ್ದಾರೆ ಎಂಬ ಆರೋಪ ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿಬಂದಿದೆ.

ಇದನ್ನೂ ಓದಿ: ನಳಿನ್, ಡಿವಿ ಚಿತ್ರಕ್ಕೆ ಚಪ್ಪಲಿ ಹಾಕಿದ್ದವರಿಗೆ ಮನಸೋ ಇಚ್ಚೆ ಥಳಿತ: ಪುತ್ತೂರು ಗ್ರಾಮಾಂತರ ಠಾಣೆ ಸಬ್ ಇನ್ಸ್‌ಪೆಕ್ಟರ್, ಪೇದೆ ಅಮಾನತು

ಈ ಘಟನೆಯ ಬೆನ್ನಲ್ಲೇ ಪ್ರತಾಪ್ ಸಿಂಹ ಟ್ವೀಟ್ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಆದರೆ, ಯಾವುದೇ ನಾಯಕರ ಹೆಸರನ್ನಾಗಲೀ, ಯಾವುದೇ ಘಟನೆಯನ್ನಾಗಲೀ ಅವರು ನಿರ್ದಿಷ್ಟವಾಗಿ ಟ್ವೀಟ್​​ನಲ್ಲಿ ಉಲ್ಲೇಖಿಸಿಲ್ಲ. ಆದಾಗ್ಯೂ, ಅನೇಕರು ಪ್ರತಾಪ್ ಸಿಂಹ ಅವರ ಟ್ವೀಟ್​ಗೆ ಪ್ರತಿಕ್ರಿಯಿಸಿದ್ದು, ಪುತ್ತೂರಿನ ವಿಚಾರ ತಳಕು ಹಾಕಿದ್ದಾರೆ. ಇನ್ನಾದರೂ ಅಭ್ಯರ್ಥಿ ಆಯ್ಕೆಗೂ ಮುನ್ನ ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸುವ ಬಗ್ಗೆ ಬಿಜೆಪಿ ವರಿಷ್ಠರು ಗಮನಹರಿಸಲಿ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us