ದತ್ತಾ ಬಳಿ ಇರೋದು ಒಂದು ಪಂಚೆ, ಒಂದು ಶರ್ಟ್ ಅಷ್ಟೆ, ನಾಮಪತ್ರ ಸಲ್ಲಿಕೆಗೆ ದೇವೇಗೌಡ ಬರುತ್ತಾರೆ ಎಂದ ರೇವಣ್ಣ

ಜೆಡಿಎಸ್​ ಸೇರ್ಪಡೆ ಸಂದರ್ಭ ಮಾತನಾಡಿದ ದತ್ತಾ, ಹೆಚ್​ಡಿ ದೇವೇಗೌಡರನ್ನು ಹಾಡಿಹೊಗಳಿದರು.

ಚಿಕ್ಕಮಗಳೂರು:  ವೈಎಸ್​ವಿ ದತ್ತಾ (YSV Datta) ಬಳಿ ಇರುವುದು ಒಂದು ಪಂಚೆ, ಒಂದು ಶರ್ಟ್ ಅಷ್ಟೆ. ನಾನೇ ಸಚಿವ ಆದಾಗ ಕಾರು ಕೊಡಿಸುತ್ತೇನೆ ಎಂದೆ. ಆದರೆ, ಬೇಡ ಸರ್, ನಂಗೇ ಆಟೋ ಸಾಕು ಅಂದಿದ್ದರು ಎಂದು ಜೆಡಿಎಸ್ ನಾಯಕ ಹೆಚ್​ಡಿ ರೇವಣ್ಣ ನೆನಪಿಸಿಕೊಂಡರು. ದತ್ತಾ ಅವರನ್ನು ಮರಳಿ ಜೆಡಿಎಸ್​​ಗೆ ಸೇರ್ಪಡೆ ಮಾಡಿಕೊಂಡ ಬಳಿಕ ಮಾತನಾಡಿದ ಅವರು, 18ನೇ ತಾರೀಖು ದತ್ತ ನಾಪಪತ್ರ ಸಲ್ಲಿಕೆ ಮಾಡಲಿದ್ದಾರೆ. ಎಷ್ಟೇ ಕಷ್ಟ ಆದರೂ ದೇವೆಗೌಡರು ಬರುತ್ತಾರೆ, ಬಂದೇ ಬರುತ್ತಾರೆ. ನಾನು ಬದುಕಿರುವವರೆಗೆ ದತ್ತನ ಕೈ ಬಿಡಬಾರದು ಎಂದು ಹೇಳಿದ್ದಾರೆ ಎಂಬುದಾಗಿ ರೇವಣ್ಣ ಹೇಳಿದರು.

ನೀವು ಬೇರೆ ಯೋಚನೆ ಮಾಡಬೇಡಿ. ದೇವೇಗೌಡರ ಮಾತನ್ನು ನಾನು, ದತ್ತಾ, ನೀವು ಎಲ್ಲರೂ ಪಾಲಿಸಬೇಕು. ದತ್ತಾರನ್ನು ಶಾಸಕ ಮಾಡಕೇಬೇಕು ಅಂತ ದೇವೇಗೌಡರು ಹೇಳಿದ್ದಾರೆ. ನಮಗೆ ಹೊಳೆನರಸೀಪುರ, ಕಡೂರು ಬೇರೆ-ಬೇರೆ ಅಲ್ಲ. ನಾನು ದತ್ತಾ ಜೊತೆ ಇರುತ್ತೇನೆ ಎಂದು ಕಡೂರಿನ ಯಗಟಿ ಗ್ರಾಮದ ದತ್ತಾ ಅವರ ಮನೆಯಲ್ಲಿ ರೇವಣ್ಣ ಹೇಳಿದ್ದಾರೆ.

ದೇವೇಗೌಡರನ್ನು ಹಾಡಿಹೊಗಳಿದ ದತ್ತಾ

ಜೆಡಿಎಸ್​ ಸೇರ್ಪಡೆ ಸಂದರ್ಭ ಮಾತನಾಡಿದ ದತ್ತಾ, ಹೆಚ್​ಡಿ ದೇವೇಗೌಡರನ್ನು ಹಾಡಿಹೊಗಳಿದರು. ದೇವೇಗೌಡರು ಸದಾ ಚಟುವಟಿಕೆಯಿಂದ ಇರುವ ವ್ಯಕ್ತಿ. 24 ಗಂಟೆಯೂ ಏನಾದರೊಂದು ಯೋಚನೆ ಮಾಡುತ್ತಿರುತ್ತಾರೆ. ರಾತ್ರಿ 3 ಗಂಟೆಗೆ ದೂರವಾಣಿ ಕರೆ ಮಾಡಿದ ದೇವೇಗೌಡರು, ಮನೆಗೆ ಬರುವಂತೆ ಕರೆದರು. ಇಷ್ಟೊತ್ತಿನಲ್ಲಿ ಹೇಗೆ ಬರಲಿ ಎಂದೆ. ಆಟೋ ಮಾಡಿಕೊಂಡು ಬಾರೋ ಎಂದರು. ಹಾಗೆ ಅವರ ಮನೆಗೆ ತೆರಳಿದೆ. ಅವರ ಜತೆ ಕುಳಿತು ಮಾತನಾಡಿದೆ. ‘ನಾನು ಮಲಗಿಕೊಂಡಿದ್ದೆ, ಏನೋ ಒಂದು ಯೋಚನೆ ಬಂತು. ನಿನ್ನ ಜತೆ ಮಾತನಾಡಬೇಕು ಎನಿಸಿತು’ ಎಂದರು. ಇದು ನನ್ನ ಮತ್ತು ದೇವೇಗೌಡರ ನಡುವಣ ಸಂಬಂಧ ಎಂದು ದತ್ತಾ ಹೇಳಿದರು.

ಇದನ್ನೂ ಓದಿ: YSV Datta: ಮತ್ತೆ ಜೆಡಿಎಸ್ ಸೇರಿದ ವೈಎಸ್​ವಿ ದತ್ತಾ; ಕಡೂರು ಟಿಕೆಟ್ ಫಿಕ್ಸ್​

ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿ ಚುನಾವಣೆಗೆ ಟಿಕೆಟ್​​ ಸಿಗದೆ ನಿರಾಶರಾಗಿದ್ದ ವೈಎಸ್​ವಿ ದತ್ತಾ ಗುರುವಾರ ಮತ್ತೆ ಜೆಡಿಎಸ್​​ ಸೇರ್ಪಡೆಯಾಗಿದ್ದಾರೆ. ಇದರ ಬೆನ್ನಲ್ಲೇ, ಕಡೂರು ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿಯನ್ನಾಗಿಯೂ ಅವರನ್ನು ಘೋಷಣೆ ಮಾಡಲಾಗಿದೆ. ಈ ಕುರಿತು ಪಕ್ಷದ ನಾಯಕ ಹೆಚ್​ಡಿ ರೇವಣ್ಣ ಗುರುವಾರ ಸಂಜೆ ಘೋಷಣೆ ಮಾಡಿದ್ದಾರೆ.

ಈ ಬೆಳವಣಿಗೆಯಿಂದ ಈಗಾಗಲೇ ಜೆಡಿಎಸ್​ನಿಂದ ಕಡೂರು ಕ್ಷೇತ್ರದ ಟಿಕೆಟ್​​ ಪಡೆದಿರುವ ಸಿ.ಎಂ. ಧನಂಜಯ್ ನಿರಾಶರಾಗಿದ್ದಾರೆ. ದತ್ತಾ ಜೆಡಿಎಸ್ ಸೇರ್ಪಡೆ ನಂತರ ಸುದ್ದಿಗೋಷ್ಠಿ ನಡೆಸಿದ ಧನಂಜಯ್, ಒತ್ತಡಕ್ಕೆ ಒಳಗಾಗಿ ದತ್ತಾಗೆ ಟಿಕೆಟ್ ಘೋಷಿಸಿದ್ದಾರೆ, 2-3 ದಿನದಲ್ಲಿ ಸ್ಪಷ್ಟ ಮಾಹಿತಿ ಸಿಗಲಿದೆ. ನಾಯಕರು ಚರ್ಚಿಸಿ ಒಳ್ಳೆಯ ನಿರ್ಧಾರಕ್ಕೆ ಬರುತ್ತಾರೆ ಎಂಬ ನಂಬಿಕೆ ಇದೆ ಎಂದಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:40 pm, Thu, 13 April 23

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us