ತಾಯಿಯ ಅಂತ್ಯಸಂಸ್ಕಾರ ಮುಗಿಸಿ ತಕ್ಷಣವೇ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಪೊಲೀಸ್ ಕಾನ್​ಸ್ಟೆಬಲ್; ಮೆಚ್ಚುಗೆಯ ಮಹಾಪೂರ

ತಾಯಿಯ ಅಂತ್ಯಸಂಸ್ಕಾರ ಮುಗಿಸಿಕೊಂಡು ಕೂಡಲೇ ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಗದಗದ ಪೊಲೀಸ್ ಕಾನ್‌ಸ್ಟೆಬಲ್ ಅಶೋಕ್ ಎಂಬವರು ವೃತ್ತಿಪರತೆ ಮೆರೆದಿದ್ದಾರೆ. ಇದೀಗ ಅವರ ಕರ್ತವ್ಯಪರತೆಗೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

ಬೆಂಗಳೂರು: ತಾಯಿಯ ಅಂತ್ಯಸಂಸ್ಕಾರ ಮುಗಿಸಿಕೊಂಡು ಕೂಡಲೇ ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಗದಗದ ಪೊಲೀಸ್ ಕಾನ್‌ಸ್ಟೆಬಲ್ ಅಶೋಕ್ ಎಂಬವರು ವೃತ್ತಿಪರತೆ ಮೆರೆದಿದ್ದಾರೆ. ಇದೀಗ ಅವರ ಕರ್ತವ್ಯಪರತೆಗೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಅವರ ಸಹೋದ್ಯೋಗಿಗಳು ಕೂಡ ಸನ್ಮಾನಿಸಿ ಗೌರವ ಸೂಚಿಸಿದ್ದಾರೆ. ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ರಾಜಕೀಯ ನಾಯಕರು ಕಾನ್‌ಸ್ಟೆಬಲ್ ಅವರ ಬದ್ಧತೆಯನ್ನು ಶ್ಲಾಘಿಸಿದ್ದಾರೆ. ಅಶೋಕ್ ಅವರ ತಾಯಿ ಶಂಕರವ್ವ (80) ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಬುಧವಾರ ನಿಧನರಾದರು. ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ ನಂತರ ಅಶೋಕ್ ಕರ್ತವ್ಯಕ್ಕೆ ಹಾಜರಾದರು.

ಕರ್ನಾಟಕದ ಐಜಿಪಿ ಪ್ರವೀಣ್ ಸೂದ್ ಅವರು ಪೊಲೀಸ್ ಕಾನ್‌ಸ್ಟೆಬಲ್ ಅವರ ವೀಡಿಯೊವನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದು, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ಅವರ ತಾಯಿ ನಿಧನರಾದರು. ರಜೆಯ ಮೇಲೆ ಮುಂದುವರಿಯಲು ಅವರಿಗೆ ಸೂಚಿಸಲಾಯಿತು. ಆದರೆ ಅವರು ಹೋಗಲು ನಿರಾಕರಿಸಿದರು. ಮೊದಲು ಕರ್ತವ್ಯ ಎಂದರು. ಅವರ ಬಗ್ಗೆ ಹೆಮ್ಮೆಪಡುತ್ತೇನೆ. ಕರ್ತವ್ಯದ ಬದ್ಧತೆಗಾಗಿ ಅವರ ಸಹೋದ್ಯೋಗಿಗಳು ಅವರನ್ನು ಅಭಿನಂದಿಸಿದರು ಎಂದು ಉಲ್ಲೇಖಿಸಿದ್ದಾರೆ.

ಬೆಂಗಳೂರು ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಸಂಸದ ಪಿ.ಸಿ. ಮೋಹನ್ ಅವರೂ ಟ್ವೀಟ್ ಮಾಡಿದ್ದು, ಕರ್ನಾಟಕ ವಿಧಾನಸಭೆ ಚುನಾವಣೆ 2023 ರ ಸಮಯದಲ್ಲಿ ಸೇವೆ ಸಲ್ಲಿಸಲು ಈ ಪೊಲೀಸ್ ಕಾನ್‌ಸ್ಟೆಬಲ್ ಅವರನ್ನು ನಿಯೋಜಿಸಲಾಗಿತ್ತು. ಚುನಾವಣೆಯ ದಿನ ಬೆಳಿಗ್ಗೆ ಕರ್ತವ್ಯದಲ್ಲಿರುವಾಗ ಅವರ ತಾಯಿಯ ನಿಧನದ ಸುದ್ದಿ ಅವರಿಗೆ ಬರಸಿಡಿಲಿನಂತೆ ಬಂದೆರಗಿತು. ಆದರೆ ಅವರು ತಮ್ಮ ದುಃಖದ ಹೊರತಾಗಿಯೂ ಕರ್ತವ್ಯ ಪ್ರಜ್ಞೆಯನ್ನು ಗೌರವಿಸಿ ರಜೆ ತೆಗೆದುಕೊಳ್ಳಲು ನಿರಾಕರಿಸಿದರು. ಹ್ಯಾಟ್ಸ್ ಆಫ್ ಎಂದು ಬರೆದುಕೊಂಡಿದ್ದಾರೆ.


ಕೆಲ ನೆಟಿಜನ್‌ಗಳು ಪೊಲೀಸ್ ಕಾನ್​ಸ್ಟೆಬಲ್ ಅವರನ್ನು ಹೊಗಳಿದರೆ, ಇನ್ನು ಕೆಲವರು ಇಂತಹ ವಿಷಯಗಳನ್ನು ವೈಭವೀಕರಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಟ್ವೀಟ್‌ಗೆ ಪ್ರತಿಕ್ರಿಯಿಸಿದ ಕರ್ನಾಟಕ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್, ಪೊಲೀಸರಿಗೆ ರಜೆ ಮಂಜೂರು ಮಾಡಲಾಗಿದೆ ಎಂದು ಹೇಳಿದರು.

‘ದುಃಖದ ಕ್ಷಣಗಳಲ್ಲಿ ಕುಟುಂಬದೊಂದಿಗೆ ಉಳಿಯುವುದು ಹೆಚ್ಚು ಮುಖ್ಯವಾಗಿದೆ. ತಾಯಿಯ ಅಂತ್ಯಸಂಸ್ಕಾರದ ನಂತರ, ಅವರು ಸ್ವಯಂಪ್ರೇರಣೆಯಿಂದ ಕರ್ತವ್ಯಕ್ಕೆ ಹಾಜರಾದರು. ಅವರ ಪ್ರಾಮಾಣಿಕತೆ ಮತ್ತು ಕರ್ತವ್ಯ ಪ್ರಜ್ಞೆಯ ಬಗ್ಗೆ ಹೆಮ್ಮೆ ಇದೆ. ಅಂತ್ಯಸಂಸ್ಕಾರದ ನಂತರದ ಧಾರ್ಮಿಕ ವಿಧಿಗಳಿಗೆ ಹಾಜರಾಗಲು ಅವರಿಗೆ ರಜೆ ಮಂಜೂರು ಮಾಡಲಾಗಿದೆ ಎಂದು ಕುಮಾರ್ ಟ್ವೀಟ್​​​ನಲ್ಲಿ ತಿಳಿಸಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ಬುಧವಾರ ಮತದಾನ ನಡೆದಿದ್ದು, ಶನಿವಾರ ಫಲಿತಾಂಶ ಪ್ರಕಟವಾಗಲಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us