Karnataka Assembly Election: ಇವಿಎಂ ದುರುಪಯೋಗ ಸಾಧ್ಯವಿಲ್ಲ, ಬದಲಾವಣೆಯೂ ಇಲ್ಲ; ಚುನಾವಣಾ ಆಯೋಗ

|

Updated on: Mar 11, 2023 | 5:19 PM

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕರ್ನಾಟಕ ವಿಧಾನಸಭೆ ಚುನಾವಣೆಯ ಸಿದ್ಧತೆ ಕುರಿತು ಮಾಹಿತಿ ನೀಡಿದರು. ವಿವರ ಇಲ್ಲಿದೆ.

Karnataka Assembly Election: ಇವಿಎಂ ದುರುಪಯೋಗ ಸಾಧ್ಯವಿಲ್ಲ, ಬದಲಾವಣೆಯೂ ಇಲ್ಲ; ಚುನಾವಣಾ ಆಯೋಗ
ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದ ನಿಯೋಗ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಚುನಾವಣೆ ಸಿದ್ಧತೆ ಬಗ್ಗೆ ಮಾಹಿತಿ ನೀಡಿತು
Follow us on

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ (Karnataka Assembly Elections 2023) ಸಿದ್ಧತೆ ಪರಿಶೀಲನೆಗೆ ಮೂರು ದಿನಗಳ ಕರ್ನಾಟಕ ಪ್ರವಾಸ ಕೈಗೊಂಡಿರುವ ಕೇಂದ್ರ ಚುನಾವಣಾ ಆಯೋಗ ಶನಿವಾರ ಆ ಕುರಿತು ವಿವರಗಳನ್ನು ನೀಡಿದೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ (Rajiv Kumar) ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಮೂರು ದಿನಗಳಿಂದ ರಾಜಕೀಯ ಪಕ್ಷಗಳ ಜೊತೆ ಸಭೆ ಮಾಡಲಾಗಿದೆ. ಚುನಾವಣಾ ಆಯುಕ್ತರು, ಐಜಿ, ಎಸ್​ಪಿ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆಗೂ ಸಭೆ ನಡೆಸಿ ಚರ್ಚೆ ಮಾಡಲಾಗಿದೆ. ಮೇ 24 ಕ್ಕೆ ಈ ಸರ್ಕಾರದ ಅವಧಿ ಮುಗಿಯಲಿರುವುದರಿಂದ ಚುನಾವಣೆ ಸಿದ್ಧತೆ ಬಗ್ಗೆ ಮಾತುಕತೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ. ಜತೆಗೆ, ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಎಲ್ಲಿಯೂ, ಯಾರಿಂದಲೂ ದುರುಪಯೋಗ ಮಾಡಲು ಸಾಧ್ಯವಿಲ್ಲ. ಅವುಗಳನ್ನು ಬದಲಾವಣೆ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಅಂಗವಿಕಲರು, 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡುವುದಾಗಿಯೂ ಅವರು ತಿಳಿಸಿದರು.

ಇವಿಎಂ ಬದಲಾವಣೆ ಕುರಿತ ಕಾಂಗ್ರೆಸ್ ಬೇಡಿಕೆಗೆ ಆಯೋಗ ಗರಂ

ಗುಜರಾತ್​​ನಲ್ಲಿ ಬಳಸಿದ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಬಳಸಬಾರದು ಎಂದು ಕಾಂಗ್ರೆಸ್ ಮಾಡಿರುವ ಮನವಿ ತಿರಸ್ಕರಿಸಲಾಗಿದೆ ಎಂದು ಚುನಾವಣಾ ಆಯುಕ್ತ ರಜೀವ್ ಕುಮಾರ್ ಹೇಳಿದರು. ಗುಜರಾತ್​ನಿಂದ ಬರುವ ಬಸ್ ರಾಜ್ಯಕ್ಕೆ ಬರುವುದಿಲ್ಲವೇ ಎಂದು ಚುನಾವಣಾ ಆಯುಕ್ತರು ಖಾರವಾಗಿ ಪ್ರಶ್ನಿಸಿದರು. ಹಲವು ಬಾರಿ ಇಂತಹ ಪ್ರಶ್ನೆಗಳು ನಮ್ಮ ಮುಂದೆ ಬಂದಿವೆ. ಇವಿಎಂಗಳನ್ನು ಎಲ್ಲಿಯೂ, ಯಾರಿಂದಲೂ ದುರುಪಯೋಗ ಮಾಡಲು ಸಾಧ್ಯವಿಲ್ಲ. ಅವುಗಳನ್ನು ಬದಲಾವಣೆ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಎಷ್ಟು ಮಂದಿ ಮತದಾರರು?

ರಾಜ್ಯದಲ್ಲಿ 5,21,73,579 ಜನ ಮತದಾರರಿದ್ದಾರೆ. 2,62,42,561 ಜನ ಪುರುಷ ಮತದಾರರು ಹಾಗೂ 2,59,26,319 ಮಹಿಳಾ ಮತದಾರರಿದ್ದಾರೆ. 80 ವರ್ಷ ಮೇಲ್ಪಟ್ಟವರು 12,15,763 ಜನ ಇದ್ದಾರೆ. 100 ವರ್ಷ ಮೇಲ್ಪಟ್ಟ 16,976 ಮತದಾರರಿದ್ದಾರೆ. 9,17,241 ಮಂದಿ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. 4,699 ತೃತೀಯ ಲಿಂಗಿ ಮತದಾರರಿದ್ದಾರೆ. 17 ವರ್ಷ ಮೇಲ್ಪಟ್ಟವರು 1,25,406 ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ರಾಜೀವ್ ಕುಮಾರ್ ಮಾಹಿತಿ ನೀಡಿದರು.

ಇದನ್ನೂ ಓದಿ: Karnataka Assembly Election: ಅಂಗವಿಕಲರು, 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ

ರಾಜ್ಯದಲ್ಲಿ ಎಷ್ಟಿರಲಿವೆ ಮತಗಟ್ಟೆಗಳು?

ರಾಜ್ಯದಲ್ಲಿ ಒಟ್ಟು 58,282 ಮತಗಟ್ಟೆಗಳು ಇರಲಿವೆ. ಒಂದು ಮತಗಟ್ಟೆಯಲ್ಲಿ 883 ಜನ ಮತ ಹಾಕಬಹುದಾಗಿದೆ. ನಗರ ಪ್ರದೇಶಗಳಲ್ಲಿ 24,063 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 34,219 ಮತಗಟ್ಟೆಗಳು ಇರಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಎಲ್ಲಾ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳು ಇರುವಂತೆ ನೋಡಿಕೊಳ್ಳಲಾಗುವುದು. ಅಂಗವಿಕಲರಿಗೆ ವ್ಹೀಲ್​ಚೇರ್ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ನಗರ ಪ್ರದೇಶಗಳಲ್ಲಿ ಕಡಿಮೆ ಮತದಾನ; ರಾಜೀವ್ ಕುಮಾರ್ ಬೇಸರ

2013ಕ್ಕೆ ಹೋಲಿಸಿದರೆ 2018ರಲ್ಲಿ ಬೆಂಗಳೂರಿನಲ್ಲಿ ಮತದಾನ ಕಡಿಮೆ ಆಗಿದೆ. ನಗರ ಪ್ರದೇಶಗಳಲ್ಲಿ ಮತದಾನ ಕಡಿಮೆಯಾಗುತ್ತಿದೆ. ಬೆಂಗಳೂರು ನಗರ ಐಟಿ ಹಬ್ ಆಗಿ ಹೊರ ಹೊಮ್ಮಿದೆ. ಆದರೂ ಇಲ್ಲಿ ಮತದಾನ ಕಡಿಮೆ ಆಗುತ್ತಿರುವುದು ಬೇಸರದ ಸಂಗತಿ ಎಂದು ರಾಜೀವ್ ಕುಮಾರ್ ತಿಳಿಸಿದರು.

‘ಸುವಿಧಾ ಪೋರ್ಟಲ್​ನಲ್ಲಿಯೂ ನಾಮಪತ್ರ ಸಲ್ಲಿಕೆಗೆ ಅವಕಾಶ’

ಅಭ್ಯರ್ಥಿಗಳು ಸುವಿಧಾ ಮೂಲಕವೂ ನಾಮಪತ್ರ ಸಲ್ಲಿಸಬಹುದು. ಅಫಿಡವಿಟ್ ಕೂಡ ಸಲ್ಲಿಕೆ ಮಾಡಬಹುದು. ಅಪರಾಧ ಪ್ರಕರಣಗಳು ಇದ್ದರೆ ಮೂರು ಬೇರೆ ಬೇರೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಿರಬೇಕು. ಆನ್​​ಲೈನ್​​ನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪೇಪರ್ ಕಟ್ಟಿಂಗ್ ಕೂಡ ಅಪ್​ಲೋಡ್ ಮಾಡಬೇಕು. ಸಭೆ, ಸಮಾರಂಭ ಮಾಡುವುದಕ್ಕೂ ಆನ್​​ಲೈನ್ ಮೂಲಕವೇ ಮನವಿ ಸಲ್ಲಿಸಬಹುದು ಎಂದು ರಾಜೀವ್ ಕುಮಾರ್ ತಿಳಿಸಿದರು.

‘ಶಾಂತಿಯುತ ಮತದಾನದ ಭರವಸೆ’

ಕರ್ನಾಟಕದಲ್ಲಿಯೂ ಶಾಂತಿಯುತ ಮತದಾನ ಆಗುವ ನಂಬಿಕೆ ಇದೆ. ಹಣ, ಇತರ ಆಮಿಷಗಳಿಗೆ ಮತದಾರರು ಒಳಗಾಗಬಾರದು. ಚುನಾವಣಾ ಅಕ್ರಮ ತಡೆಯಲು ಹದ್ದಿನ ಕಣ್ಣಿಡಲಾಗುತ್ತದೆ. ಗಡಿ ಪ್ರದೇಶಗಳು, ಕರಾವಳಿ ಭಾಗಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗುತ್ತದೆ. ಅಕ್ರಮ ಸಾಗಾಟಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಕೇಂದ್ರದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದ ನಿಯೋಗ ಮಾರ್ಚ್​ 9ರಿಂದ ಮೂರು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದು, ಚುನಾವಣೆ ಸಿದ್ಧತೆಗೆ ಸಂಬಂಧಿಸಿ ಸರಣಿ ಸಭೆಗಳನ್ನು ನಡೆಸಿತ್ತು. ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಅನೇಕ ಕಾರ್ಯಕ್ರಮ, ಸಂವಾದಗಳಲ್ಲಿಯೂ ಭಾಗವಹಿಸಿತ್ತು. ರಾಜಕೀಯ ಪಕ್ಷಗಳ ಮುಖಂಡರ ಜತೆ ವಿಧಾನಸೌಧದಲ್ಲಿ ಸಭೆ ನಡೆಸಿತ್ತು. ಈ ವೇಳೆ, ರಾಜಕೀಯ ಪಕ್ಷಗಳ ಅಹವಾಲುಗಳನ್ನೂ ಸ್ವೀಕರಿಸಿತ್ತು.

ಇನ್ನಷ್ಟು ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 3:42 pm, Sat, 11 March 23